Advertisement

ಕನ್ನಡ ನಾಡಿನ ಸಿರಿ ಗೆಜ್ಜೆಯ ಹಿರಿಹೆಜ್ಜೆ ಮಿಷಿಗನ್‌ನ ನೃತ್ಯ ಮಯೂರಿ

05:37 PM Feb 20, 2021 | Suhan S |

ಮೂರು ದಶಕಗಳಿಂದಲೂ ಅಮೆರಿಕದ ಮಿಷಿಗನ್‌ನಲ್ಲಿ ನೆಲೆಸಿರುವ ರೂಪಾ, ನಾಲ್ಕೂವರೆ ದಶಕಗಳ ತಮ್ಮ ನಾಟ್ಯ ಬದುಕಿನಲ್ಲಿ ಭಾರತೀಯ ಶಾಸ್ತ್ರೀಯ ನೃತ್ಯ, ಅದರಲ್ಲೂ  ಭರತನಾಟ್ಯದಲ್ಲಿ ತಮ್ಮ ಪ್ರಭುತ್ವ ಸಾಧಿಸಿಕೊಂಡವರು. ಸುಮಾರು ಮೂವತ್ತು ವರ್ಷಗಳಿಂದ “ನೃತ್ಯೋಲ್ಲಾಸ’ ಎಂಬ ನೃತ್ಯ ಶಾಲೆಯನ್ನು ಹುಟ್ಟು ಹಾಕಿ ನೂರಾರು ವಿದ್ಯಾರ್ಥಿಗಳಿಗೆ ಭರತನಾಟ್ಯವನ್ನು ಕಲಿಸುತ್ತಾ ಬಂದಿದ್ದಾರೆ.

Advertisement

ಪ್ರಸ್ತುತದಲ್ಲಿ ಮಿಷಿಗನ್‌ನ ರಾಚೆಸ್ಟರ್‌ ಹಿಲ್ಸ್ ನಲ್ಲಿ ವಾಸವಿರುವ ಇವರು, ರಾಚೆಸ್ಟರ್‌ ಹಿಲ್ಸ್‌, ನೋವೈ , ವೆಸ್ಟ್ ಬ್ಲೂಮ್‌ ಫೀಲ್ಡ್ , ಆನ್‌ ಆರ್ಬರ್‌.. ಹೀಗೆ ನೃತ್ಯೋಲ್ಲಾಸ ಶಿಷ್ಯರ ಬೇಡಿಕೆಗಾಗಿ ತಮ್ಮ ಶಾಖೆಗಳನ್ನು ವಿಸ್ತರಿಸಿಕೊಂಡು ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯೆ ಕಲಿಸುತ್ತಲೇ ಬಂದಿದ್ದಾರೆ.

ಗುರು ರಾಧಾ ಶ್ರೀಧರ್‌ ಅವರ ಮಾರ್ಗದರ್ಶನದಲ್ಲಿ ನೃತ್ಯ ಶಿಕ್ಷಣ ಪ್ರಾರಂಭಿಸಿದ ರೂಪಾ ಅವರು, 1979ರಲ್ಲಿ ರಂಗಪ್ರವೇಶ ಮಾಡಿದರು. ಉಷಾ ದಾರ್ತಾ, ನರ್ಮದಾ , ಧನಂಜಯನ್‌ , ಶಾಂತಾ ಧನಂಜನ್‌ ದಂಪತಿಗಳು , ಮಾಯಾ ರಾವ್‌, ಕಲಾನಿಧಿ ನಾರಾಯಣನ್‌ ಮೊದಲಾದ ಹಿರಿ ಗುರುಗಳ ಗರಡಿಯಲ್ಲಿ ಪಳಗಿ, ಭಾರತೀಯ ಶಾಸ್ತ್ರೀಯ ನೃತ್ಯ ಭರತನಾಟ್ಯದಲ್ಲಿ ಭಾರತ ಸರಕಾರದ ಪ್ರತಿಷ್ಠಿತ ವಿದ್ಯಾರ್ಥಿ ವೇತನ ಪಡೆದು, ವಿದ್ವತ್‌  ಪದವಿಯನ್ನು ಪಡೆದರು.

