Advertisement

ಕೋವಿಡ್ ವೈರಸ್ ಎಫೆಕ್ಟ್: ಹೆಚ್ಚಾಗಲಿದೆ ಸಿನಿ ಟ್ರಾಫಿಕ್ –ಸಹಕಾರ ತತ್ವದಡಿ ಬಿಡುಗಡೆ ಅಗತ್ಯ

09:02 AM Apr 04, 2020 | Nagendra Trasi |

ಬೆಂಗಳೂರು: ಸದ್ಯ ಕೋವಿಡ್ ವೈರಸ್ ಇಡೀ ದೇಶವನ್ನು ಕಾಡುತ್ತಿದೆ. ಹಲವಾರು ಉದ್ಯಮಗಳು ವೈರಸ್ ಹೊಡೆತಕ್ಕೆ ಸಿಕ್ಕಿ ಮಕಾಡೆ ಮಲಗಿವೆ. ಇನ್ನೊಂದಿಷ್ಟು ಕ್ಷೇತ್ರಗಳು ಚೇತರಿಸಿಕೊಳ್ಳಲು ವರ್ಷಗಳೇ ಬೇಕು. ಇದರಿಂದ ಚಿತ್ರರಂಗ ಕೂಡಾ ಹೊರತಾಗಿಲ್ಲ. ಮುಖ್ಯವಾಗಿ ಚಿತ್ರರಂಗದಲ್ಲಿ ಕೂಡಲೇ ತಲೆದೋರಲಿರುವ ಸಮಸ್ಯೆ ಎಂದರೆ ರಿಲೀಸ್. ಹೌದು, ಕನ್ನಡ ಚಿತ್ರರಂಗದಲ್ಲಿ ಈ ವರ್ಷ ಸಿನಿಮಾ ಬಿಡುಗಡೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಅದಕ್ಕೆ ಕಾರಣ ಮತ್ತದೇ ವೈರಸ್ ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ.

Advertisement

ಸಾಮಾನ್ಯವಾಗಿ ಪ್ರತಿ ವಾರ ಚಿತ್ರರಂಗದಲ್ಲಿ ಐದಾರು ಸಿನಿಮಾಗಳು ಬಿಡುಗಡೆಯಾಗುತ್ತಲೇ ಬಂದಿವೆ. ಆದರೆ ವೈರಸ್ ನಿಂದಾಗಿ ನಾಲ್ಕೈದು ವಾರದಿಂದ ಯಾವುದೇ ಸಿನಿಮಾಗಳು ಬಿಡುಗಡೆಯಾಗುತ್ತಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಚಿತ್ರರಂಗದಲ್ಲಿ ಸಿನಿಟ್ರಾಫಿಕ್ ಜೋರಾಗಲಿದೆ. ಈಗಾಗಲೇ ಮಾರ್ಚ್ ಹಾಗೂ ಏಪ್ರಿಲ್ ನಲ್ಲಿ ಸಾಕಷ್ಟು ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿದ್ದವು. ಆದರೆ ಈ ಕೋವಿಡ್ ನಿಂದಾಗಿ ಲೆಕ್ಕಾಚಾರ ತಲೆಕೆಳಗಾಗಿದೆ. ಹೊಸಬರ, ಸ್ಟಾರ್ ಗಳ … ಹೀಗೆ ಸಾಕಷ್ಟು ಸಿನಿಮಾಗಳು ಸರತಿಯಲ್ಲಿವೆ. ಹಾಗಾದರೆ ಈ ಎಲ್ಲಾ ಚಿತ್ರಗಳ ಬಿಡುಗಡೆ ಯಾವಾಗ ಎಂದರೆ ಅದಕ್ಕೆ ಉತ್ತರವಿಲ್ಲ.

