Advertisement

ಬಿಜೆಪಿ ಭದ್ರಕೋಟೆಯಲ್ಲಿ ಲೀಡ್‌ನ‌ ಕಸರತ್ತು

09:50 AM May 02, 2019 | Naveen |

ದಾವಣಗೆರೆ: ದಾವಣಗೆರೆ ಜಿಲ್ಲೆಯ ಬಿಜೆಪಿ ಭದ್ರಕೋಟೆ ಎಂದೇ ಗುರುತಿಸಲ್ಪಡುವ ಮಾಯಕೊಂಡ ಕ್ಷೇತ್ರದಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲೂ ಲೀಡ್‌… ದೊರೆತೇ ದೊರೆಯುತ್ತದೆ ಎಂಬ ಖಚಿತ ವಿಶ್ವಾಸ ಕಮಲ ಪಾಳಯದಲ್ಲಿದೆ.

Advertisement

ದಾವಣಗೆರೆ ಜಿಲ್ಲೆಯ ಎಲ್ಲಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಅಬ್ಬರದ ನಡುವೆಯೂ ಈ ಮತಕ್ಷೇತ್ರದ ಜನರು ಬಿಜೆಪಿ ಗೆಲ್ಲಿಸುವ ಮೂಲಕ ಕಮಲ ಪಕ್ಷ ಭದ್ರವಾಗಿ ಬೇರೂರಲು ಶಕ್ತಿ ತುಂಬಿದ್ದಾರೆ ಎಂಬುದಕ್ಕೆ ಈಗ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ ಪ್ರತಿನಿಧಿಸುತ್ತಿರುವ ಎಸ್‌.ಎ. ರವೀಂದ್ರನಾಥ್‌ ಸತತ ಮೂರು ಬಾರಿ ಹ್ಯಾಟ್ರಿಕ್‌ ಗೆಲುವು ಸಾಧಿಸಿರುವುದು ಸಾಕ್ಷಿ.

ಮಾಯಕೊಂಡ ಮೊದಲಿಗೆ ಕಾಂಗ್ರೆಸ್‌ನ ಭದ್ರ ನೆಲೆಯಾಗಿತ್ತು. ಶಿಕ್ಷಣ ಇಲಾಖೆ ಮಾಜಿ ಸಚಿವೆ ಡಾ| ನಾಗಮ್ಮ ಕೇಶವಮೂರ್ತಿ, ಕೆ. ಮಲ್ಲಪ್ಪ ಮುಂತಾದವರನ್ನು ಈ ಕ್ಷೇತ್ರ ಗೆಲ್ಲಿಸಿತ್ತು.

2008 ರ ಕ್ಷೇತ್ರ ಮರು ವಿಂಗಡಣೆಯಲ್ಲಿ ಪರಿಶಿಷ್ಠ ಜಾತಿ ಮೀಸಲು ಕ್ಷೇತ್ರವಾದ ನಂತರದ‌ ಮೂರು ಚುನಾವಣೆಯಲ್ಲಿ ಎರಡು ಬಾರಿ ಗೆಲ್ಲುವ ಮೂಲಕ ಮಾಯಕೊಂಡ ಬಿಜೆಪಿಯ ಭದ್ರಕ್ಷೇತ್ರ ಎಂಬುದನ್ನು ಸಾಬೀತುಪಡಿಸಿದೆ. ಜಿಲ್ಲಾ, ತಾಲೂಕು ಪಂಚಾಯತ್‌ನಲ್ಲಿ ಈ ಭಾಗದಿಂದ ಬಿಜೆಪಿ ಅಭ್ಯರ್ಥಿಗಳೇ ಹೆಚ್ಚಾಗಿ ಗೆಲುವಿನ ನಗೆ ಬೀರಿದ್ದಾರೆ.

