ಲಂಡನ್/ಹೊಸದಿಲ್ಲಿ: “ದಮ್ಮಯ್ಯ. ನನ್ನನ್ನು ನಂಬಿ. ನೂರಕ್ಕೆ ನೂರರಷ್ಟು ಸಾಲ ಮರು ಪಾವತಿ ಮಾಡುವೆ. ದಯವಿಟ್ಟು ಸ್ವೀಕರಿಸಿ’ ಹೀಗೆಂದು ಗೋಗರೆದದ್ದು ಉದ್ಯಮಿ ವಿಜಯ ಮಲ್ಯ. ದುಬಾೖಯಿಂದ ಬಹುಕೋಟಿ ಕಾಪ್ಟರ್ ಹಗರಣದ ಮಧ್ಯವರ್ತಿ ಕ್ರಿಶ್ಚಿಯನ್ ಮೈಕಲ್ನನ್ನು ಭಾರತಕ್ಕೆ ಗಡೀಪಾರು ಮಾಡಿಸುವಲ್ಲಿ ಮೋದಿ ಸರಕಾರ ಯಶಸ್ವಿಯಾದ ಬೆನ್ನಲ್ಲೇ ಲಂಡನ್ನಲ್ಲಿರುವ ಮಲ್ಯ ಬುಧವಾರ ಸರಣಿ ಟ್ವೀಟ್ ಮಾಡಿದ್ದಾರೆ. ಮುಂದಿನ ಸೋಮವಾರ ವೆಸ್ಟ್ಮಿನಿಸ್ಟರ್ ಕೋರ್ಟ್ (ಡಿ. 10)ರಂದು ಮಲ್ಯರನ್ನು ಗಡೀಪಾರು ಮಾಡಬೇಕೇ ಬೇಡವೇ ಎಂಬ ಬಗ್ಗೆ ಲಂಡನ್ ಕೋರ್ಟ್ ತೀರ್ಪು ನೀಡಲಿರುವಂತೆಯೇ ಬ್ಯಾಂಕ್ಗಳಿಗೆ 9 ಸಾವಿರ ಕೋಟಿ ರೂ. ವಂಚಿಸಿರುವ ಉದ್ಯಮಿ ಹೊಸರಾಗ ಹಾಡಿದ್ದಾರೆ.
ಸರಣಿ ಟ್ವೀಟ್ನಲ್ಲಿ ತಮ್ಮ ನೇತೃತ್ವದ
ಕಿಂಗ್ಫಿಶರ್ ಏರ್ಲೈನ್ಸ್ ಯಾವ ಕಾರಣಕ್ಕಾಗಿ ನಷ್ಟ ಅನುಭವಿಸಿತು ಎಂಬುದನ್ನು ಬರೆದುಕೊಂಡಿದ್ದಾರೆ. “ವೈಮಾನಿಕ ಇಂಧನ ದುಬಾರಿ ಯಾಗಿದ್ದರಿಂದ ಸಂಸ್ಥೆ ಸಂಕಷ್ಟಕ್ಕೆ ಈಡಾ ಯಿತು. ಇತರ ಸಂಸ್ಥೆಗಳೂ ಅದೇ ದಾರಿಯಲ್ಲಿದ್ದವು. ಆದರೆ ಈ ಪೈಕಿ ಹೆಚ್ಚು ತೊಂದರೆಗೆ ಒಳಗಾಗಿರುವುದು ನಮ್ಮ ಸಂಸ್ಥೆ. ಪ್ರತಿ ಬ್ಯಾರೆಲ್ಗೆ 140 ಅಮೆರಿಕನ್ ಡಾಲರ್ ನೀಡುವ ಪರಿಸ್ಥಿತಿ ಎದುರಾಗಿತ್ತು. ಬ್ಯಾಂಕ್ನಿಂದ ಪಡೆದ ಹಣ ಅದಕ್ಕೇ ನೀಡಲಾಯಿತು’ ಎಂದು ಬರೆದುಕೊಂಡಿದ್ದಾರೆ.
“ಈಗಾಗಲೇ ನಾನು ನೂರಕ್ಕೆ ನೂರು ಸಾಲ ಮರು ಪಾವತಿ ಮಾಡುವುದಾಗಿ ಹೇಳಿದ್ದೇನೆ. ದಯವಿಟ್ಟು ಸ್ವೀಕರಿಸಿ’ ಎಂದಿರುವ ಅವರು, “ತಮ್ಮ ಒಡೆತನದ ಮದ್ಯದ ಸಂಸ್ಥೆ ಯುನೈಟೆಡ್ ಬ್ರೂವರೀಸ್ ಸರಕಾರಗಳ ಬೊಕ್ಕಸಕ್ಕೆ ಸರಿಯಾದ ರೀತಿಯಲ್ಲೇ ತೆರಿಗೆ ಪಾವತಿ ಮಾಡುತ್ತಿದೆ’ ಎಂಬ ಸಮರ್ಥನೆಯನ್ನೂ ನೀಡಿದ್ದಾರೆ.