Advertisement

ಸಂಸ್ಕೃತಿ ಗ್ರಾಮದ ವಿಜಯನಾಥ ಶೆಣೈ ಇನ್ನಿಲ್ಲ

07:55 AM Mar 10, 2017 | |

ಉಡುಪಿ: ಮಣಿಪಾಲದ ಹೆರಿಟೇಜ್‌ ವಿಲೇಜ್‌ (ಸಂಸ್ಕೃತಿ ಗ್ರಾಮ) ರೂವಾರಿ, ಸಂಗೀತ ಸಭಾದ ಸ್ಥಾಪಕ, ಶ್ರೀಕೃಷ್ಣಮಠದ ಪರ್ಯಾಯೋತ್ಸವದ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೊಸ ರೂಪ ನೀಡಿದ ವಿಜಯನಾಥ ಶೆಣೈ (83) ಮಾ. 9ರಂದು ಮಣಿಪಾಲ ಅನಂತನಗರದ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ. 

Advertisement

ಸಿಂಡಿಕೇಟ್‌ ಬ್ಯಾಂಕ್‌ನಲ್ಲಿ 32 ವರ್ಷ ಸಾರ್ವಜನಿಕ ಸಂಪರ್ಕ ವಿಭಾಗಧಿದಲ್ಲಿ ಸೇವೆ ಸಲ್ಲಿಸಿದ್ದ ಶೆಣೈ ಅವರು, ಮಣಿಪಾಲದ ಪ್ರಧಾನ ಕಚೇರಿ ಮತ್ತು ಮಂಗಳೂರು ವಲಯ ಕಚೇರಿಗಳಲ್ಲಿ ಸೇವೆ ಸಲ್ಲಿಸಿದ್ದರು. 

ಸಂಗೀತ ಸಭಾ
ಸಂಗೀತ ಸಭಾ ಸಾಂಸ್ಕೃತಿಕ ಸಂಘಟನೆಯನ್ನು 1961ರಲ್ಲಿ ಸ್ಥಾಪಿಸಿ ಕಲಾ ಪ್ರೇಮಿಗಳಿಗೆ ಆ ಕಾಲದಲ್ಲಿ ಕಲೆಯ ರುಚಿ ಉಣಬಡಿಸಿದ ಕೀರ್ತಿ ಶೆಣೈ ಅವರಿಗೆ ಸಲ್ಲುತ್ತದೆ. ಇವರ ಪ್ರಯತ್ನದಿಂದ ಭೀಮಸೇನ್‌ ಜೋಶಿ, ಜಸ್‌ರಾಜ್‌, ದೊರೆಸ್ವಾಮಿ ಅಯ್ಯಂಗಾರ್‌, ಬಾಲಮುರಳಿಕೃಷ್ಣ, ಝಾಕಿರ್‌ ಹುಸೇನ್‌, ಪರ್ವಿನ್‌ ಸುಲ್ತಾನ ಮೊದಲಾದ ಸಂಗೀತ ದಿಗ್ಗಜರು ಸಂಗೀತ ಕಛೇರಿ ನೀಡಿದ್ದರು. ಆರಂಭಿಕ ಕಛೇರಿ ಗಂಗೂಬಾಯಿ ಹಾನಗಲ್‌ ಅವರದ್ದಾಗಿತ್ತು. ಕಿಶೋರ್‌ಕುಮಾರ್‌ ನೈಟ್‌, ದಿನ್‌ಕೋಲಿ ಹಿಪ್ನೊಟಿಸಂ, ಪಂಡಧಿಬಾಯಿ ನಾಟಕ ಮೊದಲಾದ ಆಕರ್ಷಕ ಕಾರ್ಯಕ್ರಮಗಳನ್ನು ನಡೆಸಿ ಅದರಿಂದ ಬಂದ ಹಣದಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು. 