ಮಾಯಕೊಂಡ ಮೀಸಲು ವಿಧಾನಸಭಾ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 1,90,931. ಏ.23 ರಂದು ನಡೆದ ಲೋಕಸಭಾ ಚುನಾವಣೆಯಲ್ಲಿ 96,703 ಪುರುಷರಲ್ಲಿ 77,369 ಜನರು ಮತ ಚಲಾವಣೆ ಮಾಡಿದ್ದಾರೆ. 94,223 ಮಹಿಳಾ ಮತದಾರರಲ್ಲಿ 70,821 ಮಹಿಳೆಯರು ಹಕ್ಕು ಚಲಾಯಿಸಿದ್ದಾರೆ. 5 ಮಂದಿ ಇತರೆ ಮತದಾರರಲ್ಲಿ ಒಬ್ಬರೂ ಮತ ಚಲಾಯಿಸಿಲ್ಲ.

Advertisement

2014ರ ಲೋಕಸಭಾ ಚುನಾವಣೆಯಲ್ಲಿ 1,79,714 ಮತದಾರರಲ್ಲಿ 1,39,363 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಆಗ ಶೇ.78.06 ರಷ್ಟು ಮತದಾನವಾಗಿತ್ತು. ಈ ಲೋಕಸಭಾ ಚುನಾವಣೆಯಲ್ಲಿ ಶೇ.77.61 ರಷ್ಟು ಮತದಾನವಾಗಿದೆ. ಕಳೆದ ಚುನಾವಣೆಗೆ ಹೋಲಿಕೆ ಮಾಡಿದಲ್ಲಿ ಶೇ.1.05 ರಷ್ಟು ಮತದಾನ ಪ್ರಮಾಣ ಕಡಿಮೆ ಆಗಿದೆ.

2014ರ ಚುನಾವಣೆಯಲ್ಲಿ ಬಿಜೆಪಿಯ ಜಿ.ಎಂ. ಸಿದ್ದೇಶ್ವರ್‌ 57,864 ಮತ ಪಡೆದಿದ್ದರು. ಕಾಂಗ್ರೆಸ್‌ನ ಎಸ್‌.ಎಸ್‌. ಮಲ್ಲಿಕಾರ್ಜುನ್‌ 64,229 ಹಾಗೂ ಜೆಡಿಎಸ್‌ನ ಮಹಿಮ ಜೆ. ಪಟೇಲ್ 10,853 ಮತ ಗಳಿಸಿದ್ದರು.

2018ರ ವಿಧಾನಸಭಾ ಚುನಾವಣೆಯಲ್ಲಿ 1,90,528 ಮತಗಳಲ್ಲಿ 1,53,971 ಮತ ಚಲಾವಣೆಯಾಗಿದ್ದವು. ಬಿಜೆಪಿಯ ಪ್ರೊ| ಎನ್‌. ಲಿಂಗಣ್ಣ 50,556, ಕಾಂಗ್ರೆಸ್‌ನ ಕೆ.ಎಸ್‌. ಬಸವರಾಜ್‌ 44,098, ಜೆಡಿಎಸ್‌ನ ಶೀಲಾನಾಯ್ಕ 11,085, ಜೆಡಿಯುನ ಎಂ.ಬಸವರಾಜನಾಯ್ಕ 16,640, ಪಕ್ಷೇತರ ಅಭ್ಯರ್ಥಿ ಎಚ್. ಆನಂದಪ್ಪ 27,321 ಮತ ಗಳಿಸಿದ್ದರು.

ಬಿಜೆಪಿ ಟಿಕೆಟ್ ಸಿಗದೇ ಇದ್ದ ಕಾರಣಕ್ಕೆ ಎಂ. ಬಸವರಾಜನಾಯ್ಕ ಮತ್ತು ಎಚ್. ಆನಂದಪ್ಪ ಕ್ರಮವಾಗಿ ಜೆಡಿಯು ಮತ್ತು ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಇಬ್ಬರು ಮಾತೃಪಕ್ಷಕ್ಕೆ ಮರಳಿದ್ದರಿಂದ ಬಿಜೆಪಿಯ ಶಕ್ತಿ ಹೆಚ್ಚಾಗಿದೆ. ಲೋಕಸಭಾ ಚುನಾವಣೆಯಲ್ಲಿ ಮೋದಿ ಅಲೆಯ ಜೊತೆಗೆ ಸಾಂಪ್ರದಾಯಿಕ ಮತಗಳಿಂದ 10-15 ಸಾವಿರ ಲೀಡ್‌ ದೊರೆಯುತ್ತದೆ ಎಂಬ ಲೆಕ್ಕಾಚಾರ ಬಿಜೆಪಿ ಪಾಳೆಯದಲ್ಲಿದೆ.

