Advertisement

ಕೋವಿಡ್ ಭೀತಿ: ಮಹಾ ಗಡಿಯಲ್ಲಿ 5 ಚೆಕ್‌ಪೋಸ್ಟ್‌

12:14 PM Feb 23, 2021 | Team Udayavani |

ಕಲಬುರಗಿ: ನೆರೆಯ ಮಹಾರಾಷ್ಟ್ರದಲ್ಲಿ ಕೋವಿಡ್ ಸೋಂಕಿನ ಎರಡನೇ ಅಲೆಯ ಭೀತಿ ಹುಟ್ಟಿಸಿರುವ ಹಿನ್ನೆಲೆಯಲ್ಲಿ ಸೋಮವಾರದಿಂದ ಜಿಲ್ಲೆಯಲ್ಲಿ ಮಹಾರಾಷ್ಟ್ರ ಗಡಿ ಭಾಗದಲ್ಲಿ ಐದು ಚೆಕ್‌ ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದ್ದು, ಮಹಾರಾಷ್ಟ್ರದಿಂದ ಬರುವವರ ಮೇಲೆ ನಿಗಾ ವಹಿಸಲಾಗಿದೆ. ಜಿಲ್ಲೆಯ ಆಳಂದ ತಾಲೂಕಿನ ಹಿರೋಳ್ಳಿ, ಖಜೂರಿ, ನಿಂಬಾಳ ಹಾಗೂ ಅಫಜಲಪುರ ತಾಲೂಕಿನ ಮಾಶಾಳ, ಬಳೂರ್ಗಿ ಸಮೀಪ ಹೊಂದಿಕೊಂಡ ಮಹಾರಾಷ್ಟ್ರ ಗಡಿಯಲ್ಲಿ ಚೆಕ್‌ ಪೋಸ್ಟ್‌ ತೆರೆಯಲಾಗಿದೆ.

Advertisement

ಮಹಾರಾಷ್ಟ್ರದಿಂದ ಜಿಲ್ಲೆಗೆ ಆಗಮಿಸುವ ಜನರ ತಪಾಸಣೆ ಮತ್ತು ಮಾಹಿತಿ ಸಂಗ್ರಹಕ್ಕಾಗಿ ಪೊಲೀಸ್‌, ಕಂದಾಯ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ನಿಯೋಜಿಸಿ ಕಟ್ಟೆಚ್ಚರ ವಹಿಸಲಾಗಿದೆ. ಮಹಾರಾಷ್ಟ್ರದಿಂದ ಜಿಲ್ಲೆಗೆ ಪ್ರವೇಶ ಪಡೆಯಲು ಕಡ್ಡಾಯವಾಗಿ ಕಳೆದ 72 ಗಂಟೆಯಲ್ಲಿ ಪಡೆದ ಕೋವಿಡ್ ಪರೀಕ್ಷೆಯ ಆರ್‌ಟಿ-ಪಿಸಿಆರ್‌ ನೆಗೆಟಿವ್‌ ಪ್ರಮಾಣ ಪತ್ರ ಹಾಜರುಪಡಿಸಬೇಕು. ಕೊರೊನಾ ನೆಗೆಟಿವ್‌ ಪ್ರಮಾಣ ಪತ್ರ ಇಲ್ಲದಿದ್ದರೆ ಪ್ರವೇಶಕ್ಕೆ ಅವಕಾಶ ನೀಡದಿರಲು
ಜಿಲ್ಲಾಡಳಿತ ಸೂಚಿಸಿದೆ.

ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ರವಿವಾರ ಮಧ್ಯರಾತ್ರಿಯಿಂದಲೇ ಕಟ್ಟೆಚ್ಚರ ವಹಿಸಬೇಕಿತ್ತು. ಆದರೆ, ಸೋಮವಾರ ಮಧ್ಯಾಹ್ನದವರೆಗೂ ಮಹಾರಾಷ್ಟ್ರ
ಮತ್ತು ಕಲಬುರಗಿ ಮಧ್ಯೆ ಜನರ ಸಂಚಾರ ಯಾವುದೇ ನಿರ್ಬಂಧವಿಲ್ಲದೇ ನಡೆಯಿತು. ಮಹಾರಾಷ್ಟ್ರದಿಂದ ಬಸ್‌ ಗಳು ಸಹ ಮುಕ್ತವಾಗಿ ಸಂಚರಿಸಿದವು. ಮಧ್ಯಾಹ್ನದ ನಂತರ ಚೆಕ್‌ ಪೋಸ್ಟ್‌ಗಳನ್ನು ತೆರೆಯಲಾಯಿತು.