ಕನ್ನಡ ಚಿತ್ರರಂಗದಲ್ಲಿ ಸಿನಿಮಾ ಬಿಡುಗಡೆಗೆ ಒಂದು ನಿರ್ದಿಷ್ಟವಾದ ನಿಯಮವಿಲ್ಲ. ವಾರದಲ್ಲಿ ಇಂತಿಷ್ಟೇ ಸಿನಿಮಾ ಬಿಡುಗಡೆಯಾಬೇಕೆಂದು ತಡೆಯುವವರು ಯಾರೂ ಇಲ್ಲ. ಹಾಗಾಗಿಯೇ ವಾರವೊಂದಕ್ಕೆ 11-12 ಸಿನಿಮಾಗಳು ಕೂಡಾ ಬಿಡುಗಡೆಯಾಗಿವೆ. ಈಗ ಕೋವಿಡ್ ನಿಂದ ಮುಂದಕ್ಕೆ ಹೋಗಿರುವ ಸಿನಿಮಾಗಳು ಒಮ್ಮೆಲೇ ಬಿಡುಗಡೆಗೆ ಬಂದರೆ ಮತ್ತೆ ಚಿತ್ರರಂಗದಲ್ಲಿ ಬಿಡುಗಡೆ ಸಮಸ್ಯೆ ತಲೆದೋರಲಿದೆ. ಚಿತ್ರಮಂದಿರದ ಗೊಂದಲ, ಪ್ರೇಕ್ಷಕ ಬರಲ್ಲ ಎಂಬ ಗೋಳು ಮತ್ತೆ ಕೇಳಿಬರಲಿದೆ. ಹಾಗಾಗಿ ಈ ಬಗ್ಗೆ ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘ ಒಂದು ನಿಯಮ ರೂಪಿಸುವ ಅನಿವಾರ್ಯತೆ ಇದೆ.

ಈಗಾಗಲೇ ಬಿಡುಗಡೆಯಾಗಿ ವೈರಸ್ ನಿಂದ ತೊಂದರೆ ಅನುಭವಿಸಿದ ಐದಾರು ಸಿನಿಮಾಗಳ ಜೊತೆಗೆ ಬಿಡುಗಡೆಯ ಹಾದಿಯಲ್ಲಿ ಹತ್ತಾರು ಸಿನಿಮಾಗಳಿವೆ. ಸ್ಟಾರ್ ಗಳ ಸಿನಿಮಾ ಬಗ್ಗೆ ಹೇಳುವುದಾದರೆ ರಾಬರ್ಟ್, ಯುವರತ್ನ, ಪೊಗರು, ಕೋಟಿಗೊಬ್ಬ, ಇನ್ಸ್ ಪೆಕ್ಟರ್ ವಿಕ್ರಮ್, ಅರ್ಜುನ್ ಗೌಡ, 100, ಪ್ರೇಮಂ ಪೂಜ್ಯಂ, ಅವತಾರ್ ಪುರುಷ … ಹೀಗೆ ಲೆಕ್ಕ ಹಾಕುತ್ತಾ ಹೋದರೆ ಪಟ್ಟಿ ಬೆಳೆಯುತ್ತದೆ.

ಇವೆಲ್ಲಾ ಸಿನಿಮಾಗಳ ಮಧ್ಯೆ ಸಂಪೂರ್ಣ ಹೊಸಬರ ಸಿನಿಮಾಗಳು ಕೂಡಾ ಸರತಿಯಲ್ಲಿವೆ. ಹೀಗೆ ಸ್ಟಾರ್ಗಳ ಹಾಗೂ ಹೊಸಬರ ಸಿನಿಮಾ ಮಧ್ಯೆ ತಿಕ್ಕಾಟ ಶುರುವಾಗಲಿದೆ. ಈ ನಿಟ್ಟಿನಲ್ಲಿ ಪಕ್ಕಾ ಪ್ಲ್ಯಾನ್ ಮಾಡಿಕೊಂಡು ಸಿನಿಮಾ ಬಿಡುಗಡೆ ಮಾಡೋದು ಉತ್ತಮ. ಇಲ್ಲವಾದರೆ ಕೊರೊನಾದ ಅಫ್ಟರ್ ಎಫೆಕ್ಟ್ ಚಿತ್ರರಂಗಕ್ಕೆ ಹೆಚ್ಚಾಗಿಂಯೇ ತಟ್ಟಲಿದೆ.

Advertisement

ಸದ್ಯ ಬಿಡುಗಡೆಗೆ ತುಂಬಾ ಸಿನಿಮಾಗಳು ರೆಡಿಯಾಗಿವೆ. ಆದ್ರೆ ಕೊರೊನಾ ಲಾಕ್ ಡೌನ್ ನಿಂದ ಸದ್ಯಕ್ಕೆ ಎಲ್ಲ ಕೆಲಸಗಳೂ 2-3 ತಿಂಗಳು ಮುಂದಕ್ಕೆ ಹೋಗುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಚಿತ್ರರಂಗ ಮತ್ತೆ ಮೊದಲಿನ ಸ್ಥಿತಿಗೆ ಬರಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆಯೊ ಗೊತ್ತಿಲ್ಲ. ಚಿತ್ರಮಂದಿರಗಳಲ್ಲಿ ಮತ್ತೆ ಪ್ರದರ್ಶನ ಶುರುವಾದ ನಂತರ ಈಗಾಗಲೇ ಬಿಡುಗಡೆಯಾಗಿರುವ ಸಿನಿಮಾಗಳಿಗೆ ಮೊದಲು ಅವಕಾಶ ಕೊಡಬೇಕು, ಕೆಲ ದಿನಗಳ ಮಟ್ಟಿಗೆ ಪ್ರದರ್ಶನಕ್ಕೆ ಅನುಕೂಲ ಮಾಡಿಕೊಡಬೇಕು ಅಂತ ಪ್ರದರ್ಶಕರು, ಮತ್ತು ವಾಣಿಜ್ಯ ಮಂಡಳಿಗೆ ಮನವಿ ಮಾಡಿಕೊಂಡಿದ್ದೇವೆ.

