Advertisement

ಇದುವರೆಗೂ ಆಡಿದ್ದೆಲ್ಲಾ ಪ್ರಾಕ್ಟೀಸ್‌ ಮ್ಯಾಚ್‌…ಆಟ ಇನ್ಮೇಲೆ ಶುರು!

05:05 AM Jul 14, 2017 | Karthik A |

ಒಂದು ವಿವಾದಾತ್ಮಕ ಚಿತ್ರ ಮುಗಿಸಿ, ಇನ್ನೊಂದಕ್ಕೆ ತಯಾರಾಗುತ್ತಿದ್ದಾರೆ ಶ್ರೀನಿವಾಸರಾಜು. ಈ ವಾರ ಅವರ ನಿರ್ದೇಶನದ ‘ದಂಡುಪಾಳ್ಯ’ದ ಮುಂದುವರೆದ ಭಾಗವಾದ ‘2’ ಬಿಡುಗಡೆಯಾಗುತ್ತಿದೆ. ಅದಾಗಿ ಕೆಲವು ದಿನಗಳಿಗೆ ‘3’ ಬಿಡುಗಡೆಯಾಗುತ್ತದಂತೆ. ಅದಾದ ಮೇಲೆ ಕಂಚಿಶ್ರೀಗಳ ಕುರಿತಾದ ‘ಆಚಾರ್ಯ ಅರೆಸ್ಟ್‌’ ಎಂಬ ಚಿತ್ರವನ್ನು ಶುರು ಮಾಡುವುದಕ್ಕೆ ಅವರು ಸಜ್ಜಾಗುತ್ತಿದ್ದಾರೆ.

Advertisement

‘ದಂಡುಪಾಳ್ಯ’ಗೆ ಹೋಲಿಸಿದರೆ, ‘2’ ಚಿತ್ರದಲ್ಲಿ ಹಿಂಸೆ, ರಕ್ತಪಾತ, ರೇಪ್‌ ಯಾವುದೂ ಇರುವುದಿಲ್ಲವಂತೆ. ‘ಇದೊಂದು ಪಕ್ಕಾ ಮೆಲೋಡ್ರಾಮ ಇರುವ ಚಿತ್ರ. ಇದರಲ್ಲಿ ಯಾವುದೇ ಹಿಂಸೆ, ರಕ್ತಪಾತ ಇರುವುದಿಲ್ಲ. ಅವೆಲ್ಲಾ ಮುಂದಿನ ಭಾಗದಲ್ಲಿ ಇರುತ್ತದೆ. ನಾನು ಕ್ರೈಮ್‌ ವೈಭವೀಕರಿಸುತ್ತೀನಿ ಎಂದು ಬಹಳಷ್ಟು ಜನ ಹೇಳುತ್ತಾರೆ. ಯಾರೂ ಮಾಡದ್ದನ್ನ ನಾನೇನೂ ಮಾಡುತ್ತಿಲ್ಲ. ಜರ್ಮನ್‌, ಫ್ರೆಂಚ್‌ ಚಿತ್ರಗಳಲ್ಲಿ ಇವೆಲ್ಲಾ ಮಾಮೂಲಿ. ಸೆಕ್ಸ್‌ ಮತ್ತು ಕ್ರೈಮ್‌ ಬಿಟ್ಟಾಕಿ. ಆ ಚಿತ್ರಗಳ ಮೇಕಿಂಗ್‌ ಖಂಡಿತಾ ಸೆಳೆಯುತ್ತದೆ. ನಾನು ಆ ತರಹದ ಸಿನಿಮಾಗಳನ್ನು ಮಾಡಿಲ್ಲ. ಆದರೆ, ಮಾಡುವುದಕ್ಕೆ ಖಂಡಿತಾ ಇಷ್ಟ.