ಕೆಲವು ಬಾರಿ ಕಛೇರಿ ಆರಂಭವಾದ ಬಳಿಕ ಹಣ ಸಂಗ್ರಹಿಸಲು ಹೋದದ್ದೂ ಮತ್ತು ಗೇಟ್‌ ಸಂಗ್ರಹದ ಮೊತ್ತವನ್ನು ನೇರವಾಗಿ ಕಲಾವಿದರಿಗೆ ಕೊಟ್ಟದ್ದೂ ಇತ್ತು. ಸಭಾ ಆರಂಭದಿಂದ 32 ವರ್ಷ ಕಾರ್ಯದರ್ಶಿಗಳಾಗಿ ಅದಕ್ಕೊಂದು ಸ್ಪಷ್ಟ ಸ್ವರೂಪ ಕೊಟ್ಟ ಶೆಣೈ ಅವರು ಸಾಹಿತ್ಯ ಚಟುವಟಿಕೆಗಳಿಗೆ ಕರ್ನಾಟಕ ಸಂಘ, ರೈಟರ್ ಕ್ಲಬ್‌ (1969-70); ಯಕ್ಷಗಾನ ಕಲೆಗಾಗಿ ಮಣಿಪಾಲದಲ್ಲಿ ಯಕ್ಷ ಮಂಡಲ (1981) ಸ್ಥಾಪಿಸಿದರು. ಲಂಡನ್‌ನ ಬ್ರಿಟಿಷ್‌ ಮ್ಯೂಸಿಯಂ, ನೇಶನಲ್‌ ಗ್ಯಾಲರಿ ಆಫ್ ಮಾಡರ್ನ್ ಆರ್ಟ್‌, ವಿಕ್ಟೋರಿಯ ಆ್ಯಂಡ್‌ ಆಲ್ಬರ್ಟ್‌ ಮ್ಯೂಸಿಯಂಗೆ ಶೈಕ್ಷಣಿಕ ಉದ್ದೇಶಕ್ಕೆ ಭೇಟಿ ನೀಡಿದ್ದರು. 

ಪರ್ಯಾಯೋತ್ಸವ
ಪರ್ಯಾಯ ಉತ್ಸವಗಳಲ್ಲಿ ಈಗ ಕಂಡು ಬರುವ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಹಿಂದೆ ಶೆಣೈ ಅವರ ಕಲ್ಪನೆ ಇದೆ. 1968ರ ಪೇಜಾವರ ಶ್ರೀ ಎರಡನೆಯ ಪರ್ಯಾಯದಲ್ಲಿ ಇಂತಹ ಬೆಳವಣಿಗೆಗಳು ಆರಂಭಗೊಂಡವು. ಆಗಿನಿಂದ 1985ರ ಪೇಜಾವರ ಶ್ರೀ ಮೂರನೆಯ ಪರ್ಯಾಯದ ವರೆಗೂ ಪ್ರತಿ ಪರ್ಯಾಯೋತ್ಸವದಲ್ಲಿ ಕಾರ್ಯದರ್ಶಿಗಳಾಗಿ ಶೆಣೈ ಸೇವೆ ಸಲ್ಲಿಸಿದ್ದರು. 

Advertisement

ಹೆರಿಟೇಜ್‌ ವಿಲೇಜ್‌
ಪರಂಪರೆ, ಸಂಸ್ಕೃತಿ ಅಧ್ಯಯನಕ್ಕಾಗಿ ಹಳೆಯ ಕಟ್ಟಡಗಳನ್ನು ಪುನಃನಿರ್ಮಿಸುವ ಪ್ರಯೋಗಕ್ಕೆ ಮೊದಲು ತಮ್ಮದೇ ಮನೆ ಬಳಸಿದ್ದರು. ಹಸ್ತಶಿಲ್ಪ ಟ್ರಸ್ಟ್‌ ಮೂಲಕ ಶೆಣೈ ಅವರು ಹೆರಿಟೇಜ್‌ ವಿಲೇಜ್‌ ಯೋಜನೆಯನ್ನು 1997ರಲ್ಲಿ ಆರಂಭಿಸಿದರು. ನಾಲ್ಕು ಶತಮಾನಗಳಷ್ಟು ಹಿಂದಿನ ಕೊಕ್ಕರ್ಣೆ ಸಮೀಪದ ಸೂರಾಲು ಮಣ್ಣಿನ ಅರಮನೆಯನ್ನು ಪುರಾತತ್ವ ಇಲಾಖೆಯ ಸಹಾಯದಿಂದ ಅದೇ ಸ್ಥಳದಲ್ಲಿ ಜೀರ್ಣೋದ್ಧಾರಗೊಳಿಸಿದರು. ತೀರ್ಥಹಳ್ಳಿಯ ಕುಪ್ಪಳ್ಳಿಯಲ್ಲಿರುವ ಕುವೆಂಪು ಅವರ ಜನ್ಮಸ್ಥಳವನ್ನು ಪುನಃಸ್ಥಾಪಿಸುವಲ್ಲಿ ಆರಂಭಿಕ ಹಂತದಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯೊಂದಿಗೆ ಕೈಜೋಡಿಸಿದರು. 

