Advertisement

ಕೋಟಿ ಕೋಟಿ ವಂಚನೆ : ಅಧಿಕ ಬಡ್ಡಿ ಆಸೆ ತೋರಿಸಿ ಹೂಡಿಕೆ

01:51 PM Jun 11, 2019 | Team Udayavani |

ಬೆಂಗಳೂರು: ಅಧಿಕ ಬಡ್ಡಿ ಆಸೆ ತೋರಿಸಿ ಸಾರ್ವಜನಿಕರಿಂದ ಕೋಟ್ಯಂತರ ರೂ. ಹೂಡಿಕೆ ಮಾಡಿಸಿಕೊಂಡಿದ್ದ ಐಎಂಎ ಜುವೆಲರ್ಸ್‌ ಮಾಲಕ ಮನ್ಸೂರ್‌ ಖಾನ್‌ ನಾಪತ್ತೆಯಾಗಿದ್ದು, ಅಲ್ಲಿ ಹೂಡಿಕೆ ಮಾಡಿದ್ದ ಸಾವಿರಾರು ಜನರು ಕಂಗಾಲಾಗಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ.

Advertisement

ನಾಪತ್ತೆಗೂ ಮುನ್ನ ಮನ್ಸೂರ್‌ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್‌ ಆಗಿದ್ದು, ಅದರಲ್ಲಿ “ಶಿವಾಜಿನಗರ ಶಾಸಕ 400 ಕೋಟಿ ರೂ. ಪಡೆದು ಹಣ ವಾಪಸ್‌ ನೀಡಲಿಲ್ಲ’ ಎಂದು ಆರೋಪಿಸಿದ್ದಾರೆ. ಜತೆಗೆ ರಾಜಕಾರಣಿಗಳು, ಕೇಂದ್ರ ಮತ್ತು ರಾಜ್ಯ ಸರಕಾರದ ಅಧಿಕಾರಿಗಳಿಗೆ ಲಂಚ ಕೊಟ್ಟು ಸಾಕಾಗಿದೆ. ಇದು ನನ್ನ ಕೊನೆಯ ಸಂದೇಶವಾಗಬಹುದು ಎಂದು ಹೇಳಲಾಗಿದೆ. ಇದು ರಾಜಕೀಯ ಚರ್ಚೆಗೆ ಕಾರಣವಾಗಿದೆ.

ಈ ಕುರಿತು ನಗರ ಪೊಲೀಸ್‌ ಆಯುಕ್ತರಿಗೂ ಆಡಿಯೋ ಕ್ಲಿಪ್‌ ಲಭ್ಯವಾಗಿದೆ. ಇದರ ಆಧಾರದ ಮೇಲೆ ಮನ್ಸೂರ್‌ ಪತ್ತೆಗೆ ಕ್ರಮ ಕೈಗೊಂಡಿರುವ ಪೊಲೀಸರು ವಿಶೇಷ ತಂಡ ರಚಿಸಿದ್ದಾರೆ. ಜತೆಗೆ ಸಾರ್ವಜನಿಕರಿಂದಲೂ ದೂರುಗಳ ಮಹಾಪೂರ ಹರಿದು ಬರುತ್ತಿದೆ.

ಇದರ ನಡುವೆ, ಶಾಸಕ ರೋಷನ್‌ ಬೇಗ್‌ ಟ್ವೀಟ್‌ ಮೂಲಕ ಆರೋಪದ ಕುರಿತು ಸ್ಪಷ್ಟನೆ ನೀಡಿದ್ದು, ತನಗೂ ಐಎಂಎ ಜುವೆಲರ್ಗೂ ಸಂಬಂಧವಿಲ್ಲ. ನಾನು 400 ಕೋಟಿ ರೂ. ಪಡೆದಿಲ್ಲ ಎಂದು ತಿಳಿಸಿದ್ದಾರೆ. ಐಎಂಎ ವಂಚನೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ, ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲು ನಿರ್ಧರಿಸಲಾಗಿದ್ದು, ಈ ಬಗ್ಗೆ ಡಿಜಿಪಿಯವರ ಜತೆ ಚರ್ಚಿಸಿರುವುದಾಗಿ ಗೃಹ ಸಚಿವ ಎಂ.ಬಿ. ಪಾಟೀಲ್‌ ತಿಳಿಸಿದ್ದಾರೆ.

