Advertisement

ಅಡಕೆ ನಾಡಲ್ಲಿ ಮುನ್ನಡೆ ಯಾರಿಗೆ?

10:18 AM May 04, 2019 | Naveen |

ದಾವಣಗೆರೆ: ಅರೆ ಮಲೆನಾಡು ಎಂದೇ ಕರೆಯಲ್ಪಡುವ ಚನ್ನಗಿರಿ ವಿಧಾನಸಭಾ ಕ್ಷೇತ್ರದಲ್ಲಿ 2014ರ ಲೋಕಸಭಾ ಚುನಾವಣೆಗಿಂತ ಈ ಬಾರಿ ಕಡಿಮೆ ಮತದಾನ ಆಗಿದೆ.

Advertisement

ಅಡಕೆ ನಾಡೆಂದೇ ಚನ್ನಗಿರಿ ಅನ್ವರ್ಥನಾಮ. ಚನ್ನಗಿರಿ ವಿಧಾನಸಭಾ ಕ್ಷೇತ್ರದಲ್ಲಿ 2014ರ ಲೋಕಸಭಾ ಚುನಾವಣೆಯಲ್ಲಿ ಶೇ. 77.17 ಮತದಾನ ಆಗಿದ್ದರೆ, ಈ ಬಾರಿ ಶೇ. 73.73 ಮತದಾನ ಆಗಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಆ ಕ್ಷೇತ್ರದ ಒಟ್ಟು 1,80,619 ಮತದಾರರ ಪೈಕಿ 1,39,386 ಮಂದಿ ಮತದಾನ ಮಾಡಿದ್ದರು. ಈ ಬಾರಿಯ ಚುನಾವಣೆಯಲ್ಲಿ 98,920 ಪುರುಷರು, 96,898 ಮಹಿಳೆಯರು ಹಾಗೂ 9 ಇತರರು ಒಳಗೊಂಡಂತೆ 1,95,827 ಮತದಾರರು ಇದ್ದರು. ಕಳೆದ ಚುನಾವಣೆಗಿಂತ ಈ ಬಾರಿ 15,208 ಮತದಾರರು ಹೆಚ್ಚಾಗಿದ್ದಾರೆ.

ಏ.23ರಂದು ನಡೆದ ಮತದಾನದಲ್ಲಿ 98,920 ಪುರುಷ ಮತದಾರರಲ್ಲಿ 75,631 ಹಾಗೂ 96,898 ಮಹಿಳಾ ಮತದಾರರ ಪೈಕಿ 68,751 ಮಂದಿ ಮತದಾನ ಮಾಡಿದ್ದಾರೆ. ಇತರೆ 9 ಮಂದಿಯಲ್ಲಿ ಒಬ್ಬರೂ ಕೂಡ ಮತದಾನಕ್ಕೆ ಮುಂದಾಗಿಲ್ಲ. ಈ ಚುನಾವಣೆಯಲ್ಲಿ ಚನ್ನಗಿರಿ ವಿಧಾನಸಭಾ ಕ್ಷೇತ್ರದ ಒಟ್ಟು 1,44,382 ಮಂದಿ ತಮ್ಮ ಸಂವಿಧಾನಿಕ ಹಕ್ಕು ಚಲಾಯಿಸಿದ್ದಾರೆ. ಇದರಲ್ಲಿ ಪುರುಷರು ಶೇ. 76.46 ಹಾಗೂ ಮಹಿಳೆಯರು ಶೇ. 70.95 ಮತದಾನ ಮಾಡಿದ್ದಾರೆ.

ಕಳೆದ ಲೋಕಸಭಾ ಚುನಾವಣೆಗಿಂತಲೂ ಈ ಬಾರಿ ಚನ್ನಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 4,996 ಮತದಾರರು ಹೆಚ್ಚು ಮತದಾನ ಮಾಡಿದ್ದರೂ ಮತದಾನ ಪ್ರಮಾಣ ಶೇ. 3.44 ಇಳಿಕೆ ಆಗಿದೆ.