ಭಾರತಾದ್ಯಂತ ಅನೇಕ ಪ್ರತಿಷ್ಠಿತ ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ನೀಡಿರುವ ಇವರು, ಬೆಂಗಳೂರು ದೂರ ದರ್ಶನ ಪ್ರಾರಂಭವಾದಾಗಿನ ಉದ್ಘಾಟನ ಸಮಾರಂಭದ ಮೊದಲ ನೃತ್ಯ ಪ್ರದರ್ಶನವನ್ನೂ ನೀಡಿದ್ದರು. ರೂಪಾ ಅವರು ಕೆಲ ಕಾಲ ಬೆಂಗಳೂರು ದೂರ ದರ್ಶನದಲ್ಲಿ ನಿರೂಪಕಿಯಾಗಿಯೂ ಜನಪ್ರಿಯರಾಗಿದ್ದರು. 1990ರಲ್ಲಿ ಅಮೆರಿಕಗೆ ಹೋದ ಮೇಲೆ ಅಮೆರಿಕದ ಉದ್ದಗಲಕ್ಕೂ ಸಂಚರಿಸಿ ನೃತ್ಯ ಪ್ರದರ್ಶನಗಳನ್ನು ನೀಡಿದ್ದಾರೆ.

Advertisement

ರೂಪಾ ಅವರು ತಮ್ಮ ಸಂಸ್ಥೆಯ ಮೂಲಕ ಅನೇಕ ನೃತ್ಯ ಪರ್ವಗಳನ್ನೂ ನಿಯಮಿತವಾಗಿ ಆಯೋಜಿಸುತ್ತಾ ಬಂದಿದ್ದಾರೆ. ಈ ವರೆಗೆ ಅವರು ಅನೇಕ ನೃತ್ಯ ಸಂಯೋಜನೆ ಮಾಡಿ ಭಾರತೀಯ ಸಂಸ್ಕೃತಿಯ ಮೌಲ್ಯಗಳು, ಮಹತ್ವಗಳನ್ನು ಯುವ ಜನಾಂಗಕ್ಕೆ ತಲುಪಿಸುವಲ್ಲಿ ಕಾಳಜಿ ವಹಿಸುತ್ತಿದ್ದಾರೆ. ಅವರ ಶ್ರೀ ಕೃಷ್ಣ , ಭಾವಯಾಮಿ ರಘು ರಾಮಂ, ಗೀತ ಗೋವಿಂದ, ಶ್ರೀಕೃಷ್ಣ – ಪ್ರೇಮ, ಭಕ್ತಿ, ಮುಕ್ತಿ, ಪುಣ್ಯ ತೀರ್ಥಂ ಮುಂತಾದ ನೃತ್ಯ ರೂಪಕಗಳನ್ನು ಮಿಷಿಗನ್‌ ಜನತೆ ಇಂದಿಗೂ ಮೆಲುಕು ಹಾಕುತ್ತಾರೆ.

ರೂಪಾ ಅವರ ನೃತ್ಯ ಸಂಯೋಜನೆಗಳಲ್ಲಿ ಮುಖ್ಯವಾಗಿ ಕಂಡು ಬರುವುದು ಪರಂಪರೆಯ ಬಗೆಗಿನ ಗೌರವ, ಭಾರತೀಯ ಸಂಸ್ಕೃತಿಯಲ್ಲಿನ ಅಪಾರ ಶ್ರದ್ಧೆ, ಸದಭಿರುಚಿ, ಸುಸಂಸ್ಕೃತಿ ಹಾಗೂ ಪುರಾಣ, ಭಾಗವತಗಳ ಕಥಾ ಜಗತ್ತಿನ ಬಗೆಗಿರುವ ಆಳವಾದ ತಿಳಿವಳಿಕೆ, ಅದನ್ನು ಮುಂದಿನ ತಲೆಮಾರಿಗೆ ತಲುಪಿಸಬೇಕು ಎನ್ನುವ ಪರಮ ಕಾಳಜಿ. ಭಾರತೀಯ ಸಂಸ್ಕೃತಿ ಮಾತನಾಡುವುದು ಎರಡೇ ಭಾಷೆಗಳಲ್ಲಿ. ಒಂದು ಮಹಾಭಾರತದ ಭಾಷೆಯಾದರೆ, ಮತ್ತೂಂದು ರಾಮಾಯಣದ ಭಾಷೆ . ರೂಪಾ ಅವರು ತಮ್ಮ ನೃತ್ಯ ರೂಪಕಗಳಲ್ಲಿ ಬಹುವಾಗಿ ಈ ಎರಡೂ ಭಾಷೆಗಳನ್ನು ಬಳಸಿಕೊಂಡು ತಮ್ಮ ಕೃತಿಗಳ ಮೂಲಕ ಅದನ್ನು ಸಮರ್ಪಕವಾಗಿ ಪ್ರಸ್ತುತ ಪಡಿಸಿದ್ದಾರೆ.

