Advertisement

ಅಭಿವೃದ್ಧಿ ವಿಚಾರದಲ್ಲಿ ಕಾಂಗ್ರೆಸ್‌ನಿಂದ ಅರ್ಧ ಸತ್ಯ: ಸಿ.ಟಿ. ರವಿ

09:25 PM Mar 31, 2022 | Team Udayavani |

ಬೆಂಗಳೂರು: ದೇಶದಲ್ಲಿ ಆಗಿರುವ ಎಲ್ಲ ಅಭಿವೃದ್ಧಿ ಕಾರ್ಯಗಳೂ ಕಾಂಗ್ರೆಸ್‌ ಅವಧಿಯಲ್ಲೇ ಆಗಿವೆ. ವೈದ್ಯಕೀಯ ಕಾಲೇಜು, ರಸ್ತೆ, ಏರ್ಪೋರ್ಟ್‌ ಮೊದಲಾದ ಅಭಿವೃದ್ಧಿ ಕಾರ್ಯ ಎಲ್ಲವೂ ಕಾಂಗ್ರೆಸ್‌ ಅವಧಿಯಲ್ಲೇ ಆಗಿದೆ ಎಂಬ ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲರ ಹೇಳಿಕೆ ಅರ್ಧ ಸತ್ಯ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.

Advertisement

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದ ಬಳಿಕ 67 ವರ್ಷಗಳಲ್ಲಿ 2014ರವರೆಗೆ 65 ವಿಮಾನನಿಲ್ದಾಣಗಳಿದ್ದವು. ಕಳೆದ 7 ವರ್ಷದಲ್ಲಿ ಹೊಸ 35 ಹೆಚ್ಚುವರಿ ವಿಮಾನನಿಲ್ದಾಣಗಳು ಸೇರಿವೆ. ಸರಾಸರಿ ಲೆಕ್ಕ ಹಾಕಿದರೆ ಕೇವಲ 7 ವರ್ಷಗಳಲ್ಲಿ ಬಿಜೆಪಿ ನರೇಂದ್ರ ಮೋದಿ ಅವರ ಆಡಳಿತಾವಧಿಯಲ್ಲಿ ಶೇ 50ಕ್ಕೂ ಹೆಚ್ಚು ವಿಮಾನನಿಲ್ದಾಣಗಳನ್ನು ಸ್ಥಾಪನೆ ಮಾಡಲಾಗಿದೆ ಎಂದು ವಿವರ ನೀಡಿದರು.

ದೇಶದಲ್ಲಿ 2014ವರೆಗೆ 46.76 ಲಕ್ಷ ಕಿಮೀ ರಸ್ತೆ ಇತ್ತು. ಕೇವಲ 7 ವರ್ಷದಲ್ಲಿ 15.38 ಲಕ್ಷ ಕಿಮೀ. ರಾಷ್ಟ್ರೀಯ ಹೆದ್ದಾರಿ ಸೇರ್ಪಡೆಯಾಗಿದೆ. 33 ಶೇಕಡಾ ಹೆಚ್ಚಳ ಇದಾಗಿದೆ. ಕೇವಲ 7 ವರ್ಷದಲ್ಲಿ ಆಗಿದೆ. ಹಿಂದೆ ದಿನಕ್ಕೆ 12 ಕಿಮೀ ರಸ್ತೆ ನಿರ್ಮಾಣ ಆಗುತ್ತಿದ್ದರೆ, ಕಳೆದ 5 ವರ್ಷಗಳಿಂದ ಈಗ 40 ಕಿಮೀ. ನಿರ್ಮಾಣ ಆಗುತ್ತಿದೆ. ಇದೊಂದು ಮೈಲಿಗಲ್ಲು ಎಂದು ತಿಳಿಸಿದರು.

2014ರ ವರೆಗೆ 7 ಏಮ್ಸ್ (ಆಲ್‌ ಇಂಡಿಯಾ ಮೆಡಿಕಲ್‌ ಸೈನ್ಸ್‌) ಇದ್ದರೆ, ಈಗ 7 ವರ್ಷದಲ್ಲಿ 22 ಹೆಚ್ಚುವರಿ ಸ್ಥಾಪನೆಯಾಗಿದೆ. ಶೇ 214 ಹೆಚ್ಚಳ ಆಗಿದೆ. 67 ವರ್ಷಗಳಲ್ಲಿ ವೈದ್ಯಕೀಯ ಸೀಟು 82 ಸಾವಿರ ಇತ್ತು. ಹೊಸ ಸೀಟು- 1.42 ಲಕ್ಷ ಕೊಟ್ಟಿದ್ದು, ಶೇ 80 ರಷ್ಟು ಹೆಚ್ಚಳವಾಗಿದೆ. 387 ವೈದ್ಯಕೀಯ ಕಾಲೇಜು ಇತ್ತು. ಈಗ 596 ವೈದ್ಯಕೀಯ ಕಾಲೇಜುಗಳಾಗಿ ಹೆಚ್ಚಾಗಿದ್ದು, 54 ಶೇ ಹೆಚ್ಚಳ ಆಗಿದೆ ಎಂದರು.

