Advertisement

Dandeli: ಕಾಳಿ ನದಿಗೆ ಜಿಗಿದ ಮಹಿಳೆಯ ಮೃತದೇಹ ಪತ್ತೆ

11:31 AM Sep 28, 2024 | Team Udayavani |

ದಾಂಡೇಲಿ: ನಗರದ ಕುಳಗಿ ರಸ್ತೆಯ ಸೇತುವೆಯಿಂದ ಕಾಳಿ ನದಿಗೆ ಜಿಗಿದಿರುವ ಮಹಿಳೆಯ ಮೃತದೇಹ ದಾಂಡೇಲಿ ತಾಲೂಕಿನ ಕರಿಯಂಪಾಲಿ ಗ್ರಾಮದ ಬಳಿಯ ನದಿಯಲ್ಲಿ ಸೆ.28ರ ಶನಿವಾರ ಬೆಳಿಗ್ಗೆ ಪತ್ತೆಯಾಗಿದೆ.

Advertisement

ಮೃತ ಮಹಿಳೆ ಸ್ಥಳೀಯ ಗಣೇಶನಗರದ ನಿವಾಸಿ ರೇಖಾ ಶಿವಾನಂದ ಕಂಬಾರಗಣವಿ (41) ಎಂದು ತಿಳಿದು ಬಂದಿದೆ.

ರೇಖಾ ಸೆ. 26ರ ಗುರುವಾರ ಮಧ್ಯಾಹ್ನ ನಾಪತ್ತೆಯಾಗಿದ್ದು, ಈ ಬಗ್ಗೆ ದಾಂಡೇಲಿ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಸೆ. 25ರ ಬುಧವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಕುಳಗಿ ರಸ್ತೆಯ ಸೇತುವೆಯಿಂದ ಜಿಗಿದ ಮಹಿಳೆಯನ್ನು ಹುಡುಕುವ ಕಾರ್ಯ ಸೆ.27ರ ಶುಕ್ರವಾರ ಸಂಜೆಯವರೆಗೂ ನಡೆಸಿ, ಶನಿವಾರಕ್ಕೆ ಮುಂದುವರಿಸಲಾಗಿತ್ತು. ಸೆ.28ರ ಶನಿವಾರ ಬೆಳಿಗ್ಗೆ ಕರಿಯಂಪಾಲಿ ಗ್ರಾಮದಲ್ಲಿ ನದಿಯಲ್ಲಿ ಮೃತದೇಹ ಕಂಡುಬಂದಿದೆ. ತಕ್ಷಣ ಸ್ಥಳೀಯರು ಮಾಹಿತಿ ನೀಡಿದ್ದು, ಈ ಕೂಡಲೇ ಸ್ಥಳಕ್ಕೆ ದೌಡಾಯಿಸಿ ಮೃತದೇಹ ಪತ್ತೆಹಚ್ಚಿ ನದಿಯಿಂದ ಮೇಲಕ್ಕೆ ತರಲಾಯಿತು.

ವೈಲ್ಡರ್ ನೆಸ್ಟ್, ಪ್ಲೈ ಕ್ಯಾಚರ್ ಮತ್ತು ಕಾಳಿ ಅಡ್ವೆಂಚರ್ ನವರ ರಾಪ್ಟ್ ಮತ್ತು ನುರಿತ ಸಿಬ್ಬಂದಿಗಳ ತಂಡದ ಜೊತೆಗೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮತ್ತು ಹಳಿಯಾಳದ ಅಗ್ನಿಶಾಮಕ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ಸ್ಥಳೀಯ ಮುಳುಗು ತಜ್ಞರು ಮಹಿಳೆಯ ಶೋಧ ಕಾರ್ಯದಲ್ಲಿ ತೊಡಗಿಸಿಕೊಂಡು ಅಂತಿಮವಾಗಿ ಮಹಿಳೆಯ ಮೃತ ದೇಹವನ್ನು ಪತ್ತೆ ಹಚ್ಚಿ ನದಿಯಿಂದ ಮೇಲೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ತಹಶೀಲ್ದಾರ್ ಶೈಲೇಶ ಪರಮಾನಂದ, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು, ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಅಗ್ನಿಶಾಮಕ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸ್ಥಳದಲ್ಲಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ. ಸ್ಥಳೀಯರು ಕೂಡ ತೆಪ್ಪದ ಮೂಲಕ ಶೋಧ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

ಶನಿವಾರ ಬೆಳಗ್ಗೆ ಮೃತ ದೇಹವನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕರೆತರಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next