ರೂಪಾ ಅವರ ನೃತ್ಯ ಸಂಯೋಜನೆಗಳಲ್ಲಿ ಶಾಸ್ತ್ರೀಯತೆ, ವಿದ್ವತ್ತು, ಬಹುಶೃತತೆ ಜತೆಗೆ ಈ ನೆಲದ ಸಂಸ್ಕೃತಿ, ಅಚ್ಚುಕಟ್ಟುತನ, ಜಾನಪದೀಯತೆಗಳ ಬಗೆಗೂ ವಿಶೇಷ ಆಕರ್ಷಣೆ ಎದ್ದು ಕಾಣುವಂಥದ್ದು.  ತಮ್ಮ ಸಂಸ್ಥೆಯ ರಜತೋತ್ಸವದ ಆಚರಣೆಯ ಸಂದರ್ಭಕ್ಕಾಗಿ ಸಂಯೋಜಿಸಿದ  ಪುಣ್ಯ ತೀರ್ಥಂ  ನೃತ್ಯ ರೂಪಕದ ವಸ್ತು , ನಿರೂಪಣೆ , ಪ್ರಾಯೋಗಿಕತೆಗಳಿಂದಾಗಿ ಭಾರತೀಯ ನೃತ್ಯ ಸಂಯೋಜನೆಯಲ್ಲಿ ಒಂದು ಮೈಲುಗಳಾಗಿ ನಿಂತಿತ್ತು.  ಇಡೀ ಭಾರತದ ಎಲ್ಲ ನದಿಗಳೂ ಪುಣ್ಯ ತೀರ್ಥಗಳೇ ಎಂಬ ಸದಾಶಯ ಹೊತ್ತ ಪ್ರಸ್ತುತಿಯಲ್ಲಿ ಇಡೀ ಭಾರತದ ಬೇರೆ ಬೇರೆ ನೆಲಗಳ ಪ್ರಾದೇಶಿಕ ಸಂಸ್ಕೃತಿಯನ್ನು ಬಿತ್ತರಿಸುವ ಆಯಾ ಪ್ರದೇಶದ ಜಾನಪದ ನೃತ್ಯಗಳೂ ಸೇರ್ಪಡೆಯಾಗಿದ್ದವು. ಬ್ರಹ್ಮಪುತ್ರದ ಮಾತು ಬಂದಾಗ ಬಿಹು ನೃತ್ಯದಂತೆ ಈ ನೃತ್ಯ ರೂಪಕದಲ್ಲಿ ಭಾರತದ ಎಲ್ಲ ಭಾಷೆಗಳೂ ಏಕೋದ್ದೇಶದಿಂದಲೇ  ಪುಣ್ಯ ತೀರ್ಥಗಳ ಬಗ್ಗೆ  ಮಾತನಾಡಿದ್ದವು.

ಹಲವು ಗೌರವ, ಪುರಸ್ಕಾರ :

ಇಂಥ ಶ್ರೇಷ್ಠ ಕಲಾವಿದೆಗೆ ಜಗತ್ತಿನಾದ್ಯಂತ ಗೌರವಗಳ ಮಹಾ ಪೂರವೇ ಹರಿದು ಬಂದಿದೆ. ಮಿಷಿಗನ್‌ ಎಮ್ಮಿ ಪ್ರಶಸ್ತಿ ವಿಜೇತ ಸಾಕ್ಷ್ಯಚಿತ್ರ , Our Story of India 2008 ನಲ್ಲಿ ತಮ್ಮ ಅಧ್ಯಾಯವನ್ನು ಬರೆದ ಕನ್ನಡ ಮಹಿಳೆ ಎಂಬ ಹೆಗ್ಗಳಿಕೆಗೆ ರೂಪಾ ಅವರದ್ದಾಗಿದೆ.  ಪ್ರತಿಷ್ಠಿತ ಮಿಷಿಗನ್‌ ವಿಶ್ವ ವಿದ್ಯಾಲಯದ ಮ್ಯೂಸಿಯಂ ರೂಪಾ ಅವರನ್ನು  Master Artist ಎಂದು ಗೌರವಿಸಿದೆ. ಸೈಂಟ್‌ ಲೂಯಿಸ್‌ ಡ್ಯಾನ್ಸ್ ಫೆಸ್ಟಿವಲ್‌ನಲ್ಲಿ ರೂಪಾ ಅವರ ಭಾರತೀಯ ಶಾಸ್ತ್ರೀಯ ನೃತ್ಯ ಕ್ಷೇತ್ರದಲ್ಲಿನ ರಚನಾತ್ಮಕ ಪ್ರತಿಭೆಗಾಗಿ ನೃತ್ಯ ರತ್ನಾಕರ ಎಂಬ ಬಿರುದಿತ್ತು ಅವರ ಸಾಧನೆಯನ್ನು ಗೌರವಿಸಲಾಗಿದೆ .

