Advertisement

Crop damage: ಬಿತ್ತನೆ 53,592 ಹೆಕ್ಟರ್‌, ಬೆಳೆಹಾನಿ 35,974 ಹೆ.

12:11 PM Oct 03, 2023 | Team Udayavani |

ಕೋಲಾರ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಜಿಲ್ಲಾದ್ಯಂತ 53,592 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದರೆ 35,974 ಹೆಕ್ಟೇರ್‌ ಬೆಳೆ ಹಾನಿ ಸಂಭವಿಸಿದೆ. ಅಕಾಲಿಕ ಮಳೆ, ಸಕಾಲಿಕವಾಗಿ ಮಳೆ ಬಾರದಿರುವುದು ಪ್ರಸಕ್ತ ಮುಂಗಾರು ಹಂಗಾಮಿನ ಬೆಳೆಯ ಮೇಲೆ ತೀವ್ರ ಪರಿಣಾಮ ಬೀರಿದ್ದು, ಈ ಬಾರಿ ರೈತರು ಬಹುತೇಕ ನಷ್ಟದ ಹಾದಿಯಲ್ಲಿದ್ದಾರೆನ್ನುವುದನ್ನು ಖಚಿತಪಡಿಸುತ್ತಿದೆ.

Advertisement

ಬಿತ್ತನೆ ಪ್ರಮಾಣ: ಮುಂಗಾರು ಹಂಗಾಮಿನಲ್ಲಿ 1.02 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ ಹೊಂದಲಾಗಿದ್ದು, ಶೇ.62.24 ಪ್ರಮಾಣದಲ್ಲಿ ಕೇವಲ 53,592 ಹೆಕ್ಟೇರ್‌ ಗುರಿ ಸಾಧಿಸಲಾಗಿದೆ.

ತಾಲೂಕುವಾರು ಶ್ರೀನಿವಾಸಪುರದಲ್ಲಿ ಶೇ.39.93, ಬಂಗಾರಪೇಟೆಯಲ್ಲಿ ಶೇ.64.37, ಮುಳಬಾಗಿಲಿನಲ್ಲಿ ಶೇ.32.10, ಕೆಜಿಎಫ್‌ನಲ್ಲಿ ಶೇ.47.83, ಮಾಲೂರಿನಲ್ಲಿ ಶೇ.61.89 ಮತ್ತು ಕೋಲಾರದಲ್ಲಿ ಶೇ.74.26 ಬಿತ್ತನೆಯಾಗಿದೆ. ಬೆಳೆವಾರು: ಜಿಲ್ಲಾದ್ಯಂತ ರಾಗಿ 68,400 ಹೆಕ್ಟೇರ್‌ ಬಿತ್ತನೆ ಗುರಿ ಹೊಂದಿದ್ದು, 42,822 ಹೆಕ್ಟೇರ್‌ ಗುರಿ ಸಾಧನೆಯಾಗಿದೆ. ತೊಗರಿ 4,620 ಹೆಕ್ಟೇರ್‌ ಗುರಿ, 1,088 ಹೆಕ್ಟೇರ್‌ ಸಾಧನೆ, ನೆಲಗಡಲೆ 10,980 ಹೆಕ್ಟೇರ್‌ ಗುರಿ, 2,945 ಸಾಧನೆ, ಅವರೆ 9,000 ಹೆಕ್ಟೇರ್‌ ಗುರಿ, 4,032 ಹೆಕ್ಟೇರ್‌ ಸಾಧನೆ, ಅಲಸಂದೆ 2,095 ಹೆಕ್ಟೇರ್‌ ಗುರಿ, 909 ಹೆಕ್ಟೇರ್‌ ಸಾಧನೆ, ಇತರೇ ಬೆಳೆಗಳು 7,495 ಹೆಕ್ಟೇರ್‌ ಗುರಿ, 1,796 ಹೆಕ್ಟೇರ್‌ ಸಾಧನೆಯಾಗಿದೆ.

