Advertisement

ಕರಾವಳಿ ಭಾಗದ ಅಪರಾಧ ಸುದ್ದಿಗಳು

01:51 AM Apr 25, 2019 | Sriram |

ಅಕ್ರಮ ಮರಳು ವಶ: ಬೆಂಗಾವಲಿಗೆ ಬಂದಿದ್ದ ಕಾರಿನಲ್ಲಿದ್ದ ವ್ಯಕ್ತಿ ಬಂಧನ
ಪಡುಬಿದ್ರಿ: ಅಕ್ರಮವಾಗಿ 15 ಟನ್‌ ಮರಳನ್ನು ಸಾಗಿಸುತ್ತಿದ್ದ ಲಾರಿಯೊಂದನ್ನು ಪಡುಬಿದ್ರಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ತಡೆದು ನಿಲ್ಲಿಸಲು ಯತ್ನಿಸಿದಾಗ ಬ್ಯಾರಿಕೇಡನ್ನು ಹೊಡೆದು ಮುನ್ನುಗ್ಗಿದ್ದು ಲಾರಿಯನ್ನು ಬೆನ್ನಟ್ಟಿದ ಪೊಲೀಸರು ಪಡುಬಿದ್ರಿಯ ಕಾಮತ್‌ ಪೆಟ್ರೋಲ್‌ ಬಂಕ್‌ ಬಳಿ ಅದನ್ನು ವಶಪಡಿಸಿಕೊಂಡಿದ್ದಾರೆ.

Advertisement

ಲಾರಿಯ ಬೆಂಗಾವಲಿಗೆ ಅದರ ಹಿಂದಿದ್ದ ಕಾರಿನ ಚಾಲಕ ಮಹಮ್ಮದ್‌ ನಿಜಾಮುದ್ದೀನ್‌ (22ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.ಲಾರಿ ಚಾಲಕ ಮಧು ಹಾಗೂ ಇನ್ನೋರ್ವ ಆರೋಪಿ ಹುಸೈನ್‌ ಶಬ್ಬೀರ್‌ ತಲೆಮರೆಸಿಕೊಂಡಿದ್ದಾರೆ. ಪಡುಬಿದ್ರಿ ಠಾಣಾ ಎಎಸ್‌ಐ ದಿವಾಕರ್‌ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಕಾಪು: ಅಕ್ರಮ ಮರಳು ಸಾಗಾಟ
ಪತ್ತೆ; ಲಾರಿ ಚಾಲಕ ವಶ
ಕಾಪು, / ಪಡುಬಿದ್ರಿ: ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಲಾರಿಯನ್ನು ಪತ್ತೆ ಹಚ್ಚಿದ ಪೊಲೀಸರು, ಸಿನಿಮೀಯ ರೀತಿಯಲ್ಲಿ ಲಾರಿಯನ್ನು ಬೆನ್ನಟ್ಟಿ ಲಾರಿ ಸಹಿತ ಚಾಲಕನನ್ನು ವಶಕ್ಕೆ ಪಡೆದುಕೊಂಡ ಘಟನೆ ಬುಧವಾರ ಮುಂಜಾನೆ ಕಾಪುವಿನಲ್ಲಿ ನಡೆದಿದೆ. ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿಯ ಚಾಲಕ ಅಲೋಕ್‌ (27) ಬಂಧಿತ ಆರೋಪಿ. ಅಕ್ರಮ ಮರಳು ಸಾಗಾಟ ದಂಧೆಯ ರೂವಾರಿ ಶಬೀರ್‌ ಹುಸೈನ್‌ ಮತ್ತು ಲಾರಿಗೆ ಎಸ್ಕಾರ್ಟ್‌ ನೀಡುತ್ತಿದ್ದ ಕಾರು ಚಾಲಕ ಪರಾರಿಯಾಗಿದ್ದಾರೆ.

