Advertisement

ದೇವನಗರಿಗೆ ಮತ್ತೊಮ್ಮೆ ಅಪ್ಪಳಿಸಿದ ಕೋವಿಡ್

11:36 AM May 20, 2020 | Naveen |

ದಾವಣಗೆರೆ: ಇಡೀ ವಿಶ್ವವನ್ನೇ ನಡುಗಿಸಿರುವ ಕೋವಿಡ್ ವೈರಸ್‌ ಮಂಗಳವಾರ ಮಧ್ಯ ಕರ್ನಾಟಕದ ದಾವಣಗೆರೆ ಜಿಲ್ಲೆಯನ್ನ ಮತ್ತೆ ತಲ್ಲಣಗೊಳಿಸಿದೆ. ನಿನ್ನೆ ಹೊಸದಾಗಿ ಈಗ 22 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಈಗ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 112ಕ್ಕೇರಿದೆ.

Advertisement

ಕೇವಲ 20 ದಿನಗಳ ಹಿಂದೆ ದಾವಣಗೆರೆಯಲ್ಲಿ ಇದ್ದ ವಾತಾವರಣ ಈಗ ಇಲ್ಲ. ಈ ಅವಧಿಯಲ್ಲಿ ಜಿಲ್ಲೆಯ ಚಿತ್ರಣವೇ ಬದಲಾಗಿ ಹೋಗಿದೆ. ಏ.29ರಿಂದ ಕೋವಿಡ್‌-19ರ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಈ ಮೊದಲು ದಾವಣಗೆರೆ ನಗರಕ್ಕೆ ಸೀಮಿತವಾಗಿದ್ದ ಸೋಂಕು ಈಗ ಹಳ್ಳಿಗೂ ವ್ಯಾಪಿಸುತ್ತಿರುವುದು ತೀವ್ರ ಆತಂಕಕ್ಕೀಡು ಮಾಡುವಂತಾಗಿದೆ.

ಈ ಮೊದಲು ಮಾರ್ಚ್‌ ಕೊನೆಯ ವಾರದಲ್ಲಿ ವಿದೇಶದಿಂದ ಬಂದಿದ್ದ ಮೂವರಲ್ಲಿ (ಒಂದು ಪ್ರಕರಣ ಚಿತ್ರದುರ್ಗ ಜಿಲ್ಲೆಯದ್ದು) ಕೋವಿಡ್ ಸೋಂಕು ದೃಢಪಟ್ಟಿತ್ತು. ಆಗ ಜಿಲ್ಲೆಯ ಜನ ಆತಂಕಗೊಂಡಿದ್ದರು. ಜಿಲ್ಲಾಡಳಿತ, ಆರೋಗ್ಯ ಹಾಗೂ ಪೊಲೀಸ್‌ ಇಲಾಖೆ, ಇತರರೂ ಒಳಗೊಂಡಂತೆ ಎಲ್ಲರ ಅವಿರತ ಶ್ರಮದಿಂದಾಗಿ ಮಹಾಮಾರಿ ಕೊರೊನಾ ಸೋಂಕು ಹರಡಲು ಅವಕಾಶವಾಗಲಿಲ್ಲ. ಆದರೆ, ಏ. 29ರ ನಂತರ ಕೋವಿಡ್ ದಾವಣಗೆರೆ ಜಿಲ್ಲೆಯ ಜನಜೀವನಕ್ಕೆ ಮುಳ್ಳಾಯಿತು.

ಜಿಲ್ಲೆಯಲ್ಲಿ ಪ್ರಥಮ (ವಿದೇಶದಿಂದ ಬಂದವರ ಬಿಟ್ಟು)ವಾಗಿ ದಾವಣಗೆರೆ ಬಾಷಾನಗರದ ವ್ಯಕ್ತಿ (ರೋಗಿ ನಂಬರ್‌ 533)ಗೆ ಕೋವಿಡ್ ದೃಢಪಟ್ಟ ಕೆಲವೇ ಗಂಟೆಗಳ ಅಂತರದಲ್ಲಿ ಜಾಲಿನಗರದ 69 ವರ್ಷದ ವಯೋವೃದ್ಧ (ರೋಗಿ ಸಂಖ್ಯೆ 556)ಗೆ ಕೋವಿಡ್ ಸೋಂಕು ಪತ್ತೆಯಾಯಿತು. ಜಾಲಿನಗರದ ವೃದ್ಧ ಮೇ 1 ರಂದು ಮೃತಪಟ್ಟರಲ್ಲದೆ, ಅಂದೇ 6 ಮಂದಿಗೆ (ಪಿ-533 ಹಾಗೂ ಪಿ-556ರ ಕುಟುಂಬದವರು) ಸೋಂಕು ಅಂಟಿಕೊಂಡಿತ್ತು. ಒಂದೇ ಬಾರಿಗೆ 6 ಮಂದಿಗೆ ಸೋಂಕು ತಗುಲಿದ್ದು ಜನರ ನೆಮ್ಮದಿ ಕೆಡುವಂತಾಯಿತು. ಆದರೆ ಮೇ 3ರಂದು ದಾವಣಗೆರೆಯಲ್ಲಿ 21 ಮಂದಿಗೆ ಕೋವಿಡ್ ದೃಢಪಟ್ಟ ವರದಿ ಜಿಲ್ಲಾಡಳಿತಕ್ಕೆ ಶಾಕ್‌ ನೀಡಿತು. ಆ ದಿನವೇ ಜಾಲಿನಗರದ 48 ವರ್ಷದ ಮಹಿಳೆ (ರೋಗಿ-651) ಸಹ ಮೃತಪಟ್ಟರು.

