Advertisement

ಕಿರಿಯ ಆರೋಗ್ಯ ಸಹಾಯಕರಿಗೆ ಕತ್ತಲ ದೀಪಾವಳಿ!

06:49 AM Nov 09, 2018 | |

ಮಂಡ್ಯ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಿರಿಯ ಆರೋಗ್ಯ ಮಹಿಳಾ ಸಹಾಯಕರು, ಕಿರಿಯ ಆರೋಗ್ಯ ಸಹಾಯಕರು ಹಾಗೂ ಇತರೆ ವರ್ಗದ ನೌಕರರಿಗೆ ನಾಲ್ಕು ತಿಂಗಳಿಂದ ಸಂಬಳವಾಗಿಲ್ಲ. ಇದರಿಂದ ದೀಪಾವಳಿ ಹಬ್ಬ ಅವರ ಪಾಲಿಗೆ ಕತ್ತಲು ಕವಿಯುವಂತೆ ಮಾಡಿದೆ. ಇದು ಮಂಡ್ಯ ಜಿಲ್ಲೆಯೊಂದರ ಸಮಸ್ಯೆಯಲ್ಲ. ಇಡೀ ರಾಜ್ಯದಲ್ಲೇ ಕಿರಿಯ ಆರೋಗ್ಯ ಮಹಿಳಾ ಸಹಾಯಕಿ  ಯರು, ಕಿರಿಯ ಆರೋಗ್ಯ ಸಹಾಯಕರು ಸೇರಿ ಇನ್ನಿತರ ವರ್ಗದ ನೌಕರರಿಗೆ ಆಗಸ್ಟ್‌ ತಿಂಗಳಿಂದ ಇಲ್ಲಿಯವರೆಗೆ
ವೇತನ ಪಾವತಿಯಾಗಿಲ್ಲ. ಜಿಲ್ಲೆಯೊಂದರಲ್ಲೇ ಸುಮಾರು 1.25 ಕೋಟಿ ರೂ. ಸಂಬಳವನ್ನು ನೌಕರರಿಗೆ ಪಾವತಿಸಬೇಕಿದೆ.

Advertisement

3 ತಿಂಗಳಿಗೊಮ್ಮೆ ಕೇಂದ್ರ ಬಿಡುಗಡೆ: ಈ ವರ್ಗದ ನೌಕರರಿಗೆ ಕೇಂದ್ರ ಸರ್ಕಾರ ಪ್ರತಿ ಮೂರು ತಿಂಗಳಿಗೊಮ್ಮೆ ವೇತನದ ಕಂತನ್ನು ಬಿಡುಗಡೆ ಮಾಡುತ್ತದೆ. ಅದರ ಖರ್ಚು ವೆಚ್ಚದ ಲೆಕ್ಕ ಶೀರ್ಷಿಕೆ ವಿವರಗಳನ್ನು  ಜಿಲ್ಲಾಮಟ್ಟದ ಅಧಿಕಾರಿಗಳು ಸಕಾಲದಲ್ಲಿ ಸಲ್ಲಿಸಿದರೆ 
ಹಣ ಶೀಘ್ರ ಬಿಡುಗಡೆಯಾಗುತ್ತದೆ. ಆದರೆ, ಲೆಕ್ಕಶೀರ್ಷಿಕೆ ವಿವರಗಳನ್ನು ಸಲ್ಲಿಸುವಲ್ಲಿ ಆಗುತ್ತಿರುವ ವಿಳಂಬವೇ ವೇತನ ಬಿಡುಗಡೆಯಾಗದಿರುವುದಕ್ಕೆ ಮುಖ್ಯ ಕಾರಣ ಎಂಬ ಆರೋಪಗಳು ಕೇಳಿಬರುತ್ತಿವೆ. ಇಡೀ ರಾಜ್ಯದ ಎಲ್ಲಾ ಜಿಲ್ಲೆಗಳು ಏಕಕಾಲಕ್ಕೆ ಲೆಕ್ಕ ಶೀರ್ಷಿಕೆ ವಿವರಗಳನ್ನು ಸಲ್ಲಿಸಬೇಕು. ಒಂದು ಜಿಲ್ಲೆಯವರು ತಡವಾಗಿ ಸಲ್ಲಿಸಿದರೂ ಇಡೀ ರಾಜ್ಯದ ಕಿರಿಯ ಆರೋಗ್ಯ ಮಹಿಳಾ ಸಹಾಯಕಿಯರು, ಕಿರಿಯ ಆರೋಗ್ಯ ಸಹಾಯಕರು ಸೇರಿ ಇತರೆ ವರ್ಗದ ನೌಕರರಿಗೆ ವೇತನ ಜಾರಿಯಾಗುವುದಿಲ್ಲ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಗಳೂ ನಡೆದಿಲ್ಲ.

