Advertisement

Elephant Corridor: ಅಭಿವೃದ್ಧಿ ಯೋಜನೆಗಳಿಂದ ಆನೆ ಕಾರಿಡಾರ್‌ಗೆ ಹಾನಿ

12:49 AM Jul 07, 2024 | Team Udayavani |

ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ 75ರ ವಿಸ್ತರಣೆ ಕಾಮಗಾರಿ ಹಾಗೂ ಜಲ ವಿದ್ಯುತ್‌ ಯೋಜನೆಗಳು ಆನೆ ಕಾರಿಡಾರನ್ನು ಆಪೋಶನ ಮಾಡು ತ್ತಿದ್ದು, ಇದರಿಂದಾಗಿ ಕಾಡಾನೆಗಳು ವಸತಿ ಪ್ರದೇಶಕ್ಕೆ ಬರುತ್ತಿವೆ ಎಂಬ ಆರೋಪವಿದೆ.

Advertisement

ಎರಡು ವರ್ಷಗಳಿಂದ ಕಾಡಾನೆ ಸಮಸ್ಯೆ ಎಲ್ಲೆಡೆ ಹೆಚ್ಚುತ್ತಿದ್ದು, ಇದು ಅಭಿವೃದ್ಧಿ ಯೋಜನೆಗಳ ಅಡ್ಡ ಪರಿಣಾಮ ಎನ್ನಲಾಗುತ್ತಿದೆ.

ಕಳೆದ ವರ್ಷ ಆನೆ ದಾಳಿಗೆ ನೆಲ್ಯಾಡಿ ಯಲ್ಲಿ ಇಬ್ಬರು ಹಾಗೂ ಶಿರಾಡಿಯಲ್ಲಿ ಓರ್ವ ಮೃತಪಟ್ಟಿದ್ದರು. ಈ ನಡುವೆ ಪಶ್ಚಿಮ ಘಟ್ಟ ತಪ್ಪಲಿನ ಕೃಷಿ ತೋಟಗಳಿಗೂ ಆನೆಗಳ ಹಾವಳಿ ವಿಪರೀತವಾಗಿವೆ.

ಆನೆ ಕಾರಿಡಾರ್‌ ನಾಶ ಹೇಗೆ?
ಮಂಗಳೂರು – ಬೆಂಗಳೂರು ಸಂಪರ್ಕಿಸುವ ಪ್ರಮುಖ ರಾಷ್ಟ್ರೀಯ ಹೆದ್ದಾರಿ 75 ಬಿ.ಸಿ.ರೋಡ್‌-ಗುಂಡ್ಯ ವರೆಗೆ ನಾಲ್ಕು ಪಥಗಳ ವಿಸ್ತರಣೆ ಕಾಮ ಗಾರಿ ನಡೆಯುತ್ತಿದೆ. ಇನ್ನೊಂದೆಡೆ ಶಿರಾಡಿ ಘಾಟಿ ಪೂರ್ತಿ ಜಲವಿದ್ಯುತ್‌ ಯೋಜನೆ ಗಳು ಆವರಿಸಿದೆ. ಇವೆರಡು ಯೋಜನೆ ಗಳು ಆನೆಗಳು ಸಂಚರಿಸುವ ಸಹಜ ದಾರಿಯನ್ನು ಹೊಸಕಿ ಹಾಕಿವೆ ಎಂಬುದು ಪರಿಸರ ಸಂಘಟನೆಗಳ ಆರೋಪ.

ಕಾಂಕ್ರೀಟೀಕರಣ ಕಾಮಗಾರಿ ವೇಳೆ ಗುಡ್ಡ ಕುಸಿಯುವ ಭೀತಿ ಹಿನ್ನೆಲೆಯಲ್ಲಿ ಶಿರಾಡಿ ಬಳಿಯ ಕೊಡ್ಯಕಲ್ಲು, ಉದನೆ ಬಳಿ ಪರರೊಟ್ಟಿ, ರೆಖ್ಯದ ನೇಲ್ಯಡ್ಕ ಬಳಿ, ಲಾವತ್ತಡ್ಕ, ಪೆರಿಯಶಾಂತಿ ಸಹಿತ 15ಕ್ಕೂ ಅಧಿಕ ಕಡೆಗಳಲ್ಲಿ ಭಾರೀ ಎತ್ತರದ ಕಾಂಕ್ರೀಟ್‌ ತಡೆಗೋಡೆ ರಚಿಸಲಾಗಿದೆ. ಆನೆ ಕಾರಿಡಾರ್‌ನ ಈ ಪ್ರದೇಶಗಳಲ್ಲಿ ಮುಕ್ತ ಸಂಚಾರಕ್ಕೆ ಅಡ್ಡಿಯಾಗಿದೆ. ಈ ತಡೆಗೋಡೆಗಳನ್ನು ಹಾರಿ ಅಥವಾ ದಾಟಿ ಬರಲು ಆನೆಗಳಿಗೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಅವುಗಳು ಸಿಕ್ಕಸಿಕ್ಕಲ್ಲಿ ಸಂಚರಿಸುತ್ತವೆ ಎನ್ನಲಾಗುತ್ತಿದೆ.