ವೇಗಗತಿಯಲ್ಲಿ ಜಲಜೀವನ್‌ ಮಿಷನ್‌ ಅನುಷ್ಠಾನ ನಡೆದಿದೆ. ಶೇ 90 ಬಡವರ ಮನೆಯಲ್ಲಿ ಶೌಚಾಲಯ ನಿರ್ಮಾಣ ಆಗಿದೆ. 42 ಕೋಟಿ ಬಡವರಿಗೆ ಜನಧನ್‌ ಖಾತೆ ತೆರೆಸಲು ಅವಕಾಶವಾಗಿದೆ. ಬದಲಾವಣೆಯ ಸ್ಯಾಂಪಲ್‌ ಇದಷ್ಟೇ. ಎಂ.ಬಿ.ಪಾಟೀಲರು ಅರ್ಧ ಸತ್ಯ ಹೇಳಿದ್ದು, ಹೇಳದೆ ಇರುವ ಅಂಶಗಳೂ ಇವೆ ಎಂದರು.

Advertisement

ಕಾಂಗ್ರೆಸ್‌ ಆಡಳಿತಾವಧಿಯಲ್ಲಿ ಸಾಲುಸಾಲು ಭ್ರಷ್ಟಾಚಾರದ ಕೀರ್ತಿ ಅದೇ ಪಕ್ಷಕ್ಕೆ ಸಲ್ಲುತ್ತದೆ. ಎ ಯಿಂದ ಝಡ್‌ ವರೆಗೆ ಭ್ರಷ್ಟಾಚಾರ ನಡೆದಿದೆ. ಅವರು ಜಾಣಮರೆವು ಪ್ರದರ್ಶಿಸಿದ್ದಾರೆ. ಕುಟುಂಬ ರಾಜಕಾರಣ ಬೆಳೆಸಿ ಪದಾಧಿಕಾರಿಗಳನ್ನು ತುಳಿದ ಕೀರ್ತಿಯೂ ಅವರಿಗೇ ಸೇರುತ್ತದೆ. ಜಾತ್ಯತೀತತೆ ಪರಿಭಾಷೆಗೆ ಓಲೈಕೆಯನ್ನು ಸೇರಿಸಿದ್ದೂ ಕಾಂಗ್ರೆಸ್‌ ಪಕ್ಷವೇ ಆಗಿದೆ. ತುಷ್ಟೀಕರಣ ರಾಜಕೀಯ ನೀತಿ ಸ್ಥಾಪನೆ ಮತ್ತು ವಿಸ್ತರಣೆಯೂ ಅವರ ಕಾಲಘಟ್ಟದಲ್ಲೇ ಆಗಿದೆ ಎಂದು ತಿಳಿಸಿದರು.

ಸ್ವಜನಪಕ್ಷಪಾತ, ಭ್ರಷ್ಟಾಚಾರ, ಜಾತೀಯತೆ, ತುಷ್ಟೀಕರಣ ರಾಜಕೀಯ, ಭಯೋತ್ಪಾದಕರ ಜೊತೆ ರಾಜಕೀಯ ಮಾಡಬಹುದು ಎಂಬುದನ್ನೂ ಕಾಂಗ್ರೆಸ್‌ ತೋರಿಸಿಕೊಟ್ಟಿದೆ. ಭಯೋತ್ಪಾದಕರು ಪ್ರಧಾನಿಯವರ ಜೊತೆ ಕೈಕುಲುಕುವ, ಫೋಟೋ ಶೂಟ್‌ ಮಾಡುವ ಸ್ಥಿತಿ ಬಂದಿತ್ತು ಎಂದು ತಿಳಿಸಿದರು.

ಹಲಾಲ್‌ಗೆ ಸರ್ಟಿಫಿಕೇಟ್‌ ಕೊಟ್ಟವರು ಯಾರು : ಸಿ.ಟಿ. ರವಿ.  :

ಬೆಂಗಳೂರು: ಹಲಾಲ್‌ ಯಾರು, ಎಲ್ಲಿ ಪ್ರಾರಂಭ ಮಾಡಿದರು? ಅದರ ಉದ್ದೇಶ ಏನು ಎಂಬ ಚರ್ಚೆ ಆಗಲಿ, ಯಾವುದಾದರೂ ಉತ್ಪನ್ನಕ್ಕೆ ಐಎಸ್‌ಐ ಸರ್ಟಿಫಿಕೇಟ್‌ ಕೊಡುವುದಿದೆ. ಆದರೆ, ಹಲಾಲ್‌ಗೆ ಯಾರು ಸಟಿಫಿಕೇಟ್‌ ಕೊಡುತ್ತಾರೆ ಎಂದು ಸಿ.ಟಿ.ರವಿ ಪ್ರಶ್ನಿಸಿದ್ದಾರೆ.

