ಬೆಂಗಳೂರು: ಏರಿಯಾ ಬಿಟ್ಟು ಹೋಗುವಂತೆ ಕಿರಿಕ್ ಮಾಡಿದ್ದಕ್ಕೆ ರೌಡಿಶೀಟರ್ನನ್ನು ಹತ್ಯೆಗೈದಿದ್ದ 6 ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಕಾಟನ್ಪೇಟೆ ಠಾಣೆಯ ರೌಡಿಶೀಟರ್ ಪ್ಲವರ್ ಗಾರ್ಡನ್ ನಿವಾಸಿ ಶರತ್ (35)ಕೊಲೆಯಾದವ. ಸ್ಟೀಫನ್, ಸಿಂಬು, ಚಂದ್ರಶೇಖರ್, ಶೇಖರ್, ಮಣಿಕಂಠ, ಕಿರಣ್ ಬಂಧಿತರು.
ಆರೋಪಿಗಳಾದ ಚಂದ್ರಶೇಖರ್, ಶೇಖರ್ ಹಾಗೂ ಇತರರಿಗೆ ರೌಡಿಶೀಟರ್ ಶರತ್, “ಈ ಏರಿಯಾ ಬಿಟ್ಟು ಹೋಗುವಂತೆ’ ಪೀಡಿಸುತ್ತಿದ್ದ. ಜತೆಗೆ ಅವರ ಕುಟುಂಬಸ್ಥರಿಗೂ ಹಿಂಸೆ ಕೊಡುತ್ತಿದ್ದ. ಈತನ ಕಾಟ ತಾಳಲಾರದೆ ಆತನನ್ನು ಹತ್ಯೆ ಮಾಡಲು ಆರೋಪಿಗಳು ಸಂಚು ರೂಪಿಸಿದ್ದರು. ಇದೇ ವೇಳೆ ರೇಖಾ ಕದಿರೇಶ್ ಹತ್ಯೆ ಪ್ರಕರಣದಲ್ಲಿ 3 ವರ್ಷ ಜೈಲಿನಲ್ಲಿದ್ದು ಕಳೆದ ಫೆಬ್ರುವರಿಯಲ್ಲಿ ಜಾಮೀನಿನ ಹೊರಬಂದಿದ್ದ ಸ್ಟೀಫನ್ನನ್ನು ಇತರ ಆರೋಪಿಗಳು ಸಂಪರ್ಕಿಸಿದ್ದರು. ಎಲ್ಲರೂ ಸಂಚು ರೂಪಿಸಿ ಮಾ.8ರಂದು ಡ್ರ್ಯಾಗರ್ನಿಂದ ಇರಿದು ಶರತ್ನನ್ನು ಹತ್ಯೆ ಮಾಡಿದ್ದರು.
ಕಾಟನ್ಪೇಟೆ ಠಾಣೆ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ನಾಲ್ವರನ್ನು ಈ ಹಿಂದೆ ಬಂಧಿಸಿದ್ದರು. ಭಾನುವಾರ ಪ್ರಮುಖ ಆರೋಪಿ ಗಳಾದ ಶೇಖರ್ ಹಾಗೂ ಸ್ಟಿಫನ್ ಎಂಬುವವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಕಾರ್ಪೋರೇಟರ್ ರೇಖಾ ಕದಿರೇಶ್ ಕೊಲೆ ಪ್ರಕರಣದಲ್ಲಿ ಬಂಧಿತ ಸ್ಟೀಫನ್ ಪ್ರಮುಖ ಆರೋಪಿಯಾಗಿದ್ದ. ಇನ್ನು ಬಂಧಿತ ಚಂದ್ರಶೇಖರ್ ಸಹಚರನಾಗಿದ್ದ ಪ್ರಭಾಕರ್ ಎಂಬಾತನನ್ನು 2020ರಲ್ಲಿ ಕೊಲೆಗೈದ ಪ್ರಕರಣದಲ್ಲಿ ಮೃತ ಶರತ್ ಆರೋಪಿಯಾಗಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.