ಬೆಳಗಾವಿ: ಶಹಾಪುರದ ನಾಥ ಪೈ ವೃತ್ತದ ಬಳಿಯ ತಂಗುದಾಣ ಮುರಿದು ಬೀಳುವ ಸ್ಥಿತಿಯಲ್ಲಿದ್ದು, ಪ್ರಯಾಣಿಕರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಈ ಭಾಗದಲ್ಲಿ ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಂತೂ ಈ ಬಸ್ ನಿಲ್ದಾಣ ನೋಡಿ ಹಿಡಿಶಾಪ ಹಾಕುತ್ತಿದ್ದಾರೆ.
ಯಾವಾಗ ಮುರಿದು ಬೀಳುತ್ತದೆಯೋ ಗೊತ್ತಿಲ್ಲ. ನಿಲ್ದಾಣದೊಳಗಿನ ತಗಡಿನ ಭಾಗ ಅರ್ಧಕ್ಕೆ ಇಳಿದಿದ್ದು,ತಲೆಯ ಭಾಗಕ್ಕೆ ತಟ್ಟುತ್ತದೆ. ನಿತ್ಯ ಇಲ್ಲಿ ಬರುವ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಬಸ್ ಹತ್ತುವ ಧಾವಂತದಲ್ಲಿ ಬಂದ ಅನೇಕ ಪ್ರಯಾಣಿಕರು ಪೆಟ್ಟು ತಿಂದ ಉದಾಹರಣೆಗಳು ಇವೆ. ಸ್ಮಾರ್ಟ್ಸಿಟಿ ಎಂದು ಹೇಳಿ ಕೊಳ್ಳುವ ಅಧಿಕಾರಿಗಳು ಹಾಗೂ
ಜನಪ್ರತಿನಿಧಿಗಳು ಇಲ್ಲಿ ಸುವ್ಯವಸ್ಥಿತ ಸೌಲಭ್ಯಗಳನ್ನು ಒದಗಿಸುತ್ತಿಲ್ಲ. ಶಹಾಪುರದ ಈ ಪ್ರದೇಶದಲ್ಲಿ ನಿತ್ಯ ಸಾವಿರಾರು ಜನರು ಸಂಚರಿಸುತ್ತಾರೆ. ಮಳೆಗಾಲದಲ್ಲಿ ಹೆಚ್ಚಿನ ಪ್ರಯಾಣಿಒಕರು ಇಲ್ಲಿ ನಿಂತಿರುತ್ತಾರೆ. ದುರಾದೃಷ್ಟವಶಾತ್ ತಂಗುದಾಣ ಕುಸಿದು ಬಿದ್ದರೆ ಭಾರೀ ದುರಂತ ಸಂಭವಿಸುವುದರಲ್ಲಿ ಸಂದೇಹವೇ ಇಲ್ಲ ಎಂದು ಪ್ರಯಾಣಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಮಳೆಗಾಲ ಹಾಗೂ ಬೇಸಿಗೆ ಕಾಲದಲ್ಲಿ ಪ್ರಯಾಣಿಕರ ರಕ್ಷಣೆಗೆ ಇರುವ ಈ ತಂಗುದಾಣ ಕಳೆದ ಎರಡು ತಿಂಗಳ ಹಿಂದೆ ಸುರಿದ ಧಾರಾಕಾರ ಮಳೆಗೆ ಇಲ್ಲಿ ತಗಡಿನ ಪತ್ರೆಗಳು ಬಿದ್ದು, ಅನೇಕ ಅನಾಹುತಗಳು ಸಂಭಸಿದರೂ ಯಾವೊಬ್ಬ ಅಧಿಕಾರಿಗಳು ಇಲ್ಲರುವ ಸಮಸ್ಯೆಯತ್ತ ಗಮನ ಹರಿಸುತ್ತಿಲ್ಲ. ಶೀಘ್ರವೇ ಪ್ರಯಾಣಿಕರ ಹಿತದೃಷ್ಟಿಯಿಂದ ಸಂಬಂಧಪಟ್ಟ ಅಧಿಕಾರಿಗಳು ತಂಗುದಾಣ ದುರಸ್ಥಿಗೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.