Advertisement

ಜಲ ವಿದ್ಯುತ್‌ ಯೋಜನೆಗಳ ಕಂಟಕ
ರಾಷ್ಟ್ರೀಯ ಹೆದ್ದಾರಿ ಸಮೀಪವೇ ಗುಂಡ್ಯ ಹೊಳೆ, ಕೇಂಪು ಹೊಳೆಗಳು ಹೆಚ್ಚಾಗಿ ವರ್ಷಪೂರ್ತಿ ಹರಿಯುತ್ತಿರುತ್ತವೆ. ಶಿರಾಡಿ ಘಾಟಿಯುದ್ದಕ್ಕೂ ಆನೆಗಳು ಈ ಹೊಳೆಯನ್ನು ದಾಟಿಯೇ ಸಾಗುತ್ತಿರುತ್ತವೆ. ಆದರೆ ಜಲ ವಿದ್ಯುತ್‌ ಯೋಜನೆಗಳು ಆನೆಗಳ ದಾರಿಯನ್ನು ಮರೆ ಮಾಚಿವೆ.

ಜಲ ವಿದ್ಯುತ್‌ಗೆ ಅಣೆಕಟ್ಟು ನಿರ್ಮಿಸಿ ದರೆ ಕನಿಷ್ಠ 1 ಕಿ.ಮೀ. ದೂರದ ವರೆಗೂ ಹೊಳೆಯಲ್ಲಿ ನೀರು ಸಂಗ್ರಹ ವಾಗಿರುತ್ತದೆ. ಜತೆಗೆ ವಿದ್ಯುತ್‌ ಕಂಪೆನಿಗಳ ಗೇಟು, ಸದಾ ಉರಿಯುತ್ತಿರುವ ದೀಪ ಗಳಿಂದಾಗಿ ಬೇಸಗೆಯಲ್ಲೂ ಆನೆಗಳಿಗೆ ಹೊಳೆ ದಾಟಿ ಸಂಚರಿಸಲು ಆಗುತ್ತಿಲ್ಲ. ಪರ್ಯಾಯ ದಾರಿ ಹಾಗೂ ಆಹಾರವೂ ಸಿಗದೆ ಆನೆಗಳು ಸಹಜವಾಗಿ ನಾಡಿನತ್ತ ಮುಖ ಮಾಡುತ್ತಿವೆ ಎನ್ನುವುದು ಪರಿಸರ ಸಂಘಟನೆಗಳ ವಾದ.

ಹೆದ್ದಾರಿ ಹಾದು ಹೋಗುವ ಅಡ್ಡ ಹೊಳೆ, ಪೆರಿಯಶಾಂತಿಯ ಮಣ್ಣಗುಂಡಿ ಹಾಗೂ ಉದನೆಯಲ್ಲಿ ಆನೆ ಕಾರಿಡಾರ್‌ ನಿರ್ಮಿಸಲಾಗುತ್ತಿದೆ. ಅಂತಹ ಕಡೆಗಳಲ್ಲಿ ಹೆದ್ದಾರಿ ಯನ್ನು ಮೇಲ್ಸೇತುವೆ ಮಾದರಿ ಯಲ್ಲಿ ಎತ್ತರದಲ್ಲಿ ನಿರ್ಮಿಸಿದೆ. ಆದರೆ ಈ ಕಾರಿಡಾರ್‌ನಲ್ಲಿ ಆನೆಗಳು ಸಂಚರಿಸಬೇಕಾದರೆ ಬಹಳ ವರ್ಷ ಬೇಕು. ತಮ್ಮ ದಾರಿ ಬಿಟ್ಟು ಬದಲಿ ಕಾರಿಡಾರನ್ನು ಆನೆಗಳು ಸುಲಭದಲ್ಲಿ ಸ್ವೀಕರಿಸುವುದಿಲ್ಲ.

