Advertisement

ಎಲ್ಲೆಡೆ ವಿಶ್ವ ಗುರು ಬಸವಣ್ಣನ ಸ್ಮರಣೆ

10:50 AM May 08, 2019 | Naveen |

ದಾವಣಗೆರೆ: ವಿಶ್ವದಲ್ಲೇ ಪ್ರಪ್ರಥಮವಾಗಿ ಸಾರ್ವತ್ರಿಕವಾಗಿ ಬಸವ ಜಯಂತಿ ಪ್ರಾರಂಭಿಸಿರುವ ಕೀರ್ತಿ ಹೊಂದಿರುವ ದಾವಣಗೆರೆಯಲ್ಲಿ ಮಂಗಳವಾರ ಜಗತ್ತಿನ ಮಹಾನ್‌ ದಾರ್ಶನಿಕ, ವಿಶ್ವಗುರು ಬಸವಣ್ಣನವರ 886ನೇ ಜಯಂತಿಯನ್ನು ಹಲವಾರು ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಆಚರಿಸಲಾಯಿತು.

Advertisement

1913ರಲ್ಲಿ ಮೃತ್ಯುಂಜಯ್ಯ ಅಪ್ಪ ಮತ್ತು ಕರ್ನಾಟಕದ ಗಾಂಧಿ ಎಂದೇ ಕರೆಯಲ್ಪಡುವ ಹರ್ಡೇಕರ್‌ ಮಂಜಪ್ಪ ಅವರೊಡಗೂಡಿ ಮೊದಲ ಬಾರಿಗೆ ಸಾರ್ವತ್ರಿಕವಾಗಿ ಬಸವ ಜಯಂತಿ ಆಚರಣೆ ಪ್ರಾರಂಭಿಸಿದ ಇತಿಹಾಸ ಹೊಂದಿರುವ ವಿರಕ್ತ ಮಠದಲ್ಲಿ ಬಸವ ಜಯಂತಿ ಪ್ರಯಕ್ತ ಬಸವ ಪ್ರಭಾತ್‌ ಫೇರಿ, ಮಕ್ಕಳಿಗೆ ನಾಮಕರಣ, ತೊಟ್ಟಿಲೋತ್ಸವ ಮುಂತಾದ ಕಾರ್ಯಕ್ರಮಗಳು ಜರುಗಿದವು.

ಲೋಕಸಭಾ ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಅತಿ ಸರಳವಾಗಿ ಬಸವ ಜಯಂತಿ ಆಚರಿಸಲಾಯಿತು. ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಬಸವ ಜಯಂತಿಗೆ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಎಚ್. ಬಸವರಾಜೇಂದ್ರ ಚಾಲನೆ ನೀಡಿದರು. ವಿ. ಸಿದ್ದರಾಮ ಶರಣರು ಇತರರು ಬಸವಣ್ಣನವರ ಕುರಿತು ಮಾತನಾಡಿದರು.

ಕಾಯಿಪೇಟೆ ಬಸವೇಶ್ವರ ದೇವಸ್ಥಾನದಲ್ಲಿ ತೊಟ್ಟಿಲೋತ್ಸವ ನಡೆಯಿತು. ಬಸವ ಜಯಂತಿ ಹಿನ್ನೆಲೆಯಲ್ಲಿ ವಿಶೇಷ ಪೂಜೆಗಾಗಿ ಸುಡುವ ಬಿಸಿಲ ನಡುವೆಯೂ ಸಾವಿರಾರು ಜನರು ಸರತಿ ಸಾಲಲ್ಲಿ ನಿಂತಿದ್ದು ಕಂಡು ಬಂದಿತು. ಮಹಾನಗರ ಪಾಲಿಕೆಯಲ್ಲಿ ಸರಳವಾಗಿ ಬಸವ ಜಯಂತಿ ಆಚರಣೆ ಮಾಡಲಾಯಿತು.

ಬಸವ ಜಯಂತಿ ಪ್ರಯಕ್ತ ಸುವರ್ಣ ಕರ್ನಾಟಕ ವೇದಿಕೆ ಯಿಂದ ಜಯದೇವ ವೃತ್ತದಲ್ಲಿ ಮಜ್ಜಿಗೆ ವಿತರಣೆ ಮಾಡಲಾಯಿತು,

Advertisement

ದಾವಣಗೆರೆ ತಾಲೂಕಿನ ಶಿರಮಗೊಂಡನಹಳ್ಳಿ ಗ್ರಾಮದಲ್ಲಿ ಚನ್ನಬಸವೇಶ್ವರ ದೇವಸ್ಥಾನ ಸಮಿತಿ ಮತ್ತು ಗ್ರಾಮಸ್ಥರ ಸಹಯೋಗದಲ್ಲಿ ಬಸವ ಜಯಂತಿ ಕಾರ್ಯಕ್ರಮ ನಡೆಯಿತು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ಬಸವೇಶ್ವರ ಭಾವಚಿತ್ರದ ಮೆರವಣಿಗೆ ನಡೆಯಿತು. ಮಹಿಳಾ ವೀರಗಾಸೆ ಒಳಗೊಂಡಂತೆ ವಿವಿಧ ಜಾನಪದ ಕಲಾ ತಂಡಗಳ ಮೆರವಣಿಗೆ ಕಣ್ಮನ ಸೆಳೆಯಿತು.

