Advertisement

ನಗರದ ಫುಟ್‌ಪಾತ್‌ನಲ್ಲಿ ನಡೆಯುವುದೇ ಡೇಂಜರ್‌..!

03:45 AM Jul 05, 2017 | Team Udayavani |

ಮಹಾನಗರ: ನಗರದಲ್ಲಿ ಸುರಿದ ಒಂದೆರಡು ಮಳೆಗೆ ಇಲ್ಲಿನ ಬಹುತೇಕ ಮುಖ್ಯ ಹಾಗೂ ಒಳ ರಸ್ತೆಗಳು ಹೊಂಡ ಗುಂಡಿ ಬಿದ್ದಿರುವುದು ಒಂದೆಡೆಯಾದರೆ, ಪಾಲಿಕೆ  ಅಧಿಕಾರಿಗಳ ಎಡವಟ್ಟಿನಿಂದಾಗಿ ಬಹುತೇಕ ಫುಟ್‌ಪಾತ್‌ಗಳು ಈಗ ಬಾಯ್ದೆರೆದು ಕುಳಿತಿದೆ. ಆದರೂ ಪಾಲಿಕೆ ಸೂಕ್ತ ಕ್ರಮಕೈಗೊಳ್ಳದ ಕಾರಣದಿಂದ ಪಾದಚಾರಿಗಳು ಫುಟ್‌ಪಾತ್‌ನಲ್ಲಿ ನಡೆಯುವುದೇ ಕಷ್ಟವಾಗಿದೆ.

Advertisement

ನಗರದ ಬಹುತೇಕ ಭಾಗಗಳಲ್ಲಿ ಫುಟ್‌ಪಾತ್‌ ಸಮಸ್ಯೆ ಬಹುದೊಡ್ಡ ಮಟ್ಟದಲ್ಲಿ ಕಾಡುತ್ತಿದೆ. ಬಂಟ್ಸ್‌ಹಾಸ್ಟೆಲ್‌ ಸಹಿತ ಕೆಲವೆಡೆಗಳಲ್ಲಿ ರಸ್ತೆಯಲ್ಲೇ ನಡೆಯಬೇಕಾಗಿದೆ. ಇಂತಹ ಸಮಸ್ಯೆಗಳನ್ನು ಮನಗಂಡು ಮೇಯರ್‌ ಕವಿತಾ ಸನಿಲ್‌ ಅವರು ಆಯ್ದ ಸ್ಥಳಗಳಲ್ಲಿ  ಹೊಸದಾಗಿ ಫುಟ್‌ಪಾತ್‌ ನಿರ್ಮಾಣ ಹಾಗೂ ಹಳೆಯ ಫುಟ್‌ಪಾತ್‌ ಸರಿಪಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಇದರಂತೆ ಲೇಡಿಹಿಲ್‌ನಿಂದ ಆರಂಭವಾದ ಈ ಕಾಮಗಾರಿ ಪಿವಿಎಸ್‌ವರೆಗೆ ನಡೆದಿದೆ.

ವಿಶೇಷವೆಂದರೆ ಈ ಬಾರಿ ಫುಟ್‌ಪಾತ್‌ಗಳನ್ನು ಕಾಂಕ್ರೀಟ್‌ ಮಾದರಿ ಯಲ್ಲಿ ನವೀಕರಣ ಮಾಡಲಾಗುತ್ತಿದೆ. ಇದಕ್ಕಾಗಿ ಹಳೆಯ ಸ್ಲಾಬ್‌ಗಳನ್ನು ತೆಗೆದು, ನಿಗದಿತ ಅಳತೆಯಲ್ಲಿ ಕಾಂಕ್ರೀಟ್‌ ಸ್ಲಾಬ್‌ ಹಾಕಲಾಗಿದೆ. ಚರಂಡಿ ಸ್ವತ್ಛಗೊಳಿಸಲು ಅವಕಾಶ ಬೇಕಾದ ಕಾರಣದಿಂದ ಮಧ್ಯದಲ್ಲಿ ಚಿಕ್ಕ ಸ್ಲಾಬ್‌ಗಳಿಗೆ ಅವಕಾಶ ನೀಡಲಾಗಿದೆ. ಆದರೆ ಪೂರ್ಣಮಟ್ಟದಲ್ಲಿ ಕಾಂಕ್ರೀಟ್‌ ಹಾಕಿ, ಮಧ್ಯದಲ್ಲಿ ಖಾಲಿ ಬಿಟ್ಟ ಜಾಗವನ್ನು ಸ್ಲಾಬ್‌ ಹಾಕಿ ಭರ್ತಿ ಮಾಡುವ ಬಗ್ಗೆ ಸಂಬಂಧಪಟ್ಟವರು ಗಮನಹರಿಸಿಲ್ಲ. 

ಹೀಗಾಗಿ ಪಿವಿಎಸ್‌  ಸಹಿತ ಬಹುತೇಕ ಕಡೆಗಳಲ್ಲಿ ಫುಟ್‌ಪಾತ್‌ಗಳು ಅಪಾಯಕಾರಿ ಸ್ಥಿತಿಯಲ್ಲಿವೆ ಎನ್ನುತ್ತಾರೆ ಸಾರ್ವಜನಿಕರು. 

Advertisement

Udayavani is now on Telegram. Click here to join our channel and stay updated with the latest news.

Next