Advertisement

ನಿಯಮಗಳ ಪಾಲಿಸಿ ವ್ಯಾಪಾರ ನಡೆಸಿ

11:19 AM Mar 20, 2020 | Naveen |

ದಾವಣಗೆರೆ: ಕೊರೊನಾ ವೈರಸ್‌ ಸೋಂಕು ನಿಯಂತ್ರಣ ಹಾಗೂ ಹರಡುವಿಕೆ ತಡೆಗೆ ಕೈಗೊಂಡಿರುವ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದ್ದು, ಯಾವುದೇ ಅವಘಡಕ್ಕೆ ಎಡೆ ಮಾಡಿಕೊಡದಂತೆ ವ್ಯಾಪಾರ, ವಹಿವಾಟು ನಡೆಸಲು ನಿಯಮಗಳನ್ನು ಪಾಲಿಸುವಂತೆ ಜವಳಿ ವ್ಯಾಪಾರಿಗಳಿಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

Advertisement

ಗುರುವಾರ, ತಮ್ಮ ಕಚೇರಿ ಸಭಾಂಗಣದಲ್ಲಿ ಕೊರೊನಾ ವೈರಸ್‌ ಸೋಂಕಿನ ಅರಿವು ಮತ್ತು ನಿಯಂತ್ರಣ ಕುರಿತು ನಗರದ ಪ್ರಸಿದ್ಧ ಜವಳಿ ಅಂಗಡಿಗಳ ಮಾಲೀಕರೊಂದಿಗೆ ಆಯೋಜಿಸಿದ್ದ ಸಭೆ ಅಧ್ಯಕ್ಷತೆ ವಹಿಸಿ, ಮಾತನಾಡಿದ ಅವರು, ಈಗಾಗಲೇ ಹುಬ್ಬಳ್ಳಿ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿ ಬಟ್ಟೆ ವ್ಯಾಪಾರಕ್ಕೆ ಅನುವು ಮಾಡಿಕೊಡಲಾಗಿದೆ. ಅದೇ ರೀತಿ ದಾವಣಗೆರೆ ನಗರದಲ್ಲಿ ಹಬ್ಬಗಳ ಹಿನ್ನೆಲೆಯಲ್ಲಿ ಜವಳಿ ಅಂಗಡಿ ಮಾಲೀಕರ ಒತ್ತಾಯದ ಮೇರೆಗೆ ಕೆಲ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಅಂಗಡಿ ತೆಗೆಯಲು ಅವಕಾಶ ನೀಡಲಾಗಿದೆ. ಆದರೆ, ಅಂಗಡಿ ಮಾಲೀಕರು ಅವಘಡ ಸಂಭವಿಸದಂತೆ ಮುಂಜಾಗ್ರತಾ ಕ್ರಮವಾಗಿ ಕೆಲ ನಿಯಮಗಳನ್ನು ಪಾಲಿಸಬೇಕು ಎಂದರು.

ಕೊರೊನಾ ವೈರಸ್‌ ಸೋಂಕು ತಡೆಗಟ್ಟುವ ಮುಂಜಾಗ್ರತಾ ಕ್ರಮವಾಗಿ ನಗರದಲ್ಲಿ ಜನಸಂದಣಿ ಹೆಚ್ಚಿರುವಲ್ಲಿ ಮಾತ್ರ ಅಂಗಡಿಗಳನ್ನು ಮುಚ್ಚಲು ಕ್ರಮ ತೆಗೆದುಕೊಂಡಿದ್ದೇವೆಯೇ ಹೊರತು ಬಟ್ಟೆ ಅಂಗಡಿ ಮಾಲೀಕರಿಗೆ ತೊಂದರೆ ಕೊಡುವ ಹಾಗೂ ನಷ್ಟವನ್ನುಂಟು ಮಾಡುವ ದುರುದ್ದೇಶ ಜಿಲ್ಲಾಡಳಿತಕ್ಕಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಆರೋಗ್ಯ ಇಲಾಖೆ ವತಿಯಿಂದ ಪ್ರತಿ ಅಂಗಡಿ ಮುಖ್ಯ ದ್ವಾರದಲ್ಲಿ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಇಬ್ಬರು ಪೊಲೀಸ್‌ ಸಿಬ್ಬಂದಿ ನೇಮಿಸಿ ಜನ ಸಂದಣಿ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು. ಅಂಗಡಿಯಲ್ಲಿ ಕಾರ್ಯ ನಿರ್ವಹಿಸುವವರಿಗೆ ಶೀತ, ಕೆಮ್ಮಿನ ಲಕ್ಷಣ ಕಂಡುಬಂದಲ್ಲಿ ಅಂತಹವರನ್ನು ಕೆಲಸದಿಂದ ತಾತ್ಕಾಲಿಕವಾಗಿ ರಜೆ ಮೇಲೆ ಕಳುಹಿಸಬೇಕು ಮತ್ತು ಗ್ರಾಹಕರಿಗೆ ಫ್ಲೂ ಕಂಡುಬಂದಲ್ಲಿ ನೇರವಾಗಿ ಆಸ್ಪತ್ರೆಗೆ ಕಳುಹಿಸಬೇಕು ಎಂದು ಸೂಚಿಸಿದರು.

