Advertisement

ಕತ್ತಲ ರಾತ್ರೀಲಿ ದಾರಿ ತಪ್ಪಿದ ಮಗ

11:28 AM Jun 17, 2017 | |

“ಅಣ್ಣಾ ನನಗೆ ಇದೇ ಬೇಕಣ್ಣ, ಕಾಲೇಜ್‌ ಬೇಡ, ಬಡತನ ಸಾಕಾಯ್ತಣ್ಣ. ನನ್ನನ್ನು ಕ್ಷಮಿಸು ಬಿಡು …’ – ಈ ಡೈಲಾಗ್‌ ಹೇಳುವ ಹೊತ್ತಿಗೆ ಅವನೊಬ್ಬ ಚೈನ್‌ಸ್ನ್ಯಾಚರ್‌ ಆಗಿ, ತನ್ನ ಅಮ್ಮನನ್ನೂ ಕೊಲೆಗೈದು ದೊಡ್ಡದ್ದೊಂದು ಡೀಲ್‌ನಲ್ಲಿ ಅಣ್ಣನ ಎದುರು ಸತ್ಯ ಒಪ್ಪಿಕೊಂಡಿರುತ್ತಾನೆ. ಸದಾ ಸಂಭ್ರಮದಲ್ಲಿರುವ ಒಂದೊಳ್ಳೆಯ ಮಧ್ಯಮ ವರ್ಗ ಕುಟುಂಬದ ಜಾಣ ಹುಡುಗನೊಬ್ಬ, ತನ್ನ ಅತಿಯಾದ ಆಸೆಗಳನ್ನೆಲ್ಲಾ ಈಡೇರಿಸಿಕೊಳ್ಳಲು ಏನೆಲ್ಲಾ “ಕ್ರೈಮ್‌’ ಮಾಡ್ತಾನೆ ಅನ್ನೋದೇ “ಸಿಲಿಕಾನ್‌ ಸಿಟಿ’ಯ ಹೂರಣ.

Advertisement

ಇಲ್ಲಿ ಕ್ರೈಮ್‌ ಇದ್ದರೂ ಅದನ್ನು “ಬರ್ಬರ’ವಾಗಿಸದೆ, “ಅಬ್ಬರ’ ಮಾಡದೆ ಸೂಕ್ಷ್ಮಸಂದೇಶ ಮತ್ತು ನೋಡಿಸುವ ಪ್ರಜ್ಞೆಯೊಂದಿಗೆ ಸಿಟಿಯೊಳಗಿನ ತಲ್ಲಣ ಹಾಗೂ ತಳಮಳವನ್ನು ದೃಶ್ಯರೂಪಕವಾಗಿಸಿದ್ದಾರೆ ನಿರ್ದೇಶಕ ಮುರಳಿ ಗುರಪ್ಪ. ಒಂದು ಸಿನಿಮಾ ಇಷ್ಟವಾಗೋದೇ ನಿರೂಪಣೆ ಶೈಲಿ, ತೋರಿಸುವ ವಿಧಾನದಿಂದ. ಆ ವಿಷಯದಲ್ಲಿ “ಸಿಲಿಕಾನ್‌ ಸಿಟಿ’ಗೆ ಒಳ್ಳೇ ಮಾರ್ಕ್ಸ್ ಕೊಡಲ್ಲಡ್ಡಿಯಿಲ್ಲ.