ಕಾರ್ಯಕ್ರಮಗಳಿಂದ ಸಹಾಯನಿಧಿ ಸಂಗ್ರಹ :

ಸಮಾಜದಿಂದ ಪಡೆದುಕೊಂಡದ್ದನ್ನು ಸಮಾಜಕ್ಕೆ ಕಿಂಚಿತ್ತಾದರೂ ವಾಪಸ್‌ ಕೊಟ್ಟಾಗಲೇ ಸಾಧನೆಗೊಂದು ಸಾರ್ಥಕತೆ ಎಂದು ಬಲವಾಗಿ ನಂಬಿದವರು ರೂಪಾ. ಭರತನ  ನಾಟ್ಯ ಶಾಸ್ತ್ರದ ಪ್ರಖಂಡ ಪಂಡಿತರಾದ ಸ್ವಾಮಿ ದಯಾನಂದ ಸರಸ್ವತಿಯವರು ರೂಪಾ ಅವರ ದಕ್ಷತೆ, ರಂಗ ನಿರ್ವಹಣೆ ಮತ್ತು ಸುಂದರ ನೃತ್ಯ ಸಂಯೋಜನೆ, ವಿದ್ವತ್ತನ್ನು ಪ್ರಶಂಸಿಸಿ ಅವರನ್ನು ಗೌರವಿಸಿ AIM For Sevaa ಅಭಿಯಾನದಲ್ಲಿ ತೊಡಗಿಕೊಳ್ಳುವ ಅವಕಾಶ ನೀಡಿದ್ದಾರೆ. ರೂಪಾ ಅವರು ಈ ಯೋಜನೆಯಡಿಯಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿ ಕೊಂಡು ಹಲವಾರು ಸಂಸ್ಥೆಗಳಿಗೆ ತಮ್ಮ ಶಾಲೆಯನೃತ್ಯ ಕಾರ್ಯಕ್ರಮಗಳಿಂದ ಸಹಾಯ ನಿಧಿ ಸಂಗ್ರಹಿಸಲು ನೆರವಾಗಿದ್ದಾರೆ .

ದೇವರ ಕೃಪೆಯಿಂದ ಇಷ್ಟೆಲ್ಲ ಸಾಧನೆ ಮಾಡಲು ಸಾಧ್ಯವಾಯಿತು ಎನ್ನುವ ರೂಪಾ ಶ್ಯಾಮಸುಂದರ್‌ ಅವರು, ತಮ್ಮ ಇಂದಿನ ಏಳಿಗೆಗೆ ಕಾರಣರಾದ ಗುರುಗಳು, ತಂದೆ, ತಾಯಿ, ಪತಿ, ಮಕ್ಕಳು, ಸ್ನೇಹಿತರು, ಶಿಷ್ಯರು, ಅಭಿಮಾನಿಗಳನ್ನು ಕೃತಜ್ಞತೆಯಿಂದ ಸ್ಮರಿಸುತ್ತ, ಅವರ ಪ್ರೋತ್ಸಾಹಕ್ಕೆ ಸದಾ ಅಭಾರಿ ಎಂದು ವಿನಯದಿಂದ ನುಡಿಯುತ್ತಾರೆ.

ಒಟ್ಟಿನಲ್ಲಿ ಮಿಷಿಗನ್‌ನ ಭರತನಾಟ್ಯ ಜಗತ್ತಿನಲ್ಲಿ ಧ್ರುವ ನಕ್ಷತ್ರದಂತೆ ಹೊಳೆಯುತ್ತಿರುವ ರೂಪಾ ಶ್ಯಾಮಸುಂದರ್‌, ಭಾರತೀಯ ಪರಂಪರೆ, ಭರತನ ನಾಟ್ಯ ಶಾಸ್ತ್ರ ಕಲಾ ಪರಂಪರೆಗಳ ಶುದ್ಧತೆಯನ್ನು ಕಾಪಿಡುವ ಜವಾಬ್ದಾರಿಗಳನ್ನು ಹೊತ್ತು , ಅದನ್ನು ವ್ರತದಂತೆ ಪಾಲಿಸುತ್ತಿರುವ ಕನ್ನಡದ ಪ್ರತಿಭಾವಂತ ಹೆಣ್ಣು ಮಗಳು.

 

– ಡಾ| ಡಿ. ಮಂಗಳಾ ಪ್ರಿಯದರ್ಶಿನಿ, ಲೇಖಕಿ , ವಿಮರ್ಶಕಿ

Advertisement

Udayavani is now on Telegram. Click here to join our channel and stay updated with the latest news.

Next