Advertisement

ಕೊಂಚೂರ-ಬಳವಡಗಿ ಜಾತ್ರೆ ರದ್ದು

07:25 PM Dec 12, 2020 | Suhan S |

ವಾಡಿ: ಏಕಕಾಲಕ್ಕೆ ನಡೆಯುವ ಸುಕ್ಷೇತ್ರ ಕೊಂಚೂರು ಹನುಮಾನ್‌ ರಥೋತ್ಸವ, ಬಳವಡಗಿ ಯಲ್ಲಮ್ಮ (ಏಲಾಂಬಿಕೆ) ದೇವಿಜಾತ್ರೆಯನ್ನು ಪ್ರಸಕ್ತ ವರ್ಷ ಸಂಪೂರ್ಣ ರದ್ದುಪಡಿಸಲಾಗಿದೆ ಎಂದು ತಹಶೀಲ್ದಾರ್‌ ಉಮಾಕಾಂತ ಹಳ್ಳೆ ತಿಳಿಸಿದರು. ಶುಕ್ರವಾರ ಕೊಂಚೂರು ಹನುಮಾನ ದೇವಸ್ಥಾನ ಭವನದಲ್ಲಿ ತಾಲೂಕು ಆಡಳಿತದಿಂದ ಏರ್ಪಡಿಸಲಾಗಿದ್ದ ಗ್ರಾಮಸ್ಥರ ಶಾಂತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Advertisement

ಸಾಂಕ್ರಾಮಿಕ ರೋಗ ಮಹಾಮಾರಿ ಕೋವಿಡ್ ವೈರಸ್‌ ಹರಡುತ್ತಿರುವ ಹಿನ್ನೆಲೆಯಲ್ಲಿ ಸರಕಾರದ ಆದೇಶದಂತೆ ಜಾತ್ರೆ ಹಾಗೂ ಉತ್ಸವ ನಡೆಸಲು ಅವಕಾಶವಿಲ್ಲ. ಗ್ರಾ.ಪಂ ಚುನಾವಣೆನೀತಿಸಂಹಿತೆಯೂ ಜಾರಿಯಲ್ಲಿರುವುದರಿಂದ ಡಿ. 30ರಂದು ನಡೆಯಲಿರುವ ಕೊಂಚೂರು ಹನುಮಾನ ದೇವರ ಜಾತ್ರೆ ಹಾಗೂ ರಥೋತ್ಸವದ ಜತೆಗೆ ಪಕ್ಕದ ಗ್ರಾಮ ಬಳವಡಗಿಯ ಯಲ್ಲಮ್ಮ ದೇವಿ ಜಾತ್ರೆ ರದ್ದುಪಡಿಸಲಾಗಿದೆ. ಡಿ.29 ಮತ್ತು 30ರಂದು ಭಕ್ತರಿಗೆ ಎರಡೂ ದೇವಸ್ಥಾನಗಳ ಪ್ರವೇಶ ನಿರ್ಬಂಧಿ ಸಲಾಗಿದೆ ಎಂದರು.

ಜಿಲ್ಲೆಯ ಭಕ್ತರು ಸೇರಿದಂತೆ ಬೆಂಗಳೂರು, ತೆಲಂಗಾಣದಿಂದ ಹೆಚ್ಚಿನ ಭಕ್ತರು ಪ್ರತಿ ವರ್ಷ ಬರುತ್ತಿದ್ದರು. ಆದರೆ ಈ ವರ್ಷ ಗ್ರಾಮಸ್ಥರು ತಮ್ಮ ನೆಂಟರನ್ನು ಜಾತ್ರೆಗೆ ಆಹ್ವಾನಿಸಬಾರದು. ದೇವಸ್ಥಾನ ಸಮಿತಿಯವರ ಸಮ್ಮುಖದಲ್ಲಿ ಕೇವಲ ಐದು ಅಡಿ ಮಾತ್ರ ರಥ ಎಳೆಯಲು ಅವಕಾಶವಿದೆ. ಹನುಮಾನ ದೇವಸ್ಥಾನ ಮತ್ತು ಯಲ್ಲಮ್ಮದೇವಸ್ಥಾನಗಳಲ್ಲಿ ಅರ್ಚಕರು ಮಾತ್ರ ಪೂಜೆ ನೆರವೇರಿಸಬಹುದು. ನಾಟಕ ಟೆಂಟ್‌, ಮನರಂಜನಾ ಕೇಂದ್ರ, ಬಿಡಾರು ಹಾಕಲು ಅವಕಾಶವಿಲ್ಲ. ಹೊರಗಿನ ಭಕ್ತರು ಕೊಂಚೂರು ಅಥವಾ ಬಳವಡಗಿ ಗ್ರಾಮಗಳನ್ನು ಪ್ರವೇಶಿಸುವಂತಿಲ್ಲ. ಯಲ್ಲಮ್ಮ ದೇವಿಗೆ ಹಡ್ಡಲಗಿ ತುಂಬುವಂತಿಲ್ಲ. 15ರಿಂದ 20 ಜನರು ಮಾತ್ರ ಧಾರ್ಮಿಕ ಆಚರಣೆಗಳನ್ನು ಪೂರ್ಣಗೊಳಿಸುತ್ತಾರೆ. ಕಾನೂನು ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಿಪಿಐ ಕೃಷ್ಣಪ್ಪ ಕಲ್ಲದೇವರು, ಪಿಎಸ್‌ಐ ವಿಜಯಕುಮಾರ ಭಾವಗಿ, ಬಳವಡಗಿ ಯಲ್ಲಮ್ಮ ದೇವಿ ದೇವಸ್ಥಾನದ ಅಧ್ಯಕ್ಷ ಮಲ್ಲಣ್ಣಗೌಡ ಪೊಲೀಸ್‌ ಪಾಟೀಲ, ಕೊಂಚೂರು ಹನುಮಾನ ದೇವಸ್ಥಾನ ಟ್ರಸ್ಟ್‌ ಕಾರ್ಯದರ್ಶಿ ವಿಜಯಕುಮಾರ ಕುಲಕರ್ಣಿ, ಖಜಾಂಚಿ ರಾಜಶೇಖರ ಮಠಪತಿ, ಮುಖಂಡರಾದ ಶ್ರೀಮಂತ ತಳವಾರ, ಅರವಿಂದ ದುಮಾಳ,ಭೀಮಯ್ಯ ಒಡೆಯರ, ಗೋವಿಂದಪ್ಪ ಸಾಹು, ದೇವಣ್ಣ ಹೂಗಾರ, ಜುಮ್ಮಣ್ಣ ಪೂಜಾರಿ, ಗಿರಿಮಲ್ಲಪ್ಪ ಕಟ್ಟಿಮನಿ, ರುದ್ರಮುನಿ ಮಠಪತಿ, ಖಾದರ್‌ ಪಟೇಲ, ಚನ್ನವೀರಪ್ಪ ಸುಣಗಾರ, ವಿಲಾಸ ಕುಲಕರ್ಣಿ, ರಮೇಶ ಡಿ.ಸಿ ಹಾಗೂ ಗ್ರಾಮಸ್ಥರು ಸಭೆಯಲ್ಲಿದ್ದರು.

ಗಂಗಾ ಸ್ನಾನ-ಪಲ್ಲಕ್ಕಿ ಉತ್ಸವ ಸರಳ :

Advertisement

ಕೊಂಚೂರು ಶ್ರೀ ಹನುಮಾನ ದೇವರ ಜಾತ್ರೆ ನಿಮಿತ್ತ ಡಿ. 14ರಂದು ಚಾಮನೂರ ಭೀಮಾನದಿಯಲ್ಲಿನಡೆಯುವ ಸಾಂಪ್ರದಾಯಿಕ ಪಲ್ಲಕ್ಕಿ ಉತ್ಸವ ಹಾಗೂ ಗಂಗಾ ಸ್ನಾನ ಕಾರ್ಯಕ್ರಮವನ್ನು ಸರಳವಾಗಿ ನಡೆಸಬೇಕು. ಇದರಲ್ಲಿ 20 ಜನ ಕೊಂಚೂರು ಭಕ್ತರು ಮಾತ್ರ ಪಾಲ್ಗೊಳ್ಳಬೇಕು. ನೈವೇದ್ಯ ನೀಡಲು ನದಿಯಲ್ಲಿ ಜಮಾಯಿಸುವ ನರಿಬೋಳ, ಚಾಮನೂರ ಗ್ರಾಮಗಳ ಭಕ್ತರು ಈ ವರ್ಷ ಗಂಗಾಸ್ನಾನ ಪೂಜೆಯಲ್ಲಿ ಪಾಲ್ಗೊಳ್ಳುವಂತಿಲ್ಲ. ನೂರಾರು ಸಂಖ್ಯೆಯಲ್ಲಿ ಜನರು ಸೇರಿದರೆ ಕೊಂಚೂರು ಹಾಗೂ ಬಳವಡಗಿ ಗ್ರಾಮಗಳ ದೇವಸ್ಥಾನ ಸಮಿತಿ ಸದಸ್ಯರೆ ಹೊಣೆಗಾರರು. – ಉಮಾಕಾಂತ ಹಳ್ಳೆ, ತಹಶೀಲ್ದಾರ್‌, ಚಿತ್ತಾಪುರ

Advertisement

Udayavani is now on Telegram. Click here to join our channel and stay updated with the latest news.

Next