ಬೆಳೆಹಾನಿ: ಜಿಲ್ಲಾದ್ಯಂತ ಸೆಪ್ಟೆಂಬರ್‌ ಅಂತ್ಯದವರೆವಿಗೂ 35,974 ಹೆಕ್ಟೇರ್‌ ಬೆಳೆಹಾನಿಯಾಗಿದ್ದು, ಕೋಲಾರ ತಾಲೂಕಿನಲ್ಲಿ 9,245 ಹೆಕ್ಟೇರ್‌, ಶ್ರೀನಿವಾಸಪುರ ದಲ್ಲಿ 3,622 ಹೆಕ್ಟೇರ್‌, ಮಾಲೂರಿನಲ್ಲಿ 6,745 ಹೆಕ್ಟೇರ್‌, ಮುಳಬಾಗಿಲಿನಲ್ಲಿ 4,842 ಹೆಕ್ಟೇರ್‌, ಬಂಗಾರಪೇಟೆಯಲ್ಲಿ 8,104 ಹೆಕ್ಟೇರ್‌ ಮತ್ತು ಕೆಜಿಎಫ್‌ನಲ್ಲಿ 3,416 ಹೆಕ್ಟೇರ್‌ ಬೆಳೆಹಾನಿಯಾಗಿದೆ. ಹಿಡುವಳಿದಾರರು: ಕೋಲಾರ ಜಿಲ್ಲೆಯಲ್ಲಿ 3,03,766 ಲಕ್ಷ ರೈತರನ್ನು ಗುರುತಿಸಲಾಗಿದ್ದು, 2,81,033 ಸಣ್ಣ ಮತ್ತು ಅತಿ ಸಣ್ಣ ರೈತರು, 22,385 ಮಧ್ಯಮ ರೈತರು, 348 ದೊಡ್ಡ ರೈತರೆಂದು ಗುರುತಿಸಲಾಗಿದೆ. ಭೌಗೋಳಿಕ ವಿಸ್ತ್ರೀರ್ಣ: ಕೋಲಾರ ಜಿಲ್ಲೆಯ ಭೌಗೋಳಿಕ ವಿಸ್ತ್ರೀರ್ಣ 3,74,966 ಹೆಕ್ಟೇರ್‌ ಇದ್ದು, ನಿವ್ವಳ ಬಿತ್ತನೆ ಪ್ರದೇಶ 2,10,369 ಆಗಿದೆ. ಕೃಷಿ ಬೆಳೆಗಳನ್ನು 1,01,559 ಹೆಕ್ಟೇರ್‌ನಲ್ಲಿ ಬೆಳೆಯಲಾಗುತ್ತಿದ್ದು, 15,626 ಹೆಕ್ಟೇರ್‌ ಬೀಳುಭೂಮಿಯಾಗಿದೆ. 55,556 ಹೆಕ್ಟೇರ್‌ ನೀರಾವರಿ ಪ್ರದೇಶವಾಗಿದೆ.

ಬಿತ್ತನೆ ಬೀಜ ವಿತರಣೆ: ಜಿಲ್ಲೆಯಲ್ಲಿ ಈವರೆವಿಗೂ ಒಟ್ಟು 1513.51 ಕ್ವಿಂಟಲ್‌ ಬಿತ್ತನೆ ಬೀಜಗಳನ್ನು ವಿತರಿಸಲಾಗಿದ್ದು, ಈ ಪೈಕಿ 810.43 ಕ್ವಿಂಟಲ್‌ ರಾಗಿ, 32.75 ಕ್ವಿಂಟಲ್‌ ತೊಗರಿ, 638.18 ಕ್ವಿಂಟಲ್‌ ನೆಲಗಡಲೆ, 32.15 ಕ್ವಿಂಟಲ್‌ ಅಲಸಂದೆ ಮತ್ತು 0.56 ಕ್ವಿಂಟಲ್‌ ಮುಸುಕಿನ ಜೋಳವನ್ನು ವಿತರಿಸಲಾಗಿದೆ.

Advertisement

ಬೆಳೆ ಸಮೀಕ್ಷೆ: ಜಿಲ್ಲಾದ್ಯಂತ 7,91,198 ಬೆಳೆಗಳನ್ನು ಸಮೀಕ್ಷೆ ಮಾಡುವ ಗುರಿ ಹೊಂದಿದ್ದು, 573171 ಬೆಳೆಗಳ ಸಮೀಕ್ಷೆ ಪ್ರಗತಿಯಲ್ಲಿದ್ದು, 218025 ಬೆಳೆಗಳ ಸಮೀಕ್ಷೆ ಬಾಕಿ ಇದೆ. ಶೇ.72.24 ರಷ್ಟು ಬೆಳೆ ಸಮೀಕ್ಷೆಯಾಗಿದೆ. ತಾಲೂಕುವಾರು ಬಂಗಾರಪೇಟೆಯಲ್ಲಿ ಶೇ.81.67, ಕೆಜಿಎಫ್‌ನಲ್ಲಿ ಶೇ.81.03, ಕೋಲಾರದಲ್ಲಿ ಶೇ.65.81, ಮಾಲೂರಿನಲ್ಲಿ ಶೇ.70.47, ಮುಳಬಾಗಿಲಿನಲ್ಲಿ ಶೇ.77.21 ಮತ್ತು ಶ್ರೀನಿವಾಸಪುರದಲ್ಲಿ ಶೇ.67.70 ರಷ್ಟು ಬೆಳೆ ಸಮೀಕ್ಷೆಯಾಗಿದೆ. ಬೆಳೆ ಸಮೀಕ್ಷೆಯನ್ನು ಚುರುಕುಗೊಳಿಸುವ ಸಲುವಾಗಿ ಪ್ರತಿ ರೈತರು ತಾವೇ ಬೆಳೆ ಸಮೀಕ್ಷೆ ಆಪ್‌ ಮೂಲಕ ಬೆಳೆಯ ಸ್ಥಿತಿಗತಿಗಳನ್ನು ದಾಖಲಿಸಿಬೇಕೆಂದು ಕೃಷಿ ಇಲಾಖೆ ಕೋರಿದೆ.

