Advertisement

ಕೋವಿಡ್‌: ಮುಚ್ಚಳಿಕೆಯ “ಪರಿಹಾರ’; ಸರಕಾರದ ಹೊಸ ಸೂತ್ರ

11:37 PM Jan 18, 2022 | Team Udayavani |

ಬೆಂಗಳೂರು: ಕೊರೊನಾದಿಂದ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ನೀಡಲು ತಲೆನೋವಾಗಿದ್ದ “ವಾರಸುದಾರಿಕೆ’ ಸಮಸ್ಯೆ ಪರಿಹಾರಕ್ಕೆ ಸರಕಾರ ಮಾರ್ಗೋಪಾಯ ಕಂಡು ಕೊಂಡಿದೆ. ಕುಟುಂಬಗಳಲ್ಲಿ ಮೂರ್‍ನಾಲ್ಕು ಮಂದಿ ನಮಗೇ ಪರಿಹಾರ ಸಿಗಬೇಕು ಎಂದು ಕ್ಲೈಮ್‌ ಮಾಡಿದ್ದ ಹಿನ್ನೆಲೆಯಲ್ಲಿ ಪರಿಹಾರ ವಿತರಣೆ ಅರ್ಜಿ ಇತ್ಯರ್ಥವಾಗದೆ ಗೊಂದಲವೂ ಮೂಡಿತ್ತು.

Advertisement

ಇದಕ್ಕೆ ಪರಿಹಾರ ಎಂಬಂತೆ ಕಂದಾಯ ಇಲಾಖೆಯು ಆಯಾ ಕುಟುಂಬದ ಸದಸ್ಯರ ಬಳಿ ಮುಚ್ಚಳಿಕೆ ಪತ್ರ ಬರೆಸಿಕೊಂಡು ಕೊರೊನಾದಿಂದ ಮೃತಪಟ್ಟ ವ್ಯಕ್ತಿಗಳ ಕುಟುಂಬದ ಕಾನೂನುಬದ್ಧ ವಾರಸುದಾರರಿಗೆ ಪರಿಹಾರದ ಚೆಕ್‌ ವಿತರಿಸಲು ತೀರ್ಮಾನಿಸಿ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ.ಇದರಿಂದಾಗಿ ಇತ್ಯರ್ಥವಾಗದೆ ಉಳಿದಿದ್ದ ನೂರಾರು ಅರ್ಜಿಗಳಿಗೆ “ಮೋಕ್ಷ’ ದೊರಕಿದಂತಾಗಿದೆ.

ಅರ್ಜಿ ಇತ್ಯರ್ಥಕ್ಕೆ ಆದೇಶ
ಈ ಮಧ್ಯೆ ಕೊರೊನಾದಿಂದ ಸಾವು ಸಂಭವಿಸಿರುವ ಕುರಿತು ವಿವಾದಾತ್ಮಕ ಪ್ರಕರಣಗಳು ಎಂಬ ಕಾರಣಕ್ಕೆ ಸಾವಿರಾರು ಅರ್ಜಿ ವಿಲೇವಾರಿ ಆಗದೇ ಉಳಿದಿದ್ದವು. ಕೊರೊನಾದಿಂದ ಮೃತಪಟ್ಟರೂ ಅವರ ವಿವರಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ದತ್ತಾಂಶದಲ್ಲಿ ಲಭ್ಯವಿಲ್ಲ, ನಮೂದಾಗಿಲ್ಲ ಎಂದು ಕೇಂದ್ರ ಸರಕಾರದ 50 ಸಾವಿರ ರೂ. ಪರಿಹಾರ ಕೂಡ ತಲುಪಿರಲಿಲ್ಲ. ಇದಕ್ಕಾಗಿ ಸರಕಾರ ಪ್ರತ್ಯೇಕ ಆದೇಶ ಹೊರಡಿಸಿದೆ.