ಗಾಜಿಯಾಬಾದ್‌ನಲ್ಲಿ ಪತ್ನಿ, ಮೂರು ಮಕ್ಕಳನ್ನು ಕೊಂದವ ಉಡುಪಿಯಲ್ಲಿ ಸೆರೆ
ಉಡುಪಿ: ಉತ್ತರ ಪ್ರದೇಶದ ಗಾಜಿಯಾಬಾದ್‌ ಇಂದಿರಾಪುರಂನಲ್ಲಿ ಪತ್ನಿ, ಮೂವರು ಮಕ್ಕಳಿಗೆ ಮಾದಕಪೇಯ ಕುಡಿಸಿ ಕೊಲೆ ನಡೆಸಿದ್ದ ಸುಮಿತ್‌ಕುಮಾರ್‌ನನ್ನು (32) ಉತ್ತರ ಪ್ರದೇಶದ ಪೊಲೀಸರು ಮಣಿಪಾಲದಲ್ಲಿ ಬಂಧಿಸಿ ಕರೆದೊಯ್ದಿದ್ದಾರೆ.

ಪೊಲೀಸ್‌ ಮೂಲಗಳ ಪ್ರಕಾರ ಈತ ದಿಲ್ಲಿಯಿಂದ ಕೇರಳಕ್ಕೆ ಹೋಗುವ ರೈಲಿನಲ್ಲಿ ಬಂದು ಸೋಮವಾರ ಇಂದ್ರಾಳಿ ರೈಲು ನಿಲ್ದಾಣದಲ್ಲಿ ಇಳಿದ. ಮಣಿಪಾಲ ಪೊಲೀಸರಿಗೆ ಶರಣಾದ ಈತನನ್ನು ಉತ್ತರ ಪ್ರದೇಶ ಪೊಲೀಸರು ಮಂಗಳವಾರ ಬಂಧಿಸಿ ಕರೆದೊಯ್ದರು.

Advertisement

ಬೆಂಗಳೂರಿನ ಐಟಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ಈತ ಗಾಜಿಯಾಬಾದ್‌ ಮನೆಯಲ್ಲಿ ಜನವರಿಯಲ್ಲಿ ಪತ್ನಿ, ಐದು ವರ್ಷದ ಒಂದು ಮಗು, ನಾಲ್ಕು ವರ್ಷದ ಅವಳಿ ಮಕ್ಕಳಿಗೆ ಮಾದಕ ಪೇಯ ಕುಡಿಸಿ ಕೊಂದ. ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಕೃತ್ಯದ ಬಗ್ಗೆ ಹೇಳಿಕೊಂಡದ್ದಲ್ಲದೆ ಭಾವನಿಗೆ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದ ಎನ್ನಲಾಗಿದೆ. ಇಂದ್ರಾಳಿ ರೈಲು ನಿಲ್ದಾಣದಲ್ಲಿ ಆತ್ಮಹತ್ಯೆ ಮಾಡಲೋಸುಗ ಇಳಿದಿರಬಹುದೆ ಎಂಬ ಶಂಕೆ ಮೂಡುತ್ತದೆ. ಈತ 2011ರಲ್ಲಿ ಮದುವೆಯಾಗಿದ್ದ, ಮತ್ತೆ ಕೆಲಸ ಕಳೆದುಕೊಂಡು ಈ ಕೃತ್ಯ ಎಸಗಿದ ಎಂದು ಹೇಳಲಾಗುತ್ತಿದೆ.

