Advertisement

ಒಗ್ಗಟ್ಟಾಗಿ ಮೈತ್ರಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಿ

12:08 PM Apr 20, 2019 | Team Udayavani |

ದಾವಣಗೆರೆ: ಕಾಂಗ್ರೆಸ್‌-ಜೆಡಿಎಸ್‌ ನಾಯಕರು, ಕಾರ್ಯಕರ್ತರು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುವ ಮೂಲಕ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಎಚ್‌.ಬಿ. ಮಂಜಪ್ಪ ಅವರನ್ನು ಅತಿ ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲಿಸಬೇಕು ಎಂದು ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಮನವಿ ಮಾಡಿದರು.

Advertisement

ಶುಕ್ರವಾರ ಗೌರಮ್ಮ ನರಹರಿಶೇಠ್ ಸಭಾ ಭವನದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಎಚ್‌.ಬಿ. ಮಂಜಪ್ಪ ಪರ ಪ್ರಚಾರ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಈಗ ನಡೆಯುತ್ತಿರುವ ಲೋಕಸಭಾ ಚುನಾವಣೆ ಜನಬಲ ಮತ್ತು ಹಣಬಲದ ನಡುವಿನ ಚುನಾವಣೆ ಎಂದು ಬಣ್ಣಿಸಿದ ಅವರು, ಜನಬಲದಿಂದ ಹೋರಾಟ ಮಾಡಿ, ಗೆದ್ದು ಬರುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಾನೇ
ಸ್ಪರ್ಧಿಸುತ್ತೇನೆ ಎಂದು ಸಾಕಷ್ಟು ಜನರು ಅಂದುಕೊಂಡಿದ್ದರು. ಪಕ್ಷದ ಹೈಕಮಾಂಡ್‌ ಸಹ ಹೇಳಿತ್ತು. ಆದರೆ, ಪಕ್ಷದ ಒಳ್ಳೆಯ ಕಾರ್ಯಕರ್ತನಿಗೆ ಸ್ಥಾನಮಾನ ಕೊಡುವ ಉದ್ದೇಶದಿಂದ ಎಚ್‌.ಬಿ. ಮಂಜಪ್ಪ ಅವರನ್ನು ಕಣಕ್ಕಿಳಿಸಲಾಗಿದೆ. ಒಳ್ಳೆಯ, ಪ್ರಾಮಾಣಿಕ, ಎಲ್ಲರಿಗೂ ಸ್ಪಂದಿಸುವ ಮಂಜಪ್ಪ ಅವರಂತಹ ಒಳ್ಳೆಯ ಅಭ್ಯರ್ಥಿಯನ್ನು ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡಿ ಅತಿ ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲಿಸಬೇಕು ಎಂದರು. ಬಿಜೆಪಿಯವರು ಹಣಬಲದಿಂದ ಗೆಲ್ಲಬಹುದು ಅಂದುಕೊಂಡಿದ್ದಾರೆ. ಅವರು ಅಂದುಕೊಂಡಂತೆ ಆಗುವುದಿಲ್ಲ. ಅವರು ಐದು ವರ್ಷಗಳ ಕಾಲ ಏನೂ ಮಾಡಲಿಲ್ಲ. ಸಂವಿಧಾನವನ್ನು ಬದಲಾಯಿಸಲಿಕ್ಕೆ ಅಧಿಕಾರಕ್ಕೆ ಬಂದಿರುವುದಾಗಿ ಹೇಳಿದರು. ಜಾತಿ-ಜಾತಿಗಳ ನಡುವೆ ಹೊಡೆದಾಟ ಹಚ್ಚಿದರು. ಅಂತಹ ಪಕ್ಷವನ್ನು ಗೆಲ್ಲಿಸಬಾರದು. ಜಾತ್ಯತೀತ, ಸಾಮಾಜಿಕ ನ್ಯಾಯದ ಕಾಂಗ್ರೆಸ್‌ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಮಾಜಿ ಸಚಿವ ಎಚ್‌. ಆಂಜನೇಯ ಮಾತನಾಡಿ, ದಾವಣಗೆರೆ ಕಾಂಗ್ರೆಸ್‌ನ ಭದ್ರಕೋಟೆ. ಆದರೂ, ಅನಿವಾರ್ಯ ಕಾರಣ, ಸಂಘಟನೆ, ಸಮನ್ವಯದ ಕೊರತೆಯಿಂದ ಸೋಲು ಕಾಣಬೇಕಾಯಿತು. ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿರುವಂತಹ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಸೋಲುವಂತೆಯೇ ಇಲ್ಲ. ಆದರೂ, ಸೋತಿರುವ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದರು.

ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಎಚ್‌.ಬಿ. ಮಂಜಪ್ಪ ಜನಸೇವಕ, ಸಾಮಾನ್ಯ ವ್ಯಕ್ತಿ. ಹಾಲುಮತ ಸಮಾಜದವರಿಗೆ ಬಹಳ ವರ್ಷಗಳ ನಂತರ ಅವಕಾಶ ಸಿಕ್ಕಿದೆ. ಸಭ್ಯ ರಾಜಕಾರಣಿ ಆಗಿರುವ ಅವರು 1 ಲಕ್ಷ ಮತಗಳ ಅಂತರದಲ್ಲಿ ಗೆಲ್ಲುವರು. ಇಲ್ಲಿ ಮಾತ್ರವಲ್ಲ ದೇವೇಗೌಡ, ನಿಖೀಲ್‌ ಕುಮಾರ್‌, ಪ್ರಜ್ವಲ್‌ ರೇವಣ್ಣ ಒಳಗೊಂಡಂತೆ 20 ಸ್ಥಾನದಲ್ಲಿ ಮೈತ್ರಿ ಅಭ್ಯರ್ಥಿ ಗೆಲ್ಲುವರು ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

ಮಾಜಿ ಶಾಸಕ ಎಚ್‌.ಎಸ್‌. ಶಿವಶಂಕರ್‌ ಮಾತನಾಡಿ, ಬಿಜೆಪಿಯವರು ಭ್ರಷ್ಟಾಚಾರದಿಂದ ಹಣ ಮಾಡಿಕೊಂಡಿದ್ದಾರೆ. ಮೋದಿ ಅವರೇ ಬಾಕ್ಸ್‌ ತುಂಬಾ ಹಣ ತಂದಿದ್ದಾರೆ. ಅವರ ಹಣ ಬಂದರೆ ತೆಗೆದುಕೊಳ್ಳಿ. ಬಿಜೆಪಿ ನೋಟು… ಎಚ್‌ .ಬಿ. ಮಂಜಪ್ಪ ವೋಟು… ಎನ್ನುವಂತೆ ಮಂಜಪ್ಪ ಅವರನ್ನು ಗೆಲ್ಲಿಸುವ ಮೂಲಕ
ಹೊಸ ಶಕ್ತಿ ಉದಯಕ್ಕೆ ಕಾರಣವಾಗಬೇಕು ಎಂದು ಮನವಿ ಮಾಡಿದರು.

ದಲಿತ ಮುಖಂಡ ಎಂ. ಜಯಣ್ಣ ಮಾತನಾಡಿ, ಈ ಬಾರಿಯ ಲೋಕಸಭಾ ಚುನಾವಣೆ ಮೇಲ್ವರ್ಗ ಮತ್ತು ಕೆಳವರ್ಗದ ನಡುವಿನ ಹೋರಾಟ, ಸಂಘರ್ಷದ ಆಂದೋಲನ ಎಂದ ಬಣ್ಣಿಸಿದರು.
ಜಿಲ್ಲಾ ಪಂಚಾಯತ್‌ ಸದಸ್ಯ ಕೆ.ಎಸ್‌. ಬಸವಂತಪ್ಪ ಮಾತನಾಡಿ, ಎಚ್‌.ಬಿ. ಮಂಜಪ್ಪ ಅಲ್ಲ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಅವರೇ ಚುನಾವಣೆಗೆ ನಿಂತಿದ್ದಾರೆ ಎಂದು ಕೆಲಸ ಮಾಡಿದರೆ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಕಾರ್ಯದರ್ಶಿ ಡಿ. ಬಸವರಾಜ್‌, ಜಿಲ್ಲಾ ಉಸ್ತುವಾರಿ ಬಲ್ಕಿಶ್‌ ಬಾನು, ನಗರಪಾಲಿಕೆ ಸದಸ್ಯ ಎಂ. ಹಾಲೇಶ್‌, ಎ.ಕೆ. ನಾಗಪ್ಪ, ಆರ್‌. ನಾಗಪ್ಪ, ಜೆಡಿಎಸ್‌ ಜಿಲ್ಲಾ ಅಧ್ಯಕ್ಷ ಬಿ. ಚಿದಾನಂದಪ್ಪ, ಕಾರ್ಯಾಧ್ಯಕ್ಷ ಗಣೇಶ್‌ ದಾಸಕರಿಯಪ್ಪ, ಬೆಳಲಗೆರೆ ಶಿವಣ್ಣ, ಜಿ.ಎಚ್‌. ಶಂಭುಲಿಂಗಪ್ಪ, ಎಲ್‌.ಬಿ. ಹನುಮಂತಪ್ಪ, ಸೋಮಲಾಪುರದ ಹನುಮಂತಪ್ಪ, ಎಸ್‌. ಮಲ್ಲಿಕಾರ್ಜುನ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next