Advertisement

ಚಾಣಾಕ್ಷನ ಹಾಡಿಗೆ ದರ್ಶನ್‌ ಸಾಥ್‌

06:00 AM Nov 30, 2018 | |

ನಟ ದರ್ಶನ್‌ ಹೊಸಬರ ಚಿತ್ರಗಳಿಗೆ ಸದಾ ಬೆಂಬಲ ಕೊಡುತ್ತಲೇ ಬಂದಿದ್ದಾರೆ. ಅದರಲ್ಲೂ ಯುವ ನಟ ಧರ್ಮ ಕೀರ್ತಿರಾಜ್‌ ಅಭಿನಯದ ಎಲ್ಲಾ ಚಿತ್ರಗಳಿಗೂ ಪ್ರೋತ್ಸಾಹ ಕೊಡುತ್ತಲೇ ಬಂದಿದ್ದಾರೆ. ಆ ಸಾಲಿಗೆ “ಚಾಣಾಕ್ಷ’ ಚಿತ್ರವೂ ಸೇರಿದೆ. ಇತ್ತೀಚೆಗೆ ದರ್ಶನ್‌ ಅವರು ಲಹರಿ ಆಡಿಯೋ ಸಂಸ್ಥೆ ಮೂಲಕ ಹೊರಬಂದ “ಚಾಣಾಕ್ಷ’ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭಕೋರಿದ್ದಾರೆ. ಅಂದಿನ ಆಡಿಯೋ ಬಿಡುಗಡೆ ಸಮಾರಂಭಕ್ಕೆ ನಟ ವಿನೋದ್‌ ಪ್ರಭಾಕರ್‌, ತರುಣ್‌ ಸುಧೀರ್‌, ಸೇರಿದಂತೆ ಹಲವು ಕಲಾವಿದರು ಸಾಕ್ಷಿಯಾದರು.

Advertisement

ಅಂದು ವೇದಿಕೆ ಮುಂಭಾಗದಲ್ಲಿದ್ದ  ಪುಟ್ಟ ಬಾಲಕಿಯೊಬ್ಬಳನ್ನು ವೇದಿಕೆಗೆ ಆಹ್ವಾನಿಸಿದ ದರ್ಶನ್‌, ಆ ಹುಡುಗಿ ಕೈಯಿಂದ ಆಡಿಯೋ ಬಿಡುಗಡೆ ಮಾಡಿಸಿದರು.  ಇನ್ನು, ನಿರ್ದೇಶಕ ಮಹೇಶ್‌ ಚಿನ್ಮಯ್‌ ಅವರು ಹೇಳಿದ ಕಥೆ ಇಷ್ಟವಾಗಿದ್ದರಿಂದ ನಿರ್ಮಾಪಕ ವೆಂಕಟೇಶ್‌ ಅವರು, ಚಿತ್ರಕ್ಕೆ ಎಲ್ಲವನ್ನೂ ಒದಗಿಸಿ, ಒಂದೊಳ್ಳೆಯ ಚಿತ್ರ ಮಾಡಿರುವ ಖುಷಿಯನ್ನು ವ್ಯಕ್ತಪಡಿಸಿದರೆ, ನಿರ್ದೇಶಕ ಮಹೇಶ್‌ ಚಿನ್ಮಯ್‌ ಅವರಿಗೆ, ಅಂದುಕೊಂಡಿದ್ದಕ್ಕಿಂತಲೂ ಚೆನ್ನಾಗಿ ಚಿತ್ರ ಮೂಡಿಬಂದಿದೆ ಎಂಬ ನೆಮ್ಮದಿ. ಅವರಿಗೆ ಇದು ಮೂರನೇ ಚಿತ್ರ. ಈ ಚಿತ್ರದ ಮೂಲಕ ಧರ್ಮಕೀರ್ತಿರಾಜ್‌ ಆವರಿಗೊಂದು ಹೊಸ ಇಮೇಜ್‌ ಸಿಗುತ್ತದೆ ಎಂಬ ವಿಶ್ವಾಸ ನಿರ್ದೇಶಕರದ್ದು. ಇದೊಂದು ಲವ್‌ ಜೊತೆಗೆ ಕಾಮಿಡಿ ಹಾಗು ಆ್ಯಕ್ಷನ್‌ ಅಂಶಗಳನ್ನು ಹೊಂದಿದೆ ಎಂಬ ವಿವರ ಕೊಡುತ್ತಾರೆ ಮಹೇಶ್‌ ಚಿನ್ಮಯ್‌.

ಸಂಗೀತ ನಿರ್ದೇಶಕ ಅಭಿಮನ್‌ ರಾಯ್‌ ಅವರು ಈ ಚಿತ್ರಕ್ಕೆ ಐದು ಹಾಡುಗಳನ್ನು ನೀಡಿದ್ದಾರಂತೆ. ಅವರ ಹದಿನೆಂಟು ವರ್ಷಗಳ ಸಿನಿಪಯಣವನ್ನು ಮೆಲುಕು ಹಾಕಿದರಲ್ಲದೆ, ಮೊದಲ ಸಲ ಅವಕಾಶ ಕೊಟ್ಟ ವೇಲು ಅವರನ್ನು ನೆನಪಿಸಿಕೊಂಡರು. ಚಿತ್ರದಲ್ಲಿ ಧರ್ಮಕೀರ್ತಿರಾಜ್‌ ಅವರಿಗೆ ವಿಶೇಷ ಪಾತ್ರ ಸಿಕ್ಕ ಖುಷಿ ಇದೆ. ಇನ್ನುಳಿದಂತೆ, ಅಭಯ್‌ ಎಂಬ ಹೊಸ ಹುಡುಗ ಚಿತ್ರದಲ್ಲಿ ಇನ್ಸ್‌ಪೆಕ್ಟರ್‌ ಪಾತ್ರ ಮಾಡಿದ್ದಾರೆ. ಅರ್ಚನಾ, ನಿಮಿಕಾ, ಸಿಂಧುಲೋಕನಾಥ್‌, ಕೃಷಿ ತಪಂಡ, ಕೀರ್ತಿರಾಜ್‌ ದಂಪತಿ, ಸೇರಿದಂತೆ ಹಲವರು ಆಡಿಯೋ ಬಿಡುಗಡೆ ಸಮಾರಂಭಕ್ಕೆ ಸಾಕ್ಷಿಯಾದರು.

Advertisement

Udayavani is now on Telegram. Click here to join our channel and stay updated with the latest news.

Next