ಸಿದ್ದಾಪುರ: ಬೈಕ್‌ ಢಿಕ್ಕಿ, ದೂರು
ಸಿದ್ದಾಪುರ: ಸಿದ್ದಾಪುರ ಗ್ರಾಮದ ಜನ್ಸಾಲೆ ಬಳಿ ಎ.23ರಂದು ರಸ್ತೆ ದಾಟುತ್ತಿರುವಾಗ, ಅಶೋಕ ಅವರು ಅತೀ ವೇಗದಿಂದ ಬೈಕನ್ನು ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮ ಕೈ ಕಾಲುಗಳಿಗೆ ಗಾಯವಾಗಿದೆ ಎಂದು ಬದರಿನಾಥ ಅವರು ದೂರು ನೀಡಿದ್ದಾರೆ. ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಸ್ಕೂಟರ್‌ ಢಿಕ್ಕಿ: ಮಹಿಳೆಗೆ ಗಾಯ
ಮಂಗಳೂರು: ತೊಕ್ಕೊಟ್ಟು ಸಮೀಪದ ಅಂಬಿಕಾ ರೋಡ್‌ನ‌ ಗಟ್ಟಿ ಸಮಾಜ ಭವನದ ಎದುರು ಬುಧವಾರ ಬೆಳಗ್ಗೆ ಸ್ಕೂಟರ್‌ ಢಿಕ್ಕಿ ಹೊಡೆದು ಪಾದಚಾರಿ ಭವಾನಿ ಗಾಯಗೊಂಡಿದ್ದಾರೆ. ಭವಾನಿ ಅವರು ಮನೆಯಿಂದ ಬೆಳಗ್ಗೆ ಕುಂಬಳೆಗೆ ಮದುವೆಗೆಂದು ಹೊರಟು ರಸ್ತೆ ದಾಟುತ್ತಿದ್ದಾಗ ಕೋಟೆಕಾರು ಬೀರಿ ಕಡೆಯಿಂದ ತೊಕ್ಕೊಟ್ಟು ಕಡೆಗೆ ಹೋಗುತ್ತಿದ್ದ ಸ್ಕೂಟರ್‌ ಢಿಕ್ಕಿ ಹೊಡೆಯಿತು. ಭವಾನಿ ರಸ್ತೆಗೆ ಬಿದ್ದು ತಲೆಯ ಹಿಂಭಾಗಕ್ಕೆ ಹಾಗೂ ಕೈ ಮತ್ತು ಕಾಲುಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಕೂಟರ್‌ ಸವಾರೆ ಆಶ್ರಿತಾ ಅವರಿಗೂ ಸಣ್ಣ ಪುಟ್ಟ ಗಾಯಗಳಾಗಿವೆ.

ಕೆದಂಬಾಡಿ: ಕುಸಿದು ಬಿದ್ದು ಸಾವು
ಕೆಯ್ಯೂರು: ಮನೆಯ ಜಗಲಿಯಲ್ಲಿ ಕುಸಿದು ಬಿದ್ದು ಕೃಷಿ ಕೂಲಿ ಕಾರ್ಮಿಕರೋರ್ವರು ಮೃತಪಟ್ಟ ಘಟನೆ ಕೆದಂಬಾಡಿ ಗ್ರಾಮದಲ್ಲಿ ಎ. 23ರಂದು ನಡೆದಿದೆ. ಕೆದಂಬಾಡಿ ಗ್ರಾಮದ ಚಾವಡಿ ಹೊಸಮನೆ ಬಾಲಕೃಷ್ಣ ರೈ ಅವರ ಪುತ್ರ ಸೂರಂಬೈಲು ವಿಜಯ ಕುಮಾರ್‌ ರೈ (37) ಮೃತಪಟ್ಟವರು. ಅವರು ತಂದೆ, ತಾಯಿ, ಪತ್ನಿಯನ್ನು ಅಗಲಿದ್ದಾರೆ.

ಮಾನಹಾನಿಕಾರ ಪೋಸ್ಟ್‌, ಕೇಸು ದಾಖಲು
ಸಿದ್ದಾಪುರ: ಸಿದ್ದಾಪುರ ಗ್ರಾಮದ ಬೆಚ್ಚಳ್ಳಿ ಪ್ರಕಾಶ ಡಿ.ಶೆಟ್ಟಿ ಅವರು ಫೇಸ್‌ಬುಕ್‌ನಲ್ಲಿ ಮಾನಹಾನಿಕಾರ ಹಾಗೂ ಅವಹೇಳನಕಾರಿಯಾಗಿ ಫೋಸ್ಟ್‌ ಮಾಡಿದಾರೆಂದು ಅಂಪಾರು ಗ್ರಾಮದ ಮೂಡುಬಗೆ ಜ್ಯೋತಿ ನಾಯ್ಕ ಅವರು ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ. ಅವರು ನೀಡಿರುವ ಖಾಸಗಿ ದೂರಿನಂತೆ, ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲಾಗಿದೆ.

