Advertisement

ಶಾಲಾ ಮಕ್ಕಳ ಸೌಲಭ್ಯದ ಯೋಜನೆಗೂ ಕತ್ತರಿ?

12:35 PM Apr 11, 2020 | Suhan S |

ಬೆಂಗಳೂರು: ಕೋವಿಡ್ 19 ಭೀತಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮಕ್ಕಳ ಸೌಲಭ್ಯದ ಮೇಲೂ ಕರಿಛಾಯೆ ಮೂಡಿಸುವ ಲಕ್ಷಣ ಗೋಚರವಾಗುತ್ತಿದೆ.

Advertisement

ಸರ್ಕಾರಿ ಶಾಲೆಯ ಒಂದರಿಂದ 10ನೇ ತರಗತಿಯ 40 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಸರ್ಕಾರದಿಂದ ಸಮವಸ್ತ್ರ, ಪಠ್ಯ ಪುಸ್ತಕ, ಬಿಸಿಯೂಟ, ಹಾಲು, ಸೈಕಲ್‌ ಸಹಿತವಾಗಿ ಅನೇಕ ಸೌಲಭ್ಯ ಉಚಿತವಾಗಿ ನೀಡಲಾಗುತ್ತಿದೆ. ಇದಲ್ಲದೆ, ಖಾಸಗಿ ಶಾಲೆಯಲ್ಲಿ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಎ) ಅಡಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು 6 ಲಕ್ಷ ವಿದ್ಯಾರ್ಥಿಗಳ ಶುಲ್ಕ ಮರುಪಾವತಿಯೂ ಸರ್ಕಾರವೇ ಮಾಡುತ್ತಿದೆ.ಇದರಲ್ಲಿ ಕೆಲವೊಂದು ಯೋಜನೆಗೆ ಕೇಂದ್ರ ಸರ್ಕಾರದಿಂದ ಅನುದಾನ ಬರುತ್ತಿತ್ತು. ಇನ್ನು ಕೆಲವು ಯೋಜನೆಗೆ ರಾಜ್ಯ ಸರ್ಕಾರವೇ ಅನುದಾನ ಭರಿಸುತ್ತಿತ್ತು. ಮತ್ತೆ ಕೆಲವು ಯೋಜನೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸಲಾಗಿದೆ.

2019-20ನೇ ಸಾಲಿನಲ್ಲಿ ಶಾಲಾ ಮಕ್ಕಳಿಗೆ ಎರಡನೇ ಜೊತೆ ಸಮವಸ್ತ್ರ ವಿತರಿಸಿಲ್ಲ. ಆ ಅನುದಾನವನ್ನೇ ಮುಂದಿನ ವರ್ಷದ ಸಮವಸ್ತ್ರ ವಿತರಿಸುವಾಗ ಬಳಸಿಕೊಳ್ಳುವಂತೆ ಶಿಕ್ಷಣ ಇಲಾಖೆಯಿಂದ ಎಲ್ಲ ಶಾಲೆಗಳ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗೆ ಸೂಚಿಸಲಾಗಿದೆ. ಹೀಗಾಗಿ ಮುಂದಿನ ಶೈಕ್ಷಣಿಕ ವರ್ಷಕ್ಕೆ ಸಮವಸ್ತ್ರಕ್ಕೆ ಅನುದಾನ ಬಿಡುಗಡೆ ಮಾಡುವುದು ಕಷ್ಟಸಾದ್ಯ ಎಂದು ಹೇಳಲಾಗುತ್ತಿದೆ.

ಸಭೆಯೇ ನಡೆದಿಲ್ಲ: ಪ್ರತಿ ವರ್ಷ ಮುಂದಿನ ವರ್ಷದ ವಿವಿಧ ಯೋಜನೆಯ ಅಂಗೀಕಾರ ಮತ್ತು ಅನುದಾನ ಬಳಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಎಲ್ಲ ರಾಜ್ಯಗಳ ಸಮಗ್ರ ಶಿಕ್ಷಣ ಅಥವಾ ಸರ್ವ ಶಿಕ್ಷಣ ಅಭಿಯಾನದ ಯೋಜನಾ ನಿರ್ದೇಶಕರೊಂದಿಗೆ ಸಭೆ ನಡೆಸಲಾಗುತ್ತಿದೆ. 2020-21ರ ಕಾರ್ಯಕ್ರಮ ಅಂಗೀಕಾರ ಮತ್ತು ಅನುದಾನ ಹಂಚಿಕೆ ಸಂಬಂಧಿಸಿದಂತೆ ಈವರೆಗೂ ಸಭೆ ನಡೆದಿಲ್ಲ.