ಅದಾದ ನಂತರ ಬಿಡುಗಡೆಗೆ ಸಿದ್ದವಿರುವ ಸಿನಿಮಾಗಳನ್ನು ಪರಸ್ಪರ ಸಹಕಾರದ ಮೇರೆಗೆ ಕೆಲವೇ ಸಂಖ್ಯೆಗಳಲ್ಲಿ ಬಿಡುಗಡೆಗೊಳಿಸುವಂತೆ ನಿರ್ಮಾಪಕರು, ಪ್ರದರ್ಶಕರ ಜೊತೆಗೆ ಒಮ್ಮೆ ಮಾತನಾಡುತ್ತೇವೆ. ಒಟ್ಟಿನಲ್ಲಿ ಒಂದೇ ಸಲ ಹತ್ತಾರು ಸಿನಿಮಾಗಳು ಬಿಡುಗಡೆಯಾದರೆ, ಎಲ್ಲರಿಗೂ ತೊಂದರೆ ಅನ್ನೊದನ್ನು ಅರ್ಥ ಮಾಡಿಸುವ ಪ್ರಯತ್ನ ಮಾಡುತ್ತೇವೆ.
– ಪ್ರವೀಣ್ ಕುಮಾರ್, ನಿರ್ಮಾಪಕರ ಸಂಘದ ಅಧ್ಯಕ್ಷ

ಒಂದೇ ಸಲಕ್ಕೆ ಒಂದರ ಹಿಂದೊಂದು ಸಿನಿಮಾಗಳು ಬಿಡುಗಡೆಯಾದರೆ, ಯಾವ ಸಿನಿಮಾಗಳೂ ಗೆಲ್ಲೊದು ಕಷ್ಟ. ಆದಷ್ಟು ಸಿನಿಮಾ ಬಿಡುಗಡೆಗೆ ತಯಾರಾಗಿರುವ ನಿರ್ಮಾಪಕರು ತಮ್ಮ ಸಿನಿಮಾ ಬಿಡುಗಡೆಗೂ ಮುನ್ನ ಸಾಕಷ್ಟು ಬಾರಿ ಯೋಚಿಸಿ, ಸರಿಯಾದ ಸಿದ್ಧತೆ ಮಾಡಿಕೊಂಡು ಬಿಡುಗಡೆ ಮಾಡುವುದು ಒಳ್ಳೆಯದು. ಇದಕ್ಕೆ ಸಂಬಂಧಿಸಿದಂತೆ ವಾಣಿಜ್ಯ ಮಂಡಳಿ ಯಾವಾಗಲೂ ಸಲಹೆ, ಸಹಕಾರ ಕೊಡಲು ಸಿದ್ಧವಿದೆ.

ಸದ್ಯ ವೈರಸ್ ಎಫೆಕ್ಟ್ ಯಾವಾಗ ಕಡಿಮೆಯಾಗುತ್ತದೆ, ಜನ ಥಿಯೇಟರ್ ಗೆ ಯಾವಾಗ ಬರುತ್ತಾರೆ ಅನ್ನೋದು ಮೊದಲು ಗೊತ್ತಾಗಬೇಕು. ಎಲ್ಲವೂ ಸಹಜ ಸ್ಥಿತಿಗೆ ಬರುತ್ತಿದ್ದಂತೆ, ಸಿನಿಮಾಗಳ ಬಿಡುಗಡೆಗೆ ಸಂಬಂಧಿಸಿದಂತೆ ಒಂದಷ್ಟು ಮಾರ್ಗದರ್ಶಕ ಸೂತ್ರಗಳನ್ನು ಮಾಡುವ ಪ್ರಯತ್ನ ಮಾಡುತ್ತೇವೆ.
-ಜೈರಾಜ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next