ಆದರೂ, ಹೊಸ ಮಾರ್ಗಸೂಚಿ ಅನ್ವಯ ಸೋಮವಾರ ಆರ್‌ಟಿ-ಪಿಸಿಆರ್‌ ನೆಗೆಟಿವ್‌ ವರದಿಯನ್ನು ಕಡ್ಡಾಯಗೊಳಿಸಿಲ್ಲ. ಹಲವು ಪ್ರಯಾಣಿಕರು ತಮ್ಮ
ಬಳಿ ವರದಿ ಇಲ್ಲದಿದ್ದರೂ ಜಿಲ್ಲೆಗೆ ಪ್ರವೇಶ ಪಡೆದರು. ಮಹಾರಾಷ್ಟ್ರದಿಂದ ಬಂದವರ ಹೆಸರು, ವಿಳಾಸ, ಮೊಬೈಲ್‌ ಸಂಖ್ಯೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ. ಅಫಜಲಪುರ ತಾಲೂಕಿನ ಮಾಶಾಳ ಚೆಕ್‌ಪೋಸ್ಟ್‌ನಲ್ಲಿ ಮಾತ್ರ ಆರ್‌ ಟಿ-ಪಿಸಿಆರ್‌ ವರದಿ ಇಲ್ಲದವರ ವಾಹನಗಳನ್ನು ವಾಪಸ್‌ ಕಳುಹಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ರೈಲ್ವೆ ನಿಲ್ದಾಣದಲ್ಲಿಲ್ಲ ನಿಗಾ: ಕಲಬುರಗಿ ಮೂಲಕ ಬೆಂಗಳೂರು, ಚೈನ್ನೈ ಮತ್ತು ಹೈದ್ರಾಬಾದ್‌ಗೆ ನಿತ್ಯ 20 ರೈಲುಗಳು ಸಂಚರಿಸುತ್ತಿವೆ. ಇದರಲ್ಲಿ ಸೊಲ್ಲಾಪುರದಿಂದ ಒಂದು ಮತ್ತು ಮುಂಬೈ ಒಂದರಿಂದಲೇ ಸುಮಾರು 16 ರೈಲುಗಳು ಆಗಮಿಸುತ್ತವೆ. ಆದರೂ, ಸೋಮವಾರ ಜಿಲ್ಲಾಡಳಿತದಿಂದ ರೈಲ್ವೆ ನಿಲ್ದಾಣದಲ್ಲಿ ಯಾವುದೇ ಕ್ರಮಗಳನ್ನು ತೆಗೆದುಕೊಂಡಿರಲಿಲ್ಲ.