Advertisement

ಚನ್ನಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಈಗ ಬಿಜೆಪಿಯ ಮಾಡಾಳು ವಿರುಪಾಕ್ಷಪ್ಪ ಶಾಸಕರು. 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅವರು ಕಾಂಗ್ರೆಸ್‌ನ ವಡ್ನಾಳ್‌ ರಾಜಣ್ಣರನ್ನು 25,780 ಮತಗಳ ಅಂತರದಿಂದ ಪರಾಭವಗೊಳಿಸಿದ್ದರು. ಆ ಚುನಾವಣೆಯಲ್ಲಿ ಮಾಡಾಳು ವಿರುಪಾಕ್ಷಪ್ಪ 73,794 ಮತ ಪಡೆದಿದ್ದರೆ, ವಡ್ನಾಳ್‌ ರಾಜಣ್ಣ 48,014 ಮತ ಗಳಿಸಿದ್ದರು. ಜೆಡಿಎಸ್‌ನ ಹೊದಿಗೆರೆ ರಮೇಶ್‌ಗೆ 29,106 ಮತ ದೊರೆತಿದ್ದವು. ಇನ್ನು ಜೆಡಿಯು ಪಕ್ಷದಿಂದ ಕಣಕ್ಕಿಳಿದಿದ್ದ ಮಾಜಿ ಮುಖ್ಯಮಂತ್ರಿ ಜೆ. ಎಚ್.ಪಟೇಲ್ ಪುತ್ರ ಮಹಿಮಾ ಜೆ. ಪಟೇಲ್ 3,954 ಮತಗಳನ್ನಷ್ಟೇ ಗಳಿಸಿದ್ದರು.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ನ ಮೈತ್ರಿ ಅಭ್ಯರ್ಥಿ ಕಣಕ್ಕಿಳಿದಿದ್ದರಿಂದ ಚನ್ನಗಿರಿ ವಿಧಾನ ಸಭಾ ಕ್ಷೇತ್ರದಲ್ಲಿ ಯಾರಿಗೆ ಮುನ್ನಡೆ ಆಗಲಿದೆ ಎಂಬ ಕುತೂಹಲ ಇದೆ.

2014ರ ಲೋಕಸಭಾ ಚುನಾವಣೆಯಲ್ಲಿ ಈ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್‌ ಕಾಂಗ್ರೆಸ್‌ ಅಭ್ಯರ್ಥಿ ಎಸ್‌.ಎಸ್‌.ಮಲ್ಲಿಕಾರ್ಜುನ್‌ಗಿಂತ 1,598 ಮತಗಳ ಮುನ್ನಡೆ ಸಾಧಿಸಿದ್ದರು. ಇನ್ನು ಆ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಹುರಿಯಾಳಾಗಿದ್ದ ಮಹಿಮಾ ಜೆ.ಪಟೇಲ್ಗೆ 7,566 ಮತ ಲಭಿಸಿದ್ದವು.

ಈಗ ಸದ್ಯ ಚನ್ನಗಿರಿ ವಿಧಾನ ಸಭಾ ಕ್ಷೇತ್ರದಲ್ಲಿ ಕಳೆದ ಏ.23ರಂದು ನಡೆದ ಲೋಕಸಭಾ ಮತದಾನದ ಜಾತಿವಾರು ಲೆಕ್ಕಾಚಾರ ನಡೆಯುತ್ತಿದೆ. ಈ ಬಾರಿ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಎಚ್.ಬಿ.ಮಂಜಪ್ಪರ ಪರ ಮಾಜಿ ಶಾಸಕ ವಡ್ನಾಳ್‌ ರಾಜಣ್ಣ, ಜೆಡಿಎಸ್‌ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಹೊದಿಗೆರೆ ರಮೇಶ್‌ ಪ್ರಚಾರ ನಡೆಸಿದ್ದಾರೆ.

ಈ ಹಿಂದೆ ವಡ್ನಾಳ್‌ ರಾಜಣ್ಣ ಶಾಸಕರಾಗಿದ್ದ ಸಂದರ್ಭದಲ್ಲಿ ಕೈಗೊಂಡ ಕಾಮಗಾರಿ, ಮಂಜೂರಾದ ಯೋಜನೆಗಳನ್ನು ಆಧರಿಸಿ, ಮತಯಾಚಿಸಿದ್ದಾರೆ. ಇನ್ನು ವಿಧಾನಸಭಾ ಚುನಾವಣೆಗಳಲ್ಲಿ ಗಣನೀಯ ಪ್ರಮಾಣದಲ್ಲಿ ಮತ ಗಳಿಸುತ್ತಿರುವ ಜೆಡಿಎಸ್‌ನ ಹೊದಿಗೆರೆ ರಮೇಶ್‌ ಸಹ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕೈ ಜೋಡಿಸಿರುವುದು ಮೈತ್ರಿ ಅಭ್ಯರ್ಥಿ ಎಚ್.ಬಿ.ಮಂಜಪ್ಪಗೆ ಆನೆ ಬಲ ತಂದಿದೆ ಎನ್ನಲಾಗಿದೆ. ಜತೆಗೆ ಅಹಿಂದ ವರ್ಗದ ಮತಗಳನ್ನು ಅವರು ಹೆಚ್ಚಾಗಿ ಸೆಳೆಯುವ ಸಾಧ್ಯತೆ ಇದೆ ಎಂಬ ಮಾತು ಕೇಳಿ ಬರುತ್ತಿದೆ.

