Advertisement

ವಿಟ್ಲ ಸಿ.ಪಿ.ಸಿ.ಆರ್‌.ಐ. : ಯಂತ್ರ ಆವಿಷ್ಕಾರ

02:20 AM May 31, 2018 | Karthik A |

ವಿಟ್ಲ : ವಿಟ್ಲ ಸಿ.ಪಿ.ಸಿ.ಆರ್‌.ಐ.ಯಲ್ಲಿ ಅಡಿಕೆ ಕೊಳೆರೋಗ ನಿಯಂತ್ರಣಕ್ಕೆ ನೆಲದಿಂದಲೇ ಔಷಧ ಸಿಂಪಡಿಸಲು ಆವಿಷ್ಕರಿಸಿದ ಯಂತ್ರದ ಪ್ರಾತ್ಯಕ್ಷಿಕೆಯನ್ನು ಗುರುವಾರ ಪ್ರದರ್ಶಿಸಲಾಯಿತು. ಅಡಿಕೆ ಬೆಳೆಗಾರರಿಗೆ ಪರಿಣಾಮಕಾರಿ ಫಲಿತಾಂಶ ಲಭ್ಯವಾಗಲು ಅವಶ್ಯವಾದ ಸಲಹೆಗಳನ್ನು ನೀಡಲು ಈ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಡಿಕೆ ಬೆಳೆಗಾರರ ಕೂಲಿ ಕಾರ್ಮಿಕರ ಸಮಸ್ಯೆ ನಿವಾರಿಸುವಲ್ಲಿ ಹೇಗೆ ಸಹಕಾರಿಯಾಗುತ್ತದೆ ಮತ್ತು ಕೃಷಿಕರು ಈ ಯಂತ್ರವನ್ನು ಬಳಸುವ ಕ್ರಮವನ್ನು ಅರಿತುಕೊಂಡು, ಅದನ್ನು ಅಭಿವೃದ್ಧಿಪಡಿಸಲು ಯಾವ ರೀತಿ ಯೋಚನೆ ಮತ್ತು ಯೋಜನೆ ರೂಪಿಸಬಹುದು ಎಂಬ ಬಗ್ಗೆ ಚರ್ಚಿಸಲಾಯಿತು.

Advertisement

2019ಕ್ಕೆ ಯಂತ್ರ ಸಿದ್ಧ : ಡಾ| ಪಿ. ಚೌಡಪ್ಪ
ನಿರ್ದೇಶಕ ಡಾ| ಪಿ. ಚೌಡಪ್ಪ ಮಾತನಾಡಿ, ಡ್ರೋನ್‌ ಸ್ಪ್ರೇಯರನ್ನು ಜನರಲ್‌ ಏರೋನಾಟಿಕ್ಸ್‌ ಸಹಯೋಗದಲ್ಲಿ, ಟ್ರ್ಯಾಕ್ಟರ್‌ ಜತೆಯ ಸ್ಪ್ರೇಯರನ್ನು ಎಸ್ಪಿ ಕಂಪೆನಿಯ ಸಹಯೋಗದಲ್ಲಿ ಸಿ.ಪಿ.ಸಿ.ಆರ್‌.ಐ. ಸಂಶೋಧಿಸಿದೆ. ಜನರಲ್‌ ಏರೋನಾಟಿಕ್ಸ್‌ನ ಅಭಿಷೇಕ್‌ ಈ ಬಗ್ಗೆ ವಿವಿಧ ಆಯಾಮಗಳಲ್ಲಿ ಸಂಶೋಧನೆ ನಡೆಸಿದ್ದಾರೆ. ಉಪಬೆಳೆಗಳಿದ್ದಲ್ಲಿ ಈ ವಿಧಾನದ ಮೂಲಕ ಔಷಧ ಸಿಂಪಡಿಸುವುದು ಕಷ್ಟವೇ? ಮೈಲುತುತ್ತು ದ್ರಾವಣದಲ್ಲಿ ಎಷ್ಟು ಪ್ರಮಾಣ ಅಡಿಕೆ ಗೊನೆಗೆ ಅಂಟಿಕೊಂಡಿದೆ ? ಈ ಯಂತ್ರ ಸಿಂಪಡಿಸುವ ಸಂದರ್ಭ 1 ಗಿಡಕ್ಕೆ ಅಥವಾ 1 ಹೆಕ್ಟೇರ್‌ ಗೆ ಎಷ್ಟು ಪ್ರಮಾಣ ಬೇಕು? ಇತ್ಯಾದಿ ವಿಚಾರಗಳ ಬಗ್ಗೆ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ. ಪ್ರಸ್ತುತ ಪ್ರಾಯೋಗಿಕ ಹಂತದಲ್ಲಿದೆ. 2019ರಲ್ಲಿ ಔಷಧ ಸಿಂಪಡಿಸುವುದಕ್ಕೆ ಸಿದ್ಧವಾಗಬಹುದು ಎಂದು ವಿವರಿಸಿದರು.


