Advertisement

ಗೋ ಸಂಸ್ಕೃತಿಯನ್ನು ಸಾರುವ ಗೋ ರೂಪಕ

06:00 AM Nov 16, 2018 | |

ಒಂದೂವರೆ ವರ್ಷದಲ್ಲಿ ಕರ್ನಾಟಕ, ಕೇರಳ, ಚೆನ್ನೈ, ಮಹಾರಾಷ್ಟ್ರ, ಉತ್ತರ ಪ್ರದೇಶ, ದಿಲ್ಲಿ, ಗೋವ, ಗುಜರಾತ್‌, ರಾಜಸ್ಥಾನದಲ್ಲಿ ಪ್ರಯೋಗಗಳನ್ನು ನಡೆಸಿದ್ದಾರೆ . ಗರಿಷ್ಠ 25 ಕಲಾವಿದರು ಇರುತ್ತಾರೆ. ಜಮ್ಮು ಕಾಶ್ಮೀರ, ಚಂಡೀಗಢದಲ್ಲಿ ಕಾರ್ಯಕ್ರಮ ನಿಗದಿಯಾಗಿದೆ. ಕರ್ನಾಟಕ ಹೊರತುಪಡಿಸಿ ಉಳಿದೆಡೆ ಹಿಂದಿಯನ್ನು ಬಳಸುತ್ತಾರೆ. 

Advertisement

ಕಿನ್ನಿಗೋಳಿ ಎಳತ್ತೂರು ಶ್ರೀಶಕ್ತಿದರ್ಶನ ಯೋಗಾಶ್ರಮದ ದೇವಬಾಬಾ ಅವರು ದೇಸೀ ತಳಿಗಳ ದನಗಳಿಂದ ಆಗುತ್ತಿರುವ ಉತ್ತಮಾಂಶ ಮತ್ತು ಮಿಶ್ರ ತಳಿಯ ದನಗಳ ಕೆಡುಕಿನ ಅಂಶಗಳನ್ನು “ವಿಶ್ವಮಾತಾ ಗೋಮಾತಾ’ ಎಂಬ ನೃತ್ಯರೂಪಕದ ಮೂಲಕ ಸಾರುತ್ತಿದ್ದಾರೆ. ಒಂದೂವರೆ ವರ್ಷ ಹಿಂದೆ ಆರಂಭಗೊಂಡ ರೂಪಕ ಕರ್ನಾಟಕವೂ ಸೇರಿದಂತೆ 9 ರಾಜ್ಯಗಳಲ್ಲಿ ಪ್ರಯೋಗವಾಗಿದೆ. ಉಡುಪಿ ಪೂರ್ಣಪ್ರಜ್ಞ ಆಡಿಟೋರಿಯಂನಲ್ಲಿ ನ. 10ರಂದು 46ನೆಯ ಪ್ರಯೋಗ ನಡೆಯಿತು. ಪ್ರಸನ್ನಲಕ್ಷ್ಮೀ ರೂಪಕದ ನಿರ್ದೇಶಕಿ ಮತ್ತು ನೃತ್ಯ ಸಂಯೋಜಕಿ. 

ಆರಂಭದಲ್ಲಿ ಗೀರ್‌, ಕಪಿಲೆಯಂತಹ ದೇಸೀ ಹಸುಗಳ ಎತ್ತರದ ಭುಜ, ಕುತ್ತಿಗೆ ಕೆಳಭಾಗದ ಗಂಗೆ ತೊಗಲು ಲಕ್ಷಣಗಳನ್ನು ವಿವರಿಸಿ ಮಿಶ್ರ ತಳಿಯ ವಿದೇಶಿ ಹಸುಗಳ ಉತ್ಪನ್ನಗಳಿಂದ ಎಂತಹ ಹಾನಿಗಳಿವೆ ಎಂದು ಪಾಶ್ಚಾತ್ಯ ವಿಜ್ಞಾನಿಗಳು ಹೇಳಿರುವುದನ್ನು ಉಲ್ಲೇಖೀಸುತ್ತಾರೆ. ಇಂತಹ ಆಹಾರಕ್ರಮ ಮಧುಮೇಹ, ಕ್ಯಾನ್ಸರ್‌ನಂತಹ ಕಾಯಿಲೆಗಳಿಗೆ ಕಾರಣ ಎನ್ನುವ ನಿರೂಪಕರು ನಾವು ನಿತ್ಯ ಖರೀದಿಸುವ ಪ್ಯಾಕೇಟ್‌ ಹಾಲೇ ಉತ್ತಮವೆಂದು ಪರಿಗಣಿಸಿದ ಅಜ್ಞಾನವನ್ನೂ ಬೆಟ್ಟು ಮಾಡುತ್ತಾರೆ. ಕೃಷಿ ಕ್ಷೇತ್ರವೂ ಸೇರಿದಂತೆ ಜನಜೀವನದಲ್ಲಿ ಹಾಸುಹೊಕ್ಕಾದ ಬೃಹತ್‌ ಇತಿಹಾಸ ಹೊಂದಿರುವ ಕಾರಣ ದನಗಳಿಗೆ ವಿಶ್ವಮಾತೆ, ಗೋಮಾತೆ ಎಂಬ ಹೆಸರು ಬಂತೆನ್ನುವುದನ್ನು ಸಕಾರಣವಾಗಿ ತಿಳಿಸುತ್ತಾರೆ. 

