Advertisement

ಕೋವಿಡ್ ಭಯಾನಕ ರೋಗವಲ್ಲ; ಧೈರ್ಯವಾಗಿರಿ

06:52 AM Jul 24, 2020 | Suhan S |

ನಿತ್ಯ ಜನ ಸಂಪರ್ಕದಲ್ಲಿರುವ ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳಲ್ಲಿ ಇತ್ತೀಚೆಗೆ ಕೋವಿಡ್ ಸೋಂಕು ದೃಢಪಡುತ್ತಿದ್ದು, ಕೆಲವು ಪಾಲಿಕೆ ಸದಸ್ಯರು ಸೋಂಕಿನಿಂದ ಮುಕ್ತವೂ ಆಗಿದ್ದಾರೆ. ಪಾದರಾಯನಪುರ ವಾರ್ಡ್‌ ಪಾಲಿಕೆ ಸದಸ್ಯ ಇಮ್ರಾನ್‌ ಪಾಷಾ, ಜಗಜೀವನ್‌ರಾಮ್‌ ನಗರ ವಾರ್ಡ್‌ನ ಪಾಲಿಕೆ ಸದಸ್ಯೆ ಸೀಮಾ ಅಲ್ತಾಫ್‌ ಖಾನ್‌, ಸಿದ್ಧಾಪುರ ವಾರ್ಡ್‌ ಪಾಲಿಕೆ ಸದಸ್ಯ ಎ. ಮುಜಾಹಿದ್‌ ಪಾಷಾ, ಹೆಮ್ಮಿಗೆಪುರ ವಾರ್ಡ್‌ನ ಆರ್ಯ ಶ್ರೀನಿವಾಸ್‌ ಹಾಗೂ ಬಸವನಗುಡಿ ಪಾಲಿಕೆ ಸದಸ್ಯರೂ ಆಗಿರುವ ಮಾಜಿ ಮೇಯರ್‌ ಬಿ.ಎಸ್‌. ಸತ್ಯನಾರಾಯಣ (ಕಟ್ಟೆ) ಅವರಿಗೆ ಸೋಂಕು ದೃಢಪಟ್ಟಿತ್ತು. ಇದೀಗ ಇವರೆಲ್ಲರೂ ಬಹುತೇಕ ಗುಣಮುಖರಾಗಿದ್ದರೆ, ಜನರ ಆತ್ಮಸ್ಥೈರ್ಯ ಕುಗ್ಗುತ್ತಿರುವ ಸಂದರ್ಭದಲ್ಲಿ ಅವರು ಗುಣಮುಖರಾಗಿ ಬಂದ್ದಾರೆ. ಈ ಪೈಕಿ ಕೆಲವರು “ಉದಯವಾಣಿ’ಯೊಂದಿಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

Advertisement

ಪೌಷ್ಟಿಕಾಂಶಯುಕ್ತ ಆಹಾರ ಸೇವಿಸುವುದು ಅತ್ಯಗತ್ಯ; ಕಟ್ಟೆ :  “ಕೋವಿಡ್ ಭಯಾನಕ ಕಾಯಿಲೆಯಲ್ಲ. ಆತಂಕಪಡುವ ಅಗತ್ಯವೂ ಇಲ್ಲ. ಯೋಗ ಹಾಗೂ ವ್ಯಾಯಾಮ ಮಾಡುವುದರಿಂದ ಉಸಿರಾಟದ ಸಮಸ್ಯೆ ಎದುರಾಗಲ್ಲ. ಮುಖ್ಯವಾಗಿ ವಿಟಮಿನ್‌ ಯುಕ್ತ ಆಹಾರ ಸೇವಿಸಬೇಕು. ದೇಹಕ್ಕೆ ಸೂರ್ಯ ಕಿರಣಗಳು ಕೆಲವು ನಿಮಿಷ ಬೀಳುವಂತೆ ನೋಡಿಕೊಳ್ಳಬೇಕು. ಬಿಸಿ ನೀರು ಹಾಗೂ ಪೌಷ್ಟಿಕಾಂಶವುಳ್ಳ ಆಹಾರ ಸೇವಿಸುವುದು ಅತ್ಯಗತ್ಯ’ ಎನ್ನುತ್ತಾರೆ ಬಸವನ ಗುಡಿ ಪಾಲಿಕೆ ಸದಸ್ಯ ಹಾಗೂ ಮಾಜಿ ಮೇಯರ್‌ ಬಿ.ಎಸ್‌. ಸತ್ಯಾನಾರಾಯಣ (ಕಟ್ಟೆ). ಆಸ್ಪತ್ರೆಗಳಲ್ಲಿ ಒಳ್ಳೆಯ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ, ಅಲ್ಲಿಯೂ ಕೊರೊನಾ ಭಯಕ್ಕೆ ಸಿಬ್ಬಂದಿ ಕೊರತೆ ಸೃಷ್ಟಿಯಾಗಿದೆ. ಇದರ ಹೊರತಾಗಿ ಈ ಕಾಯಿಲೆಗೆ ವಿಶೇಷ ಆರೈಕೆ ಅಗತ್ಯವಿಲ್ಲ. ಕೋವಿಡ್ ಸೋಂಕಿನೊಂದಿಗೆ ಬೇರೆ ಕಾಯಿಲೆ ಇದ್ದರೆ ಹೆಚ್ಚು ಎಚ್ಚರಿಕೆ ವಹಿಸಬೇಕಾಗುತ್ತದೆ ಎಂದರು. ಆಯುರ್ವೇದ ವೈದ್ಯ ಡಾ.ಗಿರಿಧರ್‌ ಕಜೆ ಅವರು ನೀಡಿರುವ ಮಾತ್ರೆಗಳನ್ನು ಈಗ ತೆಗೆದುಕೊಳ್ಳುತ್ತಿದ್ದೇನೆ. ಸ್ವಲ್ಪ ಆಯಾಸ ಇದೆ. ಇದರ ಹೊರತಾಗಿ ಯಾವುದೇ ಸಮಸ್ಯೆ ಇಲ್ಲ ಎಂದೂ ಅವರು ಹೇಳಿದರು. ಸತ್ಯನಾರಾಯಣ ಅವರು ಇದೀಗ ಗುಣಮುಖರಾಗಿ ಹೋಂ ಕ್ವಾರಂಟೈನ್‌ನಲ್ಲಿದ್ದಾನೆ.