ಒಬ್ಬ ಸಿನಿಮಾ ಮೇಕರ್‌ ಆಗಿ ಬೇರೆ ತರಹದ ಚಿತ್ರಗಳನ್ನು ಮಾಡುವುದು ನನಗೆ ಇಷ್ಟ. ಕಾಲ್ಪನಿಕ ಕಥೆ ಮತ್ತು ಪಾತ್ರಗಳನ್ನ ಬರೆಯುವುದು ಕಷ್ಟವಲ್ಲ. ಆದರೆ, ಈ ತರಹದ ಚಿತ್ರ ಮಾಡಿದರೆ ಜನ ಸಹ ಗುರುತಿಸ್ತಾರೆ ಮತ್ತು ನನ್ನದೊಂದು ಐಡೆಂಟಿಟಿ ಇರುತ್ತದೆ. ನಿಜ ಹೇಳಬೇಕು ಎಂದರೆ, ಕಮರ್ಷಿಯಲ್‌ ಸಿನಿಮಾಗಳನ್ನು ಮಾಡೋದು ಸುಲಭ …’ ಇಷ್ಟು ಹೇಳುತ್ತಿದ್ದಂತೆಯೇ, ತಕ್ಷಣ ಪ್ರಶ್ನೆ ಬರುತ್ತದೆ. ಕಮರ್ಷಿಯಲ್‌ ಸಿನಿಮಾಗಳನ್ನು ಮಾಡುವುದು ಅಷ್ಟು ಸುಲಭವಾ ಎಂದು. ಖಂಡಿತಾ ಹೌದು ಎಂಬುದು ಉತ್ತರ. ‘ಮಾಮೂಲಿ ಕಮರ್ಷಿಯಲ್‌ ಸಿನಿಮಾಗಳನ್ನು ಮಾಡುವುದು ದೊಡ್ಡ ವಿಷಯವಲ್ಲ. ಒಂದೊಳ್ಳೆಯ ಕಥೆ ಕೊಟ್ಟರೆ ನಾನು ಮಾಡ್ತೀನಿ. 100 ದಿನಗಳ ಸಿನಿಮಾಗಳನ್ನ, 50 ಕೋಟಿ ಕ್ಲಬ್‌ ಸಿನಿಮಾಗಳನ್ನ ಮಾಡುವುದು ಕಷ್ಟವಲ್ಲ. 

ಸರಿಯಾಗಿ ಪ್ಲಾನ್‌ ಮಾಡಿದರೆ ಆರಾಮವಾಗಿ ಮಾಡಬಹುದು. ಏಕೆಂದರೆ, ಈ ತರಹದ ಸಿನಿಮಾಗಳಲ್ಲಿ ದೊಡ್ಡ ಹೀರೋ ಸಹಕಾರ ಇರುತ್ತದೆ. ಕಾಮಿಡಿ, ಗ್ಲಾಮರ್‌, ಸಂಗೀತದ ಸಪೋರ್ಟ್‌ ಸಿಗುತ್ತದೆ. ನಿರ್ದೇಶಕನಾಗಿ ನನ್ನ ಕೆಲಸ ಬಹಳ ಸುಲಭ. ಅದರಿಂದ ನನಗೆ ಏನು ಸಿಗುವುದಿಲ್ಲ. ಆದರೆ, ‘ದಂಡುಪಾಳ್ಯ’ ಚಿತ್ರದ ಕ್ರೆಡಿಟ್‌ ಸಂಪೂರ್ಣ ನನಗೇ ಸಿಗುತ್ತದೆ. ‘ದಂಡುಪಾಳ್ಯ’ ತರಹದ ಚಿತ್ರಗಳಲ್ಲಿ ಯಾರು, ಎಷ್ಟು ಚೆನ್ನಾಗಿ ಮಾಡಿದರೂ, ಕೊನೆಗೆ ನಿರ್ದೇಶಕನ ಹೆಸರು ಹೇಳುತ್ತಾರೆ. ಹಾಗಾಗಿ ನಾನು ಈ ತರಹದ ಸಿನಿಮಾಗಳನ್ನು ಹೆಚ್ಚು ಇಷ್ಟಪಡುತ್ತೀನಿ. ಇನ್ನು ಮಾಮೂಲಿ ಕಮರ್ಷಿಯಲ್‌ ಸಿನಿಮಾಗಳು ಮಾಡಿದರೆ, ರೆಕಾರ್ಡ್‌ ಬ್ರೇಕ್‌ ಮಾಡುವುದಕ್ಕೇ ಮಾಡಬೇಕು. ಇಷ್ಟು ದಿನ ನಾನು ಆ ತರಹ ಮಾಡಿರಲಿಲ್ಲ, ಇನ್ನು ಮುಂದೆ ಮಾಡುತ್ತೀನಿ’ ಎನ್ನುತ್ತಾರೆ ಶ್ರೀನಿವಾಸರಾಜು.