ಕೋವಿಡ್ 19 ಭೀತಿ ಇರುವುದರಿಂದ ವಿಡಿಯೋ ಸಂವಾದದ ಮೂಲಕವಾದರೂ ಸಭೆ ನಡೆಸಬಹುದು ಎಂಬ ನಂಬಿಕೆಯಿದೆ. ಸಭೆ ನಡೆಯದಿದ್ದರೆ ಅನುದಾನ ಬಳಕೆ ಸಾಧ್ಯವಿಲ್ಲ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಸಾವಿರಾರು ಕೋಟಿ ಅಗತ್ಯವಿದೆ: ಶಿಕ್ಷಣ ಇಲಾಖೆಯ ವಿವಿಧ ಯೋಜನೆಗೆ ಕೇಂದ್ರ ಸರ್ಕಾರದಿಂದ ಪ್ರತಿ ವರ್ಷದ ಬಜೆಟ್‌ ಘೋಷಣೆ ಪ್ರಕಾರವಾಗಿ ಸಾವಿರಾರು ಕೋಟಿ ರೂ. ಯೋಜನೆಯ ಅನುಸಾರ ಬರುತ್ತಿತ್ತು. ಒಂದೆರೆಡು ವರ್ಷದಲ್ಲಿ ಈ ಅನುದಾನದ ಪ್ರಮಾಣವೂ ಕಡಿಮೆಯಾಗಿದೆ. ಮುಂದಿನ ವರ್ಷಕ್ಕೆ ಎಷ್ಟು ಅನುದಾನ ಬರಲಿದೆ ಎಂಬುದರ ಸ್ಪಷ್ಟತೆ ಇನ್ನು ಸಿಕ್ಕಿಲ್ಲ ಎಂದು ವಿವರ ನೀಡಿದರು.

Advertisement

ಆರ್‌ ಟಿಇ ಅನುದಾನ ಬಾಕಿ: ಕೇಂದ್ರ ಸರ್ಕಾರದ ಅನುದಾನದ ಕೊರತೆ ಒಂದೆಡೆಯಾದರೆ, ರಾಜ್ಯ ಸರ್ಕಾರವು ಕೂಡ ಆರ್‌ಟಿಇ ಮಕ್ಕಳ ಶುಲ್ಕ ಮರುಪಾವತಿ ಅನುದಾನವನ್ನು ಖಾಸಗಿ ಶಾಲೆಗಳಿಗೆ ನೀಡಿಲ್ಲ. 2019-20ನೇ ಸಾಲಿನ ಆರ್‌ಟಿಇ ಶುಲ್ಕ ಮರುಪಾವತಿಯೇ ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿದೆ. ಮುಂದಿನ ವರ್ಷವೂ ಈ ಅನುದಾನ ನೀಡಬೇಕು. ಆರ್ಥಿಕತೆ ಸುಧಾರಿಸುವ ಮೊದಲೇ ಹಣಕಾಸಿನ ಹೊಡೆತ ಬೀಳುವ ಸಾಧ್ಯತೆಯೂ ಇದೆ ಮತ್ತು ಕೆಲವೊಂದು ಯೋಜನೆಗಳನ್ನು ಸರ್ಕಾರ ಒಮ್ಮಿಂದೊಮ್ಮೆಲೆ ರದ್ದು ಮಾಡಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ.

ಮುಂದಿನ ಶೈಕ್ಷಣಿಕ ವರ್ಷದ ಅನುದಾನ ಹಂಚಿಕೆ ಕುರಿತು ಯಾವುದೇ ಸ್ಪಷ್ಟತೆ ಇನ್ನು ಸಿಕ್ಕಿಲ್ಲ. ಕೇಂದ್ರದ ಅನುದಾನ ಹಂಚಿಕೆ ಕುರಿತ ಸಭೆ ಇನ್ನೂ ನಡೆದಿಲ್ಲ. ಕೊರೊನಾ ಭೀತಿ ದೇಶದಾದ್ಯಂತ ಇರುವುದರಿಂದ ಸ್ವಲ್ಪ ವಿಳಂಬ ಆಗಬಹುದು.  ಡಾ.ಟಿ.ಎಂ.ರೇಜು, ಯೋಜನಾ ನಿರ್ದೇಶಕರು, ರಾಜ್ಯ ಸಮಗ್ರ ಶಿಕ್ಷಣ

 

 ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next