ದಾವಣಗೆರೆ: ವಾಣಿಜ್ಯ ನಗರಿ, ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ ಜಿಲ್ಲೆ ಅಸ್ತಿತ್ವಕ್ಕೆ ಬರುವ ಮುನ್ನವೇ ಸಹಕಾರಿ ಚಳವಳಿ ಪ್ರಬಲವಾಗಿತ್ತು. ದಾವಣಗೆರೆ ಜಿಲ್ಲೆಯ ಪ್ರಪ್ರಥಮ ಜಿಲ್ಲಾ ಉಸ್ತುವಾರಿ ಸಚಿವ ಎಚ್. ಶಿವಪ್ಪ, ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ. ರವೀಂದ್ರನಾಥ್ ಸಹಕಾರ ಕ್ಷೇತ್ರದ ಮೂಲಕವೇ ರಾಜಕೀಯ ಪ್ರವೇಶಿಸಿದರು.
Advertisement
ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಸಹ ಈಗಲೂ ಸಹಕಾರ ಬ್ಯಾಂಕ್ ನಡೆಸುತ್ತಿರುವುದು ಜಿಲ್ಲೆಯಲ್ಲಿ ಸಹಕಾರ ಚಳವಳಿಯ ಪ್ರಬಲತೆಗೆ ಸಾಕ್ಷಿಯಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ 1 ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, 5 ಪ್ರಾಥಮಿಕ ಸಹಕಾರ ಕೃಷಿ ಅಭಿವೃದ್ಧಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್, 175 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, 11 ಪಟ್ಟಣ ಸಹಕಾರಿ ಬ್ಯಾಂಕ್, 117 ಇತರೆ ಪತ್ತಿನ ಸಹಕಾರಿ ಸಂಘ, 12 ನೌಕರರ ಪತ್ತಿನ ಸಹಕಾರ ಸಂಘ, 5 ಟಿಎಪಿಸಿಎಂಎಸ್, 359 ಹಾಲು ಉತ್ಪಾದಕರ ಸಹಕಾರ ಸಂಘಗಳು, 221 ನೀರು ಬಳಕೆದಾರರ ಸಹಕಾರ ಸಂಘಗಳು, 19 ಮೀನುಗಾರಿಕಾ ಸಹಕಾರ ಸಂಘ, 22 ನೇಕಾರಿ ಸಹಕಾರ ಸಂಘಗಳು ಒಳಗೊಂಡಂತೆ 1,363 ವಿವಿಧ ಬಗೆಯ ಸಹಕಾರ ಸಂಘಗಳಿವೆ. ಅವುಗಳಲ್ಲಿ 1,192 ಕಾರ್ಯನಿರ್ವಹಿಸುತ್ತಿವೆ. ಸಹಕಾರ ಸಂಘಗಳ ಆಡಳಿತ ಮಂಡಳಿಗಳ ಕಾರ್ಯವೈಖರಿ ಮತ್ತಿತರೆ ಕಾರಣಕ್ಕೆ 30 ಸಹಕಾರ ಸಂಘಗಳು ಸ್ಥಗಿತಗೊಂಡಿವೆ.