ಬೆಳ್ತಂಗಡಿ ತಾಲೂಕಿನ ಅವಣಾಲು, ದಿಡುಪೆ, ಮಿತ್ರಬಾಗಿಲು, ಬಂಡಾಡಿ, ನೆರಿಯಾ, ಚಾರ್ಮಾಡಿ, ಪುದುವೆಟ್ಟು, ಕಾಯರ್ತಡ್ಕ, ಅರಸಿನಮಕ್ಕೆ, ಶಿಶಿಲ, ಶಿಬಾಜೆ, ಕಡಬ ತಾಲೂಕಿನ ಕೊಲ್ಲಮೊಗ್ರು, ಅರಂತೋಡು, ಸಂಪಾಜೆ, ಅಲೆಟ್ಟಿ ಮುಂತಾದ ಅರಣ್ಯ ಗಡಿ ಭಾಗದಲ್ಲಿ ಕಂದಕ ತೋಡಿದರೆ ಮಾನವ ಹಾಗೂ ವನ್ಯಪ್ರಾಣಿ ಸಂಘರ್ಷ ತಪ್ಪಿಸಲು ಸಾಧ್ಯ ಎಂದು ತಜ್ಞರು ಹೇಳುತ್ತಿದ್ದಾರೆ.

ಸುಳ್ಯ ಕಡಬ ಬೆಳ್ತಂಗಡಿ ತಾಲೂಕುಗಳ ಅರಣ್ಯ ಪ್ರದೇಶದ ಪಶ್ಚಿಮ ಘಟ್ಟದ 24 ಗ್ರಾಮಗಳ 200 ಕಿ.ಮೀ. ವ್ಯಾಪ್ತಿಯಲ್ಲಿ ಕಂದಕವನ್ನು ತೋಡಲು ಏಕಕಾಲದ ಟೆಂಡರ್‌ ನೀಡಿದರೆ ಪ್ರಾಣಿಗಳ ರಕ್ಷಣೆಯ ಜತೆಗೆ ಕೃಷಿಕರಿಗೂ ಪ್ರಯೋಜನವಾದೀತು ಎಂದು ಮಲೆನಾಡು ಜನಹಿತ ರಕ್ಷಣ ವೇದಿಕೆ ಸಂಚಾಲಕ ಕಿಶೋರ ಶಿರಾಡಿ ತಿಳಿಸಿದ್ದಾರೆ.

ಕೃತಕ ಆನೆ ಕಾರಿಡಾರ್‌ ನಿರ್ಮಾಣ
ಆನೆಗಳ ಸಹಜ ಕಾರಿಡಾರ್‌ ನಾಶವಾದ ಹಿನ್ನೆಲೆಯಲ್ಲಿ ಹೆದ್ದಾರಿಯ ಕಾಮಗಾರಿ ನಿರ್ವಹಿಸುವ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌.ಎಚ್‌.ಐ.ಎ) ಮೂರ್ನಾಲ್ಕು ಕಡೆ ಕೃತಕವಾಗಿ ಆನೆ ಕಾರಿಡಾರ್‌ ನಿರ್ಮಿಸಿದೆ. ಆದರೆ ಆನೆಗಳು ಸಹಿತ ಇತರ ಕಾಡು ಪ್ರಾಣಿಗಳು ಅವುಗಳ ಮೂಲಕ ಸಾಗುತ್ತಿಲ್ಲ.

ಆನೆ ಕಾರಿಡಾರ್‌ ಕುರಿತಂತೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದೆ. ಅಲ್ಲದೆ ಅರಣ್ಯ ಪ್ರದೇಶದಿಂದ ಕೂಡಿದ ಹೆದ್ದಾರಿ 75ರ ಅಡ್ಡ ಹೊಳೆ ಬಳಿ ಅಂಡರ್‌ಪಾಸ್‌ ನಿರ್ಮಿಸ ಲಾಗಿದೆ. ಉದನೆ ಸಮೀಪ ಕನ್‌ವರ್ಟ್‌ (ಅಂಡರ್‌ಪಾಸ್‌ಗಿಂತ ಸ್ವಲ್ಪ ದೊಡ್ಡ ರಚನೆ) ರಚಿಸಲು ಹೆದ್ದಾರಿ ಗುತ್ತಿಗೆದಾರರಿಗೆ ಸೂಚಿಸಿದ್ದೆವು. ಆದರೆ ಅಲ್ಲಿ ಕಾಮಗಾರಿ ಪೂರ್ತಿಯಾಗಿದ್ದು, ಇನ್ನು ಅಸಾಧ್ಯವೆಂದು ತಿಳಿಸಿದ್ದಾರೆ. ಮಣ್ಣಗುಂಡಿ ಸಮೀಪ ಇನ್ನೊಂದು ಅಂಡರ್‌ಪಾಸ್‌ ನಿರ್ಮಿಸುವಂತೆ ಪ್ರಸ್ತಾವಿಸಿದ್ದು, ಗುತ್ತಿಗೆದಾರರು ಈ ತನಕ ಕಾಮಗಾರಿ ಆರಂಭಿಸಿಲ್ಲ. ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ.
– ಜಯಪ್ರಕಾಶ ಕೆ.ಕೆ., ವಲಯ ಅರಣ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next