ಇನ್ನು ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್‌ ಪರ ಶಾಸಕ ಮಾಡಾಳು ವಿರುಪಾಕ್ಷಪ್ಪ ಕ್ಷೇತ್ರದಲ್ಲಿ ಮತಯಾಚಿಸಿದ್ದಾರೆ. ಜತೆಗೆ ಪ್ರಧಾನಿ ನರೇಂದ್ರ ಮೋದಿ ಅಲೆ ಮತ್ತು ಯುವ ಮತದಾರರ ಒಲವು ಕಂಡು ಬರುತ್ತಿರುವುದರಿಂದ ಈ ಬಾರಿಯೂ ಚನ್ನಗಿರಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯೇ ಮುನ್ನಡೆ ಸಾಧಿಸಲಿದ್ದಾರೆ ಎಂಬುದು ಕಮಲ ಪಾಳೆಯದ ಲೆಕ್ಕಾಚಾರ.

ಯಾವ ಅಭ್ಯರ್ಥಿಗೆ ಲೀಡ್‌ ಬರಬಹುದು ಎನ್ನುವ ಕುರಿತು ಚರ್ಚೆಗಳು ನಡೆಯುತ್ತಿವೆಯೇ ಹೊರತು ಬೆಟ್ಟಿಂಗ್‌ ಮಾತು ಕೇಳಿ ಬರುತ್ತಿಲ್ಲ.

ಮೈತ್ರಿ ಅಭ್ಯರ್ಥಿ ಆಯ್ಕೆಯೇ ವಿಳಂಬವಾಗಿದೆ. ಹಾಗಾಗಿ ಎಲ್ಲಾ ಮತದಾರರನ್ನು ತಲುಪಲು ಅವರಿಂದ ಸಾಧ್ಯವಾಗಿಲ್ಲ. ನಮ್ಮ ಅಭ್ಯರ್ಥಿ ಜಿ.ಎಂ. ಸಿದ್ದೇಶ್ವರ್‌ ಸಂಸದರಾದಾಗಿನಿಂದಲೂ ಜನರ ಸಂಪರ್ಕದಲ್ಲಿ ಇದ್ದಾರೆ. ಸಂಸತ್‌ ಅಧಿವೇಶನದಲ್ಲಿ ಭಾಗವಹಿಸುವುದು ಬಿಟ್ಟರೆ ಬಾಕಿ ಎಲ್ಲಾ ದಿನಗಳಲ್ಲಿಯೂ ಜನರೊಡನೆ ಬೆರೆತು ಕೆಲಸ ಮಾಡಿಕೊಂಡು ಬಂದಿದ್ದಾರೆ. ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಯೋಜನೆ ಕಾರ್ಯಗತಗೊಳಿಸಿದ್ದಾರೆ. ಜನ ಸಂಪರ್ಕ ಸಭೆ ನಡೆಸಿ, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ದೇಶದಲ್ಲಿ ಮೋದಿ ಅಲೆ ಈ ಬಾರಿ ಮತ್ತಷ್ಟು ಹೆಚ್ಚಿದೆ. ಸಿದ್ದೇಶ್ವರ್‌ ಅಭಿವೃದ್ಧಿ ಕೆಲಸ ನೋಡಿರುವ ಜನತೆ ಬಿಜೆಪಿಗೆ ಮತ ಹಾಕಿದ್ದಾರೆ.
ಮೇದಿಕೆರೆ ಸಿದ್ದೇಶ್‌, ತಾಲೂಕು ಬಿಜೆಪಿ ಅಧ್ಯಕ್ಷ.

