Advertisement

ಕಾಣದ ಚುನಾವಣಾ ಅಬ್ಬರ-ಅಭಿವೃದ್ಧಿಯಾಗದ ಬೇಸರ

10:43 AM Apr 20, 2019 | Naveen |

ಹರಪನಹಳ್ಳಿ: ತಾಲೂಕು ಬಳ್ಳಾರಿ ಜಿಲ್ಲೆಗೆ ಸೇರ್ಪಡೆಗೊಂಡಿದ್ದರೂ ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದ ಅಭ್ಯರ್ಥಿಗೆ ಇಲ್ಲಿಯ ಮತದಾರರು ತಮ್ಮ ಹಕ್ಕು ಚಲಾಯಿಸಬೇಕಿದೆ. ಇಲ್ಲಿ ರಾಷ್ಟ್ರಮಟ್ಟದ ಸಮಸ್ಯೆಗಳಿಗಿಂತ ಸ್ಥಳೀಯವಾಗಿ ಆಗಿರುವ ಮತ್ತು ಆಗಬೇಕಾಗಿರುವ ವಿಷಯಗಳ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಬದಲಾಗಿ ಶಾಸಕ ಕರುಣಾಕರರೆಡ್ಡಿ ಮತ್ತು ಮಾಜಿ ಶಾಸಕ ದಿ| ಎಂ.ಪಿ.ರವೀಂದ್ರ ಅವರ ಸಾಧನೆಗಳನ್ನು ಜನರು ತುಲನೆ ಮಾಡುತ್ತಿದ್ದಾರೆ.

Advertisement

ಮತದಾನ ದಿನಾಂಕ ಸಮೀಪಿಸುತ್ತಿದ್ದರೂ ಬಿಸಿಲಿನ ಬೇಗೆಯಿಂದ
ಬಳಲುತ್ತಿರುವ ಜನರು ಚುನಾವಣೆ ಬಗ್ಗೆ ಇನ್ನೂ ಹೆಚ್ಚಿನ ಒಲವು ತೋರಿಸಿಲ್ಲ. ಕಳೆದ ತಿಂಗಳಿನಿಂದಲೇ ಬಿಜೆಪಿ ಪ್ರಚಾರ ಆರಂಭಿಸಿದೆ. ಆದರೆ ಅಭ್ಯರ್ಥಿ ಆಯ್ಕೆ ತಡವಾಗಿ ಆದ ಪರಿಣಾಮ ಕಾಂಗ್ರೆಸ್‌ ಚುನಾವಣಾ ಪ್ರಚಾರ ಕಳೆದ ಒಂದು ವಾರದಿಂದ ಶುರುವಾಗಿದೆ. ಬಿಜೆಪಿ ಪಕ್ಷದಿಂದ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್‌ ಹಾಗೂ ಜಿ.ಕರುಣಾಕರರೆಡ್ಡಿ ಎರಡು ಸುತ್ತಿನ ಪ್ರಚಾರ ನಡೆಸಿದ್ದಾರೆ. ಬಿಜೆಪಿ ಅಭ್ಯರ್ಥಿ ಪರವಾಗಿ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ಕೂಡ ಒಂದು ದಿನ ಪ್ರಚಾರ ನಡೆಸಿದ್ದಾರೆ.

ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ್‌ ನೇತೃತ್ವದಲ್ಲಿ ಮೈತ್ರಿ ಅಭ್ಯರ್ಥಿ ಪರ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷಗಳ ಮುಖಂಡರು ಕಳೆದ ಮೂರು-ನಾಲ್ಕು ದಿನಗಳಿಂದ ಒಟ್ಟಾಗಿ ಪ್ರಚಾರ ನಡೆಸುತ್ತಿದ್ದಾರೆ. ಅರಸೀಕೆರೆ ಎನ್‌.ಕೊಟ್ರೇಶ್‌ ಹಾಗೂ ಮಾಜಿ ಶಾಸಕ ಎಚ್‌.ಎಸ್‌. ಶಿವಶಂಕರ್‌ ನೇತೃತ್ವದಲ್ಲಿ ಏ.13ರಂದು ನಡೆದ ಜೆಡಿಎಸ್‌ ಸಂಘಟನಾ ಸಭೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ಬಿ. ಮಂಜಪ್ಪ ಭಾಗವಹಿಸಿ
ಸಹಕಾರ ಕೋರಿದ್ದಾರೆ. ನಂತರ ಕಾಂಗ್ರೆಸ್‌ ಚುನಾವಣಾ ಉಸ್ತುವಾರಿ
ಎಸ್‌.ಎಸ್‌. ಮಲ್ಲಿಕಾರ್ಜುನ ಒಂದು ದಿನ ಪ್ರಚಾರಕ್ಕೆ ಬಂದಿದ್ದಾರೆ.

