Advertisement

Dakshina Kannada ಎಲ್ಲ ತಾಲೂಕುಗಳಲ್ಲೂ ಮಲತ್ಯಾಜ್ಯ ನಿರ್ವಹಣೆಗೆ ಘಟಕ

11:05 PM Nov 29, 2023 | Team Udayavani |

ಮಂಗಳೂರು: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಗ್ರಾಮೀಣ ಭಾಗದಲ್ಲಿ ನೈರ್ಮಲ್ಯ ನಿರ್ವಹಣೆಯ ಸುಧಾರಣೆಗೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಮಲತ್ಯಾಜ್ಯ ನಿರ್ವಹಣ ಘಟಕಗಳ ಸ್ಥಾಪನೆಗೆ ಮುಂದಾಗಿದೆ.

Advertisement

ಇದರ ಕುರಿತ ಪ್ರಾಯೋಗಿಕ ಯೋಜನೆ ಯಶಸ್ವಿಯಾಗಿದ್ದು, ಉಳ್ಳಾಲ, ಮಂಗಳೂರು, ಮೂಲ್ಕಿ ಮತ್ತು ಮೂಡುಬಿದಿರೆ ತಾಲೂಕಿನಲ್ಲಿ ಸ್ಥಳದ ಪರಿಶೀಲನೆ ಮತ್ತು ಭೌಗೋಳಿಕ ಸರ್ವೇ ಪ್ರಗತಿಯಲ್ಲಿದೆ. ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ, ಕಡಬ ತಾಲೂಕಿಗೆ ಸಂಬಂಧಿಸಿ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಿ, ರಾಜ್ಯಮಟ್ಟದ ತಾಂತ್ರಿಕ ಸಮಿತಿಯ ಅನುಮತಿ ಪಡೆಯಲಾಗಿದೆ. ರಾಜ್ಯ ಸರಕಾರದ ಅನುಮೋದನೆ ದೊರಕಬೇಕಿದೆ.

ಬಯಲು ಬಹಿರ್ದೆಸೆ ಮುಕ್ತ
ಎಂದು ಜಿಲ್ಲೆಯನ್ನು ಘೋಷಿಸಿದ್ದು, ಗ್ರಾಮೀಣ ಭಾಗದಲ್ಲಿ ನೈರ್ಮಲ್ಯ ಸುಸ್ಥಿರತೆ ಕಾಯ್ದುಕೊಳ್ಳಲು ಈ ಘಟಕಗಳು ಸಹಕರಿಸಲಿವೆ. ಮನೆಗಳು ಮಾತ್ರವಲ್ಲದೆ ಶಾಲೆಗಳು, ವಾಣಿಜ್ಯ ಕಟ್ಟಡಗಳ ಶೌಚಾಲಯದ ಗುಂಡಿ (ಪಿಟ್‌) ತುಂಬಿದ ಬಳಿಕ ಅದರ ಸಮಸ್ಯೆಯಾಗುತ್ತಿದೆ. ಕೆಲವು ಸಂಸ್ಥೆಗಳು ಸಕ್ಕಿಂಗ್‌ ಯಂತ್ರದ ಮೂಲಕ ತ್ಯಾಜ್ಯ ಸಂಗ್ರಹಿಸಿ, ನದಿ, ಕಾಲುವೆಗಳಿಗೆ ಹರಿಯಬಿಟ್ಟು ವಾತಾವರಣವನ್ನು ಕಲುಷಿತಗೊಳಿಸುವ ದೂರುಗಳೂ ಕೇಳಿಬರುತ್ತವೆ. ಇವುಗಳನ್ನು ತಡೆಯಲು ಆಯಾ ಗ್ರಾ.ಪಂ. ಮೂಲಕವೇ ತೆರವುಗೊಳಿಸಿ ಘಟಕಕ್ಕೆ ರವಾನಿಸಲಾಗುತ್ತದೆ.

ಪ್ರಾಯೋಗಿಕ ಘಟಕ ಯಶಸ್ವಿ
ಮಲತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ತಲಾ 3 ಕೆಎಲ್‌ಡಿ (3 ಸಾವಿರ ಲೀ.) ಸಾಮರ್ಥ್ಯದ ಘಟಕಗಳು ಬಂಟ್ವಾಳ ತಾಲೂಕಿನ ಗೋಳ್ತಮಜಲು (57.22 ಲಕ್ಷ ರೂ. ವೆಚ್ಚ) ಮತ್ತು ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ (79.22 ಲಕ್ಷ ರೂ. ವೆಚ್ಚ) ಕಾರ್ಯಾಚರಿಸುತ್ತಿವೆ. ಬಂಟ್ವಾಳದ 33 ಮತ್ತು ಬೆಳ್ತಂಗಡಿಯ 24 ಗ್ರಾ.ಪಂ.ಗಳ ಮಲತ್ಯಾಜ್ಯ ನಿರ್ವಹಿಸಲಾಗುತ್ತಿದೆ.

ಗೊಬ್ಬರವಾಗಿ ಪರಿವರ್ತನೆ
ಮಲತ್ಯಾಜ್ಯವನ್ನು ವಿವಿಧ ಹಂತಗಳಲ್ಲಿ ಸಂಸ್ಕರಿಸಿ, ರೊಚ್ಚು ಗೊಬ್ಬರವಾಗಿಸಲಾಗುತ್ತದೆ. ಇದನ್ನು ಕೃಷಿಗೆ ಸಾವಯವ ಗೊಬ್ಬರವಾಗಿ ಬಳಸುವಂತೆ ರೈತರನ್ನು ಪ್ರೇರೇಪಿಸಲಾಗುತ್ತಿದೆ. ನೀರನ್ನು ಶುದ್ಧೀಕರಿಸಿ ಗಿಡಗಳಿಗೆ ಮರು ಬಳಕೆ ಮಾಡಲಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.

Advertisement

ಮಲತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿ ಉಜಿರೆ ಮತ್ತು ಗೋಳ್ತಮಜಲಿನಲ್ಲಿ ನಿರ್ಮಿಸಲಾದ ಘಟಕಗಳು ಯಶಸ್ವಿಯಾಗಿ ಕಾರ್ಯಾಚರಿಸುತ್ತಿದೆ. ಇತರ ತಾಲೂಕು ವ್ಯಾಪ್ತಿಯಲ್ಲೂ ಘಟಕ ನಿರ್ಮಾಣಕ್ಕೆ ಯೋಜಿಸಲಾಗಿದೆ.
– ಡಾ| ಆನಂದ್‌ ಕೆ. ಸಿಇಒ, ದ.ಕ. ಜಿಲ್ಲೆ

-ಭರತ್‌ ಶೆಟ್ಟಿಗಾರ್‌

Advertisement

Udayavani is now on Telegram. Click here to join our channel and stay updated with the latest news.

Next