Advertisement

ಮಹಾರಾಷ್ಟ್ರದಲ್ಲಿ ಕೋವಿಡ್ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ಕಳೆದ ಎರಡೂ¾ರು ದಿನಗಳಿಂದ ರೈಲ್ವೆ ಇಲಾಖೆಯಿಂದಲೇ ಥರ್ಮಲ್‌ ಸ್ಕ್ರೀನಿಂಗ್‌ ಮತ್ತು
ಹ್ಯಾಂಡ್‌ ಸ್ಯಾನಿಟೈಸರ್‌ ಮಾಡಲಾಗುತ್ತಿದೆ. ಆದರೆ, ಆರ್‌ಟಿ-ಪಿಸಿಆರ್‌ ವರದಿ ಪರಿಶೀಲನೆ ಮಾಡುತ್ತಿಲ್ಲ. ಸೋಮವಾರ ಆರ್‌ಟಿ-ಪಿಸಿಆರ್‌ ವರದಿ ಪರಿಶೀಲನೆಗೆ
ಸಿಬ್ಬಂದಿ ನೇಮಿಸುವುದಾಗಿ ಜಿಲ್ಲಾಡಳಿತ ಹೇಳಿತ್ತು. ಇದಕ್ಕಾಗಿ ರೈಲುಗಳ ಸಂಚಾರದ ವೇಳೆ ಪಟ್ಟಿ ಮತ್ತು ಮಾಹಿತಿಯನ್ನು ರವಿವಾರವೇ ನೀಡಲಾಗಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಒಟ್ಟಿಗೆ 500 ಜನ ಸೇರಬೇಡಿ
ೊರೊನಾ ಸೋಂಕು ನಿಯಂತ್ರಣಕ್ಕಾಗಿ ಮಹಾರಾಷ್ಟ್ರದಿಂದ ಜಿಲ್ಲೆಗೆ ಬರುವ ಸಾರ್ವಜನಿಕರು ಕಡ್ಡಾಯವಾಗಿ ಕಳೆದ 72 ಗಂಟೆಯಲ್ಲಿ ಪಡೆದ ಕೋವಿಡ್‌ ನೆಗೆಟಿವ್‌ ಪ್ರಮಾಣಪತ್ರ ತೋರಿಸಿದರೆ ಮಾತ್ರ ಗಡಿಯಲ್ಲಿ ಪ್ರವೇಶ ನೀಡಲಾಗುವುದು. ಕೊರೊನಾ ನೆಗೆಟಿವ್‌ ಪ್ರಮಾಣ ಇಲ್ಲದಿದ್ದಲ್ಲಿ ಜಿಲ್ಲೆಗೆ ಪ್ರವೇಶವಿಲ್ಲ. ಜಿಲ್ಲೆಯ ಗಡಿಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಜತೆಗೆ ಮದುವೆ ಸೇರಿದಂತೆ ಧಾರ್ಮಿಕ ಸಮಾರಂಭಗಳಲ್ಲಿ 500ಕ್ಕಿಂತ ಹೆಚ್ಚು ಜನ ಸೇರಬಾರದು. ಈ ಬಗ್ಗೆ ರಾಜ್ಯ ಸರ್ಕಾರದ ನಿರ್ದೇಶನವಿದ್ದರೂ ಸಹ ಸಾರ್ವಜನಿಕರು ಈ ಸಂಖ್ಯೆಗೆ ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಕೊರೊನಾದಿಂದ ರಕ್ಷಣೆಗಾಗಿ ಸರ್ಕಾರದ ನಿಯಮಗಳನ್ನು
ಕಡ್ಡಾಯವಾಗಿ ಪಾಲಿಸಬೇಕು ಹಾಗೂ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್‌ ಬಳಸುವುದು ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅವಶ್ಯ.
ವಿ.ವಿ.ಜ್ಯೋತ್ಸ್ನಾ, ಜಿಲ್ಲಾಧಿಕಾರಿ

ಕೋವಿಡ್ ಪರೀಕ್ಷೆ ಮಾಡಿಸಿ
ಕೇರಳ ಮತ್ತು ಮಹಾರಾಷ್ಟ್ರದಿಂದ ಕಳೆದ 15 ದಿನದಲ್ಲಿ ಜಿಲ್ಲೆಗೆ ಮರಳಿದವರು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ತೆರಳಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಜಿಲ್ಲೆಯಿಂದ ಇತರೆ ರಾಜ್ಯ ಮತ್ತು ದೇವಸ್ಥಾನಗಳಿಗೆ ಪ್ರಯಾಣ ಬೆಳೆಸುವರು ಸಹ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಪ್ರಯಾಣಿಸುವುದು ಒಳ್ಳೆಯದು. ಕೋವಿಡ್ ಸೋಂಕಿನ ಲಕ್ಷಣಗಳಾದ ನೆಗಡಿ, ಕೆಮ್ಮು, ಜ್ವರ, ತಲೆನೋವು, ಗಂಟಲು ಬೇನೆ, ಉಸಿರಾಟದ ಸಮಸ್ಯೆ, ತೀವ್ರ ಮೈ-ಕೈ ನೋವು ಕಂಡು ಬಂದರೆ ಕೂಡಲೇ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟ್‌ ಮಾಡಿಸಿಕೊಳ್ಳಬೇಕು. ಆಗಾಗ ಕೈಗಳನ್ನು ಳೆದುಕೊಳ್ಳುವುದು ಅಥವಾ ಹ್ಯಾಂಡ್‌ ಸಾನಿಟೈಸರ್‌ನಿಂದ ಕೈಗಳನ್ನು ಸ್ವತ್ಛಗೊಳಿಸಬೇಕು. ಕೆಮ್ಮುವಾಗ, ಸೀನುವಾಗ ಮೂಗು ಮತ್ತು ಬಾಯಿಯನ್ನು ಕರವಸ್ತ್ರಗಳಿಂದ ಮುಚ್ಚಿಕೊಳ್ಳುವುದು. ತರಕಾರಿ, ಹಣ್ಣುಗಳನ್ನು ಮುಂಚಿತವಾಗಿ ತೊಳೆದು ಸೇವಿಸಬೇಕು.
ಡಾ.ರಾಜಶೇಖರ ಮಾಲಿ, ಡಿಎಚ್‌ಒ

Advertisement

Udayavani is now on Telegram. Click here to join our channel and stay updated with the latest news.

Next