Advertisement

Sullia ಶ್ರೀರಾಮನ ಚಿತ್ರವಿರುವ ಬ್ಯಾನರ್‌ಗೆ ಹಾನಿ; ಆರೋಪಿಗಳ ಬಂಧನಕ್ಕೆ ಸಂಸದ, ಶಾಸಕರ ಆಗ್ರಹ

01:09 AM Jan 07, 2024 | Team Udayavani |

ಸುಳ್ಯ: ಸುಳ್ಯ ನಗರದ ಖಾಸಗಿ ಬಸ್‌ ನಿಲ್ದಾಣದ ಬಳಿ ಮುಖ್ಯ ರಸ್ತೆಯ ಬದಿ ಸುಳ್ಯ ಜಾತ್ರೋತ್ಸವ ಹಾಗೂ ಅಯೋಧ್ಯೆ ಶ್ರೀರಾಮ ಮಂದಿರದ ಲೋಕಾರ್ಪಣೆ ಮತ್ತು ಸುಳ್ಯ ತಾಲೂಕು ಅಟೋ ರಿಕ್ಷಾ ಚಾಲಕರ ಸಂಘ ಬಿ.ಎಂ.ಎಸ್‌.ನ ಬೆಳ್ಳಿಹಬ್ಬ ಸಂಭ್ರಮ ಕಾರ್ಯಕ್ರಮಕ್ಕೆ ಶುಭಕೋರಿ ಅಟೋ ಚಾಲಕರು ಅಳವಡಿಸಿದ್ದ ಬ್ಯಾನರ್‌ನ ಮಧ್ಯಭಾಗದಲ್ಲಿ ಶ್ರೀರಾಮನ ಫೋಟೋ ಇರುವ ಭಾಗವನ್ನು ಹರಿದ ಘಟನೆ ನಡೆದಿದೆ.

Advertisement

ಜ. 6ರಂದು ಘಟನೆ ಬೆಳಕಿಗೆ ಬಂದಿದೆ. ಜ. 5ರಂದು ರಾತ್ರಿ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಕಳೆದ ಮೂರು ದಿನಗಳ ಹಿಂದೆ ಬ್ಯಾನರ್‌ ಅಳವಡಿಸಲಾಗಿತ್ತು. ಘಟನಾ ಸ್ಥಳಕ್ಕೆ ಸುಳ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ರಿಕ್ಷಾ ಚಾಲಕರು, ಸಂಘಟನೆಯ ಪ್ರಮುಖರು ಜಮಾಯಿಸಿದ್ದರು. ಕೃತ್ಯ ಎಸಗಿದ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಲಾಯಿತು.

ಸಂಸದ, ಶಾಸಕರ ಖಂಡನೆ
ಸುಳ್ಯದಲ್ಲಿ ಬ್ಯಾನರ್‌ ಹರಿದಿರುವ ಘಟನೆಯನ್ನು ಸಂಸದ ನಳಿನ್‌ ಕುಮಾರ್‌ ಕಟೀಲು ಮತ್ತು ಶಾಸಕಿ ಭಾಗೀರಥಿ ಮುರುಳ್ಯ ಅವರು ಖಂಡಿಸಿದ್ದಾರೆ. ನಳಿನ್‌ ಅವರು ಈ ಬಗ್ಗೆ ದ.ಕ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯವರ ಜತೆ ಮಾತನಾಡಿ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿದ್ದಾರೆ. ಸುಳ್ಯ ವೃತ್ತ ನಿರೀಕ್ಷಕರ ಜತೆ ಮುರುಳ್ಯ ಅವರು ಮಾತನಾಡಿ ಸಮಾಜದಲ್ಲಿ ಶಾಂತಿ ಕದಡಲು ಯತ್ನಿಸುತ್ತಿರುವ ಶಕ್ತಿಗಳನ್ನು ನಿಗ್ರಹಿಸಿ ಆರೋಪಿಗಳನ್ನು ತಕ್ಷಣ ಪತ್ತೆ ಹಚ್ಚಿ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next