Advertisement

ಸದ್ಯ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕೆಲಸ ಬಂದ್‌

05:02 PM May 20, 2019 | pallavi |

ಕುಮಟಾ: ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಕಾಮಗಾರಿಯಿಂದ ಸಮಸ್ಯೆ ಎದುರಿಸುತ್ತಿರುವ ತಾಲೂಕಿನ ತಂಡ್ರಕುಳಿ ಗ್ರಾಮಕ್ಕೆ ಶಾಸಕ ದಿನಕರ ಶೆಟ್ಟಿ ಭಾನುವಾರ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.

Advertisement

ಸ್ಥಳೀಯರೊಂದಿಗೆ ಘಟನೆಯ ಸಂಪೂರ್ಣ ಮಾಹಿತಿ ಪಡೆದು ಬಳಿಕ ಮಾತನಾಡಿದ ಅವರು, ಘಟನೆ ನಡೆದ ದಿನ ನಾನು ಬೆಂಗಳೂರಿನಲ್ಲಿದ್ದೆ. ಇಲ್ಲಿನ ಸ್ಥಿತಿ ನೋಡಿದಾಗ ತೀರಾ ಬೇಸರವಾಗಿದೆ. ಜನ ಸಂಪೂರ್ಣ ಸಹಕಾರ ನೀಡಿದ್ದಾರೆ. ಆದರೆ ಸಂಪೂರ್ಣ ಅವೈಜ್ಞಾನಿಕವಾಗಿ ರಸ್ತೆಯ ಮೇಲ್ಭಾಗದಲ್ಲಿ ಧರೆ ಸಂರಕ್ಷಣೆ ಕಾಮಗಾರಿ ಮಾಡಿ ಅಲ್ಲಿಯೇ ಕೆಳಭಾಗದಲ್ಲಿ ಬಂಡೆ ಸ್ಫೋಟಿಸುವ ಕೆಲಸ ಸರಿಯಾದದ್ದಲ್ಲ. ಸ್ಫೊಧೀಟದ ಸಂದರ್ಭದಲ್ಲಿ ನೂರಾರು ಮೀಟರ್‌ ದೂರದವರೆಗೆ ಭೂಮಿ ಕಂಪಿಸುತ್ತದೆ. ಹೀಗಿರುವಾಗ ಮಣ್ಣಿನ ಗುಡ್ಡಕ್ಕೆ ಸಿಮೆಂಟ್ ಲೇಪನ ಖಂಡಿತವಾಗಿಯೂ ಸುರಕ್ಷಿತವಾಗಿ ಉಳಿಯುವುದಿಲ್ಲ. ಮತ್ತೆ ಕುಸಿತವಾಗುವುದು ಖಚಿತ. ಆದ್ದರಿಂದ ತಾಲೂಕು ಆಡಳಿತ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಗುತ್ತಿಗೆದಾರರು, ಅಧಿಕಾರಿಗಳು ಬಂದು ಸಮಸ್ಯೆ ಬಗೆಹರಿಸಬೇಕು. ಅದರ ನಂತರವೇ ಇಲ್ಲಿ ಕೆಲಸ ಮಾಡಲು ಅವಕಾಶ ಕೊಡುತ್ತೇವೆ. ತಂಡ್ರಕುಳಿ ಗ್ರಾಮಸ್ಥರಿಗೆ ಹಿಂದೆ ಆದ ಹಾನಿಗೆ ಪರಿಹಾರವೂ ಕೊಟ್ಟಿಲ್ಲ. ಉಪವಿಭಾಗಾಧಿಕಾರಿಗಳು ಐಆರ್‌ಬಿಗೆ ನೋಟಿಸ್‌ ಕೊಟ್ಟರೆ ಪ್ರಯೋಜನವಿಲ್ಲ. ಈಗ ಆಗಿರುವ ಹಾನಿಗೆ ಪರಿಹಾರ ಕೊಡುವವರು ಯಾರು? ಆದ್ದರಿಂದ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಬೇಕು ಎಂದು ತಿಳಿಸಿದರು.

ಗಣೇಶ ಅಂಬಿಗ ಮಾತನಾಡಿ, ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಅಧಿಕಾರಿಗಳೊಟ್ಟಿಗೆ ತಂಡ್ರಕುಳಿ ಸಮಸ್ಯೆ ಬಗ್ಗೆ ಸಭೆ ನಡೆಸುವವರೆಗೆ ಇಲ್ಲಿ ಚತುಷ್ಪಥ ಕಾಮಗಾರಿ ಬಂದ್‌ ಮಾಡಲಾಗುವುದಾಗಿ ತಹಶೀಲ್ದಾರ್‌ ಅವರು ಭರವಸೆ ಕೊಟ್ಟಿದ್ದರು. ಆದರೆ ಐಆರ್‌ಬಿಯವರು ಬಂದು ಮತ್ತೆ ಕೆಲಸ ಆರಂಭಿಸಿದ್ದರು. ನಾವು ಪ್ರತಿಭಟಿಸಿ ಹಿಂದೆ ಕಳಿಸಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಜಿಪಂ ಸದಸ್ಯ ಗಜು ಪೈ, ಗಣಪಯ್ಯ ಅಂಬಿಗ, ಜಗ್ಗು ಭಟ್, ಹೇಮಂತಕುಮಾರ ಗಾಂವಕರ ಸೇರಿದಂತೆ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next