ಸಾಂಸ್ಕೃತಿಕ ಕಾರ್ಯಕ್ರಮ: 108ನೇ ಬಸವ ಜಯಂತಿ ಅಂಗವಾಗಿ ದಾವಣಗೆರೆಯ ದೊಡ್ಡಪೇಟೆಯ ಶ್ರೀ ಬಸವೇಶ್ವರ ಸೇವಾ ಸಂಘ, ಬೆಂಗಳೂರಿನ ಆದರ್ಶ ಸುಗಮ ಸಂಗೀತ ಆಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ರಾಶ್ರಯದಲ್ಲಿ ಮೇ. 8 ರಿಂದ 10 ಮೂರು ದಿನ ಬಸವ ಮಂಟಪದ ಬಯಲು ರಂಗ ಮಂದಿರದಲ್ಲಿ ನೃತ್ಯ ವೈಭವ, ಸುಗಮ ಸಂಗೀತ ವೈಭವ, ವಾದ್ಯ ಸಂಗೀತ ವೈಭವ, ಹಾಗೂ ಹಳೆಯ ಕನ್ನಡ ಚಲನಚಿತ್ರ ಗೀತೆಗಳಯುಗ ಯುಗಗಳೇ ಸಾಗಲಿ…, ಹಾಸ್ಯ ಸಂಜೆ ಕಾರ್ಯಕ್ರಮ ನಡೆಯಲಿವೆ ಎಂದು ದೊಡ್ಡಪೇಟೆಯ ಬಸವೇಶ್ವರ ಸೇವಾ ಸಂಘದ ಅಧ್ಯಕ್ಷ ಅಥಣಿ ಎಸ್‌. ವೀರಣ್ಣ ತಿಳಿಸಿದ್ದಾರೆ.

ಪ್ರತಿದಿನ ಸಂಜೆ 7 ಗಂಟೆಯಿಂದ ಪ್ರಾರಂಭವಾಗುವ ಕಾರ್ಯಕ್ರಮಗಳಲ್ಲಿ ವಿಶ್ವವಿಖ್ಯಾತ ಸಂಗೀತ ಸಾಧಕರು, ಚಲನಚಿತ್ರ ಹಿನ್ನೆಲೆ ಗಾಯಕರಾದ ಡಾ| ಕಿಕ್ಕೇರಿ ಕೃಷ್ಣಮೂರ್ತಿ, ನಗರ ಶ್ರೀನಿವಾಸ ಉಡುಪ, ಸೀಮಾ ರಾಯ್ಕರ್‌, ಸಿ.ಜೆ. ಶಶಿಕಲಾ, ಸಿ.ಜೆ. ಪೂರ್ಣಿಮಾ, ರಮೇಶ್‌ಚಂದ್ರ, ಸೀಮಾ ರಾಯ್ಕರ್‌, ರಾಜಾರಾಂ, ಶ್ರೀ ನಿವಾಸಮೂರ್ತಿ, ನಾಗಚಂದ್ರಿಕಾ ಭಟ್, ಅಭಿಷೇಕ್‌ ರಾಮ್‌ಪ್ರಸಾದ್‌, ಅಮಿತ್‌ರಾಜ್‌, ಅನಂತ ಪದ್ಮನಾಭ್‌, ರಾಜ್‌ಕಿರಣ್‌, ಶಶಿ ಕಿರಣ್‌, ಸುನೀಲ್, ಪ್ರಶಾಂತ್‌, ನೃತ್ಯ ಕಲಾವಿದರಾದ ನಮಿತಾರಾವ್‌, ವಿಕ್ರಂ ಸೂರಿ, ಸಂಜಯ್‌ಸೂರಿ, ಗಂಗಾವತಿ ಪ್ರಾಣೇಶ್‌ ಮುಂತಾದವರು ಭಾಗವಹಿಸಿ ವರ್ಣರಂಜಿತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ತಿಳಿಸಿದ್ದಾರೆ. ಶನಿವಾರ ಮಧ್ಯಾಹ್ನ 12 ಕ್ಕೆ ಬಸವ ಜಯಂತ್ಯುತ್ಸವದ ಅಂಗವಾಗಿ ಅಥಣಿ ವೀರಣ್ಣ ಮತ್ತು ಸಹೋದರರ ಸೇವಾರ್ಥ ಸಾರ್ವಜನಿಕರಿಗೆ ಮಹಾ ದಾಸೋಹ ಹಮ್ಮಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next