ಇದು ತಮಿಳಿನ “ಮೆಟ್ರೋ’ ಸಿನಿಮಾದ ಅವತರಣಿಕೆಯಾದರೂ, ಅದನ್ನು ಪಕ್ಕಕ್ಕಿಟ್ಟು ನೋಡುವುದಾದರೆ, “ಸಿಟಿ’ಯೊಳಗಿನ ಕರಾಳ ಮುಖದ ಹಿಂದಿನ ಸತ್ಯದ ಅರಿವಿನ ಬಗ್ಗೆ ಸಂಕ್ಷಿಪ್ತವಾಗಿ ಹೇಳುತ್ತಾ ಹೋಗಿದ್ದಾರೆ ನಿರ್ದೇಶಕರು. ಹಾಗಾಗಿ, “ಸಿಲಿಕಾನ್‌ ಸಿಟಿ’ಯ ಸುತ್ತಾಟ ಒಂದೇ ನೋಟಕ್ಕೆ ಆಪ್ತವೆನಿಸುತ್ತೆ. ಒಂದು ಕ್ರೈಮ್‌ ಹಿನ್ನೆಲೆಯಲ್ಲಿ ಸಾಗುವ ಕಥೆಯಲ್ಲೂ, ಕಣ್ಣ ಹನಿ ಇಣುಕುತ್ತೆ, ಮನಸ್ಸು ಭಾರವಾಗುತ್ತೆ. ಇದನ್ನು ಅಷ್ಟೇ ಚೆನ್ನಾಗಿ ನಾಟುವಂತೆ ಮಾಡಿರುವ ನಿರ್ದೇಶಕರ ಪ್ರಯತ್ನ ಇಲ್ಲಿ ಸಾರ್ಥಕವಾಗಿದೆ.

ಸಾಮಾನ್ಯವಾಗಿ ಒಂದು ಕ್ರೈಮ್‌ಸ್ಟೋರಿ ಹೇಳಬೇಕಾದರೆ, ಮಚ್ಚು-ಲಾಂಗು, ಗನ್‌ಗಳ ಸದ್ದು ಕಾಮನ್‌. ಇಲ್ಲಿ ಚೈನ್‌ಸ್ನ್ಯಾಚರ್‌ನಂತಹ ಗ್ಯಾಂಗ್‌ ಇಟ್ಟು, ಅದರ ಕೈಚಳಕದ ಚಾಕಚಕ್ಯತೆಯನ್ನು ತುಂಬಾ ಕುತೂಹಲದ “ಕೆಲಸ’ ಎಂಬಂತೆ ಪರಿಣಾಮಕಾರಿಯಾಗಿ ತೋರಿಸುವ ಮೂಲಕ ಎಲ್ಲೂ ಒಂದಷ್ಟು ಬೋರ್‌ ಎನಿಸದಂತೆ ವೇಗ ಕಾಪಾಡಿಕೊಂಡು ಬಂದಿರುವುದು ಚಿತ್ರದ ಪ್ಲಸ್‌ ಎನ್ನಬಹುದು.

ಸುಮ್ಮನೆ ನೋಡಿಸಿಕೊಂಡು ಹೋಗುವ ಒಂದು ಚಿತ್ರಕ್ಕೆ ಬೇಕಾಗಿರುವುದು ಕಥೆ, ಚಿತ್ರಕಥೆ ಹಾಗೂ ನಿರೂಪಣೆ. ಇದರೊಂದಿಗೆ ಕಟ್ಟಿಕೊಡುವ ಪಾತ್ರಗಳು. ಅವೆಲ್ಲವೂ “ಸಿಲಿಕಾನ್‌ ಸಿಟಿ’ಗೆ ತೂಕವೆನಿಸಿವೆ. ಕ್ರೈಮ್‌ ಅಂದಾಕ್ಷಣ, ಅದೇ ಇಲ್ಲಿ ಹೈಲೆಟ್‌ ಆಗಿಲ್ಲ. ಇಲ್ಲೊಂದು ಮಿಡ್ಲ್ಕ್ಲಾಸ್‌ ಫ್ಯಾಮಿಲಿಯ ಹೈಕ್ಲಾಸ್‌ ಸಂಭ್ರಮವಿದೆ. ಮಧ್ಯಮ ವರ್ಗದ ಕುಟುಂಬವಿದೆ. ಅಪ್ಪನ ಪ್ರೀತಿ, ಅಮ್ಮನ ವಾತ್ಸಲ್ಯ, ಅಣ್ಣ,ತಮ್ಮಂದಿರ ಅನುಬಂಧ, ನಿಷ್ಕಲ್ಮಷ ಪ್ರೀತಿ, ಮೋಜಿನ ಲವ್ವು, ಅಡ್ಡದಾರಿ ಹಿಡಿದವರ ಅಬ್ಬೇಪಾರಿ ಬದುಕು … ಇವೆಲ್ಲವನ್ನೂ ಸರಿದೂಗಿಸಿರುವುದರಿಂದ ಚಿತ್ರ ಎಲ್ಲೂ “ಟ್ರಾಕ್‌’ ತಪ್ಪಿಲ್ಲ.