ಒಂದು ಸಿನಿಮಾ ಮಾಡಿದರೆ, ಅದು ಸಂಪೂರ್ಣ ತಮ್ಮ ಕಂಟ್ರೋಲ್‌ನಲ್ಲಿ ಇರಬೇಕೆಂದು ಶ್ರೀನಿವಾಸರಾಜು ತೀರ್ಮಾನಿಸಿಬಿಟ್ಟಿದ್ದಾರೆ. ‘ಈ ಹಿಂದೆ ನಾನು ಹಲವು ತಪ್ಪುಗಳನ್ನು ಮಾಡಿದ್ದೀನಿ. ಉದಾಹರಣೆಗೆ, ‘ಶಿವಂ’ ಚಿತ್ರ ಮಾಡುವಾಗ ಸಾಕಷ್ಟು ರಾಜಿ ಮಾಡಿಕೊಂಡೆ. ಆ ಚಿತ್ರ ನಿಂತು ಹೋಗುವುದು ಇಷ್ಟ ಇರಲಿಲ್ಲ. ಹಾಗಾಗಿ ರಾಜಿ ಆಗಬೇಕಾಯಿತು. ಚಿತ್ರ ಕೊನೆಗೆ ಸೋತು ಹೋಯಿತು. ಸೋತು ಹೋಗುವುದರಲ್ಲಿ ನನ್ನ ತಪ್ಪೂ ಇತ್ತು. ಇನ್ನು ಚಿತ್ರದ ಬಿಡುಗಡೆಯೇ ಸರಿಯಾಗಿ ಆಗಲಿಲ್ಲ, ಪೋಸ್ಟರ್‌ಗಳು ಕಾಣಲಿಲ್ಲ. ಆಗಲೇ ನಾನು ನಿರ್ಧಾರ ಮಾಡಿದ್ದು, ಚಿತ್ರ ಮಾಡಿದರೆ ಅದು ಸಂಪೂರ್ಣ ನನ್ನ ಕಂಟ್ರೋಲ್‌ನಲ್ಲೇ ಮಾಡಬೇಕು ಎಂದು. ಹೀರೋ ತಲೆ ಬೋಳಿಸಿಕೊಳ್ಳಬೇಕು ಎಂದರೆ ಬೋಳಿಸಿಕೊಳ್ಳಬೇಕು. ಸಿಕ್ಸ್‌ಪ್ಯಾಕ್‌ ಮಾಡಬೇಕು ಅಂದರೆ ಮಾಡಬೇಕು. ‘ದಂಗಲ್‌’ ಚಿತ್ರಕ್ಕೆ ಅಮೀರ್‌ ಖಾನ್‌ ಎರಡು ವರ್ಷ ಪಕ್ಕಕ್ಕೆ ಇಟ್ಟರು. ಎರಡು ವರ್ಷ ಒಬ್ಬ ನಿರ್ಮಾಪಕ ಕಾಯಬೇಕು ಎಂದರೆ ಅವನಿಗೆ ನಂಬಿಕೆ ಇರಬೇಕು. ನಂಬಿಕೆ ಬರಬೇಕು ಎಂದರೆ ಒಂದು ದೊಡ್ಡ ಕಮರ್ಷಿಯಲ್‌ ಯಶಸ್ಸು ಕೊಡಬೇಕು. ಅಂಥದ್ದೊಂದು ಯಶಸ್ಸು ಕೊಟ್ಟರೆ ಮಾತ್ರ, ಎಲ್ಲರಿಗೂ ನಂಬಿಕೆ ಬರುತ್ತದೆ. ಆಗ ನಿರ್ದೇಶಕನ ಮಾತನ್ನ ಎಲ್ಲರೂ ಕೇಳುತ್ತಾರೆ. ಆಗ ಎಂತಹ ಚಿತ್ರವನ್ನ ಬೇಕಾದರೂ ಮಾಡಬಹುದು. ಇದುವರೆಗೂ ನಾನು ಆ ಸ್ಥಾನದಲ್ಲಿ ಇರಲಿಲ್ಲ. ಇನ್ನು ಮುಂದೆ ಆ ತರಹದ ಸ್ಥಾನಕ್ಕೆ ಬರಬೇಕು ಎಂಬುದು ನನ್ನಾಸೆ’ ಎಂದು ತಮ್ಮಾಸೆ ಬಿಚ್ಚಿಡುತ್ತಾರೆ ಅವರು. ದೊಡ್ಡ ಯಶಸ್ಸು ಸಿಗದಿದ್ದರೂ, ಸಂಭಾವನೆ ವಿಷಯದಲ್ಲಿ ಮುಂದಿದ್ದೇನೆ ಎನ್ನುವುದು ಅವರ ಅಭಿಪ್ರಾಯ. ; ಒಂದು, ಎರಡು ಲಕ್ಷಕ್ಕೆ ಸಿನಿಮಾ ಮಾಡುವ ನಿರ್ದೇಶಕರನ್ನ ನಾನು ನೋಡಿದ್ದೀನಿ. ಆದರೆ, ನನಗೆ ಆ ತರಹ ಮಾಡುವುದಕ್ಕೆ ಸಾಧ್ಯವಿಲ್ಲ. ನನ್ನ ಸಂಭಾವನೆ ಏಳು, ಎಂಟು ಸಂಖ್ಯೆಯದ್ದು. ಅಷ್ಟೊಂದು ಸಂಭಾವನೆ ಯಾರು ಕೊಡುತ್ತಾರೆ ಹೇಳಿ? ವಾಪಸ್ಸು ಬರಲ್ಲ ಅಂದರೆ ಖಂಡಿತಾ ಕೊಡುವುದಿಲ್ಲ. 