ವಡೇರಹೋಬಳಿ ಜಂಕ್ಷನ್‌ ಬಳಿ ಹಲ್ಲೆ
ಕುಂದಾಪುರ: ವಡೇರಹೋಬಳಿ ಗ್ರಾಮದ ವಿನಾಯಕ ಜಂಕ್ಷನ್‌ ಬಳಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆದಿದೆ.ರಸ್ತೆಯಲ್ಲಿ ಅಡ್ಡಬಿದ್ದ ಬೊಲೆರೋ ವಾಹನ ಕಂಡು, ಅಬ್ದುಲ್‌ ರಶೀದ್‌ (31) ಅವರು ಏನಾಯಿತು ಎಂದು ಕೇಳಿದಾಗ ಕೋಟೇಶ್ವರದ ಭರತ್‌ ಬಂಗೇರ ಹಾಗೂ ಇತರರು ಬೈದು ಕಲ್ಲಿನಿಂದ ಹಲ್ಲೆ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ.

ಅಪರಿಚಿತ ವ್ಯಕ್ತಿಯ ಶವ ಪತ್ತೆ
ಉಡುಪಿ: ಉಡುಪಿ ಜಾಮೀಯಾ ಮಸೀದಿಯ ರಿಲಾಯನ್ಸ್‌ ಮಾರ್ಟ್‌ ಸಮೀಪದ ಶೂ ಅಂಗಡಿ ಎದುರು ಸುಮಾರು 30-35 ವರ್ಷದ, 5.9 ಅಡಿ ಎತ್ತರ‌, ಸಪೂರ ಶರೀರ, ಗೋಧಿ ಮೈ ಬಣ್ಣ ಹೊಂದಿದ ವ್ಯಕ್ತಿ ಮಲಗಿದ್ದಲ್ಲಿಯೇ ಮೃತಪಟ್ಟಿದ್ದಾರೆ. ಮೃತ ವಾರಸುದಾರರು ಇದ್ದಲ್ಲಿ ನಗರ ಪೊಲೀಸ್‌ ಠಾಣೆ ದೂ. ಸಂಖ್ಯೆ: 0820-2520444 ಅನ್ನು ಸಂಪರ್ಕಿಸಬಹುದೆಂದು ನಗರ ಪೊಲೀಸ್‌ ಠಾಣಾಧಿಕಾರಿ ತಿಳಿಸಿದ್ದಾರೆ.

ಅಪರಿಚಿತ ಮಹಿಳೆಯ ಮೃತ ದೇಹ ಪತ್ತೆ
ಉಡುಪಿ: ಕುತ್ಪಾಡಿ ಗ್ರಾಮದ ಕುತ್ಪಾಡಿ-ಪಡುಕೆರೆ ವೀರಕೇಸರಿ ಬಳಿ ಕಡಲಕಿನಾರೆಯ ಬಂಡೆಗಳ ನಡುವೆ ಸುಮಾರು 45-50 ವರ್ಷದ, 5.2 ಅಡಿ ಎತ್ತರದ, ದುಂಡು ಮುಖ, ಎಣ್ಣೆ ಕಪ್ಪು ಮೈ ಬಣ್ಣ ದ ಅಪರಿಚಿತ ಮಹಿಳೆಯ ಮೃತ ದೇಹ ಪತ್ತೆಯಾಗಿದೆ. ಮೃತ ಶರೀರ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಮೃತ ಮಹಿಳೆಯ ವಾರಸುದಾರರು ಇದ್ದಲ್ಲಿ ಪಿಎಸ್‌ಐ ನಗರ ಪೊಲೀಸ್‌ ಠಾಣೆ ದೂ.ಸಂಖ್ಯೆ: 0820-2520444, ಪೊಲೀಸ್‌ ವೃತ್ತ ನಿರೀಕ್ಷಕ ದೂ.ಸಂಖ್ಯೆ: 0820-2520329 ಅನ್ನು ಸಂಪರ್ಕಿಸಬಹುದೆಂದು ಪೊಲೀಸ್‌ ಠಾಣಾಧಿಕಾರಿ ತಿಳಿಸಿದ್ದಾರೆ.