ವಿಳಂಬ ಪ್ರಕ್ರಿಯೆ: ಈ ಹಿಂದಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಆಗಿದ್ದವರು ವೇತನ ಬಿಡುಗಡೆ ವಿಚಾರವಾಗಿ ಲೆಕ್ಕಶೀರ್ಷಿಕೆ ವಿವರದ ಪ್ರಕ್ರಿಯೆಗಳನ್ನು ನಡೆಸಿರಲಿಲ್ಲವಾದ ಕಾರಣ ವೇತನ ಬಿಡುಗಡೆ ವಿಳಂಬಕ್ಕೆ ಕಾರಣವಾಗಿದೆ. ಈಗ ಆ ಎಲ್ಲಾ
ಪ್ರಕ್ರಿಯೆಗಳನ್ನು ಮುಗಿಸಿ ಬೆಂಗಳೂರಿಗೆ ರವಾನಿಸಲಾಗಿದ್ದು, 2-3 ದಿನದಲ್ಲಿ ವೇತನ ಕಿರಿಯ ಆರೋಗ್ಯ ಮಹಿಳಾ ಸಹಾಯಕಿಯರು ಸೇರಿ ಇತರೆ ವರ್ಗದ ನೌಕರರ ಖಾತೆಗೆ ಜಮಾ ಮಾಡಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ನಾಗರಾಜು
“ಉದಯವಾಣಿ’ಗೆ ತಿಳಿಸಿದರು.

ಹೆಚ್ಚುತ್ತಿರುವ ಕೆಲಸದ ಹೊರೆ: ಕಿರಿಯ ಆರೋಗ್ಯ ಮಹಿಳಾ ಸಹಾಯಕಿಯರು ಹಾಗೂ ಕಿರಿಯ ಆರೋಗ್ಯ ಸಹಾಯಕರನ್ನು ಆರೋಗ್ಯ ಇಲಾಖೆಯ ಆಧಾರ ಸ್ತಂಭಗಳು ಎಂದು ಬಣ್ಣಿಸುತ್ತಾರೆ. ಆದರೆ, ಅವರಿಗೆ ಪ್ರತಿ ತಿಂಗಳು ಸರಿಯಾದ ವೇತನವನ್ನೇ ನೀಡುವುದಿಲ್ಲ. 30
ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳಿವೆ. ಅವೆಲ್ಲವನ್ನೂ ಸಮರ್ಪಕವಾಗಿ ಜಾರಿ ಮಾಡಬೇಕಾದ ಹೊಣೆ ನಮ್ಮ ಮೇಲಿದೆ. ಹೊಸ ಆರೋಗ್ಯ ಕಾರ್ಯಕ್ರಮಗಳು ಜಾರಿಯಾದರೂ ಅದರ ಭಾರವೂ ನಮ್ಮ ಮೇಲೆಯೇ ಬೀಳುತ್ತದೆ. ಇಲಾಖೆಯಲ್ಲಿ ನಿಗದಿಪಡಿಸಿದಷ್ಟು
ನೌಕರರಿಲ್ಲ. ಬಹುತೇಕ ಹುದ್ದೆಗಳು ಖಾಲಿ ಇವೆ. ವರ್ಷದಿಂದ ವರ್ಷಕ್ಕೆ ಕೆಲಸದ ಹೊರೆ ಹೆಚ್ಚಾಗುತ್ತಿದೆ. ಇದರ ನಡುವೆಯೂ ಸಂಬಳವನ್ನೂ ಸರಿಯಾಗಿ ನೀಡದಿದ್ದರೆ ಕೆಲಸ ಮಾಡುವುದಾದರೂ ಹೇಗೆ ಎನ್ನುವುದು ಹೆಸರೇಳಲಿಚ್ಚಿಸದ ಕಿರಿಯ ಆರೋಗ್ಯ
ಮಹಿಳಾ ಸಹಾಯಕಿಯರೊಬ್ಬರ ಪ್ರಶ್ನೆ. 

