Advertisement
ಅ.22ರಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಹೆಬ್ಟಾಗಿಲು ಹುಣಸೂರು ತಾಲೂಕು ವೀರನಹೊಸಹಳ್ಳಿ ಗ್ರಾಮದ ಬಳಿಯಿಂದ ಗಜಪಯಣ ಕಾರ್ಯಕ್ರಮದೊಂದಿಗೆ ಮೈಸೂರಿಗೆ ಕರೆತರಲಾಗಿದ್ದ ಆರು ಆನೆಗಳು ನಗರದ ಅಶೋಕಪುರಂನ ಅರಣ್ಯಭವನದಲ್ಲಿ ಬೀಡು ಬಿಟ್ಟಿದ್ದವು.
ಅರಣ್ಯಭವನದಿಂದ ಬಿಗಿ ಪೊಲೀಸ್ ರಕ್ಷಣೆಯಲ್ಲಿ ಹೊರಟ ಗಜಪಡೆಯನ್ನುಲಕ್ಷ್ಮೀಪುರಂ, ರಾಮಸ್ವಾಮಿ ವೃತ್ತ, ಚಾಮರಾಜ ಜೋಡಿ ರಸ್ತೆ, ಬಿ.ಎನ್.ರಸ್ತೆ ಮೂಲಕ ಅರಮನೆಗೆ ಮೆರವಣಿಗೆಯಲ್ಲಿ ಕರೆತರಲಾಯಿತು. ಅರಮನೆಯ ಜಯ ಮಾರ್ತಾಂಡ ದ್ವಾರದಲ್ಲಿ ಚಾಮುಂಡಿಬೆಟ್ಟದ ಶ್ರೀಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್, ಪುರೋಹಿತರಾದ ಪ್ರಹ್ಲಾದ್ ರಾವ್ ಅವರ ನೇತೃತ್ವದಲ್ಲಿ ವೇದ-ಘೋಷಗಳನ್ನು ಮೊಳಗಿಸಲಾಯಿತು. ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಗಜಪಡೆಗೆ ಪುಷ್ಪಾರ್ಚನೆ ಮಾಡುವುದರೊಂದಿಗೆ ಆನೆಗಳನ್ನು ಜಿಲ್ಲಾಡಳಿತ ಹಾಗೂ ಮೈಸೂರು ಅರಮನೆ ಮಂಡಳಿ ವತಿಯಿಂದ ಅರಮನೆ ಆವರಣಕ್ಕೆ ಸ್ವಾಗತಿಸಲಾಯಿತು.
Related Articles
ಅರಮನೆಯ ಜಯಮಾರ್ತಾಂಡ ದ್ವಾರದಿಂದ ಮಂಗಳವಾದ್ಯ, ಕಲಶ ಹೊತ್ತ ಮಹಿಳೆಯರು, ವೀರಗಾಸೆ, ಪೂಜಾ ಕುಣಿತ, ಪಟ ಕುಣಿತ, ಮಹಿಳಾ ತಂಡದಿಂದ ಡೊಳ್ಳು ಕುಣಿತ, ಪೊಲೀಸ್ ವಾದ್ಯವೃಂದ ಹಿಮ್ಮೇಳದೊಂದಿಗೆ ದಸರಾ ಆನೆಗಳಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು.
Advertisement
ಕಿಟ್ ವಿತರಣೆ:ಅಲ್ಲಿಂದ ಅರಮನೆ ಮುಂಭಾಗದ ಆನೆ ಬಾಗಿಲಿಗೆ ಕರೆತರಲಾಯಿತು. ಆನೆ ಬಾಗಿಲಿನಲ್ಲಿ ಗಜಪಡೆಯನ್ನು ಸಾಲಾಗಿ ನಿಲ್ಲಿಸಿ ಗಾರ್ಡ್ ಆಫ್ ಆನರ್ (ಪೊಲೀಸ್ ಗೌರವ ರಕ್ಷೆ) ನೀಡಲಾಯಿತು. ಇದೇ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಮುಂದಿನ ಒಂದೂವರೆ ತಿಂಗಳು ಅರಮನೆ ಆವರಣದಲ್ಲಿ ವಾಸ್ತವ್ಯ ಹೂಡುಸ ಆನೆಗಳ ಮಾವುತರು ಮತ್ತು ಕವಾಡಿಗಳ ಕುಟುಂಬದವರಿಗೆ ದಿನ ಬಳಕೆ ವಸ್ತುಗಳುಳ್ಳ ಕಿಟ್ ವಿತರಿಸಿದರು. ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಅಧಿಕಾರಿ ವರ್ಗದವರಿಗೆ ಫಲತಾಂಬೂಲ ನೀಡಿದರು. ಶಾಸಕ ಎಲ್.ನಾಗೇಂದ್ರ, ಸಂಸದ ಪ್ರತಾಪ್ ಸಿಂಹ, ಮಹಾ ನಗರಪಾಲಿಕೆ ಮೇಯರ್ ಪುಷ್ಪಲತಾ ಜಗನ್ನಾಥ್, ಉಪ ಮೇಯರ್ ಶಫಿ ಅಹಮದ್, ಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಂ, ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್, ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಸಂದೀಪ್ ದುಬೆ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಜಿಪಂ ಸಿಇಒ ಕೆ.ಜ್ಯೋತಿ, ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಶ್ಶಂತ್, ಮೈಸೂರು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಲೆಕ್ಸಾಂಡರ್, ಹೀರಾಲಾಲ್, ಮೈಸೂರು ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಸುಬ್ರಹ್ಮಣ್ಯ ಮೊದಲಾದವರು ಈ ಸಂದರ್ಭದಲ್ಲಿ ಹಾಜರಿದ್ದರು.