Advertisement

‘ದಂಡುಪಾಳ್ಯ’ ಚಿತ್ರವನ್ನ ಎರಡು ಕೋಟಿಯಲ್ಲಿ ಮಾಡಿದ್ದು. ಅದರ ಬಿಝಿನೆಸ್‌ ಆಗಿದ್ದು 13 ಕೋಟಿ. ಈ ತರಹದ್ದೊಂದು ರಿಟರ್ನ್ಸ್ ಕೊಟ್ಟರೆ ಮಾತ್ರ ಅದು ಸಾಧ್ಯ. ಅದು ಎಲ್ಲಾ ಸಿನಿಮಾಗಳಿಂದ ಮಾಡುವುದಕ್ಕೆ ಸಾಧ್ಯವಿಲ್ಲ. ‘ದಂಡುಪಾಳ್ಯ’ದಂತಹ ಸಿನಿಮಾದಿಂದ ಸಾಧ್ಯ. ನಾನು ‘ಶಿವಂ’ ಮಾಡಿದಾಗ ಸರಿಯಾಗಿ ಬಿಝಿನೆಸ್‌ ಆಗಲಿಲ್ಲ. ಆ ಚಿತ್ರವನ್ನು ಯಾರು ಕೇಳೋರೇ ಇರಲಿಲ್ಲ. ಆದರೆ, ‘ದಂಡುಪಾಳ್ಯ 2′ ಸೋಲ್ಡ್‌ ಔಟ್‌ ಆಗಿದೆ. ಜನ ಕ್ಯೂನಲ್ಲಿ ನಿಂತು ಆ ಚಿತ್ರದ ವಿತರಣೆ ತಗೊಳ್ಳೋಕೆ ಬರ್ತಿದ್ದಾರೆ. ಹಾಗಾದಾಗ, ನಾನು ಕೇಳಿದಷ್ಟು ಸಂಭಾವನೆ ತಗೊಳ್ಳೋದಷ್ಟೇ ಅಲ್ಲ, ಲಾಭದಲ್ಲಿ ಶೇರ್‌ ಪಡೆಯಬಹುದು. ಹೀಗೆ ಚೆನ್ನಾಗಿ ದುಡ್ಡು ಬಂದರೆ, ಒಳ್ಳೆಯ ಸಿನಿಮಾಗಳನ್ನು ಮಾಡುವ ಬಗ್ಗೆ ಗಮನ ಹರಿಸಬಹುದು. ಒಬ್ಬ ಮನುಷ್ಯನಿಗೆ ಟೆನ್ಶನ್‌ ಇದ್ದರೆ, ಕ್ರಿಯೇಟಿವ್‌ ಆಗಿ ಕೆಲಸ ಮಾಡುವುದು ಕಷ್ಟ. ಅದೇ ಚೆನ್ನಾಗಿ ಬಂದರೆ, ಒಂದಿಷ್ಟು ಒಳ್ಳೆಯ ಸಿನಿಮಾಗಳನ್ನು ಮಾಡಬಹುದು. ಆ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತಿದ್ದೀನಿ. ನಿಜ ಹೇಳಬೇಕೆಂದರೆ, ನಾನು ಇದುವರೆಗೂ ಏನೂ ಮಾಡೇ ಇಲ್ಲ. ಇದುವರೆಗೂ ಪ್ರಾಕ್ಟೀಸ್‌ ಮ್ಯಾಚ್‌ ಆಡಿದ್ದೀನಿ ಅಷ್ಟೇ. ಈಗ ಒಂದು ಲೆವೆಲ್‌ಗೆ ಬಂದಿರುವುದರಿಂದ, ಇನ್ನು ಮುಂದೆ ಆಟ ಆಡಬೇಕು’ ಎಂದು ಮಾತು ಮುಗಿಸುತ್ತಾರೆ ಅವರು.

– ಭೂಮಿಕಾ

Advertisement

Udayavani is now on Telegram. Click here to join our channel and stay updated with the latest news.

Next