Advertisement

ದತ್ತಮಾಲಾ ಅಭಿಯಾನಕ್ಕೆ ಬಂದೋಬಸ್ತ್

04:23 PM Oct 27, 2018 | Team Udayavani |

ಚಿಕ್ಕಮಗಳೂರು: ಶ್ರೀ ರಾಮಸೇನೆ ವತಿಯಿಂದ ದತ್ತಪೀಠದಲ್ಲಿ ನಡೆಯಲಿರುವ ದತ್ತಮಾಲಾ ಅಭಿಯಾನ ಕಾರ್ಯಕ್ರಮಕ್ಕೆ ಸೂಕ್ತ ಬಂದೋಬಸ್ತ್ವ್ಯ ವಸ್ಥೆ ಕಲ್ಪಿಸಲಾಗುವುದು ಎಂದು ಜಿಲ್ಲಾ ರಕ್ಷಣಾಧಿಕಾರಿ ಹರೀಶ್‌ ಪಾಂಡೆ ತಿಳಿಸಿದರು.

Advertisement

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಇರುವ ಎಲ್ಲ ಧಾರ್ಮಿಕ ಕೇಂದ್ರಗಳಿಗೆ ಈಗಾಗಲೆ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯ ಗಡಿ ಕೇಂದ್ರಗಳಲ್ಲಿ ಈಗ 5 ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. ನ.27ರಿಂದ ಜಿಲ್ಲೆಯಾದ್ಯಂತ ಸುಮಾರು 31 ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗುವುದು. ಎಲ್ಲ ವಾಹನಗಳನ್ನು ಪರಿಶೀಲಿಸಲಾಗುವುದು ಎಂದರು.

ದತ್ತಮಾಲಾ ಅಭಿಯಾನ ಹಾಗೂ ಶೋಭಾಯಾತ್ರೆಯು ಅ.28 ರಂದು ನಡೆಯಲಿದೆ. ಅಂದು ನಗರ ಹಾಗೂ ದತ್ತಪೀಠ ಸೇರಿದಂತೆ ಒಟ್ಟಾರೆ 2500 ಅಧಿಕಾರಿ, ಸಿಬ್ಬಂದಿಗಳು ಬಂದೋಬಸ್ತ್ ವ್ಯವಸ್ಥೆಯಲ್ಲಿ ಪಾಲ್ಗೊಳ್ಳುವರು. 15 ಕೆ.ಎಸ್‌. ಆರ್‌.ಇ. ಹಾಗೂ 20 ಡಿ.ಆರ್‌. ತುಕಡಿಗಳನ್ನು
ಬಳಸಿಕೊಳ್ಳಲಾಗುವುದು. ದತ್ತಪೀಠದಲ್ಲಿ ಕಳೆದ ವರ್ಷ ಬಂದೋಬಸ್ತ್ ವ್ಯವಸ್ಥೆಗಿಂತಲೂ ಹೆಚ್ಚಿನ ವ್ಯವಸ್ಥೆ ಮಾಡಲಾಗುವುದು ಎಂದು ವಿವರಿಸಿದರು.

ದತ್ತಮಾಲಾ ಅಭಿಯಾನಕ್ಕೆ ಇಲಾಖೆ ವತಿಯಿಂದ ಎಲ್ಲ ರೀತಿಯ ಸಹಕಾರವನ್ನೂ ಕೊಡಲಾಗುವುದು. ಅದೇ ರೀತಿ ಆಯೋಜಕರಿಗೂ ಎಲ್ಲ ರೀತಿಯ ಸಹಕಾರ ಕೊಡುವಂತೆ ತಿಳಿಸಲಾಗಿದೆ. ಕಾನೂನು ಸುವ್ಯವಸ್ಥೆಗೆ ದಕ್ಕೆಯಾಗದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆದರೂ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಬೇರೆ ರೀತಿಯ ತಪ್ಪಾದಲ್ಲಿ ಸಹಿಸಬಹುದು, ಆದರೆ ಕೋಮುಗಲಭೆಯಂತಹ ಘಟನೆಗಳು ನಡೆದರೆ ಅದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದರು.
 
