Advertisement

ಬೆಳೆ ಸಮೀಕ್ಷೆ: 171 ಮರು ಆಕ್ಷೇಪಣೆ

07:27 PM Feb 01, 2020 | Sriram |

ಅತಿವೃಷ್ಟಿ, ಅನಾವೃಷ್ಟಿ ಸಂದರ್ಭ ಪರಿಹಾರಕ್ಕಾಗಿ ರಾಜ್ಯಗಳಿಂದ ಕೇಂದ್ರಕ್ಕೆ ಮನವಿ ಸಲ್ಲಿಸಲಾಗುತ್ತದೆ. ಆಗ ಅಂಕಿ ಅಂಶಗಳಲ್ಲಿ ವ್ಯತ್ಯಾಸ ಕಂಡು ಬರುವುದರಿಂದ ಪರಿಹಾರ ಬಿಡುಗಡೆ ವಿಳಂಬವಾಗುತ್ತದೆ. ಇದನ್ನು ತಡೆದು ನಿಖರ ಮಾಹಿತಿಕಲೆ ಹಾಕಲು ಆ್ಯಪ್‌ ಮೂಲಕ ಮಾಹಿತಿ ದಾಖಲಿಸಲಾಗುತ್ತಿದೆ.

Advertisement

ವಿಶೇಷ ವರದಿ- ಉಡುಪಿ: ಕೃಷಿ ಹಾಗೂ ಕಂದಾಯ ಇಲಾಖೆ ಸಹಯೋಗದಲ್ಲಿ ಅಭಿವೃದ್ಧಿಪಡಿಸಿರುವ ಮೊಬೈಲ್‌ ಆ್ಯಪ್‌ ಮೂಲಕ ಸೆ.1ರಿಂದ ಹಮ್ಮಿಕೊಂಡ ಬೆಳೆ ಸಮೀಕ್ಷೆ ಕಾರ್ಯ ಜಿಲ್ಲೆಯಾದ್ಯಂತ ಈಗಾಗಲೇ ಪೂರ್ಣಗೊಂಡಿದೆ. ಜಿಲ್ಲೆಯಲ್ಲಿ 171ರಷ್ಟು ರೈತರು ಮರು ಆಕ್ಷೇಪಣೆ ಸಲ್ಲಿಸಿದ್ದಾರೆ. ಇದರಲ್ಲಿ 47 ಆಕ್ಷೇಪಣೆಗಳು ವಿಲೇವಾರಿಯಾಗಿವೆ. ಉಳಿದ ಆಕ್ಷೇಪಣೆಗಳ ಪರಿಶೀಲನ ಹಂತದಲ್ಲಿದೆ. ಜಿಲ್ಲೆಯ 7 ತಾಲೂಕುಗಳಲ್ಲಿ ಈ ಸಮೀಕ್ಷೆ ನಡೆದಿದೆ.

ಸ್ಪಷ್ಟ ಮಾಹಿತಿ ಯಾವ ಸರ್ವೆ ಸಂಖ್ಯೆಯ ಜಮೀನಿನಲ್ಲಿ ರೈತರು ಯಾವ ಬೆಳೆ ಬೆಳೆಯುತ್ತಿದ್ದಾರೆ ಎಂಬ ಖಚಿತ ಮಾಹಿತಿ ಈ ಸಮೀಕ್ಷೆಯಲ್ಲಿ ದಾಖಲಾಗಿದೆ. ಈ ಮಾಹಿತಿ ಸರಕಾರಕ್ಕೆ ಸುಳ್ಳು ಮಾಹಿತಿ ಕೊಡುವುದನ್ನು ತಡೆಯುವ ಜತೆಗೆ ಬಿತ್ತನೆ ಗುರಿ ಸಾಧನೆ, ಬೆಳೆ ಹಾನಿ, ಬೆಳೆ ವಿಮೆ, ಬರ ಮುಂತಾದ ವಿಚಾರಗಳಲ್ಲಿ ಸರಕಾರದ ಅನುದಾನ ಬಳಸಿಕೊಳ್ಳಲು ಈ ಸಮೀಕ್ಷೆ ನೆರವಿಗೆ ಬರಲಿದೆ.