ಜಾತ್ಯತೀತ ಎನಿಸಲು ಹಲಾಲ್‌ ಸರ್ಟಿಫಿಕೇಟ್‌ ಅನಿವಾರ್ಯವೇ ಎಂಬ ಪ್ರಶ್ನೆಗೂ ಸಮಾಜದಿಂದ ಉತ್ತರ ಬೇಕಿದೆ. ಹಲಾಲ್‌ ಕುರಿತ ಪ್ರಶ್ನೆಗಳಿಗೆ ಪ್ರಗತಿಪರರು, ಬುದ್ಧಿಜೀವಿಗಳು, ಮುಸ್ಲಿಂ ವಿದ್ವಾಂಸರು ಇದರ ಮೇಲೆ ಬೆಳಕು ಚೆಲ್ಲಬೇಕಿದೆ ಎಂದರು.

ಜಿಹಾದ್‌ ಹಲವು ಮುಖಗಳಲ್ಲಿ ನಡೆಯುತ್ತದೆ. ಅದರ ವಿರುದ್ಧ ಹೋರಾಟವೂ ಅನಿವಾರ್ಯ. ಹಲಾಲ್‌ ಮತೀಯ ಉದ್ದೇಶದ್ದು ಅಲ್ಲದಿದ್ದರೆ ಎಲ್ಲರೂ ಅದನ್ನು ಸ್ವೀಕರಿಸೋಣ. ಹಲಾಲ್‌ ಮತ್ತು ಜಾತ್ಯತೀತತೆ ನಡುವಿನದು ಎಣ್ಣೆ, ಸೀಗೆಕಾಯಿ ಸಂಬಂಧವಾಗಿದ್ದು, ಇವೆರಡು ಒಟ್ಟಿಗೆ ಇರಲು ಅಸಾಧ್ಯ ಎಂದು ಅವರು ವಿಶ್ಲೇಷಿಸಿದರು.

ದೇಶದಲ್ಲಿ ಸಂವಿಧಾನ ಇರಬೇಕೇ ಅಥವಾ ಶರೀಯತ್‌ ಇರಬೇಕೇ? ಎಂದು ಪ್ರಶ್ನಿಸಿದರು. ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌, ಸಬ್‌ ಕಾ ವಿಶ್ವಾಸ್‌ ಹೇಳಿಕೆ ಜೊತೆ ಯೋಜನೆಗಳನ್ನು ಜಾರಿಗೊಳಿಸಿದ ಮೋದಿ ಯಾರಿಗೂ ಅಭಿವೃದ್ಧಿ ಯೋಜನೆಯಲ್ಲಿ ಧೋಖಾ ಮಾಡಿಲ್ಲ. ಎಲ್ಲರಿಗೂ ಮನೆಮನೆಗೆ ರೇಷನ್‌ ಕೊಟ್ಟಿದ್ದಾರೆ. ಶೌಚಾಲಯ, ಮನೆಮನೆಗೆ ಅಭಿವೃದ್ಧಿ ಕಾರ್ಯ ತಲುಪಿಸಿದ್ದರೂ ಕೆಲವರು ಬಿಜೆಪಿಗೆ ಮತ ಹಾಕಿಲ್ಲ. ಮತ ಹಾಕದಿರಲು ಮತೀಯ ಕಾರಣವಿದ್ದರೆ ಅದು ತಪ್ಪಲ್ಲವೇ ಎಂದು ಕೇಳಿದರು. ಸೆಕ್ಯುಲರ್‌ ಪಾಠ ಹಿಂದೂಗಳಿಗೆ ಮಾತ್ರ ಇರಬೇಕೇ ಎಂದೂ ಪ್ರಶ್ನಿಸಿದರು.

ದಾರುಲ್‌ ಅರಬ್, ದಾರುಲ್‌ ಇಸ್ಲಾಂ ಎಂದರೇನು ಎಂಬುದು ಚರ್ಚೆಗೆ ಒಳಪಡಲಿ. ಆಗ ಕಮ್ಯುನಲ್‌ ಯಾರು, ಲಿಬರಲ್‌ ಯಾರೆಂಬುದು ಗೊತ್ತಾಗುತ್ತದೆ. ಹಲಾಲ್‌ ಮನೆಯಲ್ಲಿರಲಿ. ಮಾರ್ಕೆಟ್‌ನಲ್ಲಿ  ಯಾಕೆ? ಮಾರ್ಕೆಟ್‌ನಲ್ಲಿ  ಹಲಾಲ್‌ ಸೀಲ್‌ ಹಾಕಿ ಕಳುಹಿಸುವುದು ಮತೀಯವಾದದ ಪ್ರತೀಕ ಆಗುವುದಿಲ್ಲವೇ? ನಾವು ಗಾಳಿ, ಸಮಾಜವನ್ನು ವಿಭಜಿಸಲು ಆಗುವುದಿಲ್ಲ. ಹಲಾಲ್‌ನಂಥ ಕಾರಣಕ್ಕೆ ಸಮಾಜ ವಿಭಜನೆ ಆಗುವುದಿದ್ದರೆ ಅದು ಸರಿಯೇ ಎಂದು ಕೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next