ಹುಬ್ಬಳ್ಳಿ: ಗೋವುಗಳು ರೈತನ ಮಿತ್ರವಾಗಿರುವುದರಿಂದ ಮತ್ತು ಹಸುವಿನ ಹಾಲು ಆರೋಗ್ಯಕ್ಕೆ ಉತ್ತಮ ಆಹಾರವಾಗಿರುವುದರಿಂದ ಗೋವುಗಳನ್ನು ಹತ್ಯೆ ಮಾಡುವುದು ಸರಿಯಲ್ಲ ಎಂಬ ಉದ್ದೇಶದಿಂದ ಹಿಂದಿನ ಸರಕಾರ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡಿತ್ತು. ಜತೆಗೆ ಭಯ ಮತ್ತು ಆಮಿಷದ ಮೂಲಕ ಮಾಡಲಾ
ಗುವ ಮತಾಂತರವನ್ನೂ ನಿಷೇಧಿಸಿತ್ತು.
ಈಗ ಹೊಸ ಸರಕಾರ ಈ ಕಾಯ್ದೆಗಳನ್ನು ರದ್ದು ಮಾಡುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ವಿವಿಧ ಸ್ವಾಮೀಜಿಗಳು ಹೇಳಿದ್ದಾರೆ.
ಕಾಶೀ ಪೀಠದ ಜಗದ್ಗುರು ಡಾ| ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು, ಶ್ರೀಶೈಲ ಪೀಠದ ಜಗದ್ಗುರು ಡಾ| ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಮತ್ತು ಉಜ್ಜಯಿನಿ ಪೀಠದ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಈ ಕಾಯ್ದೆಗಳ ರದ್ದತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಹಿಂದೂ ಧರ್ಮದ ಪ್ರಕಾರ ಗೃಹಪ್ರವೇಶ ಮುಂತಾದ ಹಲವಾರು ಧಾರ್ಮಿಕ ಕಾರ್ಯಗಳಲ್ಲಿ ಗೋಪೂಜೆ, ಗೋ ಪ್ರವೇಶ ಮುಂತಾದವುಗಳನ್ನು ಮಾಡುವ ಪದ್ಧತಿ ಇರುವುದರಿಂದ ಗೋವುಗಳು ಹಿಂದೂಗಳಿಗೆ ಪೂಜ್ಯ ಸ್ಥಾನದಲ್ಲಿವೆ. ಆದ್ದರಿಂದ ಗೋಹತ್ಯೆ ನಿಷೇಧದ ರದ್ದತಿಯಿಂದ ಹಿಂದೂಗಳ ಭಾವನೆಗೆ ತೀವ್ರ ಧಕ್ಕೆಯಾಗುತ್ತದೆ. ಅಲ್ಲದೆ ಸ್ವಧರ್ಮ ನಿಷ್ಠೆ ಪರಧರ್ಮ ಸಹಿಷ್ಣುತೆಯನ್ನು ಪ್ರತಿಯೊಂದು ಸಮುದಾಯವೂ ಪಾಲಿಸುವುದರಿಂದ ಎಲ್ಲರೂ ಶಾಂತಿಯುತವಾಗಿ ಮತ್ತು ಸೌಹಾರ್ದದಿಂದ ಬದುಕಲು ಅನುಕೂಲವಾಗುತ್ತದೆ. ಪಕ್ಷಾಂತರ ನಿಷೇಧ ಕಾಯ್ದೆ ಇಲ್ಲದಿದ್ದರೆ ರಾಜಕೀಯ ವಲಯದಲ್ಲಿ ಅಸ್ಥಿರತೆ ಆರಂಭವಾಗುವಂತೆ ಮತಾಂತರ ನಿಷೇಧ ಕಾಯ್ದೆ ರದ್ದತಿಯಿಂದ ಸಾಮಾಜಿಕ ವಲಯದಲ್ಲಿ ಅಸ್ಥಿರತೆ ನೆಲೆಸುತ್ತದೆ. ರಾಜಕೀಯದಲ್ಲಿ ಪಕ್ಷಾಂತರ ನಿಷೇಧ ಕಾಯ್ದೆ ಎಷ್ಟು ಅವಶ್ಯವೋ, ಸಮಾಜದಲ್ಲಿ ಮತಾಂತರ ನಿಷೇಧ ಕಾಯ್ದೆ ಕೂಡ ಅಷ್ಟೇ ಅಗತ್ಯ ಎಂದು ಹೇಳಿದ್ದಾರೆ.