Advertisement

ರಾಗಸುಧಾ: ಅನನ್ಯ ಅನುಭವಗಳ ಸೃಷ್ಟಿಕರ್ತೆ

12:44 PM Apr 23, 2021 | Team Udayavani |

ದೇಶ ಬಿಟ್ಟು ಪರದೇಶಕ್ಕೆ ಬಂದಾಗ ಅಲ್ಲಿನ ಸಮಾಜಕ್ಕೆ ಹೊಂದಿಕೊಳ್ಳಲು ನಾವು ನಿತ್ಯವೂ ಹೋರಾಡುತ್ತೇವೆ. ಆರಂಭದಲ್ಲಿ ಎಲ್ಲವನ್ನೂ ಕಲಿಯುವ ಉತ್ಸಾಹ. ಹೊಸ ಭಾಷೆ, ಅಲ್ಲಿನ ಪದ್ಧತಿಗಳಿಗೆ ಕಾಲಕ್ರಮೇಣ ಹೊಂದಿಕೊಳ್ಳುವಾಗ ನಮ್ಮ ದೇಶ, ಊರಿನ ಬಗ್ಗೆ ಅಭಿಮಾನ ಹೆಚ್ಚುತ್ತಾ ಹೋಗುತ್ತದೆ. ನಮ್ಮ ಸ್ವಭಾವ ಸಹನಶೀಲತೆಯಿಂದ ಕೂಡಿದ್ದರೆ ನಾವು ಎಲ್ಲೇ ಹೋದರು ಹೊಂದಿಕೊಳ್ಳಬಹುದು. ನಮ್ಮ ಊರಿನ ಜನರ ನೆನಪು ದಿನೇದಿನೇ ನಮ್ಮನ್ನು ನಮ್ಮ ಸಂಸ್ಕೃತಿಗೆ ಮತ್ತಷ್ಟು ಹತ್ತಿರ ತರುತ್ತದೆ. ಅದರಲ್ಲೂ ಬಾಲ್ಯದಲ್ಲಿ ಯಾವುದಾದರೂ ಹವ್ಯಾಸ ಬೆಳೆಸಿಕೊಂಡಿದ್ದರೆ ಅದು ಮತ್ತೆ ನೆನಪಾಗಿ ಮುಂದುವರಿಸಬೇಕೆಂಬ ತುಡಿತ ಶುರುವಾಗುವುದು.

Advertisement

ನಾವು ಬಿಟ್ಟು ಬಂದ ಸಮಾಜದಿಂದ ಎಷ್ಟೆಲ್ಲ ಅಮೂರ್ತ ಆಸ್ತಿಯನ್ನು ನಮ್ಮೊಡನೆ ತಂದು ಅವೆಲ್ಲ ನಮ್ಮಿಂದ ಬೇರ್ಪಡಿಸಲಾಗದ ಅಂಗವಾಗುತ್ತವೆ. ನಮ್ಮ ಆಸಕ್ತಿ ಮತ್ತು ತೃಪ್ತಿಗನುಸಾರವಾಗಿ ಅವುಗಳನ್ನು ಮುಂದುವರಿಸಲು ಪ್ರಯತ್ನಿಸುತ್ತೇವೆ. ಇದು ಒಂದು ರೀತಿ ನಮ್ಮ ಸಮಾಜಕ್ಕೆ ನಾವು ನೀಡುವ ಒಂದು ಪುಟ್ಟ ಕೊಡುಗೆ. ಆದರೆ ನಮ್ಮಲ್ಲಿ ಎಷ್ಟು ಮಂದಿ ಇಂತಹ ಸಾಂಪ್ರದಾಯಿಕ ಸಾಂಸ್ಕೃತಿಕ ಜಾನಪದ ಕಲೆಯ ಬೆಳವಣಿಗೆಗೆ ದೇಶದಿಂದ ಸಾವಿರಾರು ಮೈಲು ದೂರವಿದ್ದು ಪರಿಶ್ರಮಿಸುತ್ತಾರೆ ಎಂದು ಲೆಕ್ಕವಿಡಲು ಹೋದರೆ ಸಿಗುವುದು ಬೆರಳೆಣಿಕೆಯಷ್ಟೇ.

ಇವರಲ್ಲಿ ಒಬ್ಬರ ಪರಿಚಯವಾಗಿದ್ದು 2016ರಲ್ಲಿ. ಅದೂ ಫೇಸ್‌ಬುಕ್‌ನ ಗುಂಪೊಂದರಲ್ಲಿ ಸಿಕ್ಕಿದ ಮುಕ್ತ ಆಹ್ವಾನ. ಸಂಗೀತ, ನೃತ್ಯದಲ್ಲಿ ಆಸಕ್ತಿ ಇದ್ದರೆ ನನ್ನನ್ನು ಸಂಪರ್ಕಿಸಿ ಎನ್ನುವ ಮಾಹಿತಿಯನ್ನು ನೋಡಿ ಅವರ ಕುರಿತು ಅಂತರ್ಜಾಲ ತಾಣಗಳಲ್ಲಿ ಹುಡುಕಲು ಪ್ರಾರಂಭಿಸಿದಾಗ ಡಾ| ರಾಗಸುಧಾ ವಿಂಜಮೂರಿ, ಭರತನಾಟ್ಯ ಗುರುಗಳು ಎಂದಷ್ಟೇ ಪರಿಚಯವಾಯಿತು. ಹೀಗಾಗಿ ನೃತ್ಯಕ್ಕೂ ನನಗೂ ಯಾವ ಸಂಬಂಧ ಎಂದು ಸುಮ್ಮನಾದೆ. ಬಳಿಕ ಮದರ್ಸ್‌ ಡೇ ಪ್ರಯುಕ್ತ ಲಂಡನ್‌ನ ನೆಹರೂ ಸೆಂಟರ್‌ ಹಾಗೂ ಬ್ರಿಟಿಷ್‌ ಪಾರ್ಲಿಮೆಂಟ್‌ನಲ್ಲಿ ಅವರು ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಸಾಮೂಹಿಕ ಹಾಡುಗಾರರ ತಂಡಕ್ಕೆ ಕನ್ನಡದವರು ಬೇಕು ಎಂದು ಆಹ್ವಾನವಿತ್ತಿದ್ದರಿಂದ ಹೆಸರು ಕೊಟ್ಟೆ. ಆದರೆ ಕಾರಣಾಂತರಗಳಿಂದ ಹೋಗಲು ಸಾಧ್ಯವಾಗಲಿಲ್ಲ. ಹೀಗೆ ಆರಂಭವಾಗಿದ್ದು ನಮ್ಮಿಬ್ಬರ ಪರಿಚಯ.

ನನ್ನ ಹಾಗೆ ಅವರೂ ತಮ್ಮ ಊರು ಬಿಟ್ಟು ಬಂದು ಇಲ್ಲಿ ನೆಲೆಯಾಗಿದ್ದಾರೆ. ಮೂಲತಃ ಹೈದರಾಬಾದ್‌ನವರಾಗಿದ್ದು, ಲಂಡನ್‌ನ ಯುನಿವರ್ಸಿಟಿ ಆಫ್ ಸಂಡರ್ಲ್ಯಾಂಡ್‌ನ‌ಲ್ಲಿ ಕಳೆದ 7 ವರ್ಷಗಳಿಂದ ಉಪನ್ಯಾಸಕಿಯಾಗಿದ್ದಾರೆ. ಅತ್ಯಂತ ಪ್ರತಿಭಾನ್ವಿತ ಭರತನಾಟ್ಯ ಕಲಾವಿದೆ.

ಯುಕೆಯಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತ, ನೃತ್ಯಕ್ಕೆ ಅಪಾರ ಬೇಡಿಕೆ ಹಾಗೂ ಕಲಿಯುವ ಆಸಕ್ತಿ ಜನರಲ್ಲಿದೆ ಎಂದು ತಿಳಿದ ಅವರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದರು. ಆದರೆ ಕಲಿತವರ ಕಲೆಯ ಪ್ರಸ್ತುತಿಗೆ ವೇದಿಕೆಯನ್ನೊದಗಿಸುವ ಸಲುವಾಗಿ “ರಾಗಸುಧಾ’ ಎಂಬ ಸಂಸ್ಥೆಯನ್ನು ಪ್ರಾರಂಭಿಸಿ ಈ ಮೂಲಕ ನೃತ್ಯ ಕಲಿಸಲು, ಪ್ರಸ್ತುತ ಪಡಿಸಲು ಅವಕಾಶ ಒದಗಿಸಿದರು. ಇದರಲ್ಲಿ ಅವರಿಗೆ ಅಳಿದು ಹೋಗುತ್ತಿರುವ ಭಾರತದ ಗುಪ್ತ ನಿಧಿಗಳಾದ ಜಾನಪದ, ಬುಡಕಟ್ಟು ಜನಾಂಗದ ಸಂಗೀತ, ನೃತ್ಯ ಶೈಲಿ, ಭಾಷೆ, ಉಪಭಾಷೆಗಳ ಬಗ್ಗೆ ಕುತೂಹಲ ಉಂಟಾಗಿದೆ ಅವುಗಳನ್ನು ಪುನರುಜ್ಜೀವನಗೊಳಿಸುವ ಪ್ರಯತ್ನ ಮಾಡಿದರು. ಇದಕ್ಕಾಗಿ ಸಂಸ್ಕೃತಿ ಸೆಂಟರ್‌ ಫಾರ್‌ ಕಲ್ಚರಲ್‌ ಎಕ್ಸಲೆನ್ಸ್‌ ಸಂಸ್ಥೆಯನ್ನು ಪ್ರಾರಂಭಿಸಿದರು. ಇದರಲ್ಲಿ ಎಲ್ಲ ಕಲಾ ಆಸಕ್ತರಿಗೆ ಮುಕ್ತ ಅವಕಾಶವನ್ನು ಒದಗಿಸಿದರು. ಇಲ್ಲಿ ನಮ್ಮ ಹಿನ್ನೆಲೆ, ರಾಜ್ಯ, ದೇಶ ಯಾವುದು ಎನ್ನುವುದನ್ನೇ ಕೇಳದೆ ನಮ್ಮಲ್ಲಿರುವ ಆಸಕ್ತಿಗಷ್ಟೇ ಪ್ರಾಮುಖ್ಯ ಕೊಡುತ್ತಾರೆ ರಾಗಸುಧಾ. ಕಳೆದ 4- 5 ವರ್ಷಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಬಹಳ ಅದ್ಧೂರಿಯಾಗಿ ದೇಶ, ವಿದೇಶಗಳ ಕಲಾಕಾರರನ್ನು ಕರೆಸಿ ನಮ್ಮ ಸಂಸ್ಕೃತಿಯ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುತ್ತಿದ್ದಾರೆ. ಇಲ್ಲಿ ಯಾವುದೇ ಪ್ರಶಂಸೆಯ ಹಂಗಿಲ್ಲ, ಪ್ರತ್ಯುಪಕಾರದ ನಿರೀಕ್ಷೆಯಿಲ್ಲದೆ ಕೆಲವೊಮ್ಮೆ ಧನಸಹಾಯವಿಲ್ಲದೆಯೂ ಕಾರ್ಯಕ್ರಮ ನಡೆಸುತ್ತಾರೆ.

Advertisement

ಬ್ರಿಟಿಷ್‌ ಪಾರ್ಲಿಮೆಂಟ್‌ನಲ್ಲಿ ಅತೀ ಹೆಚ್ಚು  (ಒಟ್ಟು- 24) ಭಾರತೀಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟ ಹಿರಿಮೆಯ ಜತೆಗೆ ಗಿನಿಸ್‌Õ ಬುಕ್‌ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ  ಇವರ ಹೆಸರು ಇದೆ. ಅಲ್ಲದೇ ಬೆಲ್ಜಿಯಂನ ಯುರೋಪಿಯನ್‌ ಪಾರ್ಲಿಮೆಂಟ್‌ನಲ್ಲಿ ಎರಡು ಬಾರಿ ಕಾರ್ಯಕ್ರಮ ನೀಡಿರುವ ಇವರು ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿ, ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ.

1942ರಿಂದ ಬ್ರಿಟಿಷ್‌ ಗ್ರಂಥಾಲಯದ ವಶದಲ್ಲಿರುವ ತತ್ವ ಜ್ಞಾನಿ ಆಚಾರ್ಯ ರಾಮಾನುಜ ಬರೆದ 300 ವರ್ಷಗಳ ಹಳೆಯ ತೆಲುಗು ತಾಳೆ ಎಲೆ ಫೋಲಿಯೊಗಳನ್ನು ಲಿಪ್ಯಂತರಿಸುವ ಅತ್ಯಂತ ಕಠಿನ ಕಾರ್ಯವನ್ನು ಮೂರು ವರ್ಷಗಳಲ್ಲಿ ಪೂರೈಸಿ ಬ್ರಿಟಿಷ್‌ ಸಂಸತ್ತಿನಲ್ಲಿ ಆಚಾರ್ಯರ 999ನೇ ಜನ್ಮ ದಿನಾಚರಣೆಯಲ್ಲಿ ಪುಸ್ತಕ ರೂಪದಲ್ಲಿ  ಪ್ರಕಟಿಸಿದರು.

2019ರಲ್ಲೊಮ್ಮೆ ಬ್ರಿಟಿಷ್‌ ಪಾರ್ಲಿಮೆಂಟ್‌ನಲ್ಲಿ ಕನ್ನಡದ ಕವಯತ್ರಿಯೊಬ್ಬರು ಬರೆದ ಕವಿತೆ ವಾಚನ ಮಾಡುವ ಅವಕಾಶವನ್ನು ರಾಗಸುಧಾ ಅವರು ನನಗೆ ಒದಗಿಸಿದ್ದರು. ಇದು ನನಗೆ ಕನಸಿನಲ್ಲೂ ಯೋಚಿಸದ ಅವಕಾಶ. ಇದಕ್ಕಿಂತ ಮುಂಚೆ ರಾಗಸುಧಾ ಅವರನ್ನು ಮುಖತಃ ಭೇಟಿಯಾಗಿರಲಿಲ್ಲ.

ಹೌಸ್‌ ಆಪ್‌ ಲಾರ್ಡ್ಸ್‌ನ ಥೇಮ್ಸ್‌ ನದಿ ತೀರದ ಸುಂದರವಾದ ಖಾಸಗಿ ಕೊಠಡಿಯಲ್ಲಿ ಸಂಜೆಯ ಚಹಾ ಹಾಗೂ ಸಾಂಪ್ರದಾಯಿಕ ತಿಂಡಿ ತಿನಿಸುಗಳಿಂದ ತುಂಬಿದ ಮೇಜಿನ ಮುಂದೆ ಕುಳಿತು ದೇಶವಿದೇಶಗಳಿಂದ ಬಂದಿದ್ದ ಪ್ರತಿಷ್ಠಿತ ವ್ಯಕ್ತಿಗಳು ಹಾಗೂ ರಾಜಕಾರಣಿಗಳ ಸಮಕ್ಷಮದಲ್ಲಿ ನಡೆದ ಮಾತೃ ಭಾಷಾ ಕಾರ್ಯಕ್ರಮವದು. ಸುಮಾರು 20 ಭಾರತೀಯ ಭಾಷೆಯಲ್ಲಿ ಬರೆದ ಕವನ, ಕವಿತೆ, ಹಾಡು ಕೇಳುವ ಅದೃಷ್ಟ ಮತ್ತು ವಿಭಿನ್ನ ಸಂಸ್ಕೃತಿಯಿಂದ ಬಂದ ಜನರ ಪರಿಚಯ. ಹೊರದೇಶದಲ್ಲಿ ಅದೂ ಪಾರ್ಲಿಮೆಂಟ್‌ನಲ್ಲಿ ಕನ್ನಡದಲ್ಲಿ ಮಾತನಾಡಿದ್ದು, ಅದಕ್ಕೆ ಗೌರವ ಲಭಿಸಿದ್ದು ಒಂದು ರೀತಿಯ ಕನಸಿನಂತೆ ಭಾಸವಾಗಿತ್ತು. ಅಲ್ಲಿಂದ ಹಿಂದಿರುಗುವ ಮೊದಲು ರಾಗಸುಧಾ ಅವರು ಬಳಿಗೆ ಬಂದು ಮುಂದಿನ ಕಾರ್ಯಕ್ರಮದಲ್ಲಿ ನಿನ್ನದೇ ಕವಿತೆ ಬರಿ ಎಂದರು. ನಾನು ನಕ್ಕು ಸುಮ್ಮನಾಗಿದ್ದೆ. ಮುಂದೆ ನಾನು ಕವಿತೆ ಬರೆಯುವ ಪ್ರಯತ್ನ ಮಾಡಿದೆ. 2020ರಲ್ಲಿ ನಾನೇ ಬರೆದ ಕವಿತೆ ಎಲ್ಲರಿಂದ ಮೆಚ್ಚುಗೆ ಪಡೆದು ಹೌಸ್‌ ಆಫ್ ಕಾಮನ್ಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಡನೆಯಾಯಿತು. ಆದರೆ ಇದರ ಹಿಂದೆ ರಾಗಸುಧಾ ಅವರ ಪರಿಶ್ರಮ ಅವರ ಮುಖದಲ್ಲಿ ಕಿಂಚಿತ್ತೂ ಕಾಣಲಿಲ್ಲ. ಕೇಳಿದರೆ ಎಲ್ಲರ ಟೀಮ್‌ ವರ್ಕ್‌ ಎನ್ನುತ್ತಾರೆ.

2021ರಲ್ಲಿ  ವಿಶ್ವ ಮಾತೃಭಾಷಾ ದಿನದಂದು ನಡೆದ ವರ್ಚುವಲ್‌ ಕಾರ್ಯಕ್ರಮದಲ್ಲಿ ಮಗದೊಮ್ಮೆ ನನ್ನ ಬರವಣಿಗೆಗೆ ಪ್ರೋತ್ಸಾಹ ಸಿಕ್ಕಿತು. ಐದು ವಿವಿಧ ದೇಶಗಳ ಖ್ಯಾತ ಲೇಖಕರು, ವಿದ್ವಾಂಸರು, ರಾಜತಾಂತ್ರಿಕರು, ಗಾಯಕರು ಪಾಲ್ಗೊಂಡಿದ್ದ ಈ ಕಾರ್ಯಕ್ರಮದಲ್ಲಿ  27 ಭಾರತೀಯ ಹಾಗೂ ದಕ್ಷಿಣ ಏಷ್ಯಾದ ಭಾಷೆಗಳ ಜತೆ ಕನ್ನಡ ಮತ್ತು ಕನ್ನಡ ನಾಡಿನ ಶ್ರೇಷ್ಠತೆ ಬಗ್ಗೆ ಬರೆಯುವ ಹೇಳುವ ಅವಕಾಶ ನನ್ನದಾಯಿತು.

Advertisement

Udayavani is now on Telegram. Click here to join our channel and stay updated with the latest news.

Next