Advertisement

ಶಿರೂರ-ಮನ್ನಿಕಟ್ಟಿಯಲ್ಲಿ 2ನೇ ಅಲೆ ಉಲ್ಬಣ

02:27 PM May 19, 2021 | Team Udayavani |

ಬಾಗಲಕೋಟೆ: ಕೊರೊನಾ ಎರಡನೇ ಅಲೆ ಹಳ್ಳಿಗಳಿಗೂ ಹರಡುತ್ತಿರುವ ಹಿನ್ನೆ‌ಲೆಯಲ್ಲಿ ತಾಲೂಕಿನ ಶಿರೂರ ಪಟ್ಟಣ ಮತ್ತು ಮನ್ನಿಕಟ್ಟಿ ಗ್ರಾಮಗಳಿಗೆ ಶಾಸಕ ಡಾ|ವೀರಣ್ಣ ಚರಂತಿಮಠ, ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ|ಕೆ.ರಾಜೇಂದ್ರ, ಜಿಪಂ ಸಿಇಒ ಟಿ.ಭೂಬಾಲನ ಭೇಟಿ ನೀಡಿ ಗ್ರಾಮದ ಜನರ ಆರೋಗ್ಯ ವಿಚಾರಿಸಿ ಅವರಿಗೆ ಆತ್ಮಸ್ಥೈರ್ಯ ತುಂಬಿದರು.

Advertisement

ಮಂಗಳವಾರ ಭೇಟಿ ನೀಡಿದ ಶಾಸಕರು ಮತ್ತು ಅಧಿಕಾರಿಗಳು ಗ್ರಾಮಗಳಲ್ಲಿ ಸಂಚರಿಸಿ ಅಲ್ಲಿನ ಸ್ಥಿತಿಗತಿ ಪರಿಶೀಲಿಸಿದರು. ಕೋವಿಡ್‌ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು. ಸಂಚಾರದ ವೇಳೆಯಲ್ಲಿ ಕೊವಿಡ್‌ ಲಕ್ಷಣಗಳನ್ನು ಹೊಂದಿದವರಿಗೆ ಔಷಧ ಕಿಟ್‌ ವಿತರಿಸಿದರು. ಕೋವಿಡ್‌ ಹಳ್ಳಿಯ ಕಡೆಗೂ ಪಸರಿಸುತ್ತಿದ್ದು, ಕೊರೊನಾ ಕರ್ಫ್ಯೂ ಕಟ್ಟುನಿಟ್ಟಾಗಿ ಪಾಲಿಸಿದಲ್ಲಿ ಕೋವಿಡ್‌ ಸೋಂಕಿನ ಪ್ರಮಾಣ ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಆದ್ದರಿಂದ ಅನಾವಶ್ಯಕವಾಗಿ ಮನೆಯಿಂದ ಹೊರಗಡೆ ಬರದಂತೆ ಶಾಸಕ ವೀರಣ್ಣ ಚರಂತಿಮಠ ಗ್ರಾಮಸ್ಥರಲ್ಲಿ ಮನವಿ ಮಾಡಿಕೊಂಡರು.

ಪಾಸಿಟಿವ್‌ ಕೇಸ್‌ಗಳು ದೃಢಪಟ್ಟವರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರ ಸ್ಯಾಂಪಲ್‌ ತೆಗೆದುಕೊಂಡು ಪರೀಕ್ಷೆಗೆ ಕಳುಹಿಸುವಂತೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಿಗೆ ಸೂಚಿಸಿದರು. ಕೆಮ್ಮು, ನೆಗಡಿ, ಜ್ವರ ಇದ್ದವರು ತಕ್ಷಣ ಸರಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಗ್ರಾಮದ ಆರೋಗ್ಯದ ದೃಷ್ಟಿಯಿಂದ ಬಿವಿವಿ ಸಂಘದ ವೈದ್ಯಕೀಯ ಮಹಾವಿದ್ಯಾಲಯದಿಂದ 9 ಜನ ಎಂಬಿಬಿಎಸ್‌ ವೈದ್ಯರನ್ನು ಶಿರೂರ ಮತ್ತು ಮನ್ನಿಕೇರಿ ಗ್ರಾಮಗಳಿಗೆ ಕಳುಹಿಸಲಾಗುತ್ತಿದೆ ಎಂದು ತಿಳಿಸಿದರು.

ಎರಡು ಗ್ರಾಮಗಳಲ್ಲಿ ವೈದ್ಯರ ಜತೆ ಸ್ಥಳೀಯ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಹಾಯಕರನ್ನು ನೀಡಿ ತಂಡಗಳನ್ನು ರಚಿಸಿ ಆರೋಗ್ಯ ತಪಾಸಣೆ ಕೈಗೊಳ್ಳಲು ಕ್ರಮ ವಹಿಸುವಂತೆ ತಾಲೂಕು ವೈದ್ಯಾಧಿ ಕಾರಿ ಡಾ|ಅರವಿಂದ ಪಟ್ಟಣಶೆಟ್ಟಿ ಅವರಿಗೆ ಸೂಚಿಸಿದರು. ಗ್ರಾಮದ ಜನರು ಜಾಗೃತಿಯಿಂದ ಇರಬೇಕು. ಪಾಸಿಟಿವ್‌ ದೃಢಪಟ್ಟವರನ್ನು ತಾಲೂಕಿನ ಕೋವಿಡ್‌ ಕೇರ್‌ ಸೆಂಟರ್‌ಗೆ ದಾಖಲಿಸಲು ತಿಳಿಸಿದರು.

ತಹಶೀಲ್ದಾರ್‌ ಗುರುಸಿದ್ದಯ್ಯ ಹಿರೇಮಠ, ತಾಲೂಕಾ ಆರೋಗ್ಯಾಧಿಕಾರಿ ಡಾ|ಅರವಿಂದ ಪಟ್ಟಣಶೆಟ್ಟಿ, ಹಿಂದುಳಿದ ವರ್ಗಗಳ ಕಲ್ಯಾಣಾಕಾರಿ ಹಾಗೂ ಕೋವಿಡ್‌ ನೋಡಲ್‌ ಅಧಿಕಾರಿ ಮಂಜುನಾಥ ಡೋಂಬರ, ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ| ವಿನೋದ ಹಾದಿಮನಿ, ಗ್ರಾಮ ಲೆಕ್ಕಾಧಿಕಾರಿ ಆನಂದ ಅಳ್ಳಿಗಿಡದ, ಶಿರೂರ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಐ.ಜಿ.ಕೊಣ್ಣೂರ ಮುಂತಾದವರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next