Advertisement

ದಕ್ಷಿಣ ಭಾರತದ ಈ ಎರಡು ಜಿಲ್ಲೆಗಳಿಗೆ ಇನ್ನೂ ಕಾಲಿಟ್ಟಿಲ್ಲ ಮಹಾಮಾರಿ!

12:45 AM Jun 06, 2020 | Hari Prasad |

ಚಾಮರಾಜನಗರ: ಇಡೀ ದಕ್ಷಿಣ ಭಾರತದಲ್ಲಿ ಪ್ರಸ್ತುತ ಎರಡೇ ಎರಡು ಜಿಲ್ಲೆಗಳು ಕೋವಿಡ್ ಮುಕ್ತವಾಗಿವೆ.

Advertisement

ಆ ಎರಡು ಜಿಲ್ಲೆಗಳೇ ತೆಲಂಗಾಣದ ವಾರಂಗಲ್ ಗ್ರಾಮಾಂತರ ಹಾಗೂ ಕರ್ನಾಟಕದ ಚಾಮರಾಜನಗರ.

ಕೋವಿಡ್ ಸಂಬಂಧಿತ ಸರಕಾರಿ ಜಾಲತಾಣದಲ್ಲಿ ಪ್ರತಿದಿನ ನಮ್ಮ ದೇಶದ ಎಲ್ಲ ರಾಜ್ಯಗಳ ಕೋವಿಡ್ ಸೋಂಕಿನ ಅಂಕಿ ಅಂಶಗಳನ್ನು ಸಮಗ್ರವಾಗಿ ಪ್ರಕಟಿಸಲಾಗುತ್ತಿದೆ. ಪ್ರತಿ ರಾಜ್ಯದ ಜಿಲ್ಲೆಗಳಲ್ಲಿರುವ ಕೋವಿಡ್ ಪ್ರಕರಣಗಳ ಸಂಖ್ಯೆಯನ್ನು ದಿನಂಪ್ರತಿ ಜಾಲತಾಣದಲ್ಲಿ ಅಪ್‌ಡೇಟ್ ಮಾಡಲಾಗುತ್ತಿದೆ.

ಇದರಲ್ಲಿ ದಕ್ಷಿಣ ಭಾರತದಲ್ಲಿ ತೆಲಂಗಾಣದ ವಾರಂಗಲ್ ಗ್ರಾಮಾಂತರ ಮತ್ತು ಕರ್ನಾಟಕದ ಚಾಮರಾಜನಗರ ಜಿಲ್ಲೆಗಳು ಮಾತ್ರ ಕೋವಿಡ್ ಮುಕ್ತ ಜಿಲ್ಲೆಗಳನ್ನಾಗಿ ಭೂಪಟದಲ್ಲಿ ಬಿಳಿ ಬಣ್ಣದಲ್ಲಿ ನಮೂದಿಸಲಾಗಿದೆ.

ಚಾಮರಾಜನಗರ ಜಿಲ್ಲೆ ಕರ್ನಾಟಕದ ಏಕೈಕ ಕೋವಿಡ್ ಮುಕ್ತ ಜಿಲ್ಲೆ ಎಂಬುದು ಖಚಿತವಾಗಿತ್ತು. ಆದರೆ ದಕ್ಷಿಣ ಭಾರತದಲ್ಲಿ ಎರಡೇ ಜಿಲ್ಲೆಗಳು ಕೋವಿಡ್ ಮುಕ್ತ ಎಂಬುದು ಬೆಳಕಿಗೆ ಬಂದಿರಲಿಲ್ಲ. ದಕ್ಷಿಣ ಭಾರತದ ಆಂಧ್ರ, ತಮಿಳುನಾಡು, ಕೇರಳದ ಎಲ್ಲ ಜಿಲ್ಲೆಗಳಲ್ಲೂ ಪಾಸಿಟಿವ್ ಪ್ರಕರಣಗಳಿವೆ. ಆದರೆ ಈ ಎರಡು ಜಿಲ್ಲೆಗಳಲ್ಲಿ ಮಾತ್ರ ಶೂನ್ಯ ಪ್ರಕರಣಗಳಿವೆ.

Advertisement

ವಾರಂಗಲ್ ಗ್ರಾಮಾಂತರ ಸಹ ಈ ಸಾಧನೆ ಮಾಡಿರುವುದನ್ನು ತಿಳಿದು, ಈ ಬಗ್ಗೆ ಖಚಿತ ಪಡಿಸಿಕೊಳ್ಳಲು ಉದಯವಾಣಿ ವಾರಂಗಲ್ ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಎಂ. ಹರಿತಾ ಅವರನ್ನು ಸಂಪರ್ಕಿಸಿತು.

ಈ ಕುರಿತು ಮಾತನಾಡಿದ ಹರಿತಾ ಅವರು, ವಾರಂಗಲ್ ಗ್ರಾಮಾಂತರ ಜಿಲ್ಲೆಯಲ್ಲಿ ಇದುವರೆಗೂ ಕೋವಿಡ್ ಪಾಸಿಟಿವ್ ಕಂಡು ಬಂದಿಲ್ಲ. ಪ್ರತಿ ದಿನ ಸಂಜೆ 5ಕ್ಕೆ ನಾವು ಪ್ರಕರಣಗಳನ್ನು ರಾಜ್ಯಕ್ಕೆ ವರದಿ ಮಾಡುತ್ತೇವೆ. ಜೂನ್ 5ರ ಸಂಜೆ 5 ಗಂಟೆಯ ತನಕವೂ ನಮ್ಮ ಜಿಲ್ಲೆಯಲ್ಲಿ ಯಾವುದೇ ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿಲ್ಲ ಎಂದು ತಿಳಿಸಿದರು.

ನಮ್ಮ ಜಿಲ್ಲೆ ಅರಣ್ಯ ಹಾಗೂ ಗ್ರಾಮೀಣ ಪ್ರದೇಶದಲ್ಲಿರುವುದು, ವಿದೇಶದಿಂದ ಬಂದವರ ಸಂಖ್ಯೆ ಕಡಿಮೆ ಇರುವುದು, ದೊಡ್ಡ ನಗರಗಳು ಇಲ್ಲದಿರುವುದು ಇದಕ್ಕೆ ಕಾರಣವಿರಬಹುದು ಎಂದರು. ಇಡೀ ದಕ್ಷಿಣ ಭಾರತದಲ್ಲಿ ಕರ್ನಾಟಕದ ಚಾಮರಾಜನಗರ ಬಿಟ್ಟರೆ ವಾರಂಗಲ್ ಗ್ರಾಮಾಂತರ ಮಾತ್ರ ಕೋವಿಡ್ ಮುಕ್ತ ಎಂಬ ವಿಷಯ ತಿಳಿದು ಸಂತಸ ವ್ಯಕ್ತಪಡಿಸಿದರು.

ಕರ್ನಾಟಕದ ಏಕೈಕ ಕೋವಿಡ್ ಮುಕ್ತ ಜಿಲ್ಲೆಯಾದ ಚಾಮರಾಜನಗರ ವಾರಂಗಲ್ ಗ್ರಾಮಾಂತರ ಜಿಲ್ಲೆಯ ಜೊತೆ ಗೌರವ ಹಂಚಿಕೊಳ್ಳುವ ಮೂಲಕ ಅಪರೂಪದ ಸಾಧನೆ ಮಾಡಿದೆ.

ಜಿಲ್ಲಾಡಳಿತ, ಆರೋಗ್ಯ ಇಲಾಖೆ, ನಗರಸಭೆ, ಪುರಸಭೆಗಳು ಕೈಗೊಂಡ ಕಟ್ಟುನಿಟ್ಟಿನ ಸೂಕ್ತ ಕ್ರಮದಿಂದ ಜಿಲ್ಲೆ ಇದುವರೆಗೂ ಕೋವಿಡ್ ಪಾಸಿಟಿವ್ ಪ್ರಕರಣಗಳು ಕಾಣಿಸಿಕೊಂಡಿಲ್ಲ.

ಜಿಲ್ಲಾಧಿಕಾರಿಗೆ ಕೇಂದ್ರ ಆರೋಗ್ಯ ಸಚಿವರ ಪ್ರಶಂಸೆ
ಚಾಮರಾಜನಗರ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರಿಗೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಕರೆ ಮಾಡಿ, ಚಾಮರಾಜನಗರವನ್ನು ಕೋವಿಡ್ ಮುಕ್ತ ಜಿಲ್ಲೆಯಾಗಿ ಇರಿಸಿಕೊಂಡಿರುವುದಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇದನ್ನು ಕಾಯ್ದುಕೊಳ್ಳುವಂತೆ ಹಾರೈಸಿದ್ದಾರೆ. ಜಿಲ್ಲಾಧಿಕಾರಿ ಡಾ. ರವಿ ಅವರು ಈ ವಿಷಯವನ್ನು ಶುಕ್ರವಾರ ಮಾಧ್ಯಮದವರಿಗೆ ತಿಳಿಸಿದರು.

– ಕೆ.ಎಸ್. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next