ಪುರಾತನ ಕಟ್ಟಡಗಳು
ಹಸ್ತಶಿಲ್ಪ ಟ್ರಸ್ಟ್‌ ಹೆರಿಟೇಜ್‌ ವಿಲೇಜ್‌ನಲ್ಲಿ ನಿರ್ಮಿಸಿದ ಹಲವು ಪುರಾತನ ಕಟ್ಟಡಗಳನ್ನು ವೀಕ್ಷಿಸಿದರೆ ನಮ್ಮ ಹಿರಿಯರ ಜೀವನಶೈಲಿ, ಶಿಸ್ತುಬದ್ಧತೆ, ವೈಜ್ಞಾನಿಕ ಅಂಶಗಳನ್ನು ಪ್ರತ್ಯಕ್ಷವಾಗಿ ಗಮನಿಸಬಹುದು. ಬಾಗಲಕೋಟೆ ಜಿಲ್ಲೆಯ ಮುಧೋಳದ ಅರಮನೆ, ಕೊಪ್ಪಳ ಜಿಲ್ಲೆ ಕುಕನೂರಿನ ಕಮಲ್‌ ಮಹಲ್‌, ಬೀದರ್‌ ಜಿಲ್ಲೆ ಹುಮ್ನಾಬಾದ್‌ನ ಡೆಕ್ಕನಿ ನವಾಬ್‌ ಮಹಲ್‌, ಮಂಗಳೂರು ಕ್ರಿಶ್ಚಿಯನ್‌ ಮನೆ, ರಾಜಾರವಿವರ್ಮರ ಚಿತ್ರ ಗ್ಯಾಲರಿ, ಭೂತದೈವಗಳ ಊರುಗಳಿರುವ ನಂದಿಕೇಶ್ವರ ದೇವಸ್ಥಾನ, ಅದಮಾರು ಸಮೀಪದ ಶಿವಳ್ಳಿ ಬ್ರಾಹ್ಮಣರ ಕುಂಜೂರು ಚೌಕಿ ಮನೆ, ಕೊಡಗಿನ ಹರಿಹರ ಮಂದಿರಗಳು ಹೆಸರಿಸಧಿಬಹುದಾದ ಕೆಲವು ಪ್ರಾಚೀನ ಕಟ್ಟಡಗಳು. ಈ ಕಟ್ಟಡಗಳ ಸಾರ್ವಜನಿಕ ವೀಕ್ಷಣೆ 2016ರಲ್ಲಿ ಆರಂಭಗೊಂಡಿತು. 

ಹೆಂಗವಳ್ಳಿ ಮನೆ, ಮಿಯಾರು ಮನೆ, ಭಟ್ಕಳದ ನವಾಯತ್‌ ಮುಸ್ಲಿಮ್‌ ಮನೆ, ಹಕೂìರು ಒಳಗಿನ ಮನೆ, ಶೃಂಗೇರಿ ಮನೆ ಸೇರಿದಂತೆ ಒಟ್ಟು 30 ಕಟ್ಟಡಗಳಿದ್ದು ಎಂಟು ಪೂರ್ಣಗೊಂಡು ವೀಕ್ಷಣೆಗೆ ಅವಕಾಶವಿದೆ. ಇವುಗಳು ಹಿಂದೆ ಹೇಗಿತ್ತೋ ಅದೇ ರೀತಿ ಮರುಜೋಡಿಸಲಾಗಿದೆ. ಸ್ವೀಡನ್‌, ನಾರ್ವೆ ಮೊದಲಾದ ದೇಶಗಳಿಂದ ಬಂದವರು ಈ ಸಮಸ್ಯೆಗಳ ಸಂಕೀರ್ಣವಾದ ರಚನೆಗಳನ್ನು ಮರುಜೋಡಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. 