ಕೌಂಟರ್‌ಗಳಲ್ಲಿ ಸ್ಯಾನಿಟೈಸರ್‌ಗಳನ್ನು ಇಟ್ಟು ಅವುಗಳನ್ನು ಬಳಸುವಂತೆ ತಿಳಿಸಬೇಕು. ಲಿಫ್ಟ್‌ ಮತ್ತು ಎಸಿ ಬಳಕೆ ಸಂಪೂರ್ಣವಾಗಿ ನಿಷೇಧಿಸಬೇಕು. ಪ್ರತಿ ಗಂಟೆಗೆ ಒಂದು ಸಲ ಅಂಗಡಿ ಸ್ವತ್ಛಗೊಳಿಸಬೇಕು. ಗ್ರಾಹಕರ ನಡುವೆ ಅಂತರ ಕಾಪಾಡಿಕೊಳ್ಳುವುದರ ಜತೆಗೆ ಅಂಗಡಿಗೆ ಒಂದೇ ಮುಖ್ಯದ್ವಾರ ಇರುವಂತೆ ನೋಡಿಕೊಳ್ಳಬೇಕು. ಅಂಗಡಿಗಳು ಬೆಳಿಗ್ಗೆ 10 ರಿಂದ ರಾತ್ರಿ 8 ಗಂಟೆಯವರೆಗೆ ಮಾತ್ರ ತೆಗೆಯಬೇಕು. ಈ ಅಂಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.

Advertisement

ಹೊಟೇಲ್‌, ಬೀದಿ ಬದಿ ವ್ಯಾಪಾರ ಸೇರಿದಂತೆ ಜಿಲ್ಲೆಯಲ್ಲಿ ಕೋಳಿ ಮಾಂಸ ಮಾರುವ ಹಾಗೂ ಮೊಟ್ಟೆ ಅಂಗಡಿಗಳನ್ನು ಮುಚ್ಚಿಸಲಾಗಿದ್ದು, ಈ ವ್ಯಾಪಾರಸ್ಥರಿಗೆ ಸಾಕಷ್ಟು ನಷ್ಟವಾಗಿದೆ. ಸಾರ್ವಜನಿಕರ ಆರೋಗ್ಯದ ಮೇಲಿನ ದುಷ್ಪರಿಣಾಮದ ಕುರಿತು ಅವಲೋಕಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಇದೇ ರೀತಿ ಕೊರೊನಾ ಸೋಂಕು ನಿರ್ವಹಣೆಯಲ್ಲಿ ಅಂಗಡಿ ಮಾಲೀಕರು ಸಹ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.

ನಮ್ಮ ಜಿಲ್ಲೆಯಲ್ಲಿ 102 ಜನ ವಿದೇಶ ಪ್ರವಾಸ ಕೈಗೊಂಡವರಿದ್ದು, ಅವರಲ್ಲಿ 6
ಜನರನ್ನು ನಿಗಾವಣೆಯಲ್ಲಿ ಇರಿಸಲಾಗಿದೆ. ಇದುವರೆಗೆ ಜಿಲ್ಲೆಯಲ್ಲಿ ಯಾರೊಬ್ಬರಲ್ಲೂ ಸೋಂಕು ಕಂಡುಬಂದಿಲ್ಲ. ಎಲ್ಲ ವರದಿಗಳು ನೆಗೆಟಿವ್‌ ಇವೆ ಎಂದು ತಿಳಿಸಿದರು.

ಎಸ್‌ಪಿ ಹನುಮಂತರಾಯ ಮಾತನಾಡಿ, ಜವಳಿ ಅಂಗಡಿ ಮಾಲೀಕರು ಕಟ್ಟುನಿಟ್ಟಿನ ಕ್ರಮ ಅನುಸರಿಸಬೇಕು ಎಂದು ಸೂಚಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಜಿಲ್ಲಾ ಆರೋಗ್ಯ ಮತ್ತು ಕಲ್ಯಾಣಾಧಿಕಾರಿ ಡಾ| ರಾಘವೇಂದ್ರಸ್ವಾಮಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ಜಿ.ಡಿ.ರಾಘವನ್‌, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ಬಿ.ಎಸ್‌.ಚನ್ನಬಸಪ್ಪ ಆ್ಯಂಡ್‌ ಸನ್ಸ್‌, ಗೌಡ್ರ ಜಯದೇವಪ್ಪ, ಅಂಬರ್‌ಕರ್‌ ಪಂಪಣ, ರವಿತೇಜ, ಶಾಂತಲಾ ಸಿಲ್ಕ್ಸ್ ಸೇರಿದಂತೆ ವಿವಿಧ ಜವಳಿ ಅಂಗಡಿಗಳ ಮಾಲೀಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next