ಏನಾಯಿತು?
ಸೋಮವಾರ ಬೆಳ್ಳಂಬೆಳಗ್ಗೆ ಮನ್ಸೂರ್‌ ಆಡಿಯೋ ವೈರಲ್‌ ಆಗುತ್ತಿದ್ದಂತೆ ಹೂಡಿಕೆದಾರರು ಶಿವಾಜಿನಗರದ ಐಎಂಎ ಕಚೇರಿ ಬಾಗಿಲು ಬಡಿಯಲಾರಂಭಿಸಿದರು. ಸಾವಿರಾರು ಜನ ಜಮಾಯಿಸಿ ಭಾರೀ ಪ್ರತಿಭಟನೆ ನಡೆಸಿದರು. ಮನ್ಸೂರ್‌ ವಿರುದ್ಧ ಘೋಷಣೆಗಳನ್ನು ಕೂಗಿ ನಮ್ಮ ಹಣ ನಮಗೆ ವಾಪಸ್‌ ಕೊಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹಿರಿಯ ಪೊಲೀಸ್‌ ಅಧಿಕಾರಿಗಳ ನೇತೃತ್ವದಲ್ಲಿ ಪೊಲೀಸ್‌ ಬಂದೋಬಸ್ತ್ ಇದ್ದರೂ ಪ್ರತಿಭಟನಕಾರರನ್ನು ನಿಯಂತ್ರಣಕ್ಕೆ ತರಲು ಹರಸಾಹಸಪಟ್ಟರು. ಐಎಂಎ ಜುವೆಲರ್ ಹೆಸರಿನಲ್ಲಿ ಬೆಂಗಳೂರು ಸಹಿತ ರಾಜ್ಯದ ವಿವಿಧ ಭಾಗಗಳಲ್ಲಿ ಐದು ಸಾವಿರಕ್ಕೂ ಹೆಚ್ಚು ಜನ ಲಕ್ಷಾಂತರ ರೂ. ಹೂಡಿಕೆ ಮಾಡಿದ್ದು ವಂಚನೆಗೊಳಗಾಗಿದ್ದಾರೆ ಎಂದು ಹೇಳಲಾಗಿದೆ. ಈಗಷ್ಟೇ ಹಣ ಕಳೆದುಕೊಂಡವರು ದೂರು ದಾಖಲಿಸಿದ್ದು ಖಚಿತವಾಗಿ ಇಷ್ಟೇ ಪ್ರಮಾಣದ ವಂಚನೆ ನಡೆದಿದೆ ಎಂಬುದು ಸದ್ಯಕ್ಕೆ ಸ್ಪಷ್ಟಪಡಿಸಲು ಸಾಧ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಮನ್ಸೂರ್‌ ನಿಗೂಢ ನಾಪತ್ತೆ?
ಆಡಿಯೋದಲ್ಲಿ ಇದು ನನ್ನ ಕೊನೆಯ ಸಂದೇಶ ಆಗಬಹುದು ಎಂದು ಮನ್ಸೂರ್‌ ಹೇಳಿಕೆಯೂ ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ. ಈ ಬೆನ್ನಲ್ಲೇ ನಗರ ಪೊಲೀಸರು ಆತನ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದರೂ ಮನ್ಸೂರ್‌ ಮತ್ತು ಕುಟುಂಬಸ್ಥರ ಮೊಬೈಲ್‌ ಸ್ವಿಚ್‌ ಆಫ್ ಮಾಡಿಕೊಂಡು ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಆತನ ಪತ್ತೆಗೆ ಪೂರ್ವ ವಿಭಾಗದ ವಿಶೇಷ ತನಿಖಾ ತಂಡ ಕಾರ್ಯಾಚರಣೆ ನಡೆಸುತ್ತಿದ್ದರೂ ಆತನ ಸುಳಿವು ಪತ್ತೆಯಾಗಿಲ್ಲ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ವೈರಲ್‌ ಆದ ಆಡಿಯೋದಲ್ಲಿ ಏನಿದೆ?
ವೈರಲ್‌ ಆಗಿರುವ ಆಡಿಯೋದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ಅಧಿಕಾರಿಗಳಿಗೆ ಲಂಚ ಕೊಟ್ಟು ಸಾಕಾಗಿದೆ. ಶಿವಾಜಿನಗರ ಎಂಎಲ್‌ಎ ಬಳಿ 400 ಕೋಟಿ ರೂ. ಇದೆ. ಕೇಳಿದರೆ ಕಚೇರಿಗೆ ರೌಡಿಗಳನ್ನು ಕಳುಹಿಸುತ್ತಾರೆ ಎಂದಿರುವುದು ಚರ್ಚೆಗೆ ಗ್ರಾಸವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next