Advertisement

ಕಾಸರಗೋಡು ಜಿಲ್ಲೆಯ ಒಬ್ಬರಿಗೆ ಕೊರೊನಾ ದೃಢ

12:56 AM Mar 17, 2020 | mahesh |

ಕಾಸರಗೋಡು: ಜಿಲ್ಲೆಯ ಒಬ್ಬ ವ್ಯಕ್ತಿಯ ಸಹಿತ ಕೇರಳದಲ್ಲಿ ಇನ್ನೂ ಮೂವರಿಗೆ ಕೊರೊನಾ ವೈರಸ್‌ ಸೋಂಕು ಬಾಧಿಸಿರುವುದು ದೃಢವಾಗಿದೆ ಎಂದು ಸಿಎಂ ಪಿಣರಾಯಿ ವಿಜಯನ್‌ ತಿಳಿಸಿದ್ದಾರೆ.

Advertisement

ಇನ್ನಿಬ್ಬರು ಕೊರೊನಾ ಬಾಧಿತರು ಮಲಪ್ಪುರದವರು. ಇದರೊಂದಿಗೆ ರಾಜ್ಯದಲ್ಲಿ ಕೊರೊನಾ ಬಾಧಿತರ ಸಂಖ್ಯೆ 24ಕ್ಕೇರಿದೆ. ರಾಜ್ಯದಲ್ಲಿ ಒಟ್ಟು 12,470 ಮಂದಿ ನಿಗಾದಲ್ಲಿದ್ದಾರೆ. ರಾಜ್ಯದಲ್ಲಿ 270 ಮಂದಿ ಆಸ್ಪತ್ರೆಗಳಲ್ಲಿ, 12,200 ಮಂದಿ ಮನೆಗಳಲ್ಲಿ ನಿಗಾದಲ್ಲಿದ್ದಾರೆ. ಸೋಮವಾರ 72 ಮಂದಿಯನ್ನು ವಿವಿಧ ಆಸ್ಪತ್ರೆಗಳಿಗೆ ಸೇರಿಸಲಾಗಿದೆ. ರೋಗ ಲಕ್ಷಣಗಳಿರುವ 2,297 ಮಂದಿಯ ಗಂಟಲ ದ್ರವದ ಮಾದರಿಗಳನ್ನು ಪರೀಕ್ಷಾಲಯಗಳಿಗೆ ಕಳುಹಿಸಲಾಗಿದೆ. 1,693 ಮಂದಿಯ ಫಲಿತಾಂಶ ನೆಗೆಟಿವ್‌ ಆಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ತಿರುವನಂತಪುರದಲ್ಲಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ 325 ಮಂದಿ ತೀವ್ರ ನಿಗಾದಲ್ಲಿ
ಕೊರೊನಾ ವೈರಸ್‌ ವ್ಯಾಪಕವಾಗಿ ಹರಡು ತ್ತಿರುವಂತೆ ಕಾಸರಗೋಡು ಜಿಲ್ಲೆಯಲ್ಲಿ 325 ಮಂದಿ ತೀವ್ರ ನಿಗಾದಲ್ಲಿದ್ದಾರೆ. ಈ ಪೈಕಿ ನಾಲ್ವರು ಆಸ್ಪತ್ರೆಯಲ್ಲೂ, 321 ಮಂದಿ ಅವರವರ ಮನೆಗಳಲ್ಲೂ ನಿಗಾ ದಲ್ಲಿರಿಸಲಾಗಿದೆ. ಜಿಲ್ಲೆಯಲ್ಲಿ ಈ ವರೆಗೂ ಹೊಸದಾಗಿ ಕೊರೊನಾ ವೈರಸ್‌ ಸೋಂಕು ವರದಿಯಾಗಿಲ್ಲ.

ಮಾ. 16ರಂದು ವಿದೇಶದಿಂದ ಬಂದ ಇಬ್ಬರನ್ನು ನಿಗಾದಲ್ಲಿರಿಸಲಾಗಿದೆ. ಈ ಪೈಕಿ ಒಬ್ಬರು ಬ್ರೆಜಿಲ್‌ನಿಂದ ಬಂದವರು. ಇವರನ್ನು ಆರೋಗ್ಯ ಇಲಾಖೆಯ ನೇತೃತ್ವದಲ್ಲಿ ಜಿಲ್ಲಾ ಆಸ್ಪತ್ರೆಯ ಐಸೋಲೇಶನ್‌ ವಾರ್ಡ್‌ನಲ್ಲಿ ದಾಖಲಿಸಲಾಗಿದೆ. ದುಬೈಯಿಂದ ಬಂದು ಮನೆಯಲ್ಲಿ ನಿಗಾದಲ್ಲಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಕಾಂಞಂಗಾಡ್‌ನ‌ಲ್ಲಿರುವ ಜಿಲ್ಲಾ ಆಸ್ಪತ್ರೆಯಲ್ಲಿ ಇಬ್ಬರು ಮತ್ತು ಕಾಸರಗೋಡು ಜನರಲ್‌ ಆಸ್ಪತ್ರೆಯಲ್ಲಿ ಇಬ್ಬರು ತೀವ್ರ ನಿಗಾದಲ್ಲಿದ್ದಾರೆ.