ಮೇ 3ರ ನಂತರ ಜಿಲ್ಲೆಯಲ್ಲಿ ಕೊರೊನಾಘಾತ ಮುಂದುವರಿದಿದೆ. ಮೇ 5ರಂದು 12 ಮಂದಿಯಲ್ಲಿ ಕಾಣಿಸಿಕೊಂಡ ಕೋವಿಡ್, ಅಂದು 55 ವರ್ಷದ ಮಹಿಳೆ (ರೋಗಿ-662)ಯನ್ನ ಬಲಿ ಪಡೆಯಿತು. ಮೇ 7ರಂದು ಮತ್ತೆ ಮೂವರಲ್ಲಿ ದೃಢಪಟ್ಟ ಸೋಂಕು, ಆ ದಿನ 55 ವರ್ಷದ ಮತ್ತೋರ್ವ ಮಹಿಳೆ (ರೋಗಿ-694) ಸಹ ಸಾವನ್ನಪಿದರು. ಹಾಗಾಗಿ ಕೆಲವೇ ದಿನಗಳ ಅಂತರದಲ್ಲಿ ಕೋವಿಡ್ ಸೋಂಕಿತರ ಜತೆಗೆ ಸಾವಿನ ಸಂಖ್ಯೆಯೂ ಏರತೊಡಗಿದ್ದರಿಂದ ನಗರದ ನಾಗರಿಕರು ಚಿಂತೆಗೀಡಾದರು. ಮೇ 8ರಂದು ಮತ್ತೆ 14 ಮಂದಿಗೆ ಕೋವಿಡ್ ಸೋಂಕು ಪತ್ತೆಯಾಯಿತಲ್ಲದೆ, ಕೋವಿಡ್‌ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರತೊಡಗಿತು. ಮೇ 9ಕ್ಕೆ 6, 11ರಂದು ಮೂವರು ಹಾಗೂ ಮೇ 12ರಂದು 12 ಮಂದಿಗೆ ಸೋಂಕು ವ್ಯಾಪಿಸಿರುವುದು ದೃಢಪಟ್ಟಿತು. ಪೊಲೀಸ್‌ ಪೇದೆ, ಈರುಳ್ಳಿ-ಬೆಳ್ಳುಳ್ಳಿ ವ್ಯಾಪಾರಿ, ಹೊರ ರಾಜ್ಯದಿಂದ ಬಂದ ಕೃಷಿ ಕಾರ್ಮಿಕ, ಸೇರಿದಂತೆ ಹಲವರು ಸೋಂಕಿಗೊಳಗಾಗಿದ್ದಾರೆ.

Advertisement

ಈಗ ಮಂಗಳವಾರ ಮತ್ತೆ ಆಘಾತವನ್ನುಂಟು ಮಾಡಿದೆ. ಜಿಲ್ಲೆಯಲ್ಲಿ ಹೊಸದಾಗಿ 22 ಮಂದಿಗೆ ಸೋಂಕು ದೃಢಪಟ್ಟಿದ್ದು, ಈಗ ಒಟ್ಟು ಸೋಂಕಿತರ ಸಂಖ್ಯೆ 112ಕ್ಕೇರಿದೆ. ಇವರಲ್ಲಿ ನಾಲ್ವರು ಮೃತಪಟ್ಟಿದ್ದು, ಇಬ್ಬರು ಗುಣಮುಖರಾಗಿದ್ದಾರೆ. ಈಗ ಸಕ್ರಿಯ  ಕೋವಿಡ್ ಸೋಂಕಿತರ ಸಂಖ್ಯೆ 106.

ನೆಮ್ಮದಿ ಕಸಿದ ಮಹಾಮಾರಿ
ಕೇವಲ 21 ದಿನಗಳ ಹಿಂದೆ ಒಂದೂ ಸಕ್ರಿಯ ಪ್ರಕರಣವಿಲ್ಲದಿದ್ದ ದಾವಣಗೆರೆ ಜಿಲ್ಲೆಯಲ್ಲೀಗ ಸಂಖ್ಯೆ ಮೂರಂಕಿ ದಾಟಿದೆ. ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದ ಇನ್ನೂ ನೂರಾರು ಮಂದಿಯ ಗಂಟಲುದ್ರವ ಮಾದರಿ ಪರೀಕ್ಷಾ ವರದಿ ಬರಬೇಕಿದೆ. ದಿನೇ ದಿನೇ ಏರುತ್ತಿರುವ ಕೋವಿಡ್  ಸೋಂಕಿತರ ಸಂಖ್ಯೆ ಜಿಲ್ಲೆಯ ಜನರ ನೆಮ್ಮದಿಯನ್ನೇ ಕಸಿದುಕೊಂಡಿದೆ.

ಎನ್‌.ಆರ್‌. ನಟರಾಜ್‌

Advertisement

Udayavani is now on Telegram. Click here to join our channel and stay updated with the latest news.

Next