ಮನೆಯ ಅಂಗಳದಲ್ಲಿ ದ್ದ ಸ್ಕೂಟರ್‌ ಕಳವು
ಮಂಗಳೂರು: ಕದ್ರಿ ಕಂಬಳದ ನಿವಾಸಿ ರಮೇಶ್‌ ಅವರು ತಮ್ಮ ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ಕಪ್ಪು ಮತ್ತು ಕೇಸರಿ ಬಣ್ಣದ ಕೈನೆಟಿಕ್‌ ಹೋಂಡಾ ಸ್ಕೂಟರ್‌ ಬುಧವಾರ ಬೆಳಗ್ಗೆ 5 ಗಂಟೆಯಿಂದ 7.30ರ ಮಧ್ಯೆ ಕಳವಾಗಿದೆ.

ಮನೆಗೆ ಮರ ಬಿದ್ದ ವಿಚಾರ ಗಲಾಟೆ, ಹಲ್ಲೆ
ಯುವಕನಿಗೆ ಗಂಭೀರ ಗಾಯ
ಹೆಬ್ರಿ: ಮನೆಯ ಮಾಡಿಗೆ ತೆಂಗಿನ ಮರ ಬಿದ್ದ ವಿಚಾರಕ್ಕೆ ನಡೆದ ಗಲಾಟೆ ಕೊನೆಗೆ ಕತ್ತಿಯಿಂದ ಕಡಿದು ಗಂಭೀರ ಗಾಯಗೊಳಿಸುವ ತನಕನಡೆದಿದೆ. ಮುನಿಯಾಲು ಚಟ್ಕಲ್‌ ಪಾದೆ ನಿವಾಸಿ ವಿಜಯ ಎಂಬವರ ಮನೆಯ ಮಾಡಿನ ಮೇಲೆ ಮಂಗಳವಾರದ ಬಿರುಗಾಳಿಯಿಂದಾಗಿ ಎದುರು ಮನೆಯ ನಾರಾಯಣ ಪೂಜಾರಿ ಎಂಬವರ ತೆಂಗಿನಮರ ಬಿದ್ದಿದ್ದು ಅದನ್ನು ಕಡಿಯಿರಿ ಎಂದು ವಿಜಯ್‌ ಹೇಳಿದ್ದು ಅದಕ್ಕೆ ನಾರಾಯಣ ಪೂಜಾರಿ ತಕರಾರು ತೆಗೆದು ಗಲಾಟೆ ಮಾಡಿಕೊಂಡು ಹೊಕೈ ಮಾಡಿದ್ದರು. ಈ ನಡುವೆ ನಾರಾಯಣ ಪೂಜಾರಿ ತನ್ನಮನೆಗೆ ಹೋಗಿ ಕತ್ತಿ ತಂದು ಕತ್ತಿಯಿಂದ ವಿಜಯ ಎಂಬವರಿಗೆ ಕುತ್ತಿಗೆಗೆ ಕಡಿದು ಗಂಭೀರ ಗಾಯಗೊಳಿಸಿದ್ದಾರೆ.

ವಿಜಯ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಜಯ ಅವರು ವರಂಗ ಗ್ರಾಮ ಪಂಚಾಯತ್‌ನ ಪಂಪ್‌ ಅಪರೇಟರ್‌ ಆಗಿ ಕರ್ತವ್ಯ ಮಾಡುತ್ತಿದ್ದಾರೆ. ಮಂಗಳವಾರ ವಿಜಯ ಅವರ ಮನೆಯ ಮಾಡಿಗೆ ಮರ ಬಿದ್ದು ಹಾನಿಯಾಗಿದೆ. ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next