Advertisement

D.K.Shivakumar:”ಕ್ಲೀನ್‌ ಕುಮಾರಸ್ವಾಮಿ’ ವಿರುದ್ಧ 50 ಡಿನೋಟಿಫಿಕೇಶನ್‌ ಪ್ರಕರಣ: ಡಿಕೆಶಿ

07:40 PM Aug 10, 2024 | Team Udayavani |

ಮೈಸೂರು: ಕುಮಾರಸ್ವಾಮಿ ಬಹಳ ಕ್ಲೀನ್‌ ಸ್ವಾಮಿಯಂತೆ. ನನಗೆ ಅವರ ವಿಚಾರ ಗೊತ್ತಿರಲಿಲ್ಲ. ಅವರ ವಿರುದ್ಧ ಸುಮಾರು 50 ಡಿನೋಟಿಫಿಕೇಶನ್‌ ಪ್ರಕರಣಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಲ್ಲವನ್ನೂ ಹೊರಗೆ ತರುತ್ತೇನೆ. ಎಲ್ಲ ಬಿಚ್ಚಿಡುತ್ತೇನೆ ಎಂದು ಡಿ.ಕೆ.ಶಿವಕುಮಾರ್‌ ಗುಡುಗಿದರು

Advertisement

ಜನಾಂದೋಲನ ಸಮಾವೇಶದಲ್ಲಿ ಮಾತನಾಡಿ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ಧಾಳಿಯನ್ನೇ ನಡೆಸಿದರು. ಕುಮಾರಸ್ವಾಮಿ ಅವರ ಪ್ರಕರಣದಲ್ಲಿ ವಿಚಾರಣೆ ನಡೆಸಲು ಲೋಕಾಯುಕ್ತ ಇಲಾಖೆಯವರು ರಾಜ್ಯಪಾಲರಿಗೂ ಪತ್ರ ಬರೆದಿದ್ದಾರಂತೆ. ಆದರೆ ಕುಮಾರಸ್ವಾಮಿ ಯೂಟರ್ನ್ ಮಾಡಿಕೊಂಡು ಈಗ ಬಿಜೆಪಿ ಮೊರೆ ಹೋಗಿದ್ದಾರೆ. ಅವರು ಪ್ರಜ್ವಲ್‌ ಪೆನ್‌ ಡ್ರೈವ್‌ ಪ್ರಕರಣದಲ್ಲಿ ಮೊದಲು ನನ್ನ ಮೇಲೆ ಆರೋಪ ಮಾಡಿದರು. ನಂತರ ಪ್ರೀತಂಗೌಡರ ಮೇಲೆ ಆರೋಪ ಮಾಡಿದ್ದಾರೆ. ಈ ಹಿಂದೆ ಯಡಿಯೂರಪ್ಪನವರಿಗೆ ಅಧಿಕಾರ ನೀಡದೇ ಬೆನ್ನಿಗೆ ಚೂರಿ ಹಾಕಿದವರು ಯಾರು? ಕುಮಾರಸ್ವಾಮಿಯೇ ಹೊರತು ಕಾಂಗ್ರೆಸಿಗರಲ್ಲ ಎಂದರು.

ಕುಮಾರಸ್ವಾಮಿ ಜೆಡಿಎಸ್‌ ನಾಯಕರನ್ನು ಪಕ್ಷದಿಂದ ಹೊರಹಾಕಿದ್ದಾರೆ. ಇದು ಜನತಾದಳದ ಇತಿಹಾಸ. ಕೊನೆಗೆ ತನ್ನ ಮಗನಿಗೆ ರಾಜಕೀಯ ಸ್ಥಾನಮಾನ ಸಿಗುತ್ತಿಲ್ಲ ಎಂದು ಅಣ್ಣನ ಮಗನ ವಿರುದ್ಧವೇ ಪಿತೂರಿ ಮಾಡಿ ಅವನ ಮೇಲೂ ಕೇಸ್‌ ದಾಖಲಾಗುವಂತೆ ಮಾಡಿದ್ದಾರೆ. ಅಂತಹವರು ಸಿದ್ದರಾಮಯ್ಯ ಹಾಗೂ ನನ್ನನ್ನು ಬಿಡುತ್ತಾರಾ? ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ವಾಗ್ಬಾಣ ಬಿಟ್ಟ ಡಿ.ಕೆ.ಶಿವಕುಮಾರ್‌, ನಿಮ್ಮ ತಂದೆಯವರಾದ ಯಡಿಯೂರಪ್ಪ ಅವರು ಎರಡು ಸಾರಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇಕೆ? ಎನ್ನುವುದನ್ನು ಲೆಕ್ಕ ಕೊಡು. ನಾಳೆ ನೀನು ಮೈಸೂರಿಗೆ ಬಂದು ಸಭೆ ಮಾಡುವಾಗ ಲಕ್ಷ್ಮೀ ವಿಲಾಸ್‌ ಬ್ಯಾಂಕ್‌ ನಿಂದ ವಿದೇಶಕ್ಕೆ ಆರ್‌ಟಿಜಿಎಸ್‌ ಮೂಲಕ ಹಣ ಸಂದಾಯ ಮಾಡಿದ್ದೀಯಲ್ಲಾ, ಅದು ಯಾಕೆ? ನಿಮ್ಮ ತಂದೆ ಕಣ್ಣೀರು ಹಾಕಿದ್ದು ಏಕೆ? ಎನ್ನುವುದನ್ನು ವಿವರಿಸು. ಇಲ್ಲಿ ಯಾರು ರಾಜೀನಾಮೆ ನೀಡಬೇಕು ಎಂದು ಕಾಲ ತೀರ್ಮಾನ ಮಾಡುತ್ತದೆ ಎಂದು ಏಕವಚನದಲ್ಲೇ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next