ಕೃಷ್ಣನ ಕಾಲದಲ್ಲಿ 97 ತಳಿಗಳಿದ್ದರೆ ಈಗ 37 ತಳಿಗಳಿವೆ. ಇವುಗಳಲ್ಲಿ ಕೆಲವು ಅಳಿವಿನಂಚಿನಲ್ಲಿವೆ ಎಂಬ ಕಳವಳಕಾರಿ ಅಂಶವನ್ನು ಬಿಚ್ಚಿಡುತ್ತಾರೆ. ಭೂಮಿಗೆ ಪೃಥ್ವಿ ಎಂಬ ಹೆಸರು ಬಂದದ್ದು ಪೃಥು ಚಕ್ರವರ್ತಿಯಿಂದ. ಆತ ಲೋಕದಲ್ಲಿ ದುರ್ಭಿಕ್ಷೆ ಬಂದುದನ್ನು ಕಂಡು ಭೂತಾಯಿಯನ್ನು ಅಟ್ಟಿಸಿಕೊಂಡು ಹೋದ. ಆಕೆ ಗೋರೂಪವನ್ನು ತಾಳಿದಳು. ಮನುಷ್ಯರು ಸ್ವಾರ್ಥದಿಂದ ಮಾಡಿದ ಅನಾಹುತಗಳಿಂದ ದುರ್ಭಿಕ್ಷೆ ಬಂದದ್ದೇ ವಿನಾ ತನ್ನ ತಪ್ಪಲ್ಲ ಎಂದಳು ಗೋಮಾತೆ. ವಸಿಷ್ಟ ಋಷಿಯ ಆಶ್ರಮಕ್ಕೆ ಬಂದ ಕೌಶಿಕ ರಾಜ ತತ್‌ಕ್ಷಣದಲ್ಲಿ ಸೈನಿಕರಿಗೆ ಅಡುಗೆ ಮಾಡಿದ್ದನ್ನು ಕಂಡು ಅಚ್ಚರಿಪಟ್ಟು ಅದರ ಹಿಂದಿರುವ ಶಕ್ತಿಯಾದ ಗೋಮಾತೆಯನ್ನು ಕೇಳಿದ. ಒಪ್ಪದಿದ್ದಾಗ ಗೋಮಾತೆ ಕ್ರುದ್ಧಳಾಗಿ ಸೈನಿಕರನ್ನು ಮಣಿಸಿದ್ದೇ ಮೊದಲಾದ ಕಥಾನಕಗಳನ್ನು ರೂಪಕ ಆಕರ್ಷಕವಾಗಿ ತೋರಿಸುತ್ತದೆ. 

ಶ್ರೀಕೃಷ್ಣ ಗೋವರ್ಧನಗಿರಿಗೆ ಪೂಜೆ ಮಾಡಿದಾಗ ಸಿಟ್ಟುಕೊಂಡ ದೇವೇಂದ್ರ ಮಹಾಮಳೆಗೆರೆದ. ಆಗ ಕೃಷ್ಣ ತನ್ನ ಕಿರುಬೆರಳಿನಿಂದ ಗೋವರ್ಧನ ಬೆಟ್ಟವನ್ನು ಎತ್ತಿ ಗೋವುಗಳನ್ನೂ ಗೋಪಾಲಕರನ್ನೂ ರಕ್ಷಿಸಿದ ದೃಶ್ಯ ಕಥೆ ಕೇಳಿದವರಿಗೆ ಸುಲಭದಲ್ಲಿ ಅರ್ಥವಾಗುತ್ತದೆ. ಈ ಸಂದರ್ಭ ಶಿವ ಬಂದು ದೇವೇಂದ್ರನಿಗೆ ಬುದ್ಧಿ ಮಾತು ಹೇಳಿರುವುದು ಹರಿಹರರ ನಡುವಿನ ಒಮ್ಮತವನ್ನು ಸಾರುತ್ತದೆ. 

