Advertisement

ಮಹಡಿಯಿಂದ ಎಸೆದು ಸ್ವಂತ ಮಗುವಿನ ಕೊಲೆ; ತಾನೂ ಆತ್ಮಹತ್ಯೆ ನಾಟಕವಾಡಿದ ದಂತವೈದ್ಯೆ

11:30 PM Aug 05, 2022 | Team Udayavani |

ಬೆಂಗಳೂರು: ಜನ್ಮ ಕೊಟ್ಟ ತಾಯಿಯೇ ತನ್ನ ಬುದ್ದಿಮಾಂಧ್ಯ ಮಗಳನ್ನು ನಾಲ್ಕನೇ ಮಹಡಿಯಿಂದ ಎಸೆದು ಕೊಲೆಗೈದಿರುವ  ಘಟನೆ ಸಂಪಂಗಿರಾಮ ನಗರದಲ್ಲಿ ನಡೆದಿದೆ.

Advertisement

ದ್ಯುತಿ (6) ಕೊಲೆಯಾದ ಮಗುವಾಗಿದ್ದು, ಆರೋಪಿ ಸುಷ್ಮಾರನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದ ವಿವರ
ಸಾಫ್ಟ್ ವೇರ್‌ ಎಂಜಿನಿಯರ್‌ ಕಿರಣ್‌ ಮತ್ತು ದಂತ ವೈದ್ಯೆ ಸುಷ್ಮಾ ಏಳು ವರ್ಷಗಳ ಹಿಂದೆ ಮದುವೆಯಾಗಿದ್ದು,   ಕುಟುಂಬ ಸಮೇತ ಸಿಕೆಎಸ್‌ ಗಾರ್ಡನ್‌ನ ಅದ್ವಿತ್‌ ಅಪಾರ್ಟ್‌ಮೆಂಟ್‌ನ ನಾಲ್ಕನೇ ಮಹಡಿಯ ಫ್ಲ್ಯಾಟ್‌ನಲ್ಲಿ ವಾಸವಾಗಿದ್ದಾರೆ.  ಮಗಳು  ಆರು ವರ್ಷವಾದರೂ ಮಾತನಾಡುತ್ತಿರಲಿಲ್ಲ. ಮತ್ತೊಂದೆಡೆ ದಂತ ವೈದ್ಯೆಯಾಗಿದ್ದರೂ ಸುಷ್ಮಾಳಿಗೆ ಸರಿಯಾಗಿ ವೃತ್ತಿ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಕೇವಲ ಮಗುವಿನ ಪಾಲನೆಯಷ್ಟೇ ಮಾಡಬೇಕಾಗಿತ್ತು. ಅದರಿಂದ ಬೇಸತ್ತು ಈ ಕೃತ್ಯ ಎಸಗಿದ್ದಾಳೆ ಎಂದು ಹೇಳಲಾಗಿದೆ.

ಕೊಲೆ ದೃಶ್ಯ ಸಿಸಿ ಕೆಮರಾದಲ್ಲಿ ಸೆರೆ
ಆ.3ರಂದು ಬೆಳಗ್ಗೆ  ಕಿರಣ್‌ ಕೆಲಸಕ್ಕೆ ತೆರಳಿದ ಬಳಿಕ ಸುಷ್ಮಾ ಮಗಳನ್ನು ಆಟವಾಡಿಸುವ ನೆಪದಲ್ಲಿ ಬಾಲ್ಕನಿಗೆ ಬಂದಿದ್ದಾಳೆ. ಮೊದಲಿಗೆ ಪುತ್ರಿಯ ಕೈ ಹಿಡಿದು ನಡೆಸಿದ್ದಾರೆ. ಬಳಿಕ ಒಂದೆರಡು ಬಾರಿ ಮಗಳನ್ನು ಎಸೆಯುವಂತೆ ನಟಿಸಿ, ಕೊನೆಗೆ  ಎಸೆದೇ ಬಿಟ್ಟಿದ್ದಳು. ಬಳಿಕ ಗ್ರೀಲ್‌ ಮೇಲೆ ಕುಳಿತು ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ನಾಟಕವಾಡಿದ್ದಾಳೆ. ಆಕೆಯನ್ನು ಅಕ್ಕಪಕ್ಕದವರು ರಕ್ಷಿಸಿದ್ದಾರೆ. ಇದೆಲ್ಲವೂ ಸಿಸಿ ಕೆಮರಾದಲ್ಲಿ ಸೆರೆಯಾಗಿವೆ ಎಂದು ಪೊಲೀಸರು ಹೇಳಿದರು.

ಆಸ್ಪತ್ರೆಯಲ್ಲಿ ಸಾವು
ಮಗುವನ್ನು  ಕೂಡಲೇ ಸ್ಥಳೀಯರು ಖಾಸಗಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ನಿಮ್ಹಾನ್ಸ್‌ಗೆ ಸಾಗಿಸುತ್ತಿದ್ದಾಗ ಮಾರ್ಗ ಮಧ್ಯೆ  ಮೃತಪಟ್ಟಿತು.

Advertisement

ಕಾಲುಜಾರಿ ಬಿದ್ದಿದೆ ಎಂದ ಸುಷ್ಮಾ!
ಮಗಳು ನನ್ನ  ಕೈ ಬಿಡಿಸಿಕೊಂಡು ಆಟವಾಡುತ್ತಿದ್ದಳು. ಈ ವೇಳೆ ಕಾಲು ಜಾರಿ ಬಿದ್ದಿದ್ದಾಳೆ ಎಂದು ಸುಷ್ಮಾ ಕಥೆ ಕಟ್ಟಿದ್ದಳು.  ಅನುಮಾನಗೊಂಡ ಪೊಲೀಸರು ಸಿಸಿಕೆಮರಾ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ. ಮಗುವಿನ ತಂದೆ  ಕಿರಣ್‌ ನೀಡಿದ ದೂರಿನಂತೆ  ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರೈಲು ನಿಲ್ದಾಣದಲ್ಲಿ ತೊರೆದಿದ್ದಳು
ಐದು ತಿಂಗಳ ಹಿಂದೆ ಸುಷ್ಮಾ ಇದೇ ಮಗುವನ್ನು ರೈಲು ನಿಲ್ದಾಣದಲ್ಲೇ ಬಿಟ್ಟು ಬಂದಿದ್ದಳು. ಅದೇ ವಿಚಾರಕ್ಕೆ ದಂಪತಿ ನಡುವೆ ಜಗಳ ನಡೆದಿತ್ತು. ಬಳಿಕ ಪತಿ ಕಿರಣ್‌ ಹುಡುಕಾಡಿ ಪುತ್ರಿಯನ್ನು ಪತ್ತೆ ಹಚ್ಚಿ ಕರೆತಂದಿದ್ದರು ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next