Advertisement

ಯುವತಿ ಮೇಲೆ ಅತ್ಯಾಚಾರ: ಆರೋಪಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

02:11 AM Jul 09, 2022 | Team Udayavani |

ಕುಂದಾಪುರ: ಮದುವೆಯಾಗುತ್ತೇನೆಂದು ನಂಬಿಸಿ, ಅತ್ಯಾಚಾರ ಎಸಗಿ, ಮಗು ಕರುಣಿಸಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಗಣೇಶ್‌ ಶೆಟ್ಟಿ (35) ಅಪರಾಧಿಯೆಂದು ಸಾಬೀತಾಗಿದ್ದು, ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಕಠಿನ ಶಿಕ್ಷೆ ವಿಧಿಸಿದೆ.

Advertisement

ಪ್ರಕರಣದ ವಿಚಾರಣೆ ನಡೆಸಿದ ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಅಬ್ದುಲ್‌ ರಹೀಂ ಹುಸೇನ್‌ ಶೇಖ್‌ ಅವರು, ಅಪರಾಧಿ ಕೆರಾಡಿಯ ನಿವಾಸಿ ಗಣೇಶ್‌ ಶೆಟ್ಟಿಗೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ 10 ವರ್ಷಗಳ ಕಠಿನ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ, ಮೋಸ ಮಾಡಿ ವಂಚಿಸಿದ್ದಕ್ಕೆ 1 ವರ್ಷ ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಿ, ತೀರ್ಪು ನೀಡಿದ್ದಾರೆ.

ಸಂತ್ರಸ್ತೆ ಕಾನೂನು ಸೇವಾ ಪ್ರಾಧಿಕಾರದ ಮೂಲಕ ನೆರವನ್ನು ಪಡೆದುಕೊಳ್ಳಬಹುದು. ಸಂತ್ರಸ್ತೆ ಪರ ಕುಂದಾಪುರದ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಬೇಳೂರು ಪ್ರಕಾಶ್ಚಂದ್ರ ಶೆಟ್ಟಿ ವಾದಿಸಿದ್ದರು.

ಪ್ರಕರಣದ ಹಿನ್ನೆಲೆ
2013ರಲ್ಲಿ ಆರೋಪಿ ಗಣೇಶ್‌ ಶೆಟ್ಟಿಯು ಕಾಲೇಜು ವಿದ್ಯಾರ್ಥಿನಿ ಯೊಬ್ಬಳೊಂದಿಗೆ ಪ್ರೀತಿಸುವ ನಾಟಕವಾಡಿ, ಸಲುಗೆ ಬೆಳೆಸಿಕೊಂಡು, ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ, ಗರ್ಭವತಿಯನ್ನಾಗಿಸಿದ್ದ. ಆದರೆ ಬಳಿಕ ಆತ ಮದುವೆಯಾಗಲು ನಿರಾಕರಿಸಿದ್ದು, ಸಂಪರ್ಕಕ್ಕೆ ಸಿಗದೇ ವಂಚಿಸಿದ್ದ. ಯುವತಿಯು ಗಂಡು ಮಗುವಿಗೆ ಜನ್ಮ ನೀಡಿದ್ದಳು.

ಈ ಪ್ರಕರಣಕ್ಕೆ ಸಂಬಂಧಿಸಿ ಕೇಸು ದಾಖಲಾಗಿತ್ತು. ತನಿಖೆ ನಡೆಸಿದ ಆಗಿನ ಕುಂದಾಪುರ ವೃತ್ತ ನಿರೀಕ್ಷಕ ದಿವಾಕರ್‌ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

Advertisement

ಆರೋಪಿಯನ್ನು 2014ರ ಅ. 18 ರಂದು ಬಂಧಿಸಲಾಗಿತ್ತು. ಮಗುವಿನ ಡಿಎನ್‌ಎ ವರದಿಯೊಂದಿಗೆ ಆರೋಪಿ ಗಣೇಶ್‌ ಶೆಟ್ಟಿ ಡಿಎನ್‌ಎ ವರದಿ ಹೊಂದಾಣಿಕೆಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next