ಬೆಳೆ ವಿಮೆ: ಕೋಲಾರ ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಲ್ಲಿ 71,822 ವಿಮಾ ಪಾಲಿಸಿಗಳಿದ್ದು, 35,267 ಹೆಕ್ಟೇರ್‌ ವ್ಯಾಪ್ತಿ ಬೆಳೆಯನ್ನು ವಿಮಾ ಮೂಲಕ ರಕ್ಷಣೆ ನೀಡಲಾಗಿತ್ತು. ಈ ಪೈಕಿ 39,185 ಪಾಲಿಸಿಗಳಿಗೆ 3,131 ರೂ.ಗಳ ವಿಮಾ ಪರಿಹಾರ ಒದಗಿಸಲು ಕ್ರಮವಹಿಸಲಾಗಿದೆ. 38,979 ಪಾಲಿಸಿಗಳಿಗೆ 3,112 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. 206 ಅರ್ಜಿಗಳ 19.01 ಲಕ್ಷ ರೂ ಬಾಕಿ ಉಳಿದಿದೆ. ಜಿಲ್ಲೆಯಲ್ಲಿ ಎಷ್ಟೆಷ್ಟು ಮಳೆ ಕೊರತೆ?: ಜಿಲ್ಲಾದ್ಯಂತ 2023 ಜನವರಿಯಿಂದ ಸೆಪ್ಟೆಂಬರ್‌ ಅಂತ್ಯದವರೆವಿಗೂ ಬಿದ್ದ ಮಳೆ ಪ್ರಮಾಣದಲ್ಲಿ ಶೇ.12 ರಷ್ಟು ಹೆಚ್ಚುವರಿ ಮಳೆಯಾಗಿದೆ. ಆದರೆ, ಮುಂಗಾರು ಹಂಗಾಮು ಆರಂಭವಾದ ನಂತರ ಮಳೆ ಕುಂಠಿತಗೊಂಡಿರುವುದರಿಂದ ಬಿತ್ತನೆ ಪ್ರಮಾಣ ಶೇ.52 ಕ್ಕೆ ಸೀಮಿತವಾಗುವಂತಾಗಿದೆ.

ಜನವರಿಯಲ್ಲಿ ಶೇ.95 ಕೊರತೆ, ಫೆಬ್ರವರಿಯಲ್ಲಿ ಶೇ.100 ಕೊರತೆ, ಮಾರ್ಚ್‌ನಲ್ಲಿ ಶೇ.351 ರಷ್ಟು ಹೆಚ್ಚಳ, ಏಪ್ರಿಲ್‌ನಲ್ಲಿ ಶೇ.31 ಕೊರತೆ, ಮೇನಲ್ಲಿ ಶೇ.97 ಹೆಚ್ಚುವರಿ, ಜೂನ್‌ನಲ್ಲಿ ಶೇ.34 ಹೆಚ್ಚುವರಿ, ಜುಲೈನಲ್ಲಿ ಶೇ.26 ಕೊರತೆ, ಆಗಸ್ಟ್‌ನಲ್ಲಿ ಶೇ.76 ಕೊರತೆ ಹಾಗೂ ಸೆಪ್ಟೆಂಬರ್‌ನಲ್ಲಿ ಶೇ.29 ಹೆಚ್ಚುವರಿ ಮಳೆ ದಾಖಲಾಗಿದೆ.

ಕೋಲಾರ ಜಿಲ್ಲೆಯ 6 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದು, ಸಂಕಷ್ಟಗಳನ್ನು ಎದುರಿಸಲು ಅಗತ್ಯ ಅನುದಾನ ಒದಗಿಸಲು ಸರ್ಕಾರ ಸಿದ್ಧತೆ ನಡೆಸಿಕೊಂಡಿದೆ. ಕೇಂದ್ರದ ಬರ ಪರಿಶೀಲನಾ ತಂಡ ಸಮೀಕ್ಷೆ ನಡೆಸಿ ವರದಿ ನೀಡಿದ ನಂತರ ಬರಪರಿಹಾರಕ್ಕೆ ಅಗತ್ಯವಾದ ಹಣ ಬಿಡುಗಡೆ ಮಾಡಲಾಗುವುದು. ● ಚೆಲುವರಾಯಸ್ವಾಮಿ, ಕೃಷಿ ಸಚಿವರು, ಕೋಲಾರ ಜಿಲ್ಲೆ ಭೇಟಿ ಸಂದರ್ಭದಲ್ಲಿ.

– ಕೆ.ಎಸ್‌.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next