ಗಾಣಿಗಾಪುರದಿಂದ 5 ಜನ ನಾಗಾಸಾಧುಗಳು ದತ್ತಮಾಲಾ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಶ್ರೀರಾಮಸೇನೆಯವರು ಮಾಹಿತಿ ನೀಡಿದ್ದಾರೆ. ಅವರಿಗೆ ಗುಹೆಯೊಳಗೆ ತೆರಳಿ ಪಾದುಕೆಗಳಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಲಾಗುವುದೆ ಎಂಬ ಪ್ರಶ್ನೆಗೆ ಉತ್ತರಿಸಿದ
ಅವರು, ಕಳೆದ ವರ್ಷ ನಡೆದಂತೆಯೇ ಈ ವರ್ಷವೂ ನಡೆಯಲಿದೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಅಣ್ಣಪ್ಪ ನಾಯಕ್‌ ಉಪಸ್ಥಿತರಿದ್ದರು.

ಬಿಜೆಪಿ ಮುಖಂಡ ಶಿವಣ್ಣನ ಮೇಲೆ ಸಾರ್ವಜನಿಕರಿಂದ ಹಲ್ಲೆ: ಎಸ್‌ಪಿ ಸ್ಪಷ್ಟ
ಚಿಕ್ಕಮಗಳೂರು:
ಬಿಜೆಪಿ ಮುಖಂಡ, ಜಿಲ್ಲಾ ಪಂಚಾಯತ್‌ ಮಾಜಿ ಸದಸ್ಯ ಅರೆಕುಡಿಗೆ ಶಿವಣ್ಣ ಅವರ ಮೇಲೆ ಸಾರ್ವಜನಿಕರು ಹಲ್ಲೆ ನಡೆಸಿದ್ದಾರೆಯೇ ಹೊರತು ಪೊಲೀಸರು ಅಲ್ಲ ಎಂದು ಜಿಲ್ಲಾ ರಕ್ಷಣಾಧಿಕಾರಿ ಹರೀಶ್‌ ಪಾಂಡೆ ಸ್ಪಷ್ಟಪಡಿಸಿದರು.

Advertisement

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆ.ಎಸ್‌.ಆರ್‌.ಟಿ.ಸಿ. ಬಸ್‌ ನಿಲ್ದಾಣದಲ್ಲಿದ್ದ ಸಿ.ಸಿ. ಕ್ಯಾಮೆರಾಗಳನ್ನು ಪರಿಶೀಲಿಸಲಾಗಿದೆ. ಆ ಪ್ರಕಾರ ಅರೆಕುಡಿಗೆ ಶಿವಣ್ಣ ಅವರೆ ಮೊದಲು ಎ.ಎಸ್‌.ಐ. ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಆ ನಂತರ ಪೇದೆಯ ಮೇಲೆ ಹಲ್ಲೆ ಮಾಡಿದ್ದಾರೆ. ಆಗ ಅಲ್ಲಿ ನೆರೆದಿದ್ದ 20ಕ್ಕೂ ಹೆಚ್ಚು ಜನ ಸಾರ್ವಜನಿಕರು ಶಿವಣ್ಣ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದರು.

 ಲಾಟಿಯಲ್ಲಿ ಹೊಡೆದವರೂ ಸಹ ಸಾರ್ವಜನಿಕರೆ. ಗೃಹರಕ್ಷಕ ದಳದ ಸಿಬ್ಬಂದಿಯೊಬ್ಬರು ತಮ್ಮ ಲಾಟಿಯನ್ನು ಬೈಕಿನಲ್ಲಿ ಇಟ್ಟಿದ್ದರು. ಅದನ್ನು ಎತಿಕೊಂಡು ಬಂದ ಸಾರ್ವಜನಿಕರು ಲಾಟಿಯಿಂದ ಶಿವಣ್ಣ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಈ ಎಲ್ಲ ಘಟನಾವಳಿಗಳೂ ಸಿ.ಸಿ. ಕ್ಯಾಮೆರಾದಲ್ಲಿ ದಾಖಲಾಗಿವೆ ಎಂದು ಹೇಳಿದರು. ಶಿವಣ್ಣ ಅವರ ವಿರುದ್ಧ ಈ ಹಿಂದೆಯೂ ಕೆಲವೊಂದು ಪ್ರಕರಣಗಳು ದಾಖಲಾಗಿವೆ. ಆ ವಿಚಾರವನ್ನು ಸಹ ನ್ಯಾಯಾಲಯದ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು. 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next