Advertisement

ಕೆಲವೊಂದು ಕಡೆ ಸಣ್ಣಪುಟ್ಟ ತಪ್ಪುಗಳು ಕಾಣಿಸಿಕೊಂಡರೂ, ಅದನ್ನೆಲ್ಲ ಹಿನ್ನೆಲೆ ಸಂಗೀತ ಹಾಗೂ ಸಂದರ್ಭಕ್ಕೆ ತಕ್ಕಂತೆ ಕಾಣಿಸಿಕೊಳ್ಳುವ ಹಾಡುಗಳು ಮುಚ್ಚಿ ಹಾಕುತ್ತವೆ. ಫ್ಯಾಮಿಲಿಯ ಸಂತಸ, ಸಡಗರ, ಸಂಬಂಧ ಇವೆಲ್ಲವನ್ನು ನೋಡುತ್ತಿದ್ದಂತೆಯೇ ವೇಗವಾಗಿ ಸಾಗುವ ಮೊದಲರ್ಧ ಮುಗಿಯುವುದು ಗೊತ್ತಾಗುವುದಿಲ್ಲ. ದ್ವಿತಿಯಾರ್ಧದಲ್ಲಿ ಸಿಗುವ ಬಲವಾದ “ಟ್ವಿಸ್ಟ್‌’ವೊಂದು ನೋಡುಗನ ಕುತೂಹಲಕ್ಕೆ ಕಾರಣವಾಗುತ್ತೆ. 

ಮೊದಲೇ ಹೇಳಿದಂತೆ ಇದು ಕ್ರೈಮ್‌ ಹಿನ್ನೆಲೆಯಲ್ಲಿ ಸಾಗುವ ಸಿನಿಮಾವಾಗಿದ್ದರೂ, ಇಲ್ಲೊಂದು ಸಂದೇಶವಿದೆ. ಬೇಕು, ಬೇಡಗಳ ನಡುವಿನ ಚಿಂತನೆಯಿದೆ. ಅತೀ ಆಸೆಯಿಂದಾಗುವ ಅನಾಹುತಗಳೂ ಇವೆ. ಅರಿತೂ ತಪ್ಪು ಮಾಡಿದರೆ ಆಗುವ ಪರಿಣಾಮ ಎಂಥದ್ದು ಎಂಬ ಅರಿವಿನ ಪಾಠವೂ ಇದೆ. ವಾಸ್ತವಕ್ಕೆ ಹತ್ತಿರ ಎನಿಸುವ ಅಂಶವೂ ಉಂಟು. ಹಾಗಾಗಿ ಇದೊಂದು ಟೈಮ್‌ಪಾಸ್‌ ಸಿನಿಮಾ ಆಗದೆ, ಎಚ್ಚೆತ್ತುಕೊಳ್ಳುವ, ಅರಿವಾಗಿಸುವ ಸಿನಿಮಾ ಎನಿಸುತ್ತಾ ಹೋಗುತ್ತೆ.

