Advertisement

Politics: ಡಿ.ಕೆ.ಶಿ. ವಿರುದ್ಧ ಕುಮಾರಸ್ವಾಮಿ ಏಕವಚನದಲ್ಲೇ ವಾಗ್ಧಾಳಿ

11:13 PM Nov 19, 2023 | Team Udayavani |

ಚಿಕ್ಕಮಗಳೂರು, ನ. 19: ಟೆಂಟಲ್ಲಿ ಅಶ್ಲೀಲ ಚಿತ್ರ ತೋರಿಸಿ ಜೀವನ ಮಾಡಿಕೊಂಡು ಬಂದ ವನು. ಆ ಮನಸ್ಥಿತಿಯ ಅವನಿಗೆ ಇನ್ನೇನು
ಬರುತ್ತದೆ ಎಂದು ಎಚ್‌.ಡಿ. ಕುಮಾರ ಸ್ವಾಮಿ ಅವರು ಡಿಸಿಎಂ ಡಿ.ಕೆ.ಶಿವ ಕುಮಾರ್‌ ವಿರುದ್ಧ ಏಕವಚನದಲ್ಲೇ ವಾಗ್ಧಾಳಿ ನಡೆಸಿದರು.
ಜೆಡಿಎಸ್‌ ಕಾರ್ಯಕರ್ತರು ಫ್ಲೆಕ್ಸ್‌ ಹಾಕುತ್ತಾರೆಂಬ ಹೇಳಿಕೆಗೆ ರವಿವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತ ನಾಡಿದ ಅವರು, ದೊಡ್ಡ ಆಲದ ಹಳ್ಳಿಯ ಸಾತನೂರಿನಲ್ಲಿ ಎರಡು ಟೆಂಟ್‌ ಇತ್ತಲ್ಲಾ; ಅಲ್ಲಿ ಏನು ತೋರಿಸುತ್ತಿದ್ದ ಎಂದು ಪ್ರಶ್ನಿಸಿದರು.
ನಾನು ದತ್ತಮಾಲೆ ಹಾಕುವ
ಸಮಯ ಬಂದರೆ ದತ್ತಮಾಲೆ ಯನ್ನೂ ಹಾಕುತ್ತೇನೆ. ಅದು ಕಾನೂನು ಬಾಹಿರವೇನಲ್ಲ. ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಕಾನೂನಾತ್ಮಕವಾಗಿ ಏನು ಬೇಕಾ ದರೂ ಮಾಡುತ್ತೇನೆ. ಜಾತ್ಯತೀತ ಅಂದರೆ ಏನು? ಸ್ಪೀಕರ್‌ ಖಾದರ್‌ ಬಗ್ಗೆ ಸಚಿವರೊಬ್ಬರು ನೀಡಿರುವ ಹೇಳಿಕೆಯಾ? ಜಾತ್ಯತೀತತೆ ಬಗ್ಗೆ ಚರ್ಚಿಸಲು ಕಾಂಗ್ರೆಸ್‌ಗೆ ಯಾವ ಯೋಗ್ಯತೆಯೂ ಇಲ್ಲ ಎಂದರು.

Advertisement

ಕುಮಾರಸ್ವಾಮಿ ಮಾನಸಿಕ ಸ್ಥಿಮಿತ ಕಳೆದುಕೊಂಡಂತಿದೆ: ಡಿಕೆಶಿ
ಬೆಂಗಳೂರು, ನ. 19: ಬಹುಶಃ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸ್ಥಿಮಿತ ಕಳೆದುಕೊಂಡಿರಬೇಕು. ಹಾಗಾಗಿ ಬೇಕಾಬಿಟ್ಟಿ ಹೇಳಿಕೆ ನೀಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿರುಗೇಟು ನೀಡಿದರು.
ಕೆಪಿಸಿಸಿ ಕಚೇರಿಯಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ನೀಲಿ ಚಿತ್ರಗಳನ್ನು ಪ್ರದರ್ಶನ ಮಾಡುತ್ತಿದ್ದೆ ಎಂದು ಕುಮಾರಣ್ಣ ಆರೋಪ ಮಾಡಿದ್ದಾರೆ. ನಾನು ಇಂದಿರಾ ಗಾಂಧಿ ಹೆಸರಿನಲ್ಲಿ ಟೂರಿಂಗ್‌ ಟಾಕೀಸ್‌ಗಳನ್ನು ಇಟ್ಟಿದ್ದೆ. ಒಂದಲ್ಲ ಮೂರ್ನಾಲ್ಕು ಕಡೆ ಟೆಂಟ್‌ಗಳನ್ನು ಇಟ್ಟಿದ್ದೆ. ದೊಡ್ಡಆಲಹಳ್ಳಿ, ಹಾರೋಬೆಲೆ, ಕೋಡಿಹಳ್ಳಿಯಲ್ಲಿ ನಡೆಸುತ್ತಿದ್ದೆ. ಹುಣಸೇಹಳ್ಳಿಯಲ್ಲಿ ಈಗಲೂ ಟೆಂಟ್‌ ಇದೆ. ಈ ಊರುಗಳಿಗೆ ಹೋಗಿ ಮಾಧ್ಯಮದವರೇ ಸಮೀಕ್ಷೆ ನಡೆಸಿ, ನಾನು ಯಾವ ಚಿತ್ರಗಳ ಪ್ರದರ್ಶನ ಮಾಡಿಸುತ್ತಿದ್ದೆ ಎಂಬುದನ್ನು ಜನರಿಂದ ಕೇಳಿ ತಿಳಿದುಕೊಂಡು ಕುಮಾರಸ್ವಾಮಿಗೆ ತಿಳಿಸಿ ಎಂದರು.
ಕುಮಾರಸ್ವಾಮಿ ಪದೇಪದೆ ನಿಮ್ಮ ಮೇಲೆ ಸರಣಿ ಆರೋಪಗಳನ್ನು ಮಾಡುತ್ತಿರುವುದರ ಹಿಂದಿನ ಕಾರಣವೇನು ಎಂದು ಕೇಳಿದಾಗ, ಕುಮಾರಸ್ವಾಮಿ ದೊಡ್ಡವರು, ಏನೇ ಹೇಳಿದರೂ ನಾವು ವೈಯಕ್ತಿಕವಾಗಿ ತೆಗೆದುಕೊಳ್ಳುವುದಿಲ್ಲ. ಅವರಂತೆ ನಾನು ಏಕವಚನ ಬಳಸುವುದಿಲ್ಲ. ಅದು ಅವರ ಸಂಸ್ಕೃತಿ. ಅವರು ಕುಳಿತಿದ್ದ ಸ್ಥಾನ ದೊಡ್ಡದು, ಅದಕ್ಕೆ ಅವರಿಗೆ ಗೌರವ ಕೊಡುತ್ತೇನೆ ಎಂದರು.