ವೇತನ ವಿಳಂಬವಾಗುತ್ತಿರುವ ಬಗ್ಗೆ ಮೇಲಧಿಕಾರಿಗಳನ್ನು ಕೇಳಿದರೆ ಸರಿಯಾದ ಉತ್ತರವನ್ನೇ ನೀಡುವುದಿಲ್ಲ. ನಿಮ್ಮ ವೇತನವನ್ನು ಕೇಂದ್ರ ಬಿಡುಗಡೆ ಮಾಡಲಿದ್ದು, ಇದು ಅಲ್ಲಿನ ಸಮಸ್ಯೆ. ನಮ್ಮಿಂದ ಯಾವುದೇ ಸಮಸ್ಯೆಯಾಗುತ್ತಿಲ್ಲ. ನಿಮಗೆ ವೇತನ
ಬೇಕೆಂದರೆ ಸಂಘದ ಮೂಲಕ ಹೋರಾಟ ನಡೆಸಿ ಸಕಾಲದಲ್ಲಿ ಬಿಡುಗಡೆಯಾಗುವಂತೆ ಮಾಡಿಸಿಕೊಳ್ಳಿ ಎಂಬ ಹಾರಿಕೆ ಉತ್ತರ ನೀಡುತ್ತಾರೆ. ಇದಕ್ಕೊಂದು ಶಾಶ್ವತ ಪರಿಹಾರವೇ ಸಿಗದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

Advertisement

ಈ ಹಿಂದಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ವೇತನದ ಲೆಕ್ಕ ಶೀರ್ಷಿಕೆ ವಿವರಗಳನ್ನು ಮುಖ್ಯ ಕಚೇರಿಗೆ
ಸಲ್ಲಿಸಬೇಕಿತ್ತು. ಆ ಪ್ರಕ್ರಿಯೆಗಳನ್ನು ನಡೆಸಿರದ ಕಾರಣ ವೇತನ ಬಿಡುಗಡೆಯಾಗಿರಲಿಲ್ಲ. ನಾನು ಈಗಾಗಲೇ ಆ ಪ್ರಕ್ರಿಯೆಗಳನ್ನು ತ್ವರಿತಗತಿಯಲ್ಲಿ ಪೂರೈಸಿ ವೇತನ ಬಿಡುಗಡೆ ಮಾಡಿಸಿದ್ದೇನೆ. ಮೂರು ದಿನಗಳೊಳಗೆ ನೌಕರರ ಖಾತೆಗೆ ಹಣ ಜಮೆ ಆಗಲಿದೆ.
● ಡಾ.ಕೆ.ನಾಗರಾಜು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

ಸಕಾಲದಲ್ಲಿ ವೇತನಕ್ಕೆ ಸಂಬಂಧಿಸಿದ ವಿವರಗಳನ್ನು ಜಿಲ್ಲಾಮಟ್ಟದ ಅಧಿಕಾರಿಗಳು ಮುಖ್ಯ ಕಚೇರಿಗೆ ಸಲ್ಲಿಸಬೇಕು. ಸ್ಟಾಫ್ ಕೊರತೆಯಿಂದ ಅದು ಸರಿಯಾಗಿ ನಡೆಯುತ್ತಿಲ್ಲ. ಪಿಎಚ್‌ಸಿಗಳಿಂದಲೂ ಹಲವರನ್ನು ನಿಯೋಜನೆ ಮೇಲೆ ಜಿಲ್ಲಾ ಆರೋಗ್ಯ ಇಲಾಖೆಗೆ ಕರೆಸಿಕೊಳ್ಳ ಲಾಗಿದೆ. ವೇತನ ಬಿಡುಗಡೆಯಲ್ಲಿ ವಿಳಂಬ ಮುಂದುವರಿದರೆ ರಾಜ್ಯಮಟ್ಟದಲ್ಲಿ ಹೋರಾಟ ರೂಪಿಸಲಾಗುವುದು.
● ಎಂ.ಎಸ್‌.ಸೋಮಶೇಖರ್‌, ಅಧ್ಯಕ್ಷರು, ಕಿರಿಯ ಆರೋಗ್ಯ ಸಹಾಯಕರು ಮತ್ತು ಮೇಲ್ವಿಚಾರಕರ ಸಂಘ

ವೇತನ ಬಿಡುಗಡೆ ಹೇಗೆ?
ಈ ವರ್ಗದವರಿಗೆ ಕೇಂದ್ರ ಬಿಡುಗಡೆ ಮಾಡುವ ಹಣ ರಾಜ್ಯ ಆರೋಗ್ಯ ಇಲಾಖೆಗೆ ಬಂದು ನಂತರ ಜಿಪಂಗೆ ಬಿಡುಗಡೆಯಾಗುತ್ತದೆ. ಜಿಲ್ಲಾ ಪಂಚಾಯಿತಿಯವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯವರಿಗೆ ನೀಡಿ ನಂತರ ಖಜಾನೆ ಸೇರುತ್ತದೆ. ಅಲ್ಲಿಂದ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಮಹಿಳಾ ಸಹಾಯಕಿ ಯರು, ಕಿರಿಯ ಆರೋಗ್ಯ ಸಹಾಯಕರು ಇತರೆ ನೌಕರರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next