ಪುಸ್ತಕಗಳು
ಶೆಣೈ ಅವರು ಇಂಗ್ಲಿಷ್‌ನಲ್ಲಿ ಇನ್ಸ್‌ಕ್ರೈಬ್‌ ಹೆರಿಟೇಜ್‌, ಕನ್ನಡದಲ್ಲಿ “ನೆನಪಿನ ಶಿಲ್ಪಗಳು’, “ಪತ್ರ ವಾತ್ಸಲ್ಯ’, “ಪತ್ರಾವಳಿ’, “ಪತ್ರ ಸಂವಾದ’ ಪುಸ್ತಕಗಳನ್ನು ಬರೆದಿದ್ದರು. ಕರ್ನಾಟಕ ಸರಕಾರದ ಹಳೆ ಕಟ್ಟಡಗಳ ಸಂರಕ್ಷಣೆ ಕುರಿತ ಟಿಪಿ ಇಸ್ಸಾರ್‌ ಸಮಿತಿ ಶಿಫಾರಸು ಅನುಷ್ಠಾನ ಸಮಿತಿ ಸಲಹಾ ಸಮಿತಿ ಸದಸ್ಯರಾಗಿ ಕೆಲಸ ನಿರ್ವಹಿಸಿದ್ದರು. 

ಗಣ್ಯರ ಸಂತಾಪ
ಸಚಿವ ಪ್ರಮೋದ್‌ ಮಧ್ವರಾಜ್‌, ಮಾಜಿ ಶಾಸಕ ಕೆ. ರಘುಪತಿ ಭಟ್‌, ಲಲಿತಕಲಾ ಅಕಾಡೆಮಿ ಅಧ್ಯಕ್ಷ ಎಂ.ಎಸ್‌. ಮೂರ್ತಿ, ಆರ್ಟಿಸ್ಟ್ಸ್
ಫೋರಂನ ರಮೇಶ ರಾವ್‌, ಯಕ್ಷಗಾನ ಕಲಾರಂಗದ ಅಧ್ಯಕ್ಷ ಕೆ. ಗಣೇಶ್‌ ರಾವ್‌, ಕಾರ್ಯದರ್ಶಿ ಮುರಲಿ ಕಡೆಕಾರ್‌, ಸಂಗೀತ ಸಭಾದ ಅಧ್ಯಕ್ಷ ಟಿ.ರಂಗ ಪೈ, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರ್‌ ರತ್ನಾಕರ ಹೆಗ್ಡೆ ಮೊದಲಾದವರು ಸಂತಾಪ ಸೂಚಿಸಿದ್ದಾರೆ. 

ವಿಜಯನಾಥ ಅವರಿಗೆ ಸಂದ ಪ್ರಶಸ್ತಿಗಳು
ಓಸ್ಲೋ ವಿ.ವಿ.ಯ ಸಮ್ಮರ್‌ ಸ್ಕೂಲ್‌ನಲ್ಲಿ ನಡೆದ ಸಮಾರಂಭದಲ್ಲಿ ನಾರ್ವೆ ಸರಕಾರದ ಗೌರವ, ಸೌತ್‌ ಏಶಿಯ ಟ್ರಾವೆಲ್‌ ಟೂರಿಸಂ ಎಕ್ಸ್‌ಧಿಚೇಂಜ್‌ ಪ್ರಶಸ್ತಿ (2011), ಎಚ್‌.ಎಲ್‌. ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ (2016), ಇಂಟರ್‌ನೆಶನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಎಜುಕೇಶನ್‌ ಆ್ಯಂಡ್‌ ಮೆನೇಜೆಟ್‌ನ ಜುವೆಲ್‌ ಆಫ್ ಇಂಡಿಯಾ ಪ್ರಶಸ್ತಿ (2016), ಇಂಡಿಯನ್‌ ಸಾಲಿಡಾರಿಟಿ ಕೌನ್ಸಿಲ್‌ನ ವಿಜಯ ರತನ್‌ ಸ್ವರ್ಣ ಪದಕ ಪ್ರಶಸ್ತಿ, ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ (2003), ಅವಿಭಜಿತ ದ.ಕ. ಜಿಲ್ಲೆಯ ರಾಜ್ಯೋತ್ಸವ ಪ್ರಶಸ್ತಿ (1992), ಕಾಶೀ ಮಠಾಧೀಶರಾಗಿದ್ದ ಶ್ರೀ ಸುಧೀಂದ್ರತೀರ್ಥ ಸ್ವಾಮೀಜಿ ಅವರ ಷಷ್ಟಬ್ದ ಸಮಾರಂಭದ ಸೇವಾ ಪ್ರಶಸ್ತಿ (2004), ಶ್ರೀ ಅದಮಾರು ಮಠದ  ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರ ಪರ್ಯಾಯೋತ್ಸವ ದರ್ಬಾರ್‌ ಸಮ್ಮಾನ (2004), ಮೈಸೂರು ಮುಕ್ತ ವಿ.ವಿ. ಡಿಲಿಟ್‌ (2007), ಲಲಿತ ಕಲಾ ಅಕಾಡೆಮಿ ಗೌರವ ಸಮ್ಮಾನ (2016) ಇತ್ಯಾದಿ ಗೌರವಗಳು ಶೆಣೈ ಅವರಿಗೆ ಸಂದಿವೆ.