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸಂಸದರು ಹೇಳಿಕೊಳ್ಳುವ ಸಾಧನೆ ಏನೂ ಮಾಡಿಲ್ಲ. ಚನ್ನಗಿರಿ ತಾಲೂಕಿನ ಹಳ್ಳಿಗಳಿಗೆ ಭೇಟಿ ನೀಡಿ, ಅಲ್ಲಿನ ಜನರ ಸಮಸ್ಯೆ ಆಲಿಸಿಲ್ಲ. ಈ ಒಂದೇ ಕಾರಣಕ್ಕೆ ಬಿಜೆಪಿ ತನ್ನ ಅಸ್ತಿತ್ವ ಕಳೆದುಕೊಳ್ಳಲಿದೆ. ಮೈತ್ರಿ ಅಭ್ಯರ್ಥಿ ಎಚ್.ಬಿ. ಮಂಜಪ್ಪ ನಿಷ್ಠಾವಂತ ಕಾಂಗ್ರೆಸ್‌ ಕಾರ್ಯಕರ್ತ. ಸಾಮಾನ್ಯ ಜನರ ನಾಡಿಮಿಡಿತ ಅರ್ಥಮಾಡಿಕೊಂಡಿದ್ದಾರೆ. ಅವರ ಗೆಲುವು ಸಾಮಾನ್ಯ ಕಾರ್ಯಕರ್ತನ ಗೆಲುವು ಆಗಿದೆ. ಹಿಂದಿನ ಕಾಂಗ್ರೆಸ್‌ ಸರ್ಕಾರ ಮತ್ತು ಈಗಿನ ಮೈತ್ರಿ ಸರ್ಕಾರದ ಯೋಜನೆಗಳೇ ಮೈತ್ರಿ ಅಭ್ಯರ್ಥಿ ಮಂಜಪ್ಪರ ಗೆಲುವಿಗೆ ಸಹಕಾರಿಯಾಗಲಿವೆ.
ಎಚ್. ಆರ್‌. ಶಾಂತಕುಮಾರ್‌,
ತಾಲೂಕು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ.

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ 23 ವರ್ಷಗಳ ನಂತರ ಒಬ್ಬ ಹಿಂದುಳಿದ ವರ್ಗದ ವ್ಯಕ್ತಿಗೆ ಕಾಂಗ್ರೆಸ್‌ ಟಿಕೆಟ್ ಸಿಕ್ಕಿದೆ. ಜತೆಗೆ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಯಾಗಿ ಕಣಕ್ಕಿಳಿದಿರುವುದು ಇದೇ ಮೊದಲು. ಈ ಹಿಂದೆ ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ ಜಾರಿಗೊಳಿಸಿದ ಯೋಜನೆಗಳು ಜನಮಾನಸದಲ್ಲಿ ಶಾಶ್ವತವಾಗಿದೆ. ಇನ್ನು ಸಮ್ಮಿಶ್ರ ಸರ್ಕಾರದ ಸಿಎಂ ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡಿರುವುದರಿಂದ ಮೈತ್ರಿ ಅಭ್ಯರ್ಥಿ ಬಗ್ಗೆ ಮತದಾರರು ಹೆಚ್ಚು ಒಲವು ತೋರಿದ್ದಾರೆ. ಅಹಿಂದ ವರ್ಗ ಕೂಡ ಹೆಚ್ಚಿನ ಪ್ರಮಾಣದಲ್ಲಿ ಬೆಂಬಲಿಸಿದೆ. ಮೈತ್ರಿ ಅಭ್ಯರ್ಥಿ ಎಚ್.ಬಿ. ಮಂಜಪ್ಪ ಸಾಮಾನ್ಯ ಜನರ ಕೈಗೆ ಸಿಗುವ ವ್ಯಕ್ತಿ. ಎಲ್ಲಾ ವರ್ಗದವರ ಜೊತೆ ಒಡನಾಟ ಇಟ್ಟುಕೊಂಡಿದ್ದಾರೆ. ಜೆಡಿಎಸ್‌ ಕಾರ್ಯಕರ್ತರು ಸಹ ಅವರ ಗೆಲುವಿಗಾಗಿ ಬೂತ್‌ಮಟ್ಟದಲ್ಲಿ ಹಗಲಿರುಳು ಕೆಲಸ ಮಾಡಿದ್ದಾರೆ.
ಬುಳ್ಳುಸಾಗರದ ಬಾಬು,
ತಾಲೂಕು ಜೆಡಿಎಸ್‌ ಅಧ್ಯಕ್ಷ.

ಎನ್‌.ಆರ್‌. ನಟರಾಜ್‌

Advertisement

Udayavani is now on Telegram. Click here to join our channel and stay updated with the latest news.

Next