ಗಡಿಯಲ್ಲಿ ತಪಾಸಣೆ
ಕೊರೊನಾ ವೈರಸ್‌ ಹರಡುವುದನ್ನು ತಡೆಯಲು ಕರ್ನಾಟಕದೊಂದಿಗಿನ ಗಡಿ ಪ್ರದೇಶವಾದ ತಲಪಾಡಿ, ಪೆರ್ಲ, ಪಾಣತ್ತೂರು ಮೊದಲಾದೆಡೆಗಳಲ್ಲಿ ಕರ್ನಾ ಟಕದಿಂದ ಬರುವ ವಾಹನಗಳಲ್ಲಿರುವ ಪ್ರಯಾಣಿಕರನ್ನು ಆರೋಗ್ಯ ಇಲಾಖೆ ಮತ್ತು ಪೊಲೀಸರು ತೀವ್ರ ತಪಾಸಣೆ ನಡೆಸಿದ ಬಳಿಕವಷ್ಟೇ ಮುಂದಕ್ಕೆ ಸಾಗಲು ಅನುವು ಮಾಡಿಕೊಡುತ್ತಿದ್ದಾರೆ. ಮಂಜೇಶ್ವರ, ಕುಂಬಳೆ, ಕಾಸರಗೋಡು, ಕಾಂಞಂಗಾಡ್‌, ನೀಲೇಶ್ವರ, ಚೆರ್ವತ್ತೂರು ರೈಲು ನಿಲ್ದಾಣಗಳಲ್ಲಿ ಹೆಲ್ಪ್ ಡೆಸ್ಕ್ ಆರಂಭಿಸಲಾಗಿದೆ. ಅಲ್ಲದೆ ಕಾಸರಗೋಡು ರೈಲು ನಿಲ್ದಾಣದಲ್ಲಿ ಐದು ತಂಡಗಳು ಪ್ರಯಾಣಿಕರನ್ನು ತಪಾಸಣೆ ಮಾಡುತ್ತಿವೆ.

Advertisement

50ಕ್ಕೂ ಹೆಚ್ಚು ಜನರು ಸೇರದಂತೆ ಡಿಸಿ ಆದೇಶ
ಕಾಸರಗೋಡು : ಕೊರೊನಾ ವೈರಸ್‌ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ, ಸಭಾಂಗಣಗಳಲ್ಲಿ, ವಿವಾಹ ಸಮಾರಂಭಗಳಲ್ಲಿ, ಸಮಾವೇಶ ಕೇಂದ್ರ, ಕಮ್ಯೂನಿಟಿ ಸೆಂಟರ್‌ ಮೊದಲಾದ ಸ್ಥಳಗಳಲ್ಲಿ 50ಕ್ಕೂ ಹೆಚ್ಚು ಜನರು ಗುಂಪು ಸೇರಬಾರದೆಂದು ಜಿಲ್ಲಾಧಿಕಾರಿ ಡಾ| ಡಿ.ಸಜಿತ್‌ಬಾಬು ಆದೇಶ ಹೊರಡಿಸಿದ್ದಾರೆ. ಆದೇಶ ಉಲ್ಲಂಘಿಸುವವರ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳುವುದಾಗಿಯೂ, ಲೈಸನ್ಸ್‌ ರದ್ದುಗೊಳಿಸುವು ದಾಗಿಯೂ ಮುನ್ನೆಚ್ಚರಿಕೆ ನೀಡಿದ್ದಾರೆ

ಆರೋಗ್ಯ ಸಚಿವ ಶ್ರೀರಾಮುಲು ಇಂದು ಜಿಲ್ಲೆಗೆ
ಮಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಅವರು ಮಂಗಳವಾರ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿ ಕೊರೊನಾ ಸಾಂಕ್ರಾಮಿಕ ರೋಗ ಹರಡದಂತೆ ನಿಯಂತ್ರಣ ಕ್ರಮಗಳ ಕುರಿತು ಮೈಸೂರು ವಿಭಾಗ ಮಟ್ಟದ ಅಧಿಕಾರಿಗಳ ಸಭೆ ನಡೆಸಲಿದ್ದಾರೆ. ಬೆಳಗ್ಗೆ 11ಕ್ಕೆ ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಮೈಸೂರು ವಿಭಾಗ ಮಟ್ಟದ ಅಧಿಕಾರಿಗಳೊಂದಿಗೆ ಕೊರೊನಾ ರೋಗ ಹರಡದಂತೆ ನಿಯಂತ್ರಣಕ್ಕೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸುವರು. ಮಧ್ಯಾಹ್ನ 2 ಗಂಟೆಗೆ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ಭೇಟಿ ನೀಡುವರು.

Advertisement

Udayavani is now on Telegram. Click here to join our channel and stay updated with the latest news.

Next