ಏನು ಉಪಯೋಗ? ಯಾವ ಬೆಳೆಯನ್ನು ರೈತರು ಎಷ್ಟು ಎಕರೆಯಲ್ಲಿ ಬೆಳೆದಿ¨ªಾರೆ ಎಂಬ ನಿಖರ ಮಾಹಿತಿ ಸರಕಾರಕ್ಕೆ ಸಿಗುತ್ತದೆ. ವಿವಿಧ ಕಾರಣಗಳಿಗೆ ಬೆಳೆ, ಎಷ್ಟು ಪ್ರದೇಶದಲ್ಲಿ ನಷ್ಟವಾಗಿದೆ ಎಂಬ ಮಾಹಿತಿ ಲಭಿಸುತ್ತದೆ. ಪರಿಹಾರ ಕೋರಿ ಕೇಂದ್ರಕ್ಕೆ ಅರ್ಜಿ ಸಲ್ಲಿಸಲು, ಪರಿಹಾರ ಬಂದಾಗ ರೈತರಿಗೆ ಸೂಕ್ತ ರೀತಿಯಲ್ಲಿ ನೀಡಲು ಅನುಕೂಲವಾಗುತ್ತದೆ. ಬೆಳೆ ಸಮೀಕ್ಷೆಯಿಂದ ರೈತರಿಗೆ ಪಹಣಿಯಲ್ಲಿ ಅವರ ಸರ್ವೆ ಸಂಖ್ಯೆಯಲ್ಲಿಯಾವ ಬೆಳೆ ಬೆಳೆದಿದೆಯೋ ಆ ಬೆಳೆಯ ಹೆಸರು ಮತ್ತು ವಿಸ್ತೀರ್ಣ ಸರಿಯಾಗಿ ದಾಖಲಾಗಲಿದೆ. ಬೆಳೆಯು ನಷ್ಟವಾದಲ್ಲಿ ಅವರ ಬೆಳೆ ವಿಸ್ತೀರ್ಣಕ್ಕೆ ಸರಿಯಾಗಿ ವಿಮೆ ಸಿಗುತ್ತದೆ.

ಆಕ್ಷೇಪಣೆಗಳಿಗೆ ಕಾರಣಗಳು
ಖಾಸಗಿ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಬೆಳೆ ಸಮೀಕ್ಷೆಯಲ್ಲಿ ಅಡಿಕೆ ಬೆಳೆಯ ಬದಲಿಗೆ ತೆಂಗು ಬೆಳೆ ಎಂದು ಹಾಗೂ ತೆಂಗಿನ ಬೆಳೆ ಇರುವಲ್ಲಿ ಅಡಿಕೆ ಬೆಳೆ ಎಂದು ನಮೂದಿಸಿರುವುದರಿಂದ ಕೂಡ ಆಕ್ಷೇಪಣೆ ಸಲ್ಲಿಕೆಗೆ ಕಾರಣವಾಗುತ್ತಿದೆ. ಬೆಳೆ ಸಮೀಕ್ಷೆ ವರದಿಯಲ್ಲಿ ತಮ್ಮ ಮೊಬೈಲ್‌ ಸಂಖ್ಯೆ ನಮೂದಾಗಿಲ್ಲ ಎಂದು ತೋರಿಸಲಾಗುತ್ತಿದೆ. ಮೊಬೈಲ್‌ ಮತ್ತು ಇಂಟರ್ನೆಟ್‌ ಜ್ಞಾನವುಳ್ಳ ರೈತರು ಇದರ ಬಗ್ಗೆ ತಿಳಿದು ಆಕ್ಷೇಪಣೆ ಸಲ್ಲಿಸಿದ್ದಾರೆ.

Advertisement

ಜಿಲ್ಲೆಯ 267 ಗ್ರಾಮಗಳಲ್ಲಿ 9,22,181ಪ್ಲಾಟ್‌ಗಳ ಬೆಳೆ ಸಮೀಕ್ಷೆ ಮಾಡಲು 982 ಮಂದಿ ಖಾಸಗಿ ಸಮೀಕ್ಷೆದಾರರು ನೋಂದಾಯಿಸಿದ್ದರು. ಕೃಷಿ ಮತ್ತು ತೋಟಗಾರಿಕೆ ಎರಡೂ ವಿಧದ ಬೆಳೆಗಳ ದತ್ತಾಂಶವನ್ನು ಮೊಬೈಲ್‌ ಆ್ಯಪ್‌ ಮೂಲಕ ಅಪ್‌ಲೋಡ್‌ ಮಾಡಲಾಗಿತ್ತು. ಈ ಸಮೀಕ್ಷೆಯನ್ನು ಆಧರಿಸಿಯೇ ಸರಕಾರದಿಂದ ಬೆಳೆಹಾನಿ ಪರಿಹಾರ, ಕನಿಷ್ಠ ಬೆಂಬಲ ಬೆಲೆಯಡಿ ಖರೀದಿ, ಬೆಳೆ ವಿಮೆ ಮೊದಲಾದ ಅಂಶಗಳು ನಿರ್ಧಾರವಾಗಲಿವೆ.

ಬೆಳೆ ಸಮೀಕ್ಷೆಯಲ್ಲಿ ವ್ಯತ್ಯಾಸವಿರುವ ಬಗ್ಗೆ ಅಕ್ಷರಸ್ಥ ರೈತರು ಆಕ್ಷೇಪಣೆ ಸಲ್ಲಿಸಿ ಮಾಹಿತಿ ಸರಿಪಡಿಸಿಕೊಂಡಿದ್ದಾರೆ. ಆದರೆ ಅನಕ್ಷರಸ್ಥರು ಈ ವಿಚಾರದಲ್ಲಿ ಹಿಂದೆ ಬಿದ್ದಿದ್ದು ಮುಂದೇನು? ಎಂಬ ಪ್ರಶ್ನೆ ಕೃಷಿಕರ ವಲಯದಲ್ಲಿ ಕಾಡಿದೆ.