ಇಡೀ ಕುಟುಂಬವೇ ಆಸ್ಪತ್ರೆಗೆ ಹೋಗಿ ಬಂತು: ಸೀಮಾ :  ಮನೆಯಲ್ಲಿ ಒಬ್ಬರಿಗೆ ಕೋವಿಡ್ ಬಂದರೆ ಆತಂಕ ಸೃಷ್ಟಿಯಾಗುತ್ತದೆ. ಒಂದು ವೇಳೆ ಇಡೀ ಕುಟುಂಬಕ್ಕೆ ಕೋವಿಡ್ ಸೋಂಕು ಬಂದರೆ? ಜಗಜೀವನ್‌ರಾಮ್‌ ನಗರ ವಾರ್ಡ್‌ನ ಪಾಲಿಕೆ ಸದಸ್ಯೆ ಸೀಮಾ ಅಲ್ತಾಫ್‌ಖಾನ್‌ ಹಾಗೂ ಅವರ ಪತಿ ಸೇರಿದಂತೆ ಒಂದೇ ಕುಟುಂಬದ 15 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿತ್ತು. ಈಗ ಎಲ್ಲರೂ ಗುಣಮುಖರಾಗಿದ್ದಾರೆ. “ಇಡೀ ಕುಟುಂಬಕ್ಕೆ ಕೋವಿಡ್ ಸೋಂಕು ಬಂದಾಗ ನಿಜಕ್ಕೂ ಆತಂಕ ಉಂಟಾಗಿತ್ತು. ಆಸ್ಪತ್ರೆಗೆ ಸೇರಿದ ಎರಡು ದಿನಕ್ಕೆ ಇದು ಅಂತಹ ಕಾಯಿಲೆಯಲ್ಲ ಎನ್ನುವ ಧೈರ್ಯಬಂತು. ನಮ್ಮ ಕುಟುಂಬ ಒಂದು ಪ್ರವಾಸಕ್ಕೆ ಹೋದಂತೆ ಆಸ್ಪತ್ರೆಗೆ ಹೋಗಿ ಬಂದಿದ್ದೇವೆ. ಕೋವಿಡ್ ಬಂತು ಎಂದು ಆತಂಕಕ್ಕೆ ಒಳಗಾಗಬೇಡಿ ಆರಾಮಾಗಿರಿ’ ಕೋವಿಡ್ ವನ್ನು ಸಾಮಾನ್ಯ ರೋಗದಂತೆ ಎದುರಿಸಿ ಎಂದು ವಿಶ್ವಾಸ ತುಂಬಿದರು.