ಅಂತಿಮ ದರ್ಶನಕ್ಕೆ ಅವಕಾಶ
ಶುಕ್ರವಾರ ಬೆಳಗ್ಗೆ 9.30ರಿಂದ 11.30ರ ವರೆಗೆ ವಿಜಯನಾಥ ಶೆಣೈ ಅವರ ಶರೀರವನ್ನು ಅನಂತನಗರ, ಮಣಿಪಾಲ ಇಲ್ಲಿ ಸಾರ್ವಜನಿಕ ವೀಕ್ಷಣೆಗೆ ಇರಿಸಲಾಗುವುದು. ಬಳಿಕ ಬೀಡಿನಗುಡ್ಡೆ ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ. 
ಸಂತಾಪ ಸಂದೇಶ ಕಳುಹಿಸುವವರು hastashilpatrust@gmail.com ಇಲ್ಲಿಗೆ ಕಳುಹಿಸಲು ಕೋರಲಾಗಿದೆ. 

ಪ್ರಕೃತಿ ಸೌಂದರ್ಯದ ಸೊಬಗು ಮತ್ತು ಸೊಗಸನ್ನು ಒಂದೆಡೆ ಪ್ರದರ್ಶಿಸಬೇಕು ಎಂದು ಪ್ರಯತ್ನಿಸಿ ಯಶಸ್ಸು ಕಂಡ ವಿಜಯನಾಥ್‌ ಶೆಣೈ ಅವರು ಸುಂದರ, ಸಾಂಪ್ರದಾಯಿಕ ಹಾಗೂ ಪಾರಂಪರಿಕ ಮನೆಗಳಲ್ಲಿನ ಸಿರಿವಂತ ವಾಸ್ತು ಶಿಲ್ಪಗಳನ್ನು ಒಂದೆಡೆ ತಂದು ಒಂದು ಪಾರಂಪರಿಕ ಗ್ರಾಮವನ್ನೇ ಸೃಷ್ಟಿಸಿದ್ದು, ಅವರ ಸಾಧನೆ ಮಾತ್ರವಲ್ಲ, ಸಾಹಸವೂ ಆಗಿದೆ. ಶೆಣೈ ಅವರ ಆತ್ಮಕ್ಕೆ ಶಾಂತಿ ಸಿಗಲಿ.
ಸಿದ್ದರಾಮಯ್ಯ, ಮುಖ್ಯಮಂತ್ರಿ

ಶೆಣೈ ಅವರ ಅನಿರೀಕ್ಷಿತ ನಿಧನದಿಂದ ನಮಗೆ ಅತೀವ ವಿಷಾದವಾಗಿದೆ. ಶ್ರೀ ಕೃಷ್ಣಮಠದ ಸಾಂಸ್ಕೃತಿಕ ಕಾರ್ಯಗಳಲ್ಲಿ ಅವರು ಸಲ್ಲಿಸಿದ ಸೇವೆ ಅವಿಸ್ಮರಣೀಯ. ಪರ್ಯಾಯಗಳಲ್ಲಿ ಎಲ್ಲ ಕಾರ್ಯಗಳಲ್ಲಿ ಅಪೂರ್ವ ರೀತಿಯಲ್ಲಿ ಸೇವೆ, ಸಂಘಟನೆ, ಮಾರ್ಗದರ್ಶನ ಮಾಡಿದ್ದಾರೆ. ಹೆರಿಟೇಜ್‌ ವಿಲೇಜ್‌ ನಿರ್ಮಾಣ ಒಂದು ಅದ್ಭುತ ಐತಿಹಾಸಿಕ ಸಾಧನೆಯಾಗಿದೆ. ಇಂತಹ ವಿಶಿಷ್ಟ ವರ್ಣರಂಜಿತ ವ್ಯಕ್ತಿತ್ವದ ಶೆಣೈ ಅವರ ಅಗಲಿಕೆಯಿಂದ ನಾಡಿಗೆ ದೊಡ್ಡ ನಷ್ಟವಾಗಿದೆ. 
ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಪರ್ಯಾಯ ಶ್ರೀ ಪೇಜಾವರ ಮಠ

Advertisement

Udayavani is now on Telegram. Click here to join our channel and stay updated with the latest news.

Next