ಕಳೆದ ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್‌ ಪರ ಹೆಚ್ಚು ಮತಗಳು ಬಂದಿರುವುದು, ಅಹಿಂದ ಹಿನ್ನೆಲೆಯ ಅಭ್ಯರ್ಥಿ ಕಣದಲ್ಲಿ ಇರುವುದು ಮತ್ತು ಜನರು ಬದಲಾವಣೆಯತ್ತ ಮುಖ ಮಾಡಿರುವುದು, ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಗೆ ಹೆಚ್ಚಿನ ಒಲವು ತೋರಿರುವುದು 5 ರಿಂದ 10 ಸಾವಿರ ಲೀಡ್‌ ತಂದೇ ಕೊಡಲಿದೆ ಎಂಬ ಲೆಕ್ಕಾಚಾರ ಮೈತ್ರಿ ಪಾಳೆಯದಲ್ಲಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಸಾವಿರಾರು ಮತಗಳ ಲೀಡ್‌ ದೊರಕಿತ್ತು. ಜೆಡಿಎಸ್‌ ತನ್ನದೆ ಓಟು ಬ್ಯಾಂಕು ಹೊಂದಿದೆ. ಬಿಜೆಪಿಯಲ್ಲಿ ಇರುವ ಅಹಿಂದ ಮತದಾರರು ಮತ್ತು ಸಿದ್ದೇಶ್ವರ್‌ ಅವರ ಬಗ್ಗೆ ಹೆಚ್ಚಿನ ಒಲವು ಇಲ್ಲದ ಕಾರಣಕ್ಕೆ ಮೈತ್ರಿ ಅಭ್ಯರ್ಥಿಗೆ ಹೆಚ್ಚಿಗೆ ಲೀಡ್‌ ದೊರೆಯಲಿದೆ. ಅಹಿಂದ ಮತಗಳು ನಮ್ಮ ಪರವಾಗಿ ಆಗಿದ್ದಲ್ಲಿ 5-10 ಸಾವಿರ ಮತಗಳ ಲೀಡ್‌ ನೀಡುತ್ತದೆ. ಜಿಲ್ಲೆಯಲ್ಲಿ ಚನ್ನಯ್ಯ ಒಡೆಯರ್‌ ನಂತರ ಹಿಂದುಳಿದ ನಾಯಕರೊಬ್ಬರು 10-15 ಸಾವಿರ ಅಂತರದಲ್ಲಿ ಗೆಲ್ಲುವುದು ನಿಶ್ಚಿತ.
•ಬಿ.ಟಿ ಹನುಮಂತಪ್ಪ,
ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ

ಕಳೆದ ಒಂದು ವರ್ಷದಿಂದಲೇ ಮೋದಿಯವರ ಅಲೆ ಇದೆ. ಕಳೆದ ಎರಡು ಚುನಾವಣೆಯಲ್ಲಿ ಬಿಜೆಪಿಗೆ ಲೀಡ್‌ ನೀಡಿರಲಿಲ್ಲ. ಈ ಬಾರಿ 10-15 ಸಾವಿರ ಲೀಡ್‌ ನೀಡುವುದರ ಜೊತೆಗೆ 1ಲಕ್ಷ ಮತಗಳ ಅಂತರದಿಂದ ಬಿಜೆಪಿ ಮತೊಮ್ಮೆ ಗೆಲ್ಲುತ್ತದೆ.
•ಎ.ಇ.ನಾಗರಾಜು ಮೆಳ್ಳೆಕಟ್ಟೆ,
ಬಿಜೆಪಿ ಮಂಡಲ ಅಧ್ಯಕ್ಷ

ರಾ.ರವಿಬಾಬು

Advertisement

Udayavani is now on Telegram. Click here to join our channel and stay updated with the latest news.

Next