ಭಯ ಬೇಡ; ನಿರ್ಲಕ್ಷ್ಯವೂಸಲ್ಲ: ಆರ್ಯಶ್ರೀನಿವಾಸ್‌ :  ಕೋವಿಡ್ ಸೋಂಕು ಭಯಾನಕ ಅಲ್ಲ; ಹಾಗಂತ ನಿರ್ಲಕ್ಷ್ಯವೂ ಬೇಡ ಎನ್ನುತ್ತಾರೆ ಹೆಮ್ಮಿಗೆಪುರ ವಾರ್ಡ್‌ನ ಪಾಲಿಕೆ ಸದಸ್ಯ ಆರ್ಯಶ್ರೀನಿವಾಸ್‌. ಕೋವಿಡ್ ಸೋಂಕಿನಿಂದ ನಮ್ಮೊಂದಿಗೆ ಇನ್ನೂ 10 ವರ್ಷ ಬದುಕುತ್ತಿದ್ದ ವಯಸ್ಸಾದವರು, ಕ್ಯಾನ್ಸರ್‌ ಹಾಗೂ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದವರನ್ನು ಕಳೆದುಕೊಳ್ಳುತ್ತಿದ್ದೇವೆ. ಯುವಕರು ಹಾಗೂ ಸದೃಢವಾಗಿರುವವರಿಗೆ ಕೋವಿಡ್ ಬಂದರೂ ಅಪಾಯದಿಂದ ದಾಟಿ ಬರುತ್ತಾರೆ. ಆದರೆ, ನಮ್ಮೊಂದಿಗೆ ಇರುವ ವಯಸ್ಸಾದವರು ಹಾಗೂ ಬೇರೆ ಕಾಯಿಲೆಗಳಿಂದ ಬಳಲುತ್ತಿರುವವರು ಈ ಸೋಂಕಿನಿಂದ ಹೊರ ಬರುವುದಕ್ಕೆ ಕಷ್ಟವಾಗುತ್ತದೆ. ಹೀಗಾಗಿ, ಇನ್ನು ಕೆಲವು ತಿಂಗಳ ಮಟ್ಟಿಗೆ ಜನ ಹೆಚ್ಚು ಸೇರುವ ಯಾವುದೇ ಕಾರ್ಯಕ್ರಮಗಳನ್ನು ಮಾಡಬೇಡಿ ಎಂದು ಜನರಿಗೆ ಮನವಿ ಮಾಡಿದರು. ಶ್ರೀನಿವಾಸ್‌ ಸದ್ಯ ಕೋವಿಡ್ ಮುಕ್ತರಾಗಿದ್ದು, ಹೋಂಕ್ವಾರಂಟೈನ್‌ನಲ್ಲಿದ್ದಾರೆ.

 ಜನಕ್ಕೆ ಮಾಹಿತಿ ನೀಡಿದರೆ ಸಾಕು: ಮುಜಾಹಿದ್‌ ಪಾಷಾ :  ಕೋವಿಡ್ ಸೋಂಕಿನ ಬಗ್ಗೆ ಜನಕ್ಕೆ ತುಂಬಾ ಆತಂಕ ಇದೆ. ಈ ಬಗ್ಗೆ ಜನಕ್ಕೆ ಕೌನ್ಸೆಲಿಂಗ್‌ ನೀಡಬೇಕು ಎನ್ನುವುದು ಸಿದ್ಧಾಪುರ ವಾರ್ಡ್‌ ಸದಸ್ಯ ಎ. ಮುಜಾಹಿದ್‌ ಪಾಷಾ ಅಭಿಪ್ರಾಯ. ” ಕೋವಿಡ್ ಗೆ ಉಳಿದ ಸೋಂಕಿನಂತೆ ನಿತ್ಯ ಪರೀಕ್ಷೆಗೊಳಪಡುವ ಅವಶ್ಯಕತೆ ಇಲ್ಲ. ಸೊಂಕು ದೃಢಪಟ್ಟು ಆರೈಕೆ ಕೇಂದ್ರದಲ್ಲಿರುವವರು ನಮಗೆ ವೈದ್ಯರು ಪರೀಕ್ಷೆ ಮಾಡುತ್ತಿಲ್ಲ. ವಿಚಾರಿಸುತ್ತಿಲ್ಲ ಎಂದು ಭಯ  ಬೀಳುವ ಅವಶ್ಯಕತೆ ಇಲ್ಲ. ಸೋಂಕು ಗೆಲ್ಲಬೇಕಾದರೆ, ನಾವು ಎಲ್ಲರಿಗೂ ಈ ಸೋಂಕಿನ ಬಗ್ಗೆ ಮಾಹಿತಿ ನೀಡಬೇಕು. ಆತ್ಮವಿಶ್ವಾಸ ಹಾಗೂ ಉತ್ತಮ ಆಹಾರ ಸೇವಿಸು ವುದರಿಂದ ಈ ಸೋಂಕಿನ ಯುದ್ಧದಲ್ಲಿ ಗೆಲ್ಲಬಹುದು’ ಎಂದರು.

Advertisement

ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ಹೋಂಕ್ವಾರಂಟೈನ್‌ ಆಗಿ, ವರದಿ ಬರುವವರೆಗೆ ಓಡಾಡಬೇಡಿ. ಸೋಂಕು ಪ್ರಥಮ ಹಂತದಲ್ಲಿ ಇರುವಾಗಲೇ ಸೋಂಕು ಪರೀಕ್ಷೆಗೆ ಒಳಗಾಗಿ ತಡ ಮಾಡಿದರೆ, ಉಸಿರಾಟ ಸಮಸ್ಯೆ ಆಗುವ ಹಂತಕ್ಕೆ ಹೋಗುತ್ತದೆ. ಹೀಗಾಗಿ, ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬೇಡಿ ಎಂದು ಮನವಿ ಮಾಡಿದರು. ಅಂದಹಾಗೆ, ಮುಜಾಹಿದ್‌ ಪಾಷಾ ಅವರು ಈಗ ಗುಣಮುಖರಾಗಿದ್ದು, ಮತ್ತೆ ವಾರ್ಡ್‌ನ ಕೆಲಸದಲ್ಲಿ ಸಕ್ರಿಯವಾಗಿದ್ದಾರೆ.

 

-ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next