ಹೌದಾ? ಎಂಬ ಪ್ರಶ್ನೆ ಎದುರಾದರೆ, ಒಮ್ಮೆ “ಸಿಲಿಕಾನ್‌ ಸಿಟಿ’ಯ ಪ್ರಯತ್ನ ನೋಡಲ್ಲಡ್ಡಿಯಿಲ್ಲ. ಇಲ್ಲಿ ಶ್ರೀನಗರ ಕಿಟ್ಟಿ ಅಪ್ಪ ಅಮ್ಮನಿಗೆ ಒಳ್ಳೆಯ ಮಗನಾಗಿ, ಪ್ರೀತಿಸೋ ಹುಡುಗಿಗೆ ಮೆಚ್ಚಿನ ಹುಡುಗನಾಗಿ, ತಮ್ಮನಿಗೆ ಪ್ರೀತಿಯ ಅಣ್ಣನಾಗಿ ಇಷ್ಟವಾಗುತ್ತಾರೆ. ಈವರೆಗಿನ ಪಾತ್ರಗಳಿಗಿಂತ ಒಂದು ಭಿನ್ನ ಪಾತ್ರವಾಗಿರುವುದರಿಂದ ಅದನ್ನು ಜೀವಿಸಿದ್ದಾರೆ. ಸೂರಜ್‌ ಗೌಡ ಇಲ್ಲಿ ಮುಗ್ಧ ಮಗನಾಗಿ, ಕೆಟ್ಟ ತಮ್ಮನಾಗಿ ಗಮನಸೆಳೆಯುತ್ತಾರೆ. ತುಳಸಿ ಶಿವಮಣಿ ಅವರು ಲವಲವಿಕೆಯಿಂದಲೇ ನೋಡುಗರನ್ನು ರಂಜಿಸುತ್ತಾರೆ.

ಒಬ್ಬ ಅಪ್ಪನಾಗಿ ಅಶೋಕ್‌ ಆಪ್ತವೆನಿಸುತ್ತಾರೆ. ಉಳಿದಂತೆ ಕಾವ್ಯಾ ಶೆಟ್ಟಿಗೆ ಇಲ್ಲೇನೂ ಹೆಚ್ಚು ಕೆಲಸವಿಲ್ಲ. ಯುಕ್ತಾ ರಾಥೋಡ್‌ಗೂ ಇದೇ ಮಾತು ಅನ್ವಯ. ಚಿಕ್ಕಣ್ಣವಿದ್ದರೂ ಇಲಿ ನಗುವಿನ ಕಚಗುಳಿಯಿಲ್ಲ. ಉಳಿದಂತೆ ಬರುವ ಪಾತ್ರಗಳು ಚಿತ್ರದ ವೇಗವನ್ನು ಹೆಚ್ಚಿಸಿವೆ. ಅನೂಪ್‌ ಸೀಳಿನ್‌ ಹಾಗೂ ಜೋಹಾನ್‌ ಸಂಗೀತದಲ್ಲಿ ಸ್ವಾದವಿದೆ. ಚಿನ್ನ ಅವರ ಹಿನ್ನೆಲೆ ಸಂಗೀತ ಪೂರಕವೆನಿಸುತ್ತೆ. ಶ್ರೀನಿವಾಸ್‌ ರಾಮಯ್ಯ ಕ್ಯಾಮೆರಾದಲ್ಲಿ “ಸಿಲಿಕಾನ್‌ ಸಿಟಿ’ಯ ಕತ್ತಲ ಬೆಳಕಿನಾಟ ಸೊಗಸಾಗಿದೆ.

ಚಿತ್ರ: ಸಿಲಿಕಾನ್‌ ಸಿಟಿ
ನಿರ್ಮಾಣ: ಎಂ.ರವಿ, ಮಂಜುಳ ಸೋಮಶೇಖರ್‌
ನಿರ್ದೇಶನ: ಮುರಳಿ ಗುರಪ್ಪ
ತಾರಾಗಣ: ಶ್ರೀನಗರ ಕಿಟ್ಟಿ, ಸೂರಜ್‌ ಗೌಡ, ಕಾವ್ಯಾಶೆಟ್ಟಿ, ಯುಕ್ತಾ, ತುಳಸಿ ಶಿವಮಣಿ, ಅಶೋಕ್‌, ಚಿಕ್ಕಣ್ಣ ಇತರರು.

* ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next