Advertisement

CPI(M): ಬಂಗಾಲ, ಕೇರಳದಲ್ಲಿ ಏಕಾಂಗಿ ಸ್ಪರ್ಧೆಗೆ ಎಡಪಕ್ಷಗಳ ನಿರ್ಧಾರ…

11:03 AM Sep 19, 2023 | Team Udayavani |

ಹೊಸದಿಲ್ಲಿ: ಬಿಜೆಪಿ ನೇತೃತ್ವದ ಎನ್‌ಡಿಎಯೇತರ ಪಕ್ಷಗಳು ಜತೆಗೂಡಿ ರಚಿಸಿರುವ ಐ.ಎನ್‌.ಡಿ.ಐ.ಎ. ಮೈತ್ರಿಕೂಟಕ್ಕೆ ಆರಂಭದಲ್ಲಿಯೇ ವಿಘ್ನಗಳು ಬಾಧಿಸಲಾರಂಭಿಸಿವೆ. ಪ್ರಧಾನಿ ಅಭ್ಯರ್ಥಿ ಕುರಿತಂತೆ ವಿಪಕ್ಷ ಮೈತ್ರಿಕೂಟದ ಪಕ್ಷಗಳ ನಡುವೆ ಪೈಪೋಟಿ ಏರ್ಪಟ್ಟಿದ್ದರೆ, ಇದೀಗ ಎಡಪಕ್ಷಗಳು ತಮ್ಮ ಪ್ರಾಬಲ್ಯವಿರುವ ರಾಜ್ಯಗಳಾದ ಕೇರಳ ಮತ್ತು ಪಶ್ಚಿಮ ಬಂಗಾಲದಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸುವ ಇಂಗಿತವನ್ನು ವ್ಯಕ್ತಪಡಿಸಿವೆ. ಈ ಎರಡು ರಾಜ್ಯಗಳಲ್ಲಿ ವಿಪಕ್ಷ ಮೈತ್ರಿಕೂಟದ ಪಕ್ಷಗಳಾದ ಕಾಂಗ್ರೆಸ್‌ ಮತ್ತು ತೃಣಮೂಲ ಕಾಂಗ್ರೆಸ್‌ ಎಡಪಕ್ಷಗಳ ಪ್ರಬಲ ವಿರೋಧಿಯಾಗಿವೆ.

Advertisement

ಅಷ್ಟು ಮಾತ್ರವಲ್ಲದೆ ಐ.ಎನ್‌.ಡಿ.ಐ.ಎ. ರಚಿಸಿರುವ ಸಮನ್ವಯ ಸಮಿತಿಗೆ ಎಡಪಕ್ಷಗಳು ತನ್ನ ಪ್ರತಿನಿಧಿಯನ್ನು ಹೆಸರಿಸದಿರಲು ತೀರ್ಮಾನಿಸಿದೆ. ಬಂಗಾಲದಲ್ಲಿ ಸಿಪಿಎಂ ನಾಯಕತ್ವವು ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್‌ ನಡುವೆ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದ್ದು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಕಣಕ್ಕಿಳಿಯಲು ದಿಲ್ಲಿಯಲ್ಲಿ ನಡೆದ ಸಿಪಿಎಂ ಪಾಲಿಟ್‌ಬ್ಯೂರೋ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ವಾರ ನಡೆದ ಐ.ಎನ್‌.ಡಿ.ಐ.ಎ.ನ ಸಂಘಟನ ಸಮಿತಿಯ ಸಭೆಗೆ ಸಿಪಿಎಂ ಗೈರಾಗಿತ್ತು. 14 ಸದಸ್ಯರನ್ನು ಒಳಗೊಂಡ ಈ ಸಮಿತಿಯಲ್ಲಿ ಸಿಪಿಎಂಗೆ ಒಂದು ಪ್ರಾತಿನಿಧ್ಯವನ್ನು ನೀಡಲಾಗಿದೆಯಾದರೂ ಈವರೆಗೆ ಸಿಪಿಎಂ ತನ್ನ ಪ್ರತಿನಿಧಿಯ ಹೆಸರನ್ನು ಸೂಚಿಸಿಲ್ಲ.

ಬಿಜೆಪಿಯೊಂದಿಗೆ ಮೈತ್ರಿ ಇಲ್ಲ: ಎಐಎಡಿಎಂಕೆ
ಚೆನ್ನೈ: ದ್ರಾವಿಡ ನೇತಾರ ಅಣ್ಣಾದುರೈ ವಿರುದ್ಧ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ ನೀಡಿದ ಹೇಳಿಕೆ ಮಿತ್ರಪಕ್ಷವಾದ ಎಐಎಡಿಎಂಕೆಯನ್ನು ಕೆರಳಿಸಿದೆ. ಅಣ್ಣಾಮಲೈ ಮತ್ತು ಬಿಜೆಪಿ ನಾಯಕರ ವಿರುದ್ಧ ಎಐಎಡಿಎಂಕೆ ನಾಯಕರು ಮುಗಿಬಿದ್ದಿದ್ದು, ಸದ್ಯದ ಸ್ಥಿತಿಯಲ್ಲಿ ಬಿಜೆಪಿಯೊಂದಿಗೆ ಯಾವುದೇ ಮೈತ್ರಿ ಸಾಧ್ಯವಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಸೆ. 11ರಂದು ರಾಜ್ಯದ ಧಾರ್ಮಿಕ ದತ್ತಿ ಸಚಿವ ಪಿ.ಕೆ.ಶೇಖರ ಬಾಬು ಅವರ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರು, 1950ರ ದಶಕದಲ್ಲಿ ಅಣ್ಣಾದುರೈ ಅವರು ಕಾರ್ಯಕ್ರಮ ವೊಂದರಲ್ಲಿ ಹಿಂದೂ ನಂಬಿಕೆಯನ್ನು ಕಟುವಾಗಿ ಟೀಕಿಸಿದ್ದರು ಮತ್ತು ಅದನ್ನು ಸ್ವಾತಂತ್ರ್ಯ ಹೋರಾಟಗಾರ ಪಿ. ಮುತ್ತುಲಿಂಗ ತೇವರ್‌ ಬಲವಾಗಿ ವಿರೋಧಿಸಿದ್ದರು ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಇದೀಗ ಮಿತ್ರಪಕ್ಷಗಳ ನಡುವೆ ಭಾರೀ ವಾಕ್ಸಮರಕ್ಕೆ ಕಾರಣವಾಗಿದೆ.
ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ದ್ರಾವಿಡ ನಾಯಕ ಅಣ್ಣಾದುರೈ ಅವರ ಬಗೆಗೆ ಬಿಜೆಪಿ ನಾಯಕರು ತಮ್ಮ ನಿಲುವನ್ನು ಸ್ಪಷ್ಟಪಡಿಸ ಬೇಕು. ದ್ರಾವಿಡ ನಾಯಕರ ಹೆಸರುಗಳನ್ನು ಪ್ರಸ್ತಾವಿಸಿ ಅಣ್ಣಾಮಲೈ ರಾಜಕೀಯವಾಗಿ ಮುನ್ನೆಲೆಗೆ ಬರುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಎಐಎಡಿಎಂಕೆ ನಾಯಕರು ಆರೋಪಿಸಿದ್ದಾರೆ.

ಎಐಎಡಿಎಂಕೆ ನಾಯಕ ಡಿ. ಜಯಕುಮಾರ್‌ ಅವರು ಅಣ್ಣಾಮಲೈ ವಿರುದ್ಧ ನೇರ ವಾಗ್ಧಾಳಿ ನಡೆಸಿ, ಪಕ್ಷದ ಕಾರ್ಯ ಕರ್ತರು ತಮ್ಮ ಹಿರಿಯ ನಾಯಕ ಅಣ್ಣಾದುರೈ ಅವರನ್ನು ಅವಮಾನಿಸುವಂಥ ಹೇಳಿಕೆಗಳನ್ನು ಸಹಿಸಲಾರರು. ಈ ಸನ್ನಿವೇಶದಲ್ಲಿ ಬಿಜೆಪಿ ಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಉದ್ಭವಿಸಲಾರದು ಎಂದು ಸ್ಪಷ್ಟಪಡಿಸಿದರು.

ಬಿಜೆಪಿಯ ಹಿರಿಯ ನಾಯಕ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಹೊಸದಿಲ್ಲಿಯಲ್ಲಿ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಭೇಟಿಯಾಗಿ ಮಾತುಕತೆ ನಡೆಸಿದ ಬೆನ್ನಲ್ಲೇ ಈ ಘಟನಾವಳಿಗಳು ನಡೆದಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next