ಮರಣ ಕಾರಣ ಕುರಿತು “ಮೆಡಿಕಲ್‌ ಸರ್ಟಿಫಿಕೆಟ್‌ ಆಫ್ ಕಾಸ್‌ ಆಫ್ ಡೆತ್‌’ನಲ್ಲಿ ಆಕ್ಷೇಪಣೆ ಸ್ವೀಕೃತವಾದ ಪ್ರಕರಣಗಳಲ್ಲಿ ಸಮಿತಿಯು ಪರಿಶೀಲಿಸಿ, ನಿಗದಿತ ನಮೂನೆಯಲ್ಲಿ ಕೊರೊನಾ ಸಾವಿನ ಬಗ್ಗೆ ಅಧಿಕೃತ ತಿದ್ದುಪಡಿ ಮರಣ ಪ್ರಮಾಣ ವಿತರಿಸಿ, ಜನನ ಮತ್ತು ಮರಣ ಮುಖ್ಯ ನೋಂದಣಾಧಿಕಾರಿಗಳಿಗೆ ಮಾಹಿತಿ ನೀಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ “ವಾರ್‌ ರೂಂ ಲೈನ್‌ ಲಿಸ್ಟ್‌’ ದತ್ತಾಂಶದಲ್ಲೂ ಸೇರಿಸಲು ಸೂಚನೆ ನೀಡಲಾಗಿದೆ. ಅದೇ ರೀತಿ ಮರಣ ಪ್ರಮಾಣಪತ್ರದಲ್ಲಿ ಕೊರೊನಾ ಸಾವು ಎಂದು ದೃಢಪಟ್ಟಿದ್ದು, ಕೋವಿಡ್‌ ವಾರ್‌ರೂಂ ದತ್ತಾಂಶದಲ್ಲಿ ಮಾಹಿತಿ ಲಭ್ಯವಿಲ್ಲದ ಪ್ರಕರಣಗಳನ್ನೂ ಜಿಲ್ಲಾ ಮಟ್ಟದ ಸಮಿತಿಯೇ ಪರಿಶೀಲಿಸಿ ಇತ್ಯರ್ಥಪಡಿಸಬೇಕು ಎಂದು ತಿಳಿಸಲಾಗಿದೆ. ಇದರಿಂದ ಎರಡು ಸಾವಿರಕ್ಕೂ ಹೆಚ್ಚು ಅರ್ಜಿಗಳು ತ್ವರಿತವಾಗಿ ಇತ್ಯರ್ಥಗೊಳ್ಳಲಿವೆ.

ಎಷ್ಟು ಅರ್ಜಿಗಳು ಇತ್ಯರ್ಥ?
ಡಿಸೆಂಬರ್‌ ಅಂತ್ಯಕ್ಕೆ ಕೊರೊನಾದಿಂದ ಮೃತಪಟ್ಟವರ ಕುಟುಂಬಗಳಿಂದ ಪರಿಹಾರಕ್ಕೆ 38,332 ಅರ್ಜಿಗಳು
ಬಂದಿದ್ದು, 26,852 ಅರ್ಜಿಗಳು ಪರಿಹಾರ ನೀಡಲು ಅಂಗೀಕಾರಗೊಂಡಿವೆ.

Advertisement

ಈ ಪೈಕಿ 13,401 ಎಪಿಎಲ್‌ ಮತ್ತು 13,451 ಬಿಪಿಎಲ್‌ ಕುಟುಂಬಗಳದ್ದಾಗಿದೆ. 7,402 ವಿಲೇವಾರಿಗೆ ಬಾಕಿ ಇದೆ. ಕೊರೊನಾದಿಂದ ಮೃತಪಟ್ಟವರ ಕುಟುಂಬಗಳಿಗೆ ರಾಜ್ಯ ಸರಕಾರದ ವತಿಯಿಂದ ಒಂದು ಲಕ್ಷ ರೂ. ಮತ್ತು ಕೇಂದ್ರ ಸರಕಾರದ ಸೂಚನೆ ಮೇರೆಗೆ ಎಸ್‌ಆರ್‌ಎಫ್ ಮಾರ್ಗಸೂಚಿಯಡಿ 50 ಸಾವಿರ ರೂ. ಪರಿಹಾರ ನೀಡಲಾಗುತ್ತಿದೆ.

– ಎಸ್‌. ಲಕ್ಷ್ಮೀನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next