Advertisement

ಜಿಲ್ಲೆಯ 1,123 ಹೆಲ್ತ್‌, ಪೊಲೀಸ್‌ ವಾರಿಯರ್ಗೆ ಕೋವಿಡ್!

11:09 PM Oct 12, 2020 | mahesh |

ಉಡುಪಿ: ಜೀವದ ಹಂಗು ತೊರೆದು ಕೋವಿಡ್‌-19 ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಜಿಲ್ಲೆಯ ಫ್ರಂಟ್‌ಲೆçನ್‌ ವಾರಿಯರ್‌ಗಳು ಸೋಂಕಿಗೆ ತುತ್ತಾಗಿದ್ದು, ಇದರಲ್ಲಿ ಬಹುತೇಕ ಮಂದಿ ಗುಣಮುಖರಾಗಿದ್ದಾರೆ.

Advertisement

ಸರಕಾರಿ ವೈದ್ಯರು, ಆರೋಗ್ಯ ಸಹಿತ ವಿವಿಧ ಇಲಾಖೆಗಳ ಅಧಿಕಾರಿಗಳು, ಜಿಲ್ಲಾ ತಜ್ಞ ತಂಡದ ವೈದ್ಯರು, ತಹಶೀಲ್ದಾರ್‌, ಸಿಇಒ, ಜಿಲ್ಲಾಧಿಕಾರಿ ಮುಂತಾದವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರೆಲ್ಲರ ಯಶಸ್ವಿ ನಿರ್ವಹಣೆ, ಪರಿಶ್ರಮದಿಂದ ಪ್ರಕರಣಗಳ ನಿಯಂತ್ರಣವಾಗುತ್ತಿದೆ. ಜಿಲ್ಲೆಯಲ್ಲಿ ಇದುವರೆಗೆ 19,441 ಜನರು ಕೊರೊನಾಗೆ ತುತ್ತಾಗಿದ್ದು, ಅವರಲ್ಲಿ ಇಲ್ಲಿಯವರೆಗೆ ಒಟ್ಟು 17,141 ಮಂದಿ ಸೋಂಕು ಮುಕ್ತಗೊಂಡಿದ್ದು, 2,165 ಮಂದಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

923 ಮಂದಿಗೆ ಸೋಂಕು
ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆ ನೀಡಲು ಹಗಲಿರುಳು ಫ್ರಂಟ್‌ಲೈನ್‌ ವಾರಿಯರ್‌ಗಳಾಗಿ ಶ್ರಮಿಸುತ್ತಿರುವ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಯ ವೈದ್ಯರು, ನರ್ಸ್‌ ಸಹಿತ ಇತರ ಆರೋಗ್ಯ ಕಾರ್ಯಕರ್ತರು ಸೋಂಕಿಗೆ ತುತ್ತಾಗುತ್ತಿದ್ದಾರೆ. ಇದುವರೆಗೆ 923 ಮಂದಿ ಹೆಲ್ತ್‌ ವಾರಿಯರ್‌ಗಳಲ್ಲಿ ಕೊರೊನಾ ಪಾಸಿಟಿವ್‌ ವರದಿಯಾಗಿದೆ. ಇವರಲ್ಲಿ ಖಾಸಗಿ ಆಸ್ಪತ್ರೆ ನರ್ಸ್‌ ಒಬ್ಬರು ಮೃತಪಟ್ಟಿದ್ದಾರೆ. ಉಳಿದಂತೆ ಬಹುತೇಕರು ಗುಣಮುಖರಾಗಿದ್ದಾರೆ. ಇನ್ನು ಕೆಲವರು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

2 ಕೋವಿಡ್ ಸಾವು
ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟ 165 ಜನರಲ್ಲಿ ಕೇವಲ ಇಬ್ಬರು ಮಾತ್ರ ಕೊರೊನಾದಿಂದ ಮೃತಪಟ್ಟಿದ್ದಾರೆ. ಉಳಿದ 163 ಜನರು ಹೃದಯ, ಕಿಡ್ನಿ, ಕ್ಯಾನ್ಸರ್‌, ಬಿಪಿ, ಶುಗರ್‌ ಸೇರಿದಂತೆ ಇತರ ಆರೋಗ್ಯ ಸಮಸ್ಯೆಯಿಂದ ಮೃತಪಟ್ಟಿದ್ದಾರೆ. ಇವರಲ್ಲಿ ಶೇ. 77ರಷ್ಟು ಮಂದಿ 55 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೆ.

ಜಿಲ್ಲೆಯಲ್ಲಿ ಮರಣ ಹೊಂದಿರುವವರ ಪ್ರಮಾಣ ಅತ್ಯಂತ ಕಡಿಮೆಯಾಗಿದ್ದು ರಾಜ್ಯದಲ್ಲಿ ಈ ಸಾಧನೆ ಮಾಡಿರುವ 3 ಜಿಲ್ಲೆಗಳಲ್ಲಿ ಉಡುಪಿ ಒಂದಾಗಿದೆ. ಆದರೆ ಇದರಲ್ಲಿಯೂ ಉಡುಪಿಯ ಸಾಧನೆ ಉಲ್ಲೇಖನೀಯ. ಉಳಿದ ಎರಡು ಜಿಲ್ಲೆಗಳಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ರೋಗಿಗಳನ್ನು ಪಕ್ಕದ ಜಿಲ್ಲೆಗಳಿಗೆ ಕಳುಹಿಸಿ ಅಲ್ಲಿ ಚಿಕಿತ್ಸೆ ಕೊಡುತ್ತಿದ್ದಾರೆ. ಈ ದೃಷ್ಟಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಗಂಭೀರ ರೋಗಿಗಳನ್ನು ಜಿಲ್ಲೆಯೊಳಗಿನ ಆಸ್ಪತ್ರೆಗಳಲ್ಲಿಯೇ ಚಿಕಿತ್ಸೆ ಕೊಡಿಸಿ ಮರಣ ಪ್ರಮಾಣವನ್ನು ಕಡಿಮೆಗೊಳಿಸಿರುವುದು ಸಾಧನೆಯಾಗಿದೆ.

Advertisement

ಪೊಲೀಸರನ್ನು ಕಾಡುತ್ತಿದೆ
ಜಿಲ್ಲೆಯಲ್ಲಿ ಇದುವರೆಗೆ ಸುಮಾರು 200 ಪೊಲೀಸರಿಗೆ, 50 ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ, ಜಿ.ಪಂ., ತಾ.ಪಂ., ನಗರ ಮತ್ತು ಗ್ರಾಮಾಂತರ ಸ್ಥಳೀಯಾಡಳಿತ, ಹಾಗೂ ವಿವಿಧ ಸರಕಾರಿ ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು 150ಕ್ಕೂ ಅಧಿಕ ಸಿಬಂದಿ ಹಾಗೂ ಅಧಿಕಾರಿಗಳಲ್ಲಿ ಸೋಂಕು ಪತ್ತೆಯಾಗಿದೆ.

ಗಂಟಲ ದ್ರವ ಮಾದರಿ ಪರೀಕ್ಷೆ ಹೆಚ್ಚಿಸಲು ಕ್ರಮ
ಜಿಲ್ಲೆಯಲ್ಲಿ ಪ್ರಸ್ತುತ ಬೆಡ್‌ಗಳ ಕೊರತೆ ಇಲ್ಲ. ಮುಖ್ಯಮಂತ್ರಿಗಳು ಆರ್‌ಎಟಿ ಪರೀಕ್ಷೆ ಬದಲು ವಿಶ್ವಾಸಾರ್ಹ ಮತ್ತು ಖಚಿತ ಫ‌ಲಿತಾಂಶ ಕೊಡುವ ಆರ್‌ಟಿಪಿಸಿಆರ್‌ ಪರೀಕ್ಷೆಯನ್ನು ಹೆಚ್ಚಿಸಲು ನಿರ್ದೇಶನ ಕೊಟ್ಟಿದ್ದಾರೆ. ಇದರಿಂದ ಸಮುದಾಯದಲ್ಲಿ ಎಷ್ಟು ಪ್ರಮಾಣದಲ್ಲಿ ಸೋಂಕು ಇದೆ ಎನ್ನುವುದನ್ನು ತಿಳಿಯಲು ಸಹಕಾರಿಯಾಗುತ್ತದೆ. ಗಂಟಲ ದ್ರವ ಮಾದರಿ ಪರೀಕ್ಷೆಗಳನ್ನು ಹೆಚ್ಚಿಸಲು ಜಿಲ್ಲಾಡಳಿತ ಕ್ರಮ ವಹಿಸುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಗ್ರಾ.ಪಂ.ಗಳ ಮೂಲಕ ಕರಪತ್ರಗಳನ್ನು ಮುದ್ರಿಸಿ ಜನರಿಗೆ ವಿತರಿಸಲಾಗಿದೆ. ವಿಶೇಷವಾಗಿ ಹಿರಿಯ ಜೀವಗಳನ್ನು ಉಳಿಸುವುದು ಕಿರಿಯರ ಜವಾಬ್ದಾರಿ ಎಂಬ ಧ್ಯೇಯದೊಂದಿಗೆ ಆಂದೋಲನವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಜಿಲ್ಲಾಡಳಿತ ನಿರ್ಧರಿಸಿದೆ.
– ಡಾ|ಸುಧೀರ್‌ಚಂದ್ರ ಸೂಡ,  ಜಿಲ್ಲಾ ಆರೋಗ್ಯಾಧಿಕಾರಿ, ಉಡುಪಿ.


19,441 ಜಿಲ್ಲೆಯಲ್ಲಿ ಒಟ್ಟು ಕೊರೊನಾ ಸೋಂಕಿಗೆ ತುತ್ತಾದವರ ಸಂಖ್ಯೆ
17,141 ಜಿಲ್ಲೆಯಲ್ಲಿ ಕೊರೊನಾ ಸೋಂಕು ಮುಕ್ತರಾದವರ ಒಟ್ಟು ಸಂಖ್ಯೆ
2,165 ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಒಟ್ಟು ಸಂಖ್ಯೆ

Advertisement

Udayavani is now on Telegram. Click here to join our channel and stay updated with the latest news.

Next