ಒಟ್ಟಾರೆಯಾಗಿ ತಾಲೂಕಿಗೆ ಯಾವುದೇ ಸ್ಟಾರ್‌ ಪ್ರಚಾರಕರು ಆಗಮಿಸಿಲ್ಲ. ಹೀಗಾಗಿ ಹಳ್ಳಿಗಳಲ್ಲಿ ಮತದಾರರು ಚುನಾವಣೆ ಬಗ್ಗೆ ಆಷ್ಟೊಂದು ಆಸಕ್ತಿ ತೋರುತ್ತಿಲ್ಲ. ಕ್ಷೇತ್ರದಲ್ಲಿ ಚುನಾವಣೆ ಅಬ್ಬರ ಜೋರಾಗಿ ಕಾಣುತ್ತಿಲ್ಲ. ಪಕ್ಷದ ಮುಖಂಡರು, ಕಾರ್ಯಕರ್ತರು ಚುನಾವಣೆ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ ಹೊರತು ಮತದಾರ ಮಾತ್ರ ತನ್ನ ಗುಟ್ಟು ಬಿಟ್ಟುಕೊಟ್ಟಿಲ್ಲ. ತಾಲೂಕಿನಲ್ಲಿ ಎಸ್ಸಿ-ಎಸ್ಟಿ,
ಹಿಂದುಳಿದ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಕೆಲಸ ಅರಸಿ ಕಾಫಿ ಸೀಮೆಗೆ ಗುಳೇ ಹೋಗುತ್ತಿದ್ದಾರೆ. ಉದ್ಯೋಗ ಸೃಷ್ಟಿಯಾಗುವ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಬೇಕು ಎಂಬುದು ಇಲ್ಲಿನ ಜನರ ಪ್ರಮುಖ ಬೇಡಿಕೆಯಾಗಿದೆ. ಮಾಜಿ ಶಾಸಕ ದಿ.ಎಂ.ಪಿ.ರವೀಂದ್ರ ಪ್ರಯತ್ನದ ಫಲವಾಗಿ ತಾಲೂಕಿಗೆ 371ಜೆ ಕಲಂ ಸೌಲಭ್ಯ ದೊರಕಿದ್ದು, ಯುವಜನರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ದೊರೆಯಲಿರುವುದರಿಂದ ಇದು ಯುವಜನತೆಗೆ ಸ್ವಲ್ಪ ಭರವಸೆ ಮೂಡಿಸಿದೆ.

ಪ್ರಗತಿ ಹಂತದಲ್ಲಿರುವ 60 ಕೆರೆಗಳಿಗೆ ನದಿ ನೀರು ತುಂಬಿಸುವ, ಗರ್ಭಗುಡಿ ಬ್ರಿಡ್ಜ್ ಕಂ ಬ್ಯಾರೇಜ್‌ ಯೋಜನೆ ಕಾಮಗಾರಿ ಪ್ರಾರಂಭಿಸಿ ತ್ವರಿತವಾಗಿ ಮುಗಿಸುವ ಮೂಲಕ ನೀರಾವರಿ ಪ್ರದೇಶವನ್ನಾಗಿ ಮಾಡಬೇಕು ಎನ್ನುವುದು ಬಹುಜನರ ಒತ್ತಾಯವಾಗಿದೆ. ಹರಿಹರದಿಂದ ಹರಪನಹಳ್ಳಿ ಮಾರ್ಗವಾಗಿ ಕೊಟ್ಟೂರುವರೆಗೆ ಸಂಚರಿಸುತ್ತಿರುವ ಪ್ಯಾಸೆಂಜರ್‌ ರೈಲು ಮಾರ್ಗವನ್ನು ಹೊಸಪೇಟೆವರೆಗೆ ವಿಸ್ತರಿಸಬೇಕು ಎನ್ನುವ ಕೂಗು ಈಡೇರಿಲ್ಲ. ಈ ಮಾರ್ಗದ ಬಗ್ಗೆ ಸಾಕಷ್ಟು ಬಾರಿ ಸಂಸದರಿಗೆ ಮನವಿ ಸಲ್ಲಿಸಿದ್ದರೂ ಗಮನಹರಿಸಿಲ್ಲ ಎನ್ನುವ ಬೇಸರ ಮನೆ ಮಾಡಿದೆ.

Advertisement

ಕ್ಷೇತ್ರದಲ್ಲಿ ಯುವ ಜನತೆ ಮೋದಿ ಮತ್ತು ರಾಷ್ಟ್ರ ಪ್ರೇಮದ ಬಗ್ಗೆ ಮಾತನಾಡುತ್ತಿದ್ದಾರೆ. ರಾಹುಲ್‌ ಗಾಂಧಿ ಭವಿಷ್ಯದ ನಾಯಕ
ಎಂದು ಬಣ್ಣಿಸಲಾಗುತ್ತಿದೆ. ಸರ್ಜಿಕಲ್‌ ಸ್ಟ್ರೈಕ್, ಬಾಲಕೋಟ್‌ ಘಟನೆ, ರಫೇಲ್‌ ಹಗರಣದ ಬಗ್ಗೆ ಜನರು ತಲೆ ಕೆಡೆಸಿಕೊಂಡಿಲ್ಲ. ಬಿಜೆಪಿಯವರು ಬಡವರಿಗೆ ಅಕ್ರಮ ಸಕ್ರಮದಡಿ ಪಟ್ಟಾ ವಿತರಣೆ,
ಬಡವರಿಗೆ ಸೂರು ನೀಡಿದ್ದೇವೆ ಎನ್ನುತ್ತಿದ್ದಾರೆ. 371ಜೆ ಕಲಂ ಸೌಲಭ್ಯ, 60 ಕೆರೆಗಳಿಗೆ ನದಿ ನೀರು ತುಂಬಿಸುವ, ಗರ್ಭಗುಡಿ ಬ್ರಿಡ್ಜ್ ಕಂ ಬ್ಯಾರೇಜ್‌ ಯೋಜನೆ ಸಕಾರಗೊಳಿಸಿದ್ದೇವೆ ಎಂದು ಕಾಂಗ್ರೆಸ್‌ ನವರು ಪ್ರಚಾರ ಮಾಡುತ್ತಿದ್ದಾರೆ. ಒಟ್ಟಾರೆ ಇಲ್ಲಿ ದೇಶದ ಸಮಸ್ಯೆಗಳ ಬದಲಾಗಿ ಸ್ಥಳೀಯ ಸಮಸ್ಯೆಗಳೇ ಹೆಚ್ಚಾಗಿ ಪ್ರತಿಧ್ವನಿಸುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next