ಸಮಸ್ಯೆಗಳೇನು?
ಆಯಾ ಜಮೀನಿಗೆ ಹೋದ ಕೂಡಲೇ ಸರ್ವೇ ಸಂಖ್ಯೆ ಸಹಿತ ಆ್ಯಪ್‌ ಮೂಲಕ ಎಲ್ಲ ಮಾಹಿತಿ ದಾಖಲಾಗುತ್ತವೆ. ಎಕರೆಗೆ ಅನುಗುಣವಾಗಿ ಯಾವ ಬೆಳೆ ಬೆಳೆಯಲಾಗಿದೆ ಎಂಬ ವಿವರ ಮಾಲಕರಿಂದ ಪಡೆಯಬೇಕು. ಆದರೆ ಎಕರೆಗಟ್ಟಲೆ ಪ್ರದೇಶದಲ್ಲಿ ವಿವಿಧ ಬಗೆಯ ಬೆಳೆಗಳಿರುವುದರಿಂದ ಅಸ್ಪಷ್ಟವಾಗಿ ನೋಂದಣೆಯಾಗಿರುತ್ತದೆ. ಇದನ್ನು ಖಚಿತಪಡಿಸುವ ಸಲುವಾಗಿ ರೈತರು ಮರು ಆಕ್ಷೇಪಣೆ ಸಲ್ಲಿಸುತ್ತಾರೆ.

ಮರು ಆಕ್ಷೇಪಣೆಗೆ ಒಂದು ವಾರ ಕಾಲಾವಕಾಶ ನೀಡಿದ್ದರ ಬಗ್ಗೆ ಹಲವರಿಗೆ ಅರಿವಿರಲಿಲ್ಲ. ಇದರಿಂದ ಕೆಲವು ರೈತರಿಗೆ ಮರು ಆಕ್ಷೇಪಣೆ ಸಲ್ಲಿಸಲು ಆಗಿರಲಿಲ್ಲ.

ಕೃಷಿ
ಬೆಳೆ ಆ್ಯಪ್‌ನಲ್ಲಿ ಮಾಹಿತಿ ಸಂಗ್ರಹಣೆ ಸರಿಯಾದ ರೀತಿಯಲ್ಲಿ ನಡೆಯುವಂತೆ ನೋಡಿಕೊಳ್ಳಬೇಕಾದ್ದು ಅಗತ್ಯ.

ಶೀಘ್ರದಲ್ಲಿ ವಿಲೇವಾರಿ
ಪಾಳು ಭೂಮಿಯನ್ನು ಕೃಷಿ ಭೂಮಿಯೆಂದು, ಕೃಷಿ ಭೂಮಿಯನ್ನು ಪಾಳು ಭೂಮಿಯೆಂದು ನಮೂದಿಸುವ ಕಾರಣ ಆಕ್ಷೇಪಣೆಗಳು ಬರುತ್ತವೆ. ಜಿಲ್ಲೆಯಿಂದ 171 ಆಕ್ಷೇಪಣೆಗಳು ಬಂದಿವೆ. ಇದರಲ್ಲಿ ಈಗಾಗಲೇ 47 ಸರಿಯಾಗಿವೆ. ಉಳಿದವುಗಳು ಶೀಘ್ರದಲ್ಲೇ ವಿಲೇವಾರಿ ಯಾಗಲಿವೆ.
– ಡಾ| ಎಚ್‌.ಕೆಂಪೇಗೌಡ, ಜಂಟಿ ಕೃಷಿ ನಿರ್ದೇಶಕರು, ಉಡುಪಿ

ಮಾಹಿತಿ ಕೊರತೆ
ಬೆಳೆ ಸಮೀಕ್ಷೆ ಮಾಡುವ ಸಂದರ್ಭ ಯಾವುದೇ ಮಾಹಿತಿ ನೀಡುವುದಿಲ್ಲ. ಇದರಿಂದಾಗಿ ತೋಟದಲ್ಲಿರುವ ಮರಗಳ ಅಂಕಿ-ಸಂಖ್ಯೆಯನ್ನು ಸ್ಪಷ್ಟವಾಗಿ ತಿಳಿಸಲು ಆಗುವುದಿಲ್ಲ. ಸಮೀಕ್ಷೆದಾರರು ಬರುವ ಮಾಹಿತಿ ಮೊದಲೇ ತಿಳಿಸಿದರೆ ಕೃಷಿಕರಿಗೆ ಮತ್ತಷ್ಟು ಅನುಕೂಲವಾಗುತ್ತಿತ್ತು.
– ರಾಮಕೃಷ್ಣ ಶರ್ಮ ಬಂಟಕಲ್ಲು,
ಅಧ್ಯಕ್ಷರು, ಜಿಲ್ಲಾ ಕೃಷಿಕ ಸಂಘ

Advertisement

Udayavani is now on Telegram. Click here to join our channel and stay updated with the latest news.

Next