Advertisement

ಕೊನೆಯ ದೃಶ್ಯದಲ್ಲಿ ಶ್ರೀಮದ್ಭಾಗವತ ಪುರಾಣ ಜನಪ್ರಿಯವಾಗಲು ಕಾರಣನಾದ ಪರೀಕ್ಷಿತ ಮಹಾರಾಜನು ಗೋಮಾಂಸ ಭಕ್ಷಕರಿಗೆ ಬುದ್ಧಿ ಮಾತು ಹೇಳಿ ಅವರೇ ಗೋಕಥೆಯನ್ನು ಸಾರುವಂತೆ ಮಾಡುವುದು ಈಗಿನ ಆಡಳಿತಗಾರರಿಗೆ ಬುದ್ಧಿಮಾತು ಹೇಳಿದಂತಿದೆ. 

ಅರಿವಿಲ್ಲದ ದಡ್ಡತನ!
ರೂಪಕದಲ್ಲಿ ವಿರೋಧಿಗಳನ್ನು ಗೋಮಾತೆ ಹಣಿದಾಗ ಸಭಾಸದರು ಚಪ್ಪಾಳೆ ತಟ್ಟುತ್ತಿದ್ದರು. ವಿಪರ್ಯಾಸವೆಂದರೆ ಈ ವರ್ಗ ತಮ್ಮ ತಂದೆತಾಯಿ, ಅಜ್ಜ ಅಜ್ಜಿಯ ಕಾಲದಿಂದ ಬಂದ ಗೋ ಸಂಸ್ಕೃತಿಯನ್ನು ಬಿಟ್ಟು ಪೇಟೆಯಲ್ಲಿ “ಐಶಾರಾಮಿತನ’ದಲ್ಲಿ ಬದುಕುತ್ತಿರುವವರು. ಬಂದವರಲ್ಲಿ ಬಹುತೇಕರು ಇಂತಹ ವರ್ಗದವರೇ. ರೂಪಕವನ್ನು ನೋಡಲು ಬಾರದ, ಇದರ ವಿಷಯವೇ ಗೊತ್ತಿಲ್ಲದ ವರ್ಗ ಈಗಲೂ ದನಗಳನ್ನು ಹಳ್ಳಿಗಳಲ್ಲಿ ಅಷ್ಟೋ ಇಷ್ಟೋ ಸಾಕುತ್ತಿದೆ. ಈ ವರ್ಗ ಅಭಿವೃದ್ಧಿ ವೇಗದ ಪರಿಣಾಮ ಭವಿಷ್ಯದಲ್ಲಿ ಕೈಚಪ್ಪಾಳೆ ತಟ್ಟಿದ ವರ್ಗಕ್ಕೆ ಸೇರುವವರು. ನೂರರಲ್ಲಿ ಒಬ್ಬರಾದರೂ ತಮ್ಮದೇ ಕೈಚಪ್ಪಾಳೆಯಿಂದ ಎಚ್ಚರವಾಗಬಹುದು ಎಂಬುದು ಆಶಾವಾದ. ಪೌರಾಣಿಕ ಕಥಾನಕಗಳ ಜತೆಗೆ ವಾಸ್ತವ, ವೈಜ್ಞಾನಿಕ ಅಂಶಗಳನ್ನು ರೂಪಕದಲ್ಲಿ ಸೇರಿಸಿದರೆ ಅದು ಇನ್ನಷ್ಟೂ ಪರಿಣಾಮಕಾರಿಯಾದೀತು. ಸಮಾಜದಲ್ಲಿ ಇಂದು ಲಾಭವೇ ಮುಖ್ಯ ಗುರಿಯಾಗಿರುವಾಗ ಅದೇ ಭಾಷೆಯಲ್ಲಿ ತಿಳಿಸಬೇಕಾಗುತ್ತದೆ. 

ಮಟಪಾಡಿ ಕುಮಾರಸ್ವಾಮಿ 

Advertisement

Udayavani is now on Telegram. Click here to join our channel and stay updated with the latest news.

Next