ಸಿಎಸ್‌ಆರ್‌ ಅಂದ್ರೆ ಕರಪ್ಷನ್‌ ಸನ್‌
ಆಫ್ ಸಿದ್ದರಾಮಯ್ಯ: ಎಚ್‌ಡಿಕೆ

ಬೆಂಗಳೂರು, ನ. 19: ನೀವು ಮತ್ತು ನಿಮ್ಮ ಮಗ ಫೋನ್‌ನಲ್ಲಿ ನಡೆಸಿರುವ ಸಂಭಾಷಣೆ ವರ್ಗಾವಣೆ ದಂಧೆ ಎಂಬುದು ಸತ್ಯ ಎಂದು ಮುಖ್ಯಮಂತ್ರಿಗೆ ಹೇಳಿರುವ ಮಾಜಿ ಸಿಎಂ ಕುಮಾರಸ್ವಾಮಿ, ಸಿಎಸ್‌ಆರ್‌ ಎಂದರೆ ಕರಪ್ಷನ್‌ ಸನ್‌ ಆಫ್ ಸಿದ್ದರಾಮಯ್ಯ ಎಂದು ವ್ಯಾಖ್ಯಾನಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಅವರು, ನಿಮ್ಮ ಮಗ ಡಾ| ಯತೀಂದ್ರ ಅವರು ಮಾತನಾಡಿದ ಆರ್‌.ಮಹದೇವು ಅವರಿಗೂ ವರುಣ ಕ್ಷೇತ್ರ, ಶಿಕ್ಷಣ ಇಲಾಖೆ ಹಾಗೂ ಸಿಎಸ್‌ ಬಗ್ಗೆ ಅವರಿಗೆ ಸಂಬಂಧವಿಲ್ಲ. ಸಿಎಂ ಸಚಿವಾಲಯದ ಅಧಿಕಾರಿಗಳ ಕರ್ತವ್ಯ ಹಂಚಿಕೆ ಪಟ್ಟಿ ಪ್ರಕಾರ ವಿಶೇಷ ಕರ್ತವ್ಯಾಧಿಕಾರಿ ಆರ್‌.ಮಹದೇವುಗೆ ಶಿಕ್ಷಣ ಇಲಾಖೆ ಹೊಣೆ ಇಲ್ಲ. ಅದಿರುವುದು ಜಂಟಿ ಕಾರ್ಯದರ್ಶಿ ಎಂ.ರಾಮಯ್ಯಗೆ. ವರುಣಾ ಹೊಣೆ ಇನ್ನೊಬ್ಬ ಕೆ.ಎನ್‌. ವಿಜಯ್‌ ಅವರದ್ದು. ನಿಮ್ಮ ಮಗ ಶಿಕ್ಷಣದ ಕುರಿತು ಜಂಟಿ ಕಾರ್ಯದರ್ಶಿ ರಾಮಯ್ಯ ಜತೆಗಾಗಲೀ, ವರುಣಾ ಬಗ್ಗೆ ಕೆ.ಎನ್‌. ವಿಜಯ್‌ ಜತೆಗಾಗಲೀ ಮಾತನಾಡದೆ ಮಹದೇವು ಜತೆಗೆ ಮಾತಾಡಿದ್ದೇಕೆ? ವರುಣಾ ಕ್ಷೇತ್ರವನ್ನು ನಿಮ್ಮ ಮಗನಿಗೆ ಹೊರಗುತ್ತಿಗೆ ಕೊಟ್ಟಿದ್ದೀರಾ ಎಂದು ಪ್ರಶ್ನಿಸಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next