ಬೆಳೆಗಾರರ ಕೈಗೆಟಕುವಂತಾಗಬಹುದು: ಮಂಚಿ ಶ್ರೀನಿವಾಸ ಆಚಾರ್‌

ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಂಚಿ ಶ್ರೀನಿವಾಸ ಆಚಾರ್‌ ಮಾತನಾಡಿ, ಕೂಲಿ ಕಾರ್ಮಿಕರು ಔಷಧ ಸಿಂಪಡಿಸುವ ಕೆಲಸದ ಅವಧಿ ಕಡಿಮೆಯಾಗುತ್ತದೆ. ಡ್ರೋನ್‌ ಮೂಲಕ ಮಳೆ ಬಿಟ್ಟು ಸ್ವಲ್ಪ ಒಣಗಿದಾಗಲೂ ಔಷಧ ಸಿಂಪಡಿಸಬಹುದಾಗಿದೆ. 3-4 ಗಂಟೆಗಳಲ್ಲೇ ಇಡೀ ತೋಟಕ್ಕೆ ಔಷಧ ಸಿಂಪಡಿಸುವಂತೆ ಇದನ್ನು ಅಭಿವೃದ್ಧಿಪಡಿಸಬೇಕು. ಯಂತ್ರದ ಆವಿಷ್ಕಾರವಾಗುತ್ತಿರುವಾಗ ಮೌಲ್ಯ ಹೆಚ್ಚಾಗಿರುತ್ತದೆ. ಆದರೆ ಕ್ರಮೇಣ ಅದು ಬೆಳೆಗಾರರ ಕೈಗೆಟಕುವಂತಾಗಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕ್ಯಾಂಪ್ಕೋ ಮಾಜಿ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಮಾತನಾಡಿ, ಔಷಧ ಸಿಂಪಡಿಸುವ ಯಂತ್ರದ ಆವಿಷ್ಕಾರ ಸುಲಭವಲ್ಲ. ಆದರೆ ಸಿ.ಪಿ.ಸಿ.ಆರ್‌.ಐ. ನಿರ್ದೇಶಕ ಡಾ| ಪಿ. ಚೌಡಪ್ಪ ನೇತೃತ್ವದಲ್ಲಿ ವಿಶೇಷ ಸಾಧನೆಯಾಗುತ್ತಿದೆ. 2018ರಲ್ಲಿ ಇದರ ಯೋಜನೆಯಷ್ಟೇ ರೂಪಿಸಲಾಗಿದೆ. ಆದರೆ 2019ರೊಳಗೆ ಈ ಯಂತ್ರ ಸಿದ್ಧವಾಗಿ ಕೃಷಿಕರ ಕೈಗೆ ಸಿಗುವಂತಾಗಬಹುದು ಎಂದರು.

ಯಂತ್ರವೇ ಮಾನವನನ್ನು ಮೇಲಕ್ಕೇರಿಸುವ ಯಂತ್ರ ಬೇಕು: ಬಾಲಕೃಷ್ಣ ರೈ
ವಿಟ್ಲ ಪಟ್ನೂರು ವ್ಯ.ಸೇ.ಸ. ಸಂಘದ ಅಧ್ಯಕ್ಷ ಬಾಲಕೃಷ್ಣ ರೈ ಮೂರ್ಜೆಬೆಟ್ಟು ಮಾತನಾಡಿ, ಅಡಿಕೆ ಮರಕ್ಕೇರಿ ಕೂಲಿ ಕಾರ್ಮಿಕರು ಸಿಂಪಡಿಸುವ ಪ್ರಮಾಣ ಯಂತ್ರವೇ ಮಾಡುವುದು ಎಷ್ಟು ಪರಿಣಾಮಕಾರಿಯಾಗಬಹುದು ಎಂದು ಅರ್ಥವಾಗುತ್ತಿಲ್ಲ. ಯಂತ್ರವೇ ಮಾನವನನ್ನು ಮೇಲಕ್ಕೇರಿಸಿ, ಆತ ಔಷಧ ಸಿಂಪಡಿಸುವುದು ಹೆಚ್ಚು ಪರಿಣಾಮಕಾರಿಯಾಗಬಹುದು ಎಂದು ಅಭಿಪ್ರಾಯಪಟ್ಟರು. ಇದೇ ಮಾತನ್ನು ಬೆಂಬಲಿಸಿದ ಬಿ.ಟಿ. ನಾರಾಯಣ ಭಟ್‌, ಮನುಷ್ಯನನ್ನು ಮೇಲಕ್ಕೇರಿಸುವ ಯಂತ್ರ ಮತ್ತು ಆ ಮೂಲಕ ಔಷಧ ಸಿಂಪಡಿಸುವ ಸಾಧನವಿದ್ದರೆ ಉತ್ತಮ ಎಂದು ಅಭಿಪ್ರಾಯಪಟ್ಟರು.

Advertisement

ಅನೇಕ ಅಡಿಕೆ ಬೆಳೆಗಾರರು ಈ ಪ್ರಾತ್ಯಕ್ಷಿಕೆಯಲ್ಲಿ ಪಾಲ್ಗೊಂಡಿದ್ದರು. ಕೆಲವರು ಯಂತ್ರದ ಉತ್ಪಾದನ ವೆಚ್ಚ ಲಕ್ಷಾಂತರ ರೂ. ಆಗಬಹುದು ಎಂದು ಹೇಳಿದರೆ, ಮತ್ತೆ ಕೆಲವರು ಆರಂಭದಲ್ಲಿ ಬೆಲೆ ಜಾಸ್ತಿಯಿದ್ದರೂ ಕ್ರಮೇಣ ಕಡಿಮೆಯಾಗಬಹುದು. ಸರಕಾರ ಸಹಾಯಧನ ನೀಡಬಹುದು. ಸಹಕಾರಿ ಸಂಘಗಳು ಅಥವಾ ಅಡಿಕೆ ಬೆಳೆಗಾರರ ಕಂಪೆನಿಗಳು ಬಾಡಿಗೆಗೆ ನೀಡುವಂತಾದರೂ ಪ್ರಯೋಜನವಾಗಬಹುದು ಎಂದು ಮಾತನಾಡುತ್ತಿದ್ದುದು ಕೇಳಿಬಂತು. ಇನ್ನು ಕೆಲವರು ಈ ಯೋಜನೆ ಯಶಸ್ವಿಯಾಗಲಾರದು ಎಂದು ತೆರಳಿದರು.

ಯಂತ್ರದ ವಿವರ ಟ್ರ್ಯಾಕ್ಟರ್‌ ಮೂಲಕ ಔಷಧ
ಟ್ರ್ಯಾಕ್ಟರ್‌ ನ ಹಿಂಭಾಗದಲ್ಲಿ ಮೈಲುತುತ್ತು ದ್ರಾವಣ ಸಿಂಪಡಿಸುವ ಯಂತ್ರವನ್ನು ಇರಿಸಿ, ಆ ಮೂಲಕ ನೆಲದಿಂದಲೇ ಮೇಲಕ್ಕೆ ಔಷಧ ಸಿಂಪಡಿಸುವುದು. ಈ ಯಂತ್ರದ ಮೂಲಕ ಸುಮಾರು 100 ಅಡಿಗಳ ಎತ್ತರಕ್ಕೆ ಔಷಧ ಸಿಂಪಡಿಸಲಾಗುತ್ತದೆ. ಆದರೆ ಅದು ಅಡಿಕೆ ಗೊನೆಗೆ ಯಾವ ಪ್ರಮಾಣದಲ್ಲಿ ತಲುಪುತ್ತದೆ, ಎಷ್ಟರ ಮಟ್ಟಿಗೆ ಪ್ರಯೋಜಕಾರಿ ಎಂಬ ಬಗ್ಗೆ ಪರಿಪೂರ್ಣ ಸಂಶೋಧನೆ ನಡೆಸಲಾಗಿಲ್ಲ. ಔಷಧ ಪ್ರಮಾಣವನ್ನು ಅಳತೆ ಮಾಡಿ, ರೋಗ ನಿಯಂತ್ರಣ ಸಾಧ್ಯತೆಗೆ ಎಷ್ಟು ಅನುಕೂಲವಾಗಿದೆ ಎಂದು ಸಂಶೋಧನೆ ನಡೆಸಲಾಗುತ್ತಿದೆ.

ಡ್ರೋನ್‌ ಮೂಲಕ ಔಷಧ
ಅಡಿಕೆ ಮರದ ಮೇಲೆ ಡ್ರೋನ್‌ ಹಾರುತ್ತ ಅದರಲ್ಲಿ ಜೋಡಿಸಿದ ಸಣ್ಣ ಟ್ಯಾಂಕ್‌ ನಿಂದ ಔಷಧ ಸಿಂಪಡಿಸುವುದು. 5 ಲೀ. ಔಷಧ  ಹಿಡಿದುಕೊಂಡು ಆಕಾಶದಲ್ಲಿ ಹಾರಾಟ ಮಾಡುವ ಡ್ರೋನ್‌ 2 ಸ್ಪ್ರೇಯರ್‌ ಗಳ ಮೂಲಕ ಔಷಧ ಸಿಂಪಡಿಸುತ್ತದೆ. ಆದರೆ ಅದು ಅಡಿಕೆ ಗೊನೆಗೆ ಎಷ್ಟು ಪ್ರಮಾಣ ತಲುಪುತ್ತದೆ ಎಂದು ಲೆಕ್ಕಾಚಾರ ಹಾಕಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next