Advertisement

ತವರಿನ ಅಭಿವೃದ್ಧಿಗೆ ಹಂಬಲಿಸಿದ್ದ ಶ್ರೀಗಳು

03:38 PM Oct 21, 2018 | |

ವಿಜಯಪುರ: ಗದಗ-ಡಂಬಳದ ತೋಂಟದಾರ್ಯ ಮಠಕ್ಕೆ ಪೀಠಾಧಿಕಾರಿಯಾಗಿ ನಿಯೋಜಿತವಾದ ಕ್ಷಣದಿಂದ ಬಸವೈಕ್ಯವಾಗುವ ಹಂತದವರೆಗೆ ಡಾ| ಸಿದ್ದಲಿಂಗ ಶ್ರೀಗಳು ಪೂರ್ವಶ್ರಮದ ಕುಟುಂಬದೊಂದಿಗೆ ಸಂಪೂರ್ಣ ಸಂಬಂಧ ಕಳೆದುಕೊಂಡಿದ್ದರು. ಆದರೆ ಅವರ ಮನಸ್ಸು ಮಾತ್ರ ತವರು ಜಿಲ್ಲೆಯ ಅಭ್ಯುದಯಕ್ಕೆ ನಿರಂತರ ಹಂಬಿಲಿಸುತ್ತಿತ್ತು.

Advertisement

ಪೀಠಾಧಿ ಪತಿಗಳಾಗಿ ನಾಲ್ಕು ದಶಕಗಳಿಂದ ನಾಡಿನ ಮೂಲೆ ಮೂಲೆಗೆ ಬಸವ ಧರ್ಮ ಪ್ರಸಾರಕ್ಕೆ ಚಕ್ರ ಕಟ್ಟಿಕೊಂಡ ಸಂತನಾಗಿ ಸಂಚರಿಸಿದರೂ ಡಾ| ಸಿದ್ದಲಿಂಗ ಶ್ರೀಗಳು ತಮ್ಮ ಪೂರ್ವಾಶ್ರಮದ ಯಾರೊಬ್ಬರೊಂದಿಗೆ ಸಂಬಂಧ ಇರಿಸಿಕೊಂಡಿರಲಿಲ್ಲ. ಅಷ್ಟೇ ಏಕೆ ತಮ್ಮ ಜನ್ಮದಾತರಾದ
ಎರಡು ದಶಕಗಳ ಹಿಂದೆ ತಂದೆ ಮರೆಯ್ಯ, 4 ವರ್ಷಗಳ ಹಿಂದೆ ತಾಯಿ ಶಂಕರಮ್ಮ ಇವರು ಲಿಂಗೈಕ್ಯರಾದಾರೂ ಅವರ ಅಂತಿಮ ದರ್ಶನಕ್ಕೆ, ಅಂತ್ಯ ಸಂಸ್ಕಾರಕ್ಕೆ ಬಂದಿರಲಿಲ್ಲ.

ಕನ್ನಡ ನೆಲ, ಜಲ, ಭಾಷೆ ವಿಷಯ ಬಂದಾಗ ಮುಂಚೂಣಿಗೆ ನಿಲ್ಲುತ್ತಿದ್ದ ಡಾ| ಸಿದ್ದಲಿಂಗ ಶ್ರೀಗಳು, ಬಸವನಾಡಿನ ಜನರ ಬಡತನ, ಬರಗಾಲದ ಹಿಂಗಿಸಲು ತುಡಿಯುತ್ತಿದ್ದರು. ಅದಕ್ಕಾಗಿ ಜಿಲ್ಲೆಯೊಂದಿಗೆ ನಿರಂತರ ಸಂಪರ್ಕ ಇರಿಸಿಕೊಂಡಿದ್ದರು. ಯಾವುದೇ ಧಾರ್ಮಿಕ, ಸಾಮಾಜಿಕ
ಕಾರ್ಯಕ್ರಮಗಳಿಗೆ ಆಗಮಿಸಿದರೂ ಪಂಚನದಿಗಳ ನಾಡಾಗಿರುವ ವಿಜಯಪುರ ಜಿಲ್ಲೆಯಲ್ಲಿ ಕುಡಿಯುವ ನೀರಿಗೂ ಬರ ಎಂಬ ಸಂಗತಿ ನಿಜಕ್ಕೂ ಖೇದಕರ ಎಂದು ಆಡಳಿತಗಾರರನ್ನು ಕುಟುಕುತ್ತಿದ್ದರು.

ಕಳೆದ ಕೆಲ ವರ್ಷಗಳಿಂದ ಜಿಲ್ಲೆಯಲ್ಲಿ ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಕೃಷ್ಣಾ ಮೇಲ್ದಂಡೆ ಯೋಜನೆಯ ಬಹುತೇಕ ನೀರಾವರಿ ಯೋಜನೆಗಳು ಚಾಲನೆ ಪಡೆದಾಗ ಡಾ| ಸಿದ್ದಲಿಂಗ ಶ್ರೀಗಳು ರೈತನ ಮನಸ್ಸಾಗಿ ಸಂಭ್ರಮಿಸಿದ್ದರು. ಇದೇ ಕಾರಣಕ್ಕೆ ಜಿಲ್ಲೆಯಲ್ಲಿ ಅಭಿವೃದ್ಧಿ ಹಂತದಲ್ಲಿದ್ದ ಕೆರೆಗೆ ನೀರು ತುಂಬುವ ಯೋಜನೆಗಳು, ಏತ ನೀರಾವರಿ ಯೋಜನಾ ಸ್ಥಳಕ್ಕೆ ತೆರಳಿ ಅನುಷ್ಠಾನ ಸ್ಥಿತಿಗತಿ ಕಂಡು ಇನ್ನಾದರೂ ಈ ನೆಲದ ಬಡತನದ ಬರ ಹಿಮ್ಮೆಟ್ಟಲಿ ಎಂದು ಆಶಿಸಿದ್ದರು.

2011ರಲ್ಲಿ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರ 4000 ಮೆ.ವ್ಯಾ. ಸಾಮರ್ಥ್ಯದ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್‌ ಸ್ಥಾವರ ನಿರ್ಮಾಣಕ್ಕೆ ಅಣಿಯಾದಾಗ ಶ್ರೀಗಳು ಪರಿಸರಕ್ಕೆ ನಾಶವಾಗುವ ಇಂಥ ಯೋಜನೆ ಈ ನೆಲಕ್ಕೆ ಬೇಡ ಎಂದು ಬೀದಿಗೆ ಇಳಿದರು. ಪರಿಸರಕ್ಕೆ ನಾಶ ಎಂಬ ಕಾರಣಕ್ಕೆ ಎಲ್ಲೆಡೆ
ತಿರಸ್ಕೃತಗೊಂಡ ಯೋಜನೆಯನ್ನು ಬಸವನಾಡಿಗೆ ತಂದು ಎಸೆಯುವ ಸರ್ಕಾರದ ಕ್ರಮ ಖಂಡಿಸಿ ಮೇಲ್ಮನೆ ಸದಸ್ಯರಾಗಿದ್ದ ಎಸ್‌.ಆರ್‌. ಪಾಟೀಲ, ಕೂಡಗಿ ವಿರೋ ಧಿ ಹೋರಾಟಕ್ಕೆ ಜನರನ್ನು ಸಂಘಟಿಸುತ್ತಿದ್ದ ನಿವೃತ್ತ ವಿಜ್ಞಾನಿ ಎಂ.ಪಿ. ಪಾಟೀಲ ಅವರೊಂದಿಗೆ ಸೇರಿ ಬಸವ ಜನ್ಮಭೂಮಿ ಬಸವನ ಬಾಗೇವಾಡಿಯಿಂದ ಕೂಡಲಸಂಗಮದವರೆಗೆ ನಡೆದ ಪಾದಯಾತ್ರೆ ನೇತೃತ್ವ ವಹಿಸಿದ್ದರು.

Advertisement

ಕಠೊರ ಶಿಕ್ಷಣ ಪ್ರೇಮಿಯಾಗಿದ್ದ ಡಾ| ಸಿದ್ದಲಿಂಗ ಶ್ರೀಗಳು ತವರು ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ನೀಡಿದ ಕೊಡುಗೆಯೂ ಅಪಾರ. ದಶಕಗಳ ಹಿಂದೆ ಸಿಂದಗಿ ತಾಲೂಕಿನ ಮೋರಟಗಿ ಗ್ರಾಮದಲ್ಲಿ ಆರ್‌.ಎನ್‌. ಶೆಟ್ಟಿ ಅವರು ಯೋಜನೆಯೊಂದರ ಕಾಮಗಾರಿಗೆ 30 ಎಕರೆ ಪ್ರದೇಶದಲ್ಲಿ ತಾತ್ಕಾಲಿಕ ಶೆಡ್‌ ಹಾಕಿ ಕೆಲಸ ನಡೆಸಿದ್ದರು. ಈ ಹಂತದಲ್ಲಿ ಸ್ಥಳಕ್ಕೆ ತೆರಳಿದ್ದ ಡಾ| ಸಿದ್ದಲಿಂಗ ಶ್ರೀಗಳು, ಈ ನೆಲದ ಅಕ್ಷರ ಕ್ರಾಂತಿಗೆ ನಿಮ್ಮ ಸಹಾಯ ಬೇಕು ಎಂದು ಕೇಳಿದ್ದೇ ತಡೆ ಶೆಟ್ಟಿ ಸಮೂಹ ಸಂಸ್ಥೆಯವರು ತಮ್ಮ ಕೆಲಸ ಮುಗಿಯುತ್ತಲೇ ಕಟ್ಟಡಗಳ ಸಮೇತ ಇಡಿ ಜಮೀನನ್ನು ಶ್ರೀಗಳಿಗೆ ನೀಡಿದರು. ಸದರಿ ಸ್ಥಳದಲ್ಲೇ ಇದೀಗ ಐಟಿಐ ಕಾಲೇಜು ತಲೆ ಎತ್ತಿ, ಜಿಲ್ಲೆಯ ಉದ್ಯೋಗಾಧಾರಿತ ಶೈಕ್ಷಣಿಕ ಕ್ರಾಂತಿಗೆ ಸಹಕಾರಿ ಆಗಿದೆ.

1982ರಲ್ಲಿ ಸಿಂದಗಿ ಪಟ್ಟಣದಲ್ಲಿ ಜರುಗಿದ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸಾನಿಧ್ಯ ಭಾಷಣದಲ್ಲಿ ಗೋಕಾಕ ಚಳುವಳಿಗೆ ಕನ್ನಡಿಗರೆಲ್ಲ ಒಗ್ಗೂಡಬೇಕು. ಕನ್ನಡಕ್ಕಾಗಿ ಪ್ರತಿಯೊಬ್ಬ ಕನ್ನಡಿಗ ಕೈ ಜೋಡಿಸಬೇಕು ಎಂದು ಕರೆ ನೀಡಿದ್ದೇ ತಡ ಜಿಲ್ಲೆಯ ಜನರು ಕನ್ನಡಕ್ಕಾಗಿ ಕಂಕಣ ಕಟ್ಟಿದರು. ಡಾ| ಸಿದ್ದಲಿಂಗ ಶ್ರೀಗಳ ಭಾಷಣದಿಂದ ಪ್ರೇರಿತರಾದ ಗಂಗಾಧರ ಕೋರಳ್ಳಿ ಎಂಬ ಅದಮ ಕನ್ನಡಿಗ 51 ದಿನಗಳ ಕಾಲ ಆಮರಣ ಉಪವಾಸ ಗೋಕಾಕ ಚಳವಳಿಗೆ ಜೀವ ತುಂಬಿ ಅಮರರಾಗಿ, ನಾಡಿಗೆ ವಿಜಯಪುರ ಜಿಲ್ಲೆಯ ಕನ್ನಡದ ಕೆಚ್ಚೆದೆಯನ್ನು ಸಾಬೀತು ಮಾಡಿದ್ದರು.

„ಜಿ.ಎಸ್‌. ಕಮತರ

Advertisement

Udayavani